Sunday, March 17, 2013

ಯುಐಡಿ: ಯಾಕೆ ವಿಫಲವಾಗಬಹುದು, ಯಾಕೆ ಸಫಲವಾಗಬೇಕು

ಭಾರತದಲ್ಲಿ ವಾಸವಿರುವ ಪ್ರತಿಯೊಬ್ಬ ವ್ಯಕ್ತಿಗೂ ಅಸ್ತಿತ್ವದ ಗುರುತಿನ ಚೀಟಿ ಕೊಡಬೇಕೆಂದೇ ನಿಯಮಿಸಲ್ಪಟ್ಟ ಯುನಿಕ್ ಐಡಿ ಅಥಾರಿಟಿಯ ಮುಂದಿರುವುದು ಸುಲಭವಾದ ಸವಾಲೇನೂ ಅಲ್ಲ. ಈ ಸ್ಥರದ ಕೆಲಸ ಈವರೆಗೆ ಯಾವುದೇ ದೇಶದಲ್ಲಿ ನಡೆದಿಲ್ಲ. ಒಂದು ನೂರು ಕೋಟಿಕೂ ಹೆಚ್ಚಿನ ಜನಸಂಖ್ಯೆಯ ಗುರುತನ್ನು ಸಂಗ್ರಹಿಸಿ ಪ್ರತಿಯೊಬ್ಬರಿಗೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡಿ ಆ ಸಂಖ್ಯೆ ಹೊಂದಿದ ವ್ಯಕ್ತಿಯ ಗುರುತನ್ನು ಒಂದೆಡೆ ಕಾಯ್ದಿಡುವುದಲ್ಲದೇ - ಬೇಕೆಂದಾಗ ತ್ವರಿತ ಗತಿಯಲ್ಲಿ ಆ ಗುರುತನ್ನು ಪರಿಶೀಲಿಸಿ ಧೃವೀಕರಿಸಹೊರಟಿರುವ ಈ ಯೋಜನೆ ಮಹತ್ವಾಕಾಂಕ್ಷೆಯಿಂದ ಕೂಡಿದೆ. ಯುಐಡಿ ಮುಂದಿರುವ ಸವಾಲುಗಳು ಮಹತ್ತರವಾದವು. ಅಂಥ ಸವಾಲನ್ನು ಎದುರಿಸಲು ಸಿದ್ಧರಾಗಿ ನಿಂತಿರುವ ನಂದನ್ ನಿಲೇಕಣಿ ಸಫಲರಾಗುವರೇ? ನಂದನ್ ಅವರ ಕೆಲಸ ಚುನಾವಣೆಗಳಿಗೆ ಗುರುತಿನ ಚೀಟಿ ಕೊಡಲು ಹೊರಟ ಶೇಷನ್ ಗಿಂತ ಎಷ್ಟು ಭಿನ್ನ ಹಾಗೂ ಎಷ್ಟು ಜಟಿಲ... ಹಾಗೂ ಅವರ ಸಾಫಲ್ಯಕ್ಕೆ ಮಾಪಕಗಳು ಏನು?


ಸರಿಯಾದ ಮಾಪಕಗಳಿಲ್ಲದಿದ್ದರೆ ಈ ಇಂಥ ಒಂದು ಯೋಜನೆ ವಿಫಲವಾಗುವುದಕ್ಕೆ ಸಾಧ್ಯವೇ ಇಲ್ಲ. ಶೇಷನ್ ಪ್ರಾರಂಭಿಸಿದ ಚುನಾವಣಾ ಗುರುತಿನ ಚೀಟಿಯ ಕಾರ್ಯಕ್ರಮವೂ ವಿಫಲವಾಗಿದೆ ಎಂದು ಹೇಳಲು ಒಂದು ರೀತಿಯಿಂದ ಸಾಧ್ಯವಿಲ್ಲ. ಏಕೆಂದರೆ ಈಗಲೂ ಆ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ಸಾಫಲ್ಯತೆ-ವೈಫಲ್ಯಗಳನ್ನು ಒಂದು ಕಾಲಘಟ್ಟದಲ್ಲಿಟ್ಟು ಒಂದು ಗುರಿಯನ್ನು ತಲುಪುವ ಪ್ರಕ್ರಿಯೆಯಲ್ಲಿ ಮಾತ್ರ ಅಳೆಯಬಹುದು. ಶೇಷನ್ ಗುರುತಿನ ಚೀಟಿಗಳಿಲ್ಲದಿದ್ದರೆ ಓಟು ಹಾಕಲು ಸಾಧ್ಯವಿಲ್ಲ ಎನ್ನವ ಅಂಶವನ್ನು ಸಾಧಿಸಿದರೇ ವಿನಃ ಅದು ಓಟು ಹಾಕಲೆಂದೇ ವಿಶಿಷ್ಟವಾಗಿ ನೀಡಿದ ಗುರುತಿನ ಚೀಟಿ ಅನ್ನುವ ತಮ್ಮ ಗುರಿಯನ್ನು ಸಾಧಿಸಲಾರದೇ ಹೋದರು. ಹೀಗಾಗಿ ಅವರ ಯೋಜನೆ ಸಾಫಲ್ಯತೆಯ ಬಗ್ಗೆ ಕೆಲವು ಪ್ರಶ್ನೆಗಳನ್ನ ಎತ್ತಬಹುದು. ನಂದನ್ ಅವರ ಹಿನ್ನೆಲೆ ಗುರಿ-ಉದ್ದೇಶಗಳನ್ನು ವ್ಯಕ್ತ ಪಡಿಸುವ, ಅದನ್ನು ಸಾಧಿಸುವ ಅಂಕಿಸಂಖ್ಯೆಗಳ ಕಾರ್ಪೊರೇಟ್ ಜಗತ್ತಿನದ್ದು. ಹೀಗಾಗಿ ಅವರು ತಮ್ಮ ಜವಾಬ್ದಾರಿ ಕೈಗೊಂಡ ಕೆಲವು ದಿನಗಳಲ್ಲಿಯೇ ತಮ್ಮ ಉದ್ದೇಶಿತ ಸಾಧನೆಯ ಅಂಕಿಯನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಐದು ವರ್ಷಗಳಲ್ಲಿ 60 ಕೋಟಿ ಜನರ ಗುರುತನ್ನು ಸಂಗ್ರಹಿಸಿ ಅವರಿಗೆ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡುವ ಗುರಿಯನ್ನು ಹೊಂದಿದ್ದಾರೆ. ಹೀಗಾಗಿ ನಮಗೆ ನಂದನ್ ಸಾಫಲ್ಯತೆಯ ಒಂದು ಮಾಪನವನ್ನಂತೂ ಅವರೇ ನೀಡಿದ್ದಾರೆ.

ನಂದನ್ ಇಷ್ಟು ಜನರ ಗುರುತನ್ನು 5 ವರ್ಷಗಳಲ್ಲಿ ಸಂಗ್ರಹಿಸುವುದಲ್ಲದೇ, ಆ ಗುರುತನ್ನು ಪರಿಶೀಲಿಸಿ ಧೃವೀಕರಿಸುವ ಯಂತ್ರಾಂಗವನ್ನು ನೆಲದ ಮೇಲೆ ಇಳಿಸುವ ಮಹತ್ತರ ಉದ್ದೇಶವನ್ನು ಹೊಂದಿದ್ದಾರೆ. ಆದರೆ ಆ ಗುರಿ ಮಹತ್ವಾಕಾಂಕ್ಷೆಯ ಗುರಿ ಎಂದು ನಮಗನ್ನಿಸುವುದಕ್ಕೆ ಮುಖ್ಯ ಕಾರಣ ಸರಕಾರ ಕೆಲಸ ಮಾಡುವ ರೀತಿಯೇ ಆಗಿದೆ. ಆ ಕಷ್ಟಗಳನ್ನು ನಂದನ್ ಅಂದಾಜು ಮಾಡುವುದರಲ್ಲಿ ಎಡವಿರಬಹುದು. ನಂದನ್ ಬಹು ಬೇಗನೇ ಸರಕಾರದ ಅಡಚಣೆಗಳನ್ನು ಅನುಭವಿಸಲಿದ್ದಾರೆ. ಆ ಅಡಚಣೆಗಳು ಈ ಮಹತ್ತರ ಕೆಲಸಕ್ಕೆ ಬೇಕಾದ ತಂತ್ರಜ್ಞಾನದ ಖರೀದಿಯಿಂದ ಹಿಡಿದು ಈ ಯೋಜನೆಗಿರುವ ಆರ್ಥಿಕ ಸದುಪಾಯದ ಉಪಯೋಗದವರೆಗೆ ಅನೇಕ ಕೊಕ್ಕಿಗಳನ್ನು ಎದುರಿಸಬೇಕಾಗುತ್ತದೆ. ಇವು ಯಾವುವೂ ಖಾಸಗೀ ಕ್ಷೇತ್ರದಲ್ಲಿ ದೊಡ್ಡ ಅಡಚಣೆಗಳಲ್ಲ. ಈ ಅಡಚಣೆಗಳು ಒಂದು ಕಡೆ ಸರಕಾರಗಳಲ್ಲಿರುವ ಭ್ರಷ್ಟಾಚಾರದ ಕಾರಣವಾಗಿ ಆದರೆ, ಮತ್ತೊಂದು ಕಡೆ ಆ ಭ್ರಷ್ಟಾಚಾರವನ್ನು ತಡೆಗಟ್ಟುವ ಯಂತ್ರಾಂಗದ ಕಾರಣವಾಗಿಯೂ ಆಗಬಹುದು. ಆರ್.ಟಿ.ಐ, ಮತ್ತು ಸಿ.ವಿ.ಸಿ [ಮಾಹಿತಿ ಕೇಳುವ ಅಧಿಕಾರ ಮತ್ತು ಕೇಂದ್ರೀಯ ವಿಜಿಲೆಂಸ್ ವಿಭಾಗ] ಎನ್ನುವ ಪದಗಳು ನಂದನ್ ಕಿವಿಯಲ್ಲಿ ಆಗಾಗ ರಿಂಗಣಿಸಲಿವೆ.

ಹೀಗೆ ಎಲ್ಲರ ಗುರುತೂ ಸುಲಭವಾಗಿ ಸಿಗುವುದಾದರೆ, ಅನೇಕ ಜಾಗಗಳ - ನಕಲಿ ಗ್ಯಾಸ್ ಕನೆಕ್ಷನ್, ನಕಲಿ ರೇಷನ್ ಕಾರ್ಡು ಹೀಗೆ - ಸದ್ಯದ ಸಂತೋಷದ ಸ್ಥಿತಿಗೆ ಧಕ್ಕೆ ಒದಗಬಹುದಾದ್ದರಿಂದ ಅವರ ಯೋಜನೆಯನ್ನು ವಿಫಲಗೊಳಿಸಲು ಕೈಕಟ್ಟಿ ನಿಂತ, ಕೆಲಸವನ್ನು ಕೆಡಿಸುವ ಒಂದು ಪಡೆಯೇ ತಯಾರಾಗಿ ನಿಂತಿರುತ್ತದೆ. ಈ ಪಡೆ, ಸಾಮ, ದಾನ, ಭೇದ, ದಂಡೋಪಾಯಗಳನ್ನು ಉಪಯೋಗಿಸಲು ಹೇಸುವುದಿಲ್ಲ. ಒಂದೊಂದು ಜಾಗದಲ್ಲಿ ಮಾಹಿತಿ ಸಂಗ್ರಹಣೆಗೆ ಅನೇಕ ರಿಜಿಸ್ಟಾರುಗಳನ್ನು ಉಪಯೋಗಿಸುವುದಾಗಿ ನಂದನ್ ಹೇಳಿದ್ದಾರೆ. ಅವರುಗಳ ಗುಣಮಟ್ಟದಲ್ಲಿ ಸ್ವಲ್ಪವೂ ಸಡಿಲಾಗದಂತೆ ಯುಐಡಿ ನೋಡಿಕೊಳ್ಳಬೇಕಾಗುತ್ತದೆ. ಇದು ಸರಳವಾದ ಮಾತೇನೂ ಅಲ್ಲ.

ನಂದನ್ ಬುದ್ಧಿವಂತರು - ಹೀಗಾಗಿಯೇ ಎರಡು ವಿವಾದಾಸ್ಪದ ವಿಷಯಗಳ ಬಗ್ಗೆ ತಕ್ಷಣದ ನಿಲುವನ್ನು ತೆಗೆದುಕೊಂಡು ಬಚಾವಾಗಿದ್ದಾರೆ. ಮೊದಲನೆಯದ್ದೆಂದರೆ ಯಐಡಿ ಯಾರಿಗೂ ಗುರುತಿನ ಚೀಟಿಯನ್ನು ನೀಡುವುದಿಲ್ಲ ಎಂದು ಹೇಳಿ - ಆ ಮೂಲಕ ಆಗಬಹುದಾಗಿದ್ದ ಸ್ಮಾರ್ಟ್ ಕಾರ್ಡೇ - ಅದರಲ್ಲಿ ಏನು ವಿವರಗಳನ್ನ ಅಡಕಮಾಡಬೇಕು, ಈ ಎಲ್ಲ ಗೊಂದಲಗಳಿಂದ ಪಾರಾಗಿ - ಕೇವಲ ಒಂದು ಹದಿನಾರಂಕೆಯ ಗುರುತಿನ ಸಂಖ್ಯೆಯನ್ನು ಮಾತ್ರ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಕಾರ್ಡು ಅದರ ಕಾಂಟ್ರಾಕ್ಟು ಪೈರವಿ ಮತ್ತು ಆಗಬಹುದಾಗಿದ್ದ ಭ್ರಷ್ಟಾಚಾರದಿಂದ ಅವರು ಸುಲಭವಾಗಿ ತಪ್ಪಿಸಿಕೊಂಡಿದ್ದಾರೆ. ಕಾರ್ಡು ಇಲ್ಲದಿದ್ದರೂ, ಮಾಹಿತಿ ಹಲವು ಕೇಂದ್ರೀಕೃತ ಯಂತ್ರಗಳಲ್ಲಿ ಅಡಕವಾಗಿ ಕೂತಿರುತ್ತದೆ. ನಂದನ್ ಪ್ರಕಾರ, ಈ ಯಂತ್ರಗಳು ಜನತೆಯ ಬೆರಳ ಗುರುತಿನ ಆಧಾರದ ಮೇಲೆ ಅವರ ಅಸ್ತಿತ್ವವನ್ನು ಧೃವೀಕರಿಸಿಬಿಡುತ್ತದೆ. ಎರಡನೆಯ ಬುದ್ದಿವಂತಿಕೆಯ ವಿಷಯವೆಂದರೆ ನಂದನ್ ಇದಕ್ಕಾಗಿ ಮುಕ್ತ ಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸುವುದಾಗಿ ಹೇಳಿ ತಮ್ಮ ಇನ್ಫೋಸಿಸ್ ಮತ್ತು ಇತರ ಐಟಿ ಕಂಪನಿಗಳಿಗೆ ದೊಡ್ಡ ಲಾಭದ ಕಾಂಟ್ರಾಕ್ಟುಗಳನ್ನು ಕೊಡಬಹುದಾದ ಸಾಧ್ಯತೆಯನ್ನು ಇಲ್ಲವಾಗಿಸಿದ್ದಾರೆ.

ಆದರೆ ನಂದನ್ ಸ್ವತಃ ಒಪ್ಪುವಂತೆ - ಪ್ರತಿಯೊಬ್ಬರ ಹತ್ತೂ ಬೆರಳುಗಳು, ಮುಖ, ಹಾಗೂ ಕಣ್ಣಿನ ಮಾಹಿತಿಯನ್ನ ಸಂಗ್ರಹಿಸಿ ಇಡುವುದು, ಯಾವದೇ ಕ್ವೆರಿ ಬಂದ ತಕ್ಷಣ 5 ಸೆಕೆಂಡುಗಳಲ್ಲಿ ಅದನ್ನು ಧೃವೀಕರಿಸುವುದು ಸರಳವಾದ ಮಾತೇನೂ ಅಲ್ಲ.

ಯಾವುದೇ ಕಾರ್ಡು ಅಥವಾ ಗುರುತಿನ ಚೀಟಿಯನ್ನು ಯುಐಡಿ ನೀಡುವುದಿಲ್ಲವೆಂದಾದ ಮೇಲೆ ಜನತೆ ಮಾಹಿತಿ ಪರಿಶೀಲಿಸುವ ಯಂತ್ರಗಳಿಲ್ಲದ ಜಾಗದಲ್ಲಿ ಏನು ಮಾಡಬೇಕು? ಅಥವಾ ಆ ಮಟ್ಟಿಗೆ ಯಂತ್ರಾಂಗವನ್ನು ಇಳಿಸಲು ತ್ವರಿತಗತಿಯಲ್ಲಿ ಸಾಧ್ಯವೇ? ತಮ್ಮ ಅಸ್ತಿತ್ವವನ್ನ ಹೇಗೆ ನಿರೂಪಿಸಬೇಕು? ಈ ಎಲ್ಲದಕ್ಕೂ ಪರಿಹಾರ ಮತ್ತೆ ಬೇರಾರಾದರೂ ನೀಡಿದ ಗುರುತಿನ ಚೀಟಿಯ ಮೊರೆ ಹೋಗಬೇಕಾಗಬಹುದು. ದಿನನಿತ್ಯದ ಅವಶ್ಯಕತೆಗಳಿಗೆ ಮತ್ತೆ - ಪ್ಯಾನ್ ಕಾರ್ಡು, ಎಪಿಕ್, ಪಾಸ್ ಪೋರ್ಟ್, ರೇಶನ್ ಕಾರ್ಡು - ಹೀಗೆ ಈಗಿರುವ ಅಸ್ತಿತ್ವದ ಚೀಟಿಗಳ ಮೇಲೆ ನಂದನ್ ನೀಡಿದ ಸಂಖ್ಯೆಯನ್ನು ಅಡಕಮಾಡಬೇಕಾಗುತ್ತದೆ. ಹೀಗಾಗಿ ಅಸ್ತಿತ್ವದ ಮಾಹಿತಿ ಮೂಲಭೂತವಾಗಿ ಯಐಡಿಯ ಮಾಹಿತಿ ಜಾಲದಲ್ಲಿ ಅಡಕವಾಗಿದ್ದರೂ ಅದನ್ನು ವ್ಯಕ್ತ ಪಡಿಸಲು ಮತ್ತೊಂದು ಮಾಧ್ಯಮವನ್ನು ಅವರು ಹುಡುಕಬೇಕಾಗುತ್ತದೆ.

ಆದರೂ ಈ ಯೋಜನೆ ಸಫಲಗೊಂಡರೆ, ಗೆದ್ದರೆ ಜನರಿಗೆ ಉಪಯೋಗವಾಗುವುದರಲ್ಲಿ ಅನುಮಾನವೇ ಇಲ್ಲ. ಮುಖ್ಯತಃ ಬಡವರಿಗೆ ಇದರಿಂದ ಬಹಳಷ್ಟು ಉಪಯೋಗವಾಗಬಹುದು. ಇದು ನಿಶುಲ್ಕ ಸೇವೆಯಾದ್ದರಿಂದ ಒಮ್ಮೆ ತಮ್ಮ ಮಾಹಿತಿಯನ್ನು ದಾಖಲಿಸಿದರೆ, ಪ್ರತಿಬಾರಿಯೂ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕಾಗದವನ್ನು ಹಿಡಿದು ಸಹಿಗಾಗಿ ಓಡಾಡುವ ಅವಶ್ಯಕತೆಯಿರುವುದಿಲ್ಲ. ನಂದನ್ ಅವರ ಉದ್ದೇಶ ಗೆದ್ದರೆ, ಪ್ರತಿ ವ್ಯಕ್ತಿಗೂ ಬ್ಯಾಂಕಿನ ಎಕೌಂಟು ಸಹಜವಾಗಿ ತೆರೆಯುವ ಹಕ್ಕು ಬಂದು ಬಿಡುತ್ತದೆ. ಹೀಗಾಗಿ ಸರಕಾರೀ ಯೋಜನೆಗಳ ಮೂಲಕ ಬರಬೇಕಾದ ಧನ ರಾಶಿ - ನರೇಗಾದ ಕೂಲಿ ಹಣ, ಪಿಂಚನಿ, ಎಲ್ಲವೂ ಯಾವುದೇ ಮಧ್ಯವರ್ತಿಯ ಮುಲಾಜಿಲ್ಲದೇ ನೇರವಾಗಿ ಬಡವರಿಗೆ ಸೇರುತ್ತದೆ. ತಂತ್ರಜ್ಞಾನ ಹೆಚ್ಚಿ ತಿಳಿದವರ ಮೂಲಕವಲ್ಲದೇ ಮಾಹಿತಿಯ ಆಧಾರದ ಮೇಲೆ ಕೆಲಸಗಳನ್ನು ನಾವು ಮಾಡಿಕೊಳ್ಳಲು ಸಾಧ್ಯವಾದರೆ ದೇಶದ ಜುಗಾಡ್ ಏಜೆಂಟುಗಳ ಭ್ರಷ್ಟಾಚಾರವನ್ನೂ ಒಂದು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗುತ್ತದೆ. ಇಪ್ಪತ್ತೈದು ವರ್ಷಗಳ ಹಿಂದೆ ರೈಲಿನ ಟಿಕೇಟು ಕಾದಿರಿಸುವುದಕ್ಕಾಗಿ ಮಾಡುತ್ತಿದ್ದ ಸರ್ಕಸ್ಸನ್ನು ನೆನಪು ಮಾಡಿಕೊಂಡರೆ ತಂತ್ರಜ್ಞಾನದ - ಹಾಗೂ ತಂತ್ರಜ್ಞಾನ ಎಲ್ಲರನ್ನೂ ಸಮಾನರನ್ನಾಗಿ ಕಾಣುವ ಪ್ರಕ್ರಿಯೆಯ ಶಕ್ತಿಯನ್ನು ನಾವು ಕಾಣುವುದಕ್ಕೆ ಸಾಧ್ಯವಾಗುತ್ತದೆ.


ಹೀಗಾಗಿಯೇ ಯಐಡಿ ಮಹತ್ವದ ಯೋಜನೆ. ಅದರ ಪ್ರಾಮುಖ್ಯತೆಯನ್ನು ನಾವು ಅಲ್ಲಗಳೆಯಲೇ ಬಾರದು. ಈ ಯೋಜನೆಗೆ ಅನೇಕ ಸ್ಥರಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ತಡೆಯುವ, ಜನರ ಕೈಗೆ ಹೆಚ್ಚಿನ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತದೆ ಆದ್ದರಿಂದಲೇ ಇದು ವಿಫಲವಾಗುವ ಸಾಧ್ಯತೆಯನ್ನು ಹೊಂದಿದೆ. ಆ ಶಕ್ತಿಗಳನ್ನೂ ಮೀರಿ ಸರಕಾರಿ ಯಂತ್ರಾಂಗದ ನಡುವೆ ಇಕ್ಕಟ್ಟಾದ ಜಾಗದಲ್ಲಿ ನಂದನ್ ಕೆಲಸ ಮಾಡಬೇಕಾಗಿದೆ. ಅವರು ಸಫಲರಾದರೆ ದೇಶ ಸಫಲವಾದಂತೆ. ಆದರೆ ಆಗುವರೇ... ಸ್ಯಾಮ್ ಪಿತ್ರೋಡಾ ದೇಶಕ್ಕೆ ಟೆಲಿಕಾಂ ಕ್ರಾಂತಿ ತಂದಂತೆ ನಂದನ್ ಅಸ್ತಿತ್ವದ ಕ್ರಾಂತಿ ತರುವರೇ.....


No comments:

Post a Comment