Saturday, May 22, 2010

ಮುಕ್ತಾಯ

ಶನಿವಾರ ಸಂತೆ ನಾನು ಉದಯವಾಣಿ ಪತ್ರಿಕೆಗಾಗಿ ಬರೆಯುತ್ತಿದ್ದ್ ಕಾಲಂ. ಒಂದು ವರ್ಷ ಬರೆದು ಈಗ ನಿಲ್ಲಿಸಿದ್ದೇನೆ. ಈ ತಾಣದಲ್ಲಿ ಆ ಲೇಖನ ಗುಚ್ಛ ಹಾಕುತ್ತಿದ್ದೆ. ಈಗ, ಈ ತಾಣದಲ್ಲೂ ಹೊಸ ಬರವಣಿಗೆ ಇನ್ನು ಕಾಣುವುದಿಲ್ಲ. ನನ್ನ ಮಿಕ್ಕ ಬರವಣಿಗೆಗೆ ಕೊಂಡಿಗಳು ಬಲಬದಿಯಲ್ಲಿವೆ. ನಿಮ್ಮ ಪ್ರೀತಿ ಅಭಿಮಾನಕ್ಕೆ ಧನ್ಯವಾದಗಳು.

ಎಂ.ಎಸ್.ಶ್ರೀರಾಮ್.





Sunday, February 14, 2010

ಯುದ್ಧಾನಂತರದ ಅಫಘಾನಿಸ್ತಾನ - ವಿರೋಧಾಭಾಸದ ನಡುವೊಂದಿಷ್ಟು ದೇಶಭಕ್ತಿ


ಅಫಘಾನಿಸ್ತಾನದ ಉಸ್ತುವಾರಿ ತಾಲಿಬಾನ್ ಕೈಯಿಂದ ಸ್ಥಳೀಯರ, ಪ್ರಜಾಪ್ರತಿನಿಧಿಗಳ ಕೈಗೆ ಸೇರಿ ಹಲವು ವರ್ಷಗಳಾಗಿವೆ. ಹಾಗೆಂದು ಆ ದೇಶದ ಸಂಪೂರ್ಣ ಸೂತ್ರಗಳು ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಳೆಯ ಯುದ್ಧಕೋರರು, ಮಾದಕ ವಸ್ತುಗಳನ್ನು ಮಾರಾಟ ಮಾಡುವ ಮಾಫಿಯಾ ಹಾಗೂ ಮತಾಂಧ ಮೂಲಭೂತವಾದಿಗಳು ಇನ್ನೂ ದೇಶದ ಬಹಳಷ್ಟು ಪ್ರಾಂತಗಳಲ್ಲಿ ಇದ್ದಾರೆ. ಆದರೂ ಆ ದೇಶದಲ್ಲಿ ಕೆಲವು ಗಮ್ಮತ್ತಿನ ವಿಚಾರಗಳು ನನಗೆ ಕಂಡುವು.

ಮೊದಲಿಗೆ ಅಫಘಾನಿಸ್ತಾನಕ್ಕೆ ವೀಸಾ ಸಿಗುವುದು, ಅಮೆರಿಕಕ್ಕೆ ಹೋಗಲು ವೀಸಾ ಸಿಕ್ಕಷ್ಟೇ ಕಷ್ಟದ ಮಾತು! ಆ ದೇಶದ ಕಾನೂನಿನ ಪ್ರಕಾರ ಮೊದಲಿಗೆ ನಮ್ಮನ್ನು ಕರೆಸಿಕೊಳ್ಳುವವರು ಅಲ್ಲಿನ ಆಂತರಿಕ ವ್ಯವಹಾರಗಳ ಮಂತ್ರಾಲಯದಿಂದ ಒಂದು ಫ್ಯಾಕ್ಸ್ ಕಳಿಸಿ ಒಂದು ಸಂಖ್ಯೆಯನ್ನು ನಮಗೆ ಕೊಡುತ್ತಾರೆ. ಆ ಸಂಖ್ಯೆಯಿದ್ದರೆ ಮಾತ್ರ ಎಂಬಸಿಯೊಳಗೆ ಪ್ರವೇಶ. ಹಾಗೂ ಮಿಕ್ಕ ದೇಶಗಳಿಗೆ ಬಹಳಷ್ಟು ಬಾರಿ ಯಾರಾದರೂ ನಮ್ಮ ಪ್ರತಿನಿಧಿಗಳನ್ನು ಕಳಿಸಬಹುದಾದರೂ ಅಮೆರಿಕದ ಹಾಗೂ ಅಫಘಾನಿಸ್ಥಾನದ ಎಂಬಸಿಗಳಲ್ಲಿ ಮಾತ್ರ ನಾವುಗಳೇ ಖುದ್ದಾಗಿ ಹೋಗಬೇಕು. ಅಲ್ಲಿ ಮಾಡುವ ಸಂದರ್ಶನದ ಆಧಾರದ ಮೇಲೆ ವೀಸಾ ಸಿಗುತ್ತದೆ. ಯಾರು ತಮ್ಮ ದೇಶಕ್ಕೆ ಪ್ರವೇಶಿಸಬಹುದು-ಬಾರದು ಅನ್ನುವಲ್ಲಿ ವಿಪರೀತ ಎಚ್ಚರ ವಹಿಸುತ್ತಿರುವಂತೆ ಕಂಡರೂ, ತಂತ್ರಜ್ಞಾನದ ಉಪಯೋಗದಲ್ಲಿ ಮಾತ್ರ ಈ ದೇಶಗಳು ಅಜಗಜಾಂತರ. ಅಮೆರಿಕದ ವೀಸಾಕ್ಕೆ ತಯಾರಿ ಅವರ ವೆಬ್ ಸೈಟ್ ಮೂಲಕ ಮಾಡಬಹುದಾದರೂ, ಅಫಘಾನಿಸ್ತಾನ ದೇಶದ ವೆಬ್ ಸೈಟಿನಲ್ಲಿ ಏನು ಮಾಡಲೂ, ಕನಿಷ್ಟ ವಿವರಗಳನ್ನು ಪಡೆಯಲೂ ಸಾಧ್ಯವಿಲ್ಲ... ಹೋದಬಾರಿ ನಾನು ಕಾಬೂಲಿಗೆ ಹೋಗುವ ಯತ್ನದ ತಯಾರಿಯಾಗಿ ವೀಸಾಕ್ಕೆ ದೆಹಲಿಗೆ ಹೋದಾಗ ಒಂದು ದಿನ ಹೆಚ್ಚು ಅಲ್ಲೇ ಉಳಿಯಬೇಕಾಯಿತು. ಕಾರಣ: ಎಂಬಸಿಯ ಪ್ರಿಂಟರ್ ಕೆಟ್ಟಿದ್ದರಿಂದ ವೀಸಾ ಮುದ್ರಿಸಲು ಆಗಲಿಲ್ಲವಂತೆ. ನಾಳೆ ಬಾ ಎಂದರು...

ಅಫಘಾನಿಸ್ಥಾನದಂತಹ ಯುದ್ಧಪೀಡಿತ ಜಾಗದಲ್ಲಿ ಒಂದು ಸಂಸ್ಥಾಗತವಾದ ವಿತ್ತೀಯ ಏರ್ಪಾಟನ್ನು ಮಾಡುವುದು ಹೇಗೆ? ಮೂವತ್ತು ವರ್ಷಗಳಿಗೂ ಹೆಚ್ಚು ಹೋರಾಡುವುದೇ ಸಾಮಾನ್ಯ ಜೀವನವಾಗಿರುವ ಆ ದೇಶದವರಿಗೆ, ಇದ್ದಕ್ಕಿದ್ದ ಹಾಗೆ, ಸರಕಾರ, ತೆರಿಗೆ, ಬ್ಯಾಂಕು ಈ ಎಲ್ಲವನ್ನೂ ಒದಗಿಸಿಕೊಡಬೇಕೆಂದರೆ ಅದಕ್ಕೆ ಅವರುಗಳು ಒಗ್ಗಬೇಕೆಂದರೆ ಅದು ಸರಳವಾದ ಮಾತೇನೂ ಅಲ್ಲ. ಒಂದು ಹೊಸ ದೇಶವನ್ನು, ಹೊಸ ಸಂವಿಧಾನವನ್ನೂ, ಹೂಸ ಕಾನೂನುಗಳನ್ನು, ಹೊಸ ಹಣಕಾಸಿನ ವ್ಯವಸ್ಥೆಯನ್ನೂ ಏರ್ಪಾಟು ಮಾಡಬೇಕು.

ರಿಜರ್ವ್ ಬ್ಯಾಂಕಿನಂತಹ ಒಂದು ಬಲವಾದ ಕೇಂದ್ರೀಯ ವ್ಯವಸ್ಥೆ ಇಲ್ಲದಿದ್ದಾಗ, ಸ್ಥಳೀಯ ಕರೆಂಸಿಗೆಯನ್ನು ಸುಲಭವಾಗಿ ಪರಿವರ್ತಿಸಲು ಸಾಧ್ಯವಾಗದ ಎಲ್ಲ ಸವಾಲುಗಳೂ ನಮಗೆ ಆ ದೇಶದಲ್ಲಿ ಕಾಣಿಸುತ್ತವೆ. ಹೀಗಾಗಿಯೇ ಕಾಬೂಲಿನಲ್ಲಿ ಸ್ಥಳೀಯ ಕರೆಂಸಿ ಅಫಘನಿಯ ಜೊತೆಜೊತೆಗೇ ಭಾರತೀಯ ರೂಪಾಯಿಗಳೂ, ಡಾಲರುಗಳೂ ಚಾಲ್ತಿಯಲ್ಲಿರುವುದನ್ನು ನಾವು ಕಾಣಬಹುದು. ರಸ್ತೆಯಲ್ಲಿ ನೋಟಿನ ಕಂತೆಯನ್ನೂ, ಟೆಲಿಫೋನ್ ಸಿಮ್ ಕಾರ್ಡುಗಳನ್ನೂ ಮಾರುವ ಜನರನ್ನು ನೋಡಬಹುದು. ಬಹಳ ಹಿಂದುಳಿದ ಜಾಗಕ್ಕೂ ಬಹಳ ವಿಕಸಿತ ಜಾಗಕ್ಕೂ ಇರುವ ಸಾಮ್ಯ ಹಣಕಾಸಿನ ಲಾವಾದೇವಿಯಲ್ಲಿ ನಾವು ಕಾಣಬಹುದು - ಯಾವುದೇ ವಿಕಸಿತ ದೇಶಗಳಂತೆಯೇ ಇಲ್ಲಿಯೂ ಇತರ ದೇಶದ ಕರೆಂಸಿಯನ್ನು ಸುಲಭವಾಗಿ ಪರಿವರ್ತಿಸಬಹುದು. ಆದರೆ ಇದಕ್ಕೆ ಕಾರಣ ಅವರ ಕೇಂದ್ರೀಯ ವ್ಯವಸ್ಥೆ ಬಲವಾಗಿಲ್ಲದ್ದೇ ಆಗಿದೆ!


ರಸ್ತೆಗಳಿಲ್ಲದಿರಬಹುದು, ನಲ್ಲಿಯಲ್ಲಿ ನೀರಿಲ್ಲದಿರಬಹುದು, ವಿದ್ಯುತ್ತಿನ ಸರಬರಾಜು ಅಷ್ಟಕ್ಕಷ್ಟೇ ಇರಬಹುದು, ಆದರೆ ಜಗತ್ತಿನ ಯಾವುದೇ ಹಿಂದುಳಿದ ಜಾಗವನ್ನು ನೋಡಿದರೂ, ಯಾವುದೇ ದೇಶವನ್ನ ನೋಡಿದರೂ ನಮಗೆ ಕಾಣಸಿಗುವುದು ಒಂದು ಅದ್ಭುತ ವಿಚಾರ. ಎಲ್ಲರ ಕೈಯಲ್ಲೂ ಒಂದಾದರೂ ಸೆಲ್ ಫೋನ್ ಇರುತ್ತದೆ. ತಮ್ಮ ಯೋಗ್ಯತೆಗನುಸಾರವಾಗಿ, ಮಿಸ್ಡ್ ಕಾಲುಗಳ ರೂಪದಲ್ಲೇ ಮಾತುಕತೆ ನಡೆಸುವ ತಂತ್ರ ನಮಗೆ ಎಲ್ಲೆಲ್ಲೂ ದೊರೆಯುತ್ತದೆ. ಇದೊಂದು ವಿಚಾರದಲ್ಲಿ ಕಾಬೂಲಿಗೂ, ದೆಹಲಿಗೂ, ನ್ಯೂಯಾರ್ಕಿಗೂ ವ್ಯತ್ಯಾಸವೇ ಇಲ್ಲವೆನ್ನಿಸುತ್ತದೆ. ತೊಡುವ ಬಟ್ಟೆಗೆ ಉಣ್ಣುವ ಊಟಕ್ಕೆ ಜಾತಿ ಮತದ ಲೇಪವನ್ನು ಕೊಡಬಹುದಾದರೂ ಮೊಬೈಲಿಗೆ ಮಾತ್ರ ಯಾವುದೂ ಅಡ್ಡಬಹುವುದಿಲ್ಲ. ಕರೆಂಸಿ ಬಲವಾಗಿಲ್ಲದ ಯುದ್ಧಪೀಡಿತ ಅಫಘಾನಿಸ್ತಾನದಲ್ಲಿ ಸಿಮ್ ಕಾರ್ಡೇ ಬ್ಯಾಂಕು, ಡೆಬಿಟ್ ಕಾರ್ಡು ಎಲ್ಲ... ಒಂದು ಮೊಬೈಲಿನಿಂದ ಇನ್ನೊಂದಕ್ಕೆ ಯಾವ ತೊಂದರೆಯೂ ಇಲ್ಲದೇ ಹಣ ಪಾವತಿ ಮಾಡಬಹುದು. ಇದು ಮಾತ್ರ ಯಾವುದೇ ವಿಕಸಿತ ದೇಶಕ್ಕಿಂತ ಕೆಲ ಹೆಜ್ಜೆಗಳು ಮುಂದೇ ಎನ್ನಬಹುದು.. ವಾಟ್ ಎನ್ ಐಡಿಯಾ ಸರ್ ಜೀ.

ಈ ಎಲ್ಲಕ್ಕಿಂತ ಮುಖ್ಯವೆಂದರೆ, ಅಫಘಾನಿಸ್ತಾನಕ್ಕೂ ಮುಂದುವರೆದ ಅಮೆರಿಕಕ್ಕೂ ಮತ್ತೊಂದು ಸಾಮ್ಯವೆಂದರೆ ಕೆಲಸ ಮಾಡುವ ಜನರ ರಾಷ್ಟ್ರೀಯತೆಯ ಭಿನ್ನತೆಗೆ ಸಂಬಂಧಿಸಿದ್ದು. ಅಮೆರಿಕದಲ್ಲಿ ಭಿನ್ನ ರಾಷ್ಟ್ರೀಯತೆಯ ಜನರನ್ನು ಸ್ವಾಗತಿಸಿ ತಮ್ಮ ದೇಶವನ್ನು ಅವರು ಕಟ್ಟಿದರೆ ಅಫಘಾನಿಸ್ತಾನದಲ್ಲಿಯೂ ಅದೇ ನಡೆಯುತ್ತಿದೆ. ಆದರೆ ಕಾರಣಗಳು ಮಾತ್ರ ಭಿನ್ನ. ಅಫಘಾನಿಸ್ತಾನದಲ್ಲಿ ಕೆಲಸ ಮಾಡಬಲ್ಲ ಸ್ಥಳೀಯ ವಿದ್ಯಾವಂತರಿಲ್ಲ. ತಾಲಿಬಾನ್ ಮಾಡಿದ ಕ್ರೌರ್ಯದಲ್ಲಿ ಅತೀ ಮುಖ್ಯವಾದದ್ದು ಒಂದು ಇಡೀ ದೇಶಕ್ಕೇ ವಿದ್ಯೆಯಿಲ್ಲದಂತೆ ಮಾಡಿ ಶಿಲಾಯುಗಕ್ಕೆ ಒಂದಿಡೀ ತಲೆಮಾರನ್ನು ಕೊಂಡೊಯ್ದುಬಿಟ್ಟದ್ದು. ಹೀಗಾಗಿ ಅಲ್ಲಿ ಲೆಕ್ಕ ಬರೆಯಲು, ರಸ್ತೆ, ಸೇತುವೆ, ವಿಮಾನಾಶ್ರಯಗಳನ್ನು ರೂಪಿಸಲು ಹೊರಗಿನವರೇ ಬೇಕು. ಬಹುಶಃ ಸರಕಾರದಲ್ಲಿರುವ ಅನೇಕರು ಅಫಘಾನಿಸ್ತಾನದ ಮೂಲದವರಾದರೂ ಇತರ ದೇಶದಲ್ಲಿ ಬೆಳೆದು ವಿದ್ಯಾವಂತರಾದವರಿರಬೇಕು. ಕೆಲವರಂತೂ ಅಫಘಾನಿಸ್ತಾನದ ಪಾಸ್ ಪೋರ್ಟನ್ನೂ ಹೊಂದಿಲ್ಲವೆನ್ನಿಸುತ್ತದೆ. ಒಬಾಮಾರನ್ನು ಆಫ್ರಕನ್ ಅಮೆರಿಕನ್ ಎಂದೂ ಆತನ ಪೂರ್ವಜರ ಹುಟ್ಟಿನ ಮೂಲಕ ಗುರುತಿಸಿದರೆ, ಇಲ್ಲಿ ಭಿನ್ನವಾಗಿ, ಅಮೆರಿಕನ್ ಆಫ್ಘನ್ ಎಂದು, ಮೂಲ ಇಲ್ಲೇ ಇದ್ದರೂ ಕೊಂಕಣವನ್ನು ಸುತ್ತಿ ಹೊರಗಿನವರಾಗಿ ಒಳಬಂದವರು ಈಗ ಆ ದೇಶವನ್ನು ನಡೆಸುತ್ತಿದ್ದಾರೆ.

ಈ ಎಲ್ಲ ವಿರೋಧಾಭಾಸಗಳಿದ್ದಾಗ್ಯೂ ಹೀಗೆ ಒಂದು ಹೊಸ ದೇಶವನ್ನು ನಿರ್ಮಿತಿ ಮಾಡುವ ಕೆಲಸ ಸಾಮಾನ್ಯದ್ದಲ್ಲ. ಬಡವರಿಗೆ ವಿತ್ತೀಯ ಸಹಾಯವನ್ನು ಮಾಡಬೇಕಾದರೆ, ಯಾವುದಕ್ಕೆ ಸಾಲ ನೀಡಬೇಕು, ಹಾಗೂ ಆ ಸಾಲವನ್ನು ಹೇಗೆ ವಸೂಲು ಮಾಡಬೇಕು ಅನ್ನುವುದೇ ಒಂದು ದೊಡ್ಡ ಸವಾಲಾಗುತ್ತದೆ. ಹಣ್ಣು ತರಕಾರಿಗಳಿಂದ ಹಿಡಿದು ಅನೇಕ ದಿನನಿತ್ಯದ ವಸ್ತುಗಳು ಹೊರಗಿನಿಂದ ಆಮದಾಗುವ ಸಂದರ್ಭದಲ್ಲಿ - ಮನೆಯ ಹಿಂಭಾಗದಲ್ಲಿ ಅಸ್ತ್ರಗಳನ್ನು ತಯಾರಿಸುವ ಒಂದು ಪುಟ್ಟ ಕಾರ್ಖಾನೆ ಹಾಕಿ ಯುದ್ಧವನ್ನು ಪೋಷಿಸುತ್ತಾ ಬದುಕಬಹುದೇ? ವಿಮಾನಾಶ್ರಯದಲ್ಲಿ ಬಗೆದು ಬಗೆದು ನೋಡುವ, ವೀಸಾಕ್ಕೆ ಅನೇಕ ಅಡಚಣೆಗಳನ್ನು ಹಾಕುವ ಈ ದೇಶಕ್ಕೆ ಒಂದೆಡೆ ಪಾಕಿಸ್ತಾನ, ಇರಾನ, ತಜಿಕಿಸ್ತಾನ, ಉಜ್ಬೇಕಿಸ್ತಾನದಂತಹ ದೇಶಗಳ ಸರಹದ್ದು ಎಲ್ಲೆಂದು ತಿಳಿಯದಿದ್ದಾಗ ಆ ಗೆರೆಯೇ ಇಲ್ಲದಿರುವಾಗ ಏನು ಮಾಡುವುದು ಸಾಧ್ಯ?

ಬಡವರನ್ನು ಈ ಎಲ್ಲ ವಿಕಾಸ ತಲುಪುವುದು ಹೇಗೆ? ಒಂದು ಡಾಲರಿನ ಸಾಲ ಕೊಡಲು ಖರ್ಚೆಷ್ಟು ಆಗಬಹುದು? ಜನ ಓಡಾಡಬೇಕು. ಯುದ್ಧ ನಿಂತಿದೆಯೋ ಮುಂದುವರೆಯುತ್ತಿದೆಯೋ ತಿಳಿಯದ ಸಂದರ್ಭದಲ್ಲಿ ಸಾಮಾನ್ಯವಾಗಿ ಇರುವ ಅತೀವೃಷ್ಟಿ, ಅನಾವೃಷ್ಟಿ, ರೋಗ ರುಜಿನಗಳ ಮಧ್ಯೆ ಹಾಗೂ ಹೀಗೂ ಒಂದು ರತ್ನಗಂಬಳಿಯನ್ನು ನೇಯ್ದರೆ, ಅಥವಾ ಒಂದಿಷ್ಟು ಕಲ್ಲಂಗಡಿಯನ್ನು ಬೆಳೆದರೆ ಅದನ್ನು ಮಾರುವಷ್ಟರಲ್ಲಿ ಯಾವುದೋ ಬಾಂಬಿನ ಸಿಡತಕ್ಕೆ, ಗುಂಡಿಗೆ ಅದು ಸಿಕ್ಕಿ ನಾಶವಾಗಬಹುದು. ಯುದ್ಧದಲ್ಲಿ ಕೈಕಾಲುಗಳನ್ನು ಕೆಳೆದುಕೊಂಡವರ ಸಂಖ್ಯೆಯೂ ಅಧಿಕವಾಗಿರುವ ಈ ದೇಶದ ಸವಾಲುಗಳನ್ನು ಕಂಡಾಗ ನಾವು ಸ್ವರ್ಗದಲ್ಲಿದ್ದೇವೆ ಅನ್ನಿಸುವುದರಲ್ಲಿ ಅನುಮಾನವಿಲ್ಲ.

ಕಡೆಗೂ ಇಂಥ ಜಾಗವನ್ನು ನೋಡಿದಾಗ ಮಾರುಕಟ್ಟೆಯ ಮಿತಿಯ ಬಗ್ಗೆಯೂ ನಮಗೆ ಮನದಟ್ಟಾಗುತ್ತದೆ. ಹೆಚ್ಚು ಕಾನೂನು ಕಾಯಿದೆಗಳಿಲ್ಲದ ಜಾಗದಲ್ಲಿ ಜನ ತಮಗೆ ಇಷ್ಟಬಂದ ಹಾಗೆ ವ್ಯಾಪಾರ ಮಾಡಬಹುದು. ಸರಕಾರಿ ಯಂತ್ರಾಂಗ ಅನ್ನುವುದೇ ಇಲ್ಲವಾದಲ್ಲಿ ಸ್ಥಳೀಯ ಜನರು ಮುಕ್ತ ಮಾರುಕಟ್ಟೆಯಲ್ಲಿದ್ದಂತೆಯೇ ಅಲ್ಲವೇ. ಆ ರೀತಿಯಿಂದಲೂ ವಿಕಸಿತ ದೇಶಕ್ಕೂ ಇಲ್ಲಗೂ ತಂಬಾ ಸಾಮ್ಯತೆಗಳಿವೆ. ಆದರೆ ಮುಕ್ತ ಮಾರುಕಟ್ಟೆಯ ಪರಿಹಾರ ಅತ್ಯುತ್ತಮವಾದದ್ದಲ್ಲ ಅನ್ನುವುದನ್ನು ಈ ದೇಶ ನಿರೂಪಿಸುತ್ತದೆ. (ಅಮೆರಿಕವೂ ಅದನ್ನು ಈಚೆಗೆ ತನ್ನ ವಿತ್ತೀಯ ವ್ಯವಸ್ಧೆಯ ಕುಸಿತದ ಮೂಲಕ ನಿರೂಪಿಸಿಬಿಟ್ಟಿತು). ಆದರೆ ಇಂಥ ಸರಹದ್ದಿಲ್ಲದ, ವಿದ್ಯಾವಂತರ ಬೀಡಿಲ್ಲದ, ಕಾನೂನು ವ್ಯವಸ್ಥೆಯಿಲ್ಲದ, ಒಟ್ಟಾರೆ ಕಡಿದಾದ ಪ್ರದೇಶವನ್ನು ಜೀವನದ ರೀತಿನೀತಿಯ ಚೌಕಟ್ಟಿನಲ್ಲಿ, ವ್ಯವಸ್ಥಾಗತವಾಗಿ ರೂಪಿಸುವುದು. ಹಾಗೆ ರೂಪಿಸುತ್ತಾ ಬಡವರನ್ನು ಒಳಗೊಳ್ಳುವುದು ಸುಲಭವಾದ ಸವಾಲೇನೂ ಅಲ್ಲ. ಕೆಲ ವರ್ಷಗಳಲ್ಲಿ ನ್ಯಾಟೋ ಪಡೆಗಳು ಅಲ್ಲಿಂದ ಹೊರಟುಬಿಡುತ್ತವೆ. ಸ್ಥಳೀಯರೇ ತಮ್ಮ ದೇಶವನ್ನು ನಿರ್ವಹಿಸಲು ಬಿಟ್ಟು ಬಿಡುತ್ತಾರೆ. ಆ ಸಮಯಕ್ಕೆ ಅಫಘಾನಿಸ್ತಾನ ತಯಾರಿಯನ್ನು ನಡೆಸುತ್ತಿದೆಯೇ ಅನ್ನುವುದನ್ನು ನಾವುಗಳು ಪರಿಶೀಲಿಸಬೇಕು. ಅದಕ್ಕೆ ಉತ್ತರ ಪ್ರೋತ್ಸಾಹದಾಯಕವಾಗೇನೂ ಇಲ್ಲ. ಹೀಗಾಗಿಯೇ ಅಮೆರಿಕದ ಮಿಲಿಟರಿ ಸಹಾಯಕ್ಕಿಂತ ನಮ್ಮ ದೇಶದ ಸಾಮಾಜಿಕ, ಸಾಂಸ್ಕೃತಿಕ ಸಹಾಯವೇ ಮಹತ್ವದ್ದೇನೋ...

ಹೀಗೆ ಜಗತ್ತಿನ್ನು ತನ್ನ ವಿಕಾಸಕ್ಕೆ ಆಹ್ವಾನಿಸುತ್ತಿರುವ ಮುಕ್ತ ಮಾರುಕಟ್ಟೆಯಲ್ಲಿ ನಮಗೆ ಕಾಣುವುದು ಏನು? ಅಲ್ಲಿ ಸಿಟಿ ಬ್ಯಾಂಕಿನ ಒಂದು ಶಾಖೆಯೂ ಇಲ್ಲ. ಎಟಿಎಂ ಇಲ್ಲ. ಆದರೆ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಒಂದು ಶಾಖೆ ಇದೆ. ಅಲ್ಲಿ ಐದು ಭಾರತೀಯರೂ ನಾಲ್ವರು ಅಪಘನಿಗಳೂ ಸೇರಿ ಅದನ್ನು ನಡೆಸುತ್ತಿದ್ದಾರೆ. ಅಲ್ಲಿನ ರಸ್ತೆಗಳನ್ನು ನಮ್ಮ ದೇಶದವರು ಕಟ್ಟುತ್ತಿದ್ದಾರೆ. ಅವರ ಸಂಸದ್ ಸದನವನ್ನ ಭಾರತ ನಿರ್ಮಿಸಿ ಕೊಡುತ್ತಿದೆ. ಹಾಗೂ ಯಾವ ಪಾಶ್ಚಾತ್ಯ ದೇಶದ ವಿಮಾನವೂ ಹೋಗದೆಡೆಯಲ್ಲಿ ಏರ್ ಇಂಡಿಯಾ ಪ್ರತಿನಿತ್ಯದ ಫ್ಲೈಟನ್ನು ಹಾರಿಸುತ್ತಿದೆ. ಭಾರತೀಯರಾಗಿ ನಾವು ಹೆಮ್ಮೆಪಡಲು ಈ ಎಲ್ಲವೂ ಸಾಲದೇ? ವಿಕಸಿತ ದೇಶಗಳೆಲ್ಲಾ ಶಸ್ತ್ರಾಸ್ತ್ರಗಳನ್ನು ಕೊಡುತ್ತಿರುವ ಸಂದರ್ಭದಲ್ಲಿ ಭಾರತದ ಮಹತ್ವವನ್ನು ನಾವು ಸಂಭ್ರಮದಿಂದ ಕೊಂಡಾಡಬೇಕಾಗಿದೆ.. ಭಾರತೀಯರಿಗೆ ಅಲ್ಲಿಗೆ ಹೋಗಲು ವೀಸಾದ ಚಾರ್ಜು ಸೊನ್ನೆ. ಅಮೆರಿಕನ್ನರಿಗೆ ಮೂವ್ವತ್ತು ಡಾಲರುಗಳು. ಸಹಜವೇ ಅಲ್ಲವೇ?





Sunday, January 31, 2010

ಯುಐಡಿ: ಯಾಕೆ ವಿಫಲವಾಗಬಹುದು, ಯಾಕೆ ಸಫಲವಾಗಬೇಕು


ಭಾರತದಲ್ಲಿ ವಾಸವಿರುವ ಪ್ರತಿಯೊಬ್ಬ ವ್ಯಕ್ತಿಗೂ ಅಸ್ತಿತ್ವದ ಗುರುತಿನ ಚೀಟಿ ಕೊಡಬೇಕೆಂದೇ ನಿಯಮಿಸಲ್ಪಟ್ಟ ಯುನಿಕ್ ಐಡಿ ಅಥಾರಿಟಿಯ ಮುಂದಿರುವುದು ಸುಲಭವಾದ ಸವಾಲೇನೂ ಅಲ್ಲ. ಈ ಸ್ಥರದ ಕೆಲಸ ಈವರೆಗೆ ಯಾವುದೇ ದೇಶದಲ್ಲಿ ನಡೆದಿಲ್ಲ. ಒಂದು ನೂರು ಕೋಟಿಕೂ ಹೆಚ್ಚಿನ ಜನಸಂಖ್ಯೆಯ ಗುರುತನ್ನು ಸಂಗ್ರಹಿಸಿ ಪ್ರತಿಯೊಬ್ಬರಿಗೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡಿ ಆ ಸಂಖ್ಯೆ ಹೊಂದಿದ ವ್ಯಕ್ತಿಯ ಗುರುತನ್ನು ಒಂದೆಡೆ ಕಾಯ್ದಿಡುವುದಲ್ಲದೇ - ಬೇಕೆಂದಾಗ ತ್ವರಿತ ಗತಿಯಲ್ಲಿ ಆ ಗುರುತನ್ನು ಪರಿಶೀಲಿಸಿ ಧೃವೀಕರಿಸಹೊರಟಿರುವ ಈ ಯೋಜನೆ ಮಹತ್ವಾಕಾಂಕ್ಷೆಯಿಂದ ಕೂಡಿದೆ. ಯುಐಡಿ ಮುಂದಿರುವ ಸವಾಲುಗಳು ಮಹತ್ತರವಾದವು. ಅಂಥ ಸವಾಲನ್ನು ಎದುರಿಸಲು ಸಿದ್ಧರಾಗಿ ನಿಂತಿರುವ ನಂದನ್ ನಿಲೇಕಣಿ ಸಫಲರಾಗುವರೇ? ನಂದನ್ ಅವರ ಕೆಲಸ ಚುನಾವಣೆಗಳಿಗೆ ಗುರುತಿನ ಚೀಟಿ ಕೊಡಲು ಹೊರಟ ಶೇಷನ್ ಗಿಂತ ಎಷ್ಟು ಭಿನ್ನ ಹಾಗೂ ಎಷ್ಟು ಜಟಿಲ... ಹಾಗೂ ಅವರ ಸಾಫಲ್ಯಕ್ಕೆ ಮಾಪಕಗಳು ಏನು?

ಸರಿಯಾದ ಮಾಪಕಗಳಿಲ್ಲದಿದ್ದರೆ ಈ ಇಂಥ ಒಂದು ಯೋಜನೆ ವಿಫಲವಾಗುವುದಕ್ಕೆ ಸಾಧ್ಯವೇ ಇಲ್ಲ. ಶೇಷನ್ ಪ್ರಾರಂಭಿಸಿದ ಚುನಾವಣಾ ಗುರುತಿನ ಚೀಟಿಯ ಕಾರ್ಯಕ್ರಮವೂ ವಿಫಲವಾಗಿದೆ ಎಂದು ಹೇಳಲು ಒಂದು ರೀತಿಯಿಂದ ಸಾಧ್ಯವಿಲ್ಲ. ಏಕೆಂದರೆ ಈಗಲೂ ಆ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ಸಾಫಲ್ಯತೆ-ವೈಫಲ್ಯಗಳನ್ನು ಒಂದು ಕಾಲಘಟ್ಟದಲ್ಲಿಟ್ಟು ಒಂದು ಗುರಿಯನ್ನು ತಲುಪುವ ಪ್ರಕ್ರಿಯೆಯಲ್ಲಿ ಮಾತ್ರ ಅಳೆಯಬಹುದು. ಶೇಷನ್ ಗುರುತಿನ ಚೀಟಿಗಳಿಲ್ಲದಿದ್ದರೆ ಓಟು ಹಾಕಲು ಸಾಧ್ಯವಿಲ್ಲ ಎನ್ನವ ಅಂಶವನ್ನು ಸಾಧಿಸಿದರೇ ವಿನಃ ಅದು ಓಟು ಹಾಕಲೆಂದೇ ವಿಶಿಷ್ಟವಾಗಿ ನೀಡಿದ ಗುರುತಿನ ಚೀಟಿ ಅನ್ನುವ ತಮ್ಮ ಗುರಿಯನ್ನು ಸಾಧಿಸಲಾರದೇ ಹೋದರು. ಹೀಗಾಗಿ ಅವರ ಯೋಜನೆ ಸಾಫಲ್ಯತೆಯ ಬಗ್ಗೆ ಕೆಲವು ಪ್ರಶ್ನೆಗಳನ್ನ ಎತ್ತಬಹುದು. ನಂದನ್ ಅವರ ಹಿನ್ನೆಲೆ ಗುರಿ-ಉದ್ದೇಶಗಳನ್ನು ವ್ಯಕ್ತ ಪಡಿಸುವ, ಅದನ್ನು ಸಾಧಿಸುವ ಅಂಕಿಸಂಖ್ಯೆಗಳ ಕಾರ್ಪೊರೇಟ್ ಜಗತ್ತಿನದ್ದು. ಹೀಗಾಗಿ ಅವರು ತಮ್ಮ ಜವಾಬ್ದಾರಿ ಕೈಗೊಂಡ ಕೆಲವು ದಿನಗಳಲ್ಲಿಯೇ ತಮ್ಮ ಉದ್ದೇಶಿತ ಸಾಧನೆಯ ಅಂಕಿಯನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಐದು ವರ್ಷಗಳಲ್ಲಿ 60 ಕೋಟಿ ಜನರ ಗುರುತನ್ನು ಸಂಗ್ರಹಿಸಿ ಅವರಿಗೆ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡುವ ಗುರಿಯನ್ನು ಹೊಂದಿದ್ದಾರೆ. ಹೀಗಾಗಿ ನಮಗೆ ನಂದನ್ ಸಾಫಲ್ಯತೆಯ ಒಂದು ಮಾಪನವನ್ನಂತೂ ಅವರೇ ನೀಡಿದ್ದಾರೆ.

ನಂದನ್ ಇಷ್ಟು ಜನರ ಗುರುತನ್ನು 5 ವರ್ಷಗಳಲ್ಲಿ ಸಂಗ್ರಹಿಸುವುದಲ್ಲದೇ, ಆ ಗುರುತನ್ನು ಪರಿಶೀಲಿಸಿ ಧೃವೀಕರಿಸುವ ಯಂತ್ರಾಂಗವನ್ನು ನೆಲದ ಮೇಲೆ ಇಳಿಸುವ ಮಹತ್ತರ ಉದ್ದೇಶವನ್ನು ಹೊಂದಿದ್ದಾರೆ. ಆದರೆ ಆ ಗುರಿ ಮಹತ್ವಾಕಾಂಕ್ಷೆಯ ಗುರಿ ಎಂದು ನಮಗನ್ನಿಸುವುದಕ್ಕೆ ಮುಖ್ಯ ಕಾರಣ ಸರಕಾರ ಕೆಲಸ ಮಾಡುವ ರೀತಿಯೇ ಆಗಿದೆ. ಆ ಕಷ್ಟಗಳನ್ನು ನಂದನ್ ಅಂದಾಜು ಮಾಡುವುದರಲ್ಲಿ ಎಡವಿರಬಹುದು. ನಂದನ್ ಬಹು ಬೇಗನೇ ಸರಕಾರದ ಅಡಚಣೆಗಳನ್ನು ಅನುಭವಿಸಲಿದ್ದಾರೆ. ಆ ಅಡಚಣೆಗಳು ಈ ಮಹತ್ತರ ಕೆಲಸಕ್ಕೆ ಬೇಕಾದ ತಂತ್ರಜ್ಞಾನದ ಖರೀದಿಯಿಂದ ಹಿಡಿದು ಈ ಯೋಜನೆಗಿರುವ ಆರ್ಥಿಕ ಸದುಪಾಯದ ಉಪಯೋಗದವರೆಗೆ ಅನೇಕ ಕೊಕ್ಕಿಗಳನ್ನು ಎದುರಿಸಬೇಕಾಗುತ್ತದೆ. ಇವು ಯಾವುವೂ ಖಾಸಗೀ ಕ್ಷೇತ್ರದಲ್ಲಿ ದೊಡ್ಡ ಅಡಚಣೆಗಳಲ್ಲ. ಈ ಅಡಚಣೆಗಳು ಒಂದು ಕಡೆ ಸರಕಾರಗಳಲ್ಲಿರುವ ಭ್ರಷ್ಟಾಚಾರದ ಕಾರಣವಾಗಿ ಆದರೆ, ಮತ್ತೊಂದು ಕಡೆ ಆ ಭ್ರಷ್ಟಾಚಾರವನ್ನು ತಡೆಗಟ್ಟುವ ಯಂತ್ರಾಂಗದ ಕಾರಣವಾಗಿಯೂ ಆಗಬಹುದು. ಆರ್.ಟಿ.ಐ, ಮತ್ತು ಸಿ.ವಿ.ಸಿ [ಮಾಹಿತಿ ಕೇಳುವ ಅಧಿಕಾರ ಮತ್ತು ಕೇಂದ್ರೀಯ ವಿಜಿಲೆಂಸ್ ವಿಭಾಗ] ಎನ್ನುವ ಪದಗಳು ನಂದನ್ ಕಿವಿಯಲ್ಲಿ ಆಗಾಗ ರಿಂಗಣಿಸಲಿವೆ.

ಹೀಗೆ ಎಲ್ಲರ ಗುರುತೂ ಸುಲಭವಾಗಿ ಸಿಗುವುದಾದರೆ, ಅನೇಕ ಜಾಗಗಳ - ನಕಲಿ ಗ್ಯಾಸ್ ಕನೆಕ್ಷನ್, ನಕಲಿ ರೇಷನ್ ಕಾರ್ಡು ಹೀಗೆ - ಸದ್ಯದ ಸಂತೋಷದ ಸ್ಥಿತಿಗೆ ಧಕ್ಕೆ ಒದಗಬಹುದಾದ್ದರಿಂದ ಅವರ ಯೋಜನೆಯನ್ನು ವಿಫಲಗೊಳಿಸಲು ಕೈಕಟ್ಟಿ ನಿಂತ, ಕೆಲಸವನ್ನು ಕೆಡಿಸುವ ಒಂದು ಪಡೆಯೇ ತಯಾರಾಗಿ ನಿಂತಿರುತ್ತದೆ. ಈ ಪಡೆ, ಸಾಮ, ದಾನ, ಭೇದ, ದಂಡೋಪಾಯಗಳನ್ನು ಉಪಯೋಗಿಸಲು ಹೇಸುವುದಿಲ್ಲ. ಒಂದೊಂದು ಜಾಗದಲ್ಲಿ ಮಾಹಿತಿ ಸಂಗ್ರಹಣೆಗೆ ಅನೇಕ ರಿಜಿಸ್ಟಾರುಗಳನ್ನು ಉಪಯೋಗಿಸುವುದಾಗಿ ನಂದನ್ ಹೇಳಿದ್ದಾರೆ. ಅವರುಗಳ ಗುಣಮಟ್ಟದಲ್ಲಿ ಸ್ವಲ್ಪವೂ ಸಡಿಲಾಗದಂತೆ ಯುಐಡಿ ನೋಡಿಕೊಳ್ಳಬೇಕಾಗುತ್ತದೆ. ಇದು ಸರಳವಾದ ಮಾತೇನೂ ಅಲ್ಲ.

ನಂದನ್ ಬುದ್ಧಿವಂತರು - ಹೀಗಾಗಿಯೇ ಎರಡು ವಿವಾದಾಸ್ಪದ ವಿಷಯಗಳ ಬಗ್ಗೆ ತಕ್ಷಣದ ನಿಲುವನ್ನು ತೆಗೆದುಕೊಂಡು ಬಚಾವಾಗಿದ್ದಾರೆ. ಮೊದಲನೆಯದ್ದೆಂದರೆ ಯಐಡಿ ಯಾರಿಗೂ ಗುರುತಿನ ಚೀಟಿಯನ್ನು ನೀಡುವುದಿಲ್ಲ ಎಂದು ಹೇಳಿ - ಆ ಮೂಲಕ ಆಗಬಹುದಾಗಿದ್ದ ಸ್ಮಾರ್ಟ್ ಕಾರ್ಡೇ - ಅದರಲ್ಲಿ ಏನು ವಿವರಗಳನ್ನ ಅಡಕಮಾಡಬೇಕು, ಈ ಎಲ್ಲ ಗೊಂದಲಗಳಿಂದ ಪಾರಾಗಿ - ಕೇವಲ ಒಂದು ಹದಿನಾರಂಕೆಯ ಗುರುತಿನ ಸಂಖ್ಯೆಯನ್ನು ಮಾತ್ರ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಕಾರ್ಡು ಅದರ ಕಾಂಟ್ರಾಕ್ಟು ಪೈರವಿ ಮತ್ತು ಆಗಬಹುದಾಗಿದ್ದ ಭ್ರಷ್ಟಾಚಾರದಿಂದ ಅವರು ಸುಲಭವಾಗಿ ತಪ್ಪಿಸಿಕೊಂಡಿದ್ದಾರೆ. ಕಾರ್ಡು ಇಲ್ಲದಿದ್ದರೂ, ಮಾಹಿತಿ ಹಲವು ಕೇಂದ್ರೀಕೃತ ಯಂತ್ರಗಳಲ್ಲಿ ಅಡಕವಾಗಿ ಕೂತಿರುತ್ತದೆ. ನಂದನ್ ಪ್ರಕಾರ, ಈ ಯಂತ್ರಗಳು ಜನತೆಯ ಬೆರಳ ಗುರುತಿನ ಆಧಾರದ ಮೇಲೆ ಅವರ ಅಸ್ತಿತ್ವವನ್ನು ಧೃವೀಕರಿಸಿಬಿಡುತ್ತದೆ. ಎರಡನೆಯ ಬುದ್ದಿವಂತಿಕೆಯ ವಿಷಯವೆಂದರೆ ನಂದನ್ ಇದಕ್ಕಾಗಿ ಮುಕ್ತ ಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸುವುದಾಗಿ ಹೇಳಿ ತಮ್ಮ ಇನ್ಫೋಸಿಸ್ ಮತ್ತು ಇತರ ಐಟಿ ಕಂಪನಿಗಳಿಗೆ ದೊಡ್ಡ ಲಾಭದ ಕಾಂಟ್ರಾಕ್ಟುಗಳನ್ನು ಕೊಡಬಹುದಾದ ಸಾಧ್ಯತೆಯನ್ನು ಇಲ್ಲವಾಗಿಸಿದ್ದಾರೆ.

ಆದರೆ ನಂದನ್ ಸ್ವತಃ ಒಪ್ಪುವಂತೆ - ಪ್ರತಿಯೊಬ್ಬರ ಹತ್ತೂ ಬೆರಳುಗಳು, ಮುಖ, ಹಾಗೂ ಕಣ್ಣಿನ ಮಾಹಿತಿಯನ್ನ ಸಂಗ್ರಹಿಸಿ ಇಡುವುದು, ಯಾವದೇ ಕ್ವೆರಿ ಬಂದ ತಕ್ಷಣ 5 ಸೆಕೆಂಡುಗಳಲ್ಲಿ ಅದನ್ನು ಧೃವೀಕರಿಸುವುದು ಸರಳವಾದ ಮಾತೇನೂ ಅಲ್ಲ.

ಯಾವುದೇ ಕಾರ್ಡು ಅಥವಾ ಗುರುತಿನ ಚೀಟಿಯನ್ನು ಯುಐಡಿ ನೀಡುವುದಿಲ್ಲವೆಂದಾದ ಮೇಲೆ ಜನತೆ ಮಾಹಿತಿ ಪರಿಶೀಲಿಸುವ ಯಂತ್ರಗಳಿಲ್ಲದ ಜಾಗದಲ್ಲಿ ಏನು ಮಾಡಬೇಕು? ಅಥವಾ ಆ ಮಟ್ಟಿಗೆ ಯಂತ್ರಾಂಗವನ್ನು ಇಳಿಸಲು ತ್ವರಿತಗತಿಯಲ್ಲಿ ಸಾಧ್ಯವೇ? ತಮ್ಮ ಅಸ್ತಿತ್ವವನ್ನ ಹೇಗೆ ನಿರೂಪಿಸಬೇಕು? ಈ ಎಲ್ಲದಕ್ಕೂ ಪರಿಹಾರ ಮತ್ತೆ ಬೇರಾರಾದರೂ ನೀಡಿದ ಗುರುತಿನ ಚೀಟಿಯ ಮೊರೆ ಹೋಗಬೇಕಾಗಬಹುದು. ದಿನನಿತ್ಯದ ಅವಶ್ಯಕತೆಗಳಿಗೆ ಮತ್ತೆ - ಪ್ಯಾನ್ ಕಾರ್ಡು, ಎಪಿಕ್, ಪಾಸ್ ಪೋರ್ಟ್, ರೇಶನ್ ಕಾರ್ಡು - ಹೀಗೆ ಈಗಿರುವ ಅಸ್ತಿತ್ವದ ಚೀಟಿಗಳ ಮೇಲೆ ನಂದನ್ ನೀಡಿದ ಸಂಖ್ಯೆಯನ್ನು ಅಡಕಮಾಡಬೇಕಾಗುತ್ತದೆ. ಹೀಗಾಗಿ ಅಸ್ತಿತ್ವದ ಮಾಹಿತಿ ಮೂಲಭೂತವಾಗಿ ಯಐಡಿಯ ಮಾಹಿತಿ ಜಾಲದಲ್ಲಿ ಅಡಕವಾಗಿದ್ದರೂ ಅದನ್ನು ವ್ಯಕ್ತ ಪಡಿಸಲು ಮತ್ತೊಂದು ಮಾಧ್ಯಮವನ್ನು ಅವರು ಹುಡುಕಬೇಕಾಗುತ್ತದೆ.

ಆದರೂ ಈ ಯೋಜನೆ ಸಫಲಗೊಂಡರೆ, ಗೆದ್ದರೆ ಜನರಿಗೆ ಉಪಯೋಗವಾಗುವುದರಲ್ಲಿ ಅನುಮಾನವೇ ಇಲ್ಲ. ಮುಖ್ಯತಃ ಬಡವರಿಗೆ ಇದರಿಂದ ಬಹಳಷ್ಟು ಉಪಯೋಗವಾಗಬಹುದು. ಇದು ನಿಶುಲ್ಕ ಸೇವೆಯಾದ್ದರಿಂದ ಒಮ್ಮೆ ತಮ್ಮ ಮಾಹಿತಿಯನ್ನು ದಾಖಲಿಸಿದರೆ, ಪ್ರತಿಬಾರಿಯೂ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕಾಗದವನ್ನು ಹಿಡಿದು ಸಹಿಗಾಗಿ ಓಡಾಡುವ ಅವಶ್ಯಕತೆಯಿರುವುದಿಲ್ಲ. ನಂದನ್ ಅವರ ಉದ್ದೇಶ ಗೆದ್ದರೆ, ಪ್ರತಿ ವ್ಯಕ್ತಿಗೂ ಬ್ಯಾಂಕಿನ ಎಕೌಂಟು ಸಹಜವಾಗಿ ತೆರೆಯುವ ಹಕ್ಕು ಬಂದು ಬಿಡುತ್ತದೆ. ಹೀಗಾಗಿ ಸರಕಾರೀ ಯೋಜನೆಗಳ ಮೂಲಕ ಬರಬೇಕಾದ ಧನ ರಾಶಿ - ನರೇಗಾದ ಕೂಲಿ ಹಣ, ಪಿಂಚನಿ, ಎಲ್ಲವೂ ಯಾವುದೇ ಮಧ್ಯವರ್ತಿಯ ಮುಲಾಜಿಲ್ಲದೇ ನೇರವಾಗಿ ಬಡವರಿಗೆ ಸೇರುತ್ತದೆ. ತಂತ್ರಜ್ಞಾನ ಹೆಚ್ಚಿ ತಿಳಿದವರ ಮೂಲಕವಲ್ಲದೇ ಮಾಹಿತಿಯ ಆಧಾರದ ಮೇಲೆ ಕೆಲಸಗಳನ್ನು ನಾವು ಮಾಡಿಕೊಳ್ಳಲು ಸಾಧ್ಯವಾದರೆ ದೇಶದ ಜುಗಾಡ್ ಏಜೆಂಟುಗಳ ಭ್ರಷ್ಟಾಚಾರವನ್ನೂ ಒಂದು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗುತ್ತದೆ. ಇಪ್ಪತ್ತೈದು ವರ್ಷಗಳ ಹಿಂದೆ ರೈಲಿನ ಟಿಕೇಟು ಕಾದಿರಿಸುವುದಕ್ಕಾಗಿ ಮಾಡುತ್ತಿದ್ದ ಸರ್ಕಸ್ಸನ್ನು ನೆನಪು ಮಾಡಿಕೊಂಡರೆ ತಂತ್ರಜ್ಞಾನದ - ಹಾಗೂ ತಂತ್ರಜ್ಞಾನ ಎಲ್ಲರನ್ನೂ ಸಮಾನರನ್ನಾಗಿ ಕಾಣುವ ಪ್ರಕ್ರಿಯೆಯ ಶಕ್ತಿಯನ್ನು ನಾವು ಕಾಣುವುದಕ್ಕೆ ಸಾಧ್ಯವಾಗುತ್ತದೆ.

ಹೀಗಾಗಿಯೇ ಯಐಡಿ ಮಹತ್ವದ ಯೋಜನೆ. ಅದರ ಪ್ರಾಮುಖ್ಯತೆಯನ್ನು ನಾವು ಅಲ್ಲಗಳೆಯಲೇ ಬಾರದು. ಈ ಯೋಜನೆಗೆ ಅನೇಕ ಸ್ಥರಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ತಡೆಯುವ, ಜನರ ಕೈಗೆ ಹೆಚ್ಚಿನ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತದೆ ಆದ್ದರಿಂದಲೇ ಇದು ವಿಫಲವಾಗುವ ಸಾಧ್ಯತೆಯನ್ನು ಹೊಂದಿದೆ. ಆ ಶಕ್ತಿಗಳನ್ನೂ ಮೀರಿ ಸರಕಾರಿ ಯಂತ್ರಾಂಗದ ನಡುವೆ ಇಕ್ಕಟ್ಟಾದ ಜಾಗದಲ್ಲಿ ನಂದನ್ ಕೆಲಸ ಮಾಡಬೇಕಾಗಿದೆ. ಅವರು ಸಫಲರಾದರೆ ದೇಶ ಸಫಲವಾದಂತೆ. ಆದರೆ ಆಗುವರೇ... ಸ್ಯಾಮ್ ಪಿತ್ರೋಡಾ ದೇಶಕ್ಕೆ ಟೆಲಿಕಾಂ ಕ್ರಾಂತಿ ತಂದಂತೆ ನಂದನ್ ಅಸ್ತಿತ್ವದ ಕ್ರಾಂತಿ ತರುವರೇ.....


Sunday, January 17, 2010

ಅಸ್ತಿತ್ವದ ಗುರುತಿನ ಚೀಟಿ

ಹಲವು ವರ್ಷಗಳ ಹಿಂದೆ ರಜೆಗೆ ಬೆಂಗಳೂರಿಗೆ ಬಂದಿದ್ದ ಪುಟ್ಟ ಹುಡುಗ ತಾನಿಳಿದುಕೊಂಡಿದ್ದ ಮನೆಯಲ್ಲಿದ್ದ ಹಿರಿಯರೊಬ್ಬರನ್ನು "ನೀನು ಯಾರು?" ಎಂದು ಕೇಳಿದ. ಅದಕ್ಕೆ ಆ ಹಿರಿಯರು ಒಂದು ದೀರ್ಘ ಆಲೋಚನೆಗೆ ಬಿದ್ದು "ಮಗೂ, ಆ ವಿಷಯವನ್ನೇ ತಿಳಿದುಕೊಳ್ಳಲು ಅನೇಕ ದಾರ್ಶನಿಕರು ಪ್ರಯತ್ನಿಸಿದ್ದಾರೆ, ಹಾಗೂ ಆ ವಿಷಯವನ್ನು ಅರ್ಥಮಾಡಿಕೊಳ್ಳಲೆಂದೇ ನಾನು ವೇದಾಂತದ ಕ್ಲಾಸುಗಳಿಗೆ ಹೋಗುತ್ತಿದ್ದೇನೆ!" ಎಂದಿದ್ದರು.

ಆದರೆ ನಾವು ಯಾರು ಅನ್ನುವ ವಿಷಯ ದಿನನಿತ್ಯದ ಜೀವನದಲ್ಲಿ ಅನೇಕ ಬಾರಿ ನಾವು ಎದುರಿಸಬೇಕಾಗುತ್ತದೆ. ಹೀಗಾಗಿಯೇ ಎಲ್ಲಿ ಏನು ಹೊಸ ಕೆಲಸ ಮಾಡಬೇಕಿದ್ದರೂ ನಾನು ನಾನೇ ಅನ್ನುವುದನ್ನು ನಿರೂಪಿಸಿಯೇ ಮುಂದುವರೆಯಬೇಕಾಗುತ್ತದೆ. ಕೆಲವಾರು ಕಡೆ - ಉದಾಹರಣೆಗೆ ಹೊಸ ಗ್ಯಾಸ್ ಕನೆಕ್ಷನ್ ಪಡೆಯಲೋ, ಸರಕಾರೀ ಬಿಎಸ್ಎನ್ಎಲ್ ನಿಂದ ಲ್ಯಾಂಡ್ ಲೈನ್ ಪಡೆಯಲೋ ಪ್ರಯತ್ನಿಸಿದಾಗಲೂ ಅವರುಗಳು ಕೇಳುವ ನೀವುಯಾರು ಅನ್ನುವ ಪ್ರಶ್ನೆಗೆ ಅವರಿಗೆ ಸಮಾಧಾನಕರವಾದ ಉತ್ತರ ನೀಡಲು ಒಮ್ಮೊಮ್ಮೆ ನಾವೂ ವೇದಾಂತದ ಮೊರೆ ಹೋಗಬೇಕಾಗುತ್ತದೆ.

ನಾನು ಯಾರು ಅನ್ನುವ ಈ ಗಹನ ಪ್ರಶ್ನೆ ಈಚಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಪಡೆಯುತ್ತಿದ್ದರೂ, ಹಾಗೂ ಈ ಪ್ರಶ್ನೆಯನ್ನು ತಲೆತಲಾಂತರದಿಂದ ನಾವುಗಳು ಕೇಳಿಕೊಳ್ಳುತ್ತಾ ಬಂದಿದ್ದರೂ ಇದನ್ನು ಒಂದು ಅಜೆಂಡಾ ಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ಮೊದಲ ಬಾರಿಗೆ ಕೇಳಿದವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್ ಅವರು. ದೇಶದ ಚುನಾವಣೆಯ ಉಸ್ತುವಾರಿ ಹೊತ್ತಿದ್ದ ಶೇಷನ್ ಅವರಿಗೆ ಈ ವಿಷಯ ಮುಖ್ಯವಾದದ್ದು ಯಾಕೆ - ಅವರಿಗಿಂತ ಮೊದಲೂ ಚುನಾವಣಾ ಆಯುಕ್ತರಿದ್ದರು, ಒಂದೇ ದಿನದಲ್ಲಿ ಇಡೀ ದೇಶದಲ್ಲಿ ಚುನಾವಣೆಗಳಾಗುತ್ತಿದ್ದುವು, ಎರಡು ದಿನಗಳಕಾಲ ಮತಗಣನೆ ನಡೆಯುತ್ತಿತ್ತು. ಆದರೆ ಶೇಷನ್ ತಮ್ಮ ಕಾರ್ಯವ್ಯಾಪ್ತಿಯ ಪರಿಭಾಷೆಯನ್ನು ಮೂಲಭೂತವಾಗಿ ಪರಿವರ್ತಿಸಿಬಿಟ್ಟರು. ಚುನಾವಣೆ ನಡೆಸುವ ಲಾಜಿಸ್ಟಿಕ್ ಕೆಲಸವನ್ನು ಅವರು ಪ್ರಜಾತಂತ್ರದ ಮೂಲಭೂತ ಸೂತ್ರಗಳನ್ನು ಕಾಪಾಡುವ ಕೆಲಸವಾಗಿ ಪರಿಗಣಿಸಲು ಪ್ರಯತ್ನಿಸಿದರು. ಹೀಗಾಗಿ ಶೇಷನ್ ತಮ್ಮ ಕಾಲದಲ್ಲಿ ಜನಪ್ರತಿನಿಧಿಗಳು ನಿಜಕ್ಕೂ ಜನಪ್ರತಿನಿಧಿಗಳಾಗಿರಬೇಕೆಂದು ನಂಬಿದ್ದರಿಂದ - ಎರಡು ಕೆಲಸಗಳನ್ನು ಕೈಗೊಂಡರು. ಚುನಾವಣೆಯನ್ನು ಕಾಗದದ ಮೇಲೆ ಮತ ಗುದ್ದುವ ಪ್ರಕ್ರಯೆಯಿಂದ ಯಂತ್ರದ ಮೇಲೆ ಗುಂಡಿ ಒತ್ತುವ ಪ್ರಕ್ರಿಯೆಯನ್ನಾಗಿ ಪರಿವರ್ತಿಸುವುದು ಮೊದಲನೆಯದ್ದಾದರೆ, ಈ ಒತ್ತುವ ವ್ಯಕ್ತಿ ಯಾರು ಎನ್ನುವ ಪುರಾವೆಯನ್ನೂ ಆತ ಕೇಳಿದರು. ಹೀಗೆ ಮೊದಲಬಾರಿಗೆ ದೇಶವ್ಯಾಪಿಯಾಗಿ ನಾನು ಯಾರು ಅನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಶೇಷನ್ ನಮನ್ನೆಲ್ಲ ಪ್ರೋತ್ಸಾಹಿಸಿದರು. ಆಗಿನ ದಿನಗಳಲ್ಲಿ ಶೇಷನ್ ಊರೂರು ಅಲೆದು ಈ ಬಗ್ಗೆ ಭಾಷಣಗಳನ್ನು ಬಿಗಿದರು, ಹೆದರಿದವರನ್ನು ಹೆದರಿಸಿದರು. ಚುನಾವಣೆಯನ್ನು ಈ ಕಾರಣಕ್ಕಾಗಿ ತಮಗೆ ಕೈಲಾದಷ್ಟು ಮುಂದೂಡಿದರು.... ಹೀಗೆ ಮಾಡಿದ ಅಸ್ತಿತ್ವದ ಅನ್ವೇಷಣೆಗೆ ಶೇಷನ್ ಅವರ ಕೊಡುಗೆ ಮಹತ್ವದ್ದೆಂದು ನಾವು ಒಪ್ಪಲೇಬೇಕಾಗುತ್ತದೆ.

ದೇಶದಲ್ಲಿ ಓಟು ಚಲಾಯಿಸುವ ಪ್ರತಿವ್ಯಕ್ತಿಯೂ ಎಪಿಕ್ - ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿ - ಹೊಂದಿರಬೇಕು ಎನ್ನುವ ನಿಯಮ ಒಂದು ರೀತಿಯಲ್ಲಿ ಚಾಲನೆಗೆ ಬಂತಾದರೂ ಈ ಗುರುತಿನ ಚೀಟಿ ನೀಡುವ ಜವಾಬ್ದಾರಿಯನ್ನು ರಾಜ್ಯ ಸರಕಾರಗಳ ಮೇಲೆ ಹೇರಲಾಯಿತು. ಅನೇಕರಿಗೆ ಕಾಂಟ್ರಾಕ್ಟುಗಳನ್ನು ಕೊಡಲಾಯಿತು. ಕೈದಿಗಳ ರೀತಿಯಲ್ಲಿ ಸ್ಲೇಟಿನ ಮೇಲೆ ಹಸರನ್ನು ಬರೆದು ಫೋಟೋ ಇಳಿದದ್ದೂ ಆಯಿತು. ಆದರೆ ಈ ಯೋಜನೆ ಒಂದೇ ಕೇಂದ್ರದಿಂದ ಬರಲಿಲ್ಲವಾದ್ದರಿಂದ - ಇಂಗ್ಲೀಷ್ ಅಲ್ಲದೇ ಸ್ಥಳೀಯ ಭಾಷೆಯಲ್ಲೂ ವಿವರಗಳನ್ನು ಮುದ್ರಿಸಬೇಕಾಯಿತಾದ್ದರಿಂದ, ವಿಪರೀತ ತಪ್ಪುಗಳು ನಡೆದವು. ಅನೇಕ ಜನರ ಲಿಂಗವೇ ಈ ಪ್ರಕ್ರಿಯೆಯ ಮೂಲಕ ಬದಲಾಗಿಬಿಟ್ಟಿತ್ತು. ಫೋಟೋದಲ್ಲಿ ಗಿರಿಜಾ ಮೀಸೆ ಹೊತ್ತ ಗಂಡಸಿನ ಲಿಂಗವನ್ನು ಸ್ತ್ರೀ ಎಂದು ಅಕ್ಷರಗಳಲ್ಲಿ ಘೋಷಿಸಲಾಗಿತ್ತು. ನಮ್ಮ ಕ್ಯಾಂಪಸ್ಸಿನಲ್ಲಿದ್ದ ಎಲ್ಲ ಮಹಿಳೆಯರಿಗೂ ಮದುವೆ ಮಾಡಿಸಿದ್ದಲ್ಲದೇ, ಎಲ್ಲರನ್ನೂ ವಾಸ್ವಾನಿ ಅನ್ನುವ ಮನುಷ್ಯನ ಪತ್ನಿಯನ್ನಾಗಿ ಈ ಗುರುತಿನ ಚೀಟಿಗಳು ಮಾಡಿಬಿಟ್ಟಿದ್ದುವು! ಗುರುತಿನ ಚೀಟಿಯ ಫಲವಾಗಿ ಕೆಲವರು ಗುರುತೇ ತಿಳಿಯದಂತೆ ಬದಲಾಗಿಬಿಟ್ಟಿದ್ದರು.

ಹೀಗೆ ಉದಾತ್ತ ಉದ್ದೇಶದಿಂದ ಪ್ರಾರಂಭಿಸಿದ ಈ ಗುರುತಿನ ಚೀಟಿಯ ಕಾರ್ಯಕ್ರಮ ಜನರ ಅಸ್ತಿತ್ವವನ್ನೇ ಬದಲಿಸುವ ಕಾರ್ಯಕ್ರಮವಾದ್ದರಿಂದ - ಭಾರತೀಯನ ಪ್ರಾಥಮಿಕ ಗುರುತಿನ ಚೀಟಿಯಾಗದೇ - ಮತ್ತೂ ಒಂದು ಗುರುತಿನ ಚೀಟಿಯಾಗಿಬಿಟ್ಟಿತು. ದೇಶದ ಭದ್ರತೆಯನ್ನು ಕಾಪಾಡಲು, ಈ ರೀತಿಯ ಗುರುತಿನ ಚೀಟಿಗಳ ಅವಶ್ಯಕತೆಯಿದೆ ಅನ್ನುವುದರಲ್ಲಿ ಹೆಚ್ಚು ಅನುಮಾನವಿದ್ದಂತಿಲ್ಲ. ಆದರೆ ಈ ಗುರುತಿನ ಚೀಟಿ ಈಗ ಅನೇಕ ರೂಪಗಳನ್ನು ಪಡೆದಿದೆ. ವಿದೇಶಕ್ಕೆ ಹೋಗುವ ಆಲೋಚನೆಯಿದ್ದರೆ ಪಾಸ್ಪೋರ್ಟೂ, ಆದಾಯ ತೆರಿಗೆ ತೆತ್ತಿದರೆ ಪ್ಯಾನ್ ಕಾರ್ಡೂ, ವಾಹನ ಚಲಾಯಿಸುವವರಿಗೆ ಕೊಟ್ಟಿರುವ ಲೈಸೆನ್ಸು, ಪಡಿತರ ಚೀಟಿ... ಯಾವುದೂ ನಮ್ಮ ಗುರುತಿನ ಚೀಟಿಯಾಗಬಹುದು. ಅಲ್ಲಿ ನೋಂದಾಯಿಸುವ ವಿವರಾನುಸಾರ ನಾವುಗಳು ಏಕಕಾಲಕ್ಕೆ ಭಿನ್ನ ವ್ಯಕ್ತಿಗಳೂ ಆಗಬಹುದು....

ಈ ಅಸ್ತಿತ್ವ ಮತ್ತು ಗುರುತಿನ ಚೀಟಿ, ನಮ್ಮಂತಹ ದೇಶದಲ್ಲಿ ಯಾಕೆ ಮುಖ್ಯವಾಗುತ್ತದೆ ಅನ್ನುವುದು ಕುತೂಹಲದ ಪ್ರಶ್ನೆ. ಎಲ್ಲರಿಗೂ ಗುರುತಿನ ಚೀಟಿ ಕೊಡುವುದರಿಂದ, ದೇಶದ ಭದ್ರತೆಯನ್ನು ಕಾಪಾಡಿದಂತಾಗುವುದೇ? - ಮುಂಬಯಿ ಕಾಂಡದಲ್ಲಿ ಭಾಗವಹಿಸಿದ್ದ ಭಯೋತ್ಪಾದಕರು ಯಾವ ಗುರುತಿನ ಪತ್ರವನ್ನೂ ಹೊಂದಿರಲಿಲ್ಲ ಎನ್ನುವುದನ್ನು ಶಶಿ ಥರೂರ್ ತಮ್ಮದೇ ರೀತಿಯಲ್ಲಿ ಹೇಳಿ ಹೊಸ ವೀಸಾದ ನಿಯಮವನ್ನು ಲೇವಡಿ ಮಾಡಿದ್ದಾರೆ. ಅದೇ ವಾದಸರಣಿ ಗುರುತಿನ ಚೀಟಿಗೂ ಅನ್ವಯಿಸುತ್ತದೆ. ಆದರೂ ಗುರುತಿನ ಚೀಟಿ ಅನ್ನುವುದು ಎಲ್ಲರ ಮನಸ್ಸಿನಲ್ಲಿಯೂ ಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ. ಒಂದು ದಶಕದ ಹಿಂದೆ ಕಾಣದಿದ್ದ ಈಗ ಎಲ್ಲೆಲ್ಲೂ ಕಾಣುವ ಅಂಶವೆಂದರೆ ಎಲ್ಲರ ಕತ್ತಿನಲ್ಲೂ ಒಂದಲ್ಲ ಒಂದು ರೀತಿಯ ಗುರುತಿನ ಚೀಟಿಯ ಹಾರವನ್ನು ಕೆಲಸದ ವೇಳೆಯಲ್ಲಿ ಕಾಣಬಹುದು.

ಇದಕ್ಕೆ ಕಾರಣ ಬರೇ ಭದ್ರತೆ ಮಾತ್ರವಲ್ಲ, ಬದಲಿಗೆ ತಂತ್ರಜ್ಞಾನವೂ ಮೂಲಭೂತವಾಗಿ ಬದಲಾಗುತ್ತಿದೆ. ಮೊದಲು ನಮ್ಮದೇ ಸಂಸ್ಥೆಯ ಉದ್ಯೋಗಿಯೊಬ್ಬನನ್ನು ವಾಚ್ ಮನ್ ಆಗಿ ನಿಯಮಿಸುತ್ತಿದ್ದೆವು ಎಂದುಕೊಳ್ಳಿ. ಈಗ ಆ ಕೆಲಸ ಹೊರಗಿನ ಸೆಕ್ಯೂರಿಟಿ ಸಂಸ್ಥೆಗೆ ಔಟ್ ಸೊರ್ಸ್ ಮಾಡಲಾಗಿದೆ. ಹೀಗಾಗಿ ವಾಚ್ ಮನ್ ಆಗಿ ಅಲ್ಲಿ ನಿಲ್ಲುವವನಿಗೆ ಕಂಪನಿಯ ಚೇರ್ಮನ್ನರಿಂದ ಹಿಡಿದು ಚಪ್ರಾಸಿಯವರೆಗೂ ಎಲ್ಲರೂ ಸಮಾನರೇ.. ಗುರುತಿನ ಚೀಟಿಯ ಆಧಾರವೇ ಪ್ರವೇಶಕ್ಕೆ ಮೂಲ ದಾಖಲೆಯಾಗುತ್ತದೆ. ಇನ್ಪೋಸಿಸ್ ನಲ್ಲಿ ನಾರಾಯಣ ಮೂರ್ತಿಯನ್ನು ಗುರುತಿನ ಚೀಟಿ ಕೇಳಿದ ಸೆಕ್ಯೂರಿಟಿ ಗಾರ್ಡಿನ ಕಥೆ ಜನಜನಿತವಾಗಿಯೇ ಇದೆ. ಹೀಗೆ ಒಬ್ಬ ವ್ಯಕ್ತಿಗೆ ಒಂದು ಗುರುತಿನ ಚೀಟಿ, ಒಂದು ಗುರುತಿನ ಚೀಟಿಗೆ ಒಬ್ಬ ವ್ಯಕ್ತಿ ಅನ್ನುವ ನಿಯಮದ ಮೇಲೆ ಇದು ನಡೆಯುತ್ತಿದೆ.

ತಂತ್ರಜ್ಞಾನ ಮಾತ್ರ ಗುರುತಿನ ಚೀಟಿಗಳು ಮುಖ್ಯವಾಗುವುದಕ್ಕೆ ಕಾರಣವಲ್ಲ. ನಾವುಗಳು ನಮ್ಮ ಮಧ್ಯತರಗತಿಯ ನೌಕರಿಯ ಚೌಕಟ್ಟಿನಾಚೆಗೆ ಹೋದರೆ ಇದರ ಮಹತ್ವದ ಭಿನ್ನ ಮಜಲುಗಳು ನಮಗೆ ಅರ್ಥವಾಗುತ್ತದೆ. ಸರಕಾರೀ ಸಹಾಯ ಒದಗಿಸಬೇಕಾದರೆ, ಆ ಸಹಾಯ ಅಥವಾ ಸಬ್ಸಡಿ ಕೇವಲ ಬಡವರಿಗೆ ಮಾತ್ರ ತಲುಪಬೇಕು ಅನ್ನುವುದಾದರೆ, ನರೇಗಾದಡಿಯಲ್ಲಿ ನೂರುದಿನಗಳ ಕೆಲಸ ಬಡವರಿಗೆ ಒದಗಿಸಬೇಕಾದರೆ - ಅದು ಯಶಸ್ವಿಯಾಗಿ ತಲುಪಬೇಕಾದವರಿಗೆ ತಲುಪಲು ಯಾರು ಎನ್ನುವ ಗುರುತು ಅನಿವಾರ್ಯವಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಒಬ್ಬೊಬ್ಬರಿಗೂ ಅನೇಕ ಗುರುತಿನ ಚೀಟಿಗಳು ಇರುವ ಸಾಧ್ಯತೆಯಿದೆ. ಅಥವಾ ಗುರುತಿನ ಚೀಟಿ ಲಭಿಸದೇ ಇರುವ ಸಾಧ್ಯತೆಯೂ ಇದೆ.. ನಾನು ಯಾರೆಂದು ತಿಳಿಯದಯೇ ಇದ್ದರೆ ನನಗೆ ನೀವು ಕೆಲಸ ಕೊಡುವುದಾದರೂ ಹೇಗೆ... ಹೀಗಾಗಿ ಸರಕಾರದ ಸೇವೆಗಳು ಹೆಚ್ಚೆಚ್ಚು ಗುರಿ ಮುಟ್ಟಬೇಕೆಂದಿದ್ದರೆ, ಅದು ಸರಿಯಾದ ಗುರಿಯನ್ನು ಮುಟ್ಟುತ್ತಿದೆ ಅನ್ನುವ ಪುರಾವೆಯೂ ನಮಗೆ ಬೇಕಾಗುತ್ತದೆ. ಏನೂ ಇಲ್ಲದ ಬಡವರಿಗೆ - ಗುರುತಿನ ಚೀಟಿಯ ಅಸ್ತಿತ್ವ ಸಿಕ್ಕರೆ - ಅದೇ ಅವರ ಆತ್ಮಭಿಮಾನಕ್ಕೆ ಎಷ್ಟು ಪೂರಕವಾಗಬಹುದು ಅನ್ನುವದನ್ನು ಯೋಚಿಸಿನೋಡಿದಾಗ ಈ ಗುರುತಿನ ಚೀಟಿಗಳ ಮಹತ್ವದ ಅರಿವು ನಮಗಾಗುತ್ತದೆ.

ಓಟು ಹಾಕುವುದು ಒಬ್ಬ ನಾಗರೀಕನಾಗಿ ನನಗೆ ದಕ್ಕಿರುವ ಹಕ್ಕು. ಆದರೆ ಓಟು ಹಾಕಲು ಹೋದ ದಿನ ನನ್ನ ಹೆಸರಿನಲ್ಲಿ ಯಾರೋ ಬೇರೂಬ್ಬರು ನನ್ನ ಮತವನ್ನು ಗುದ್ದಿ - ಅಥವಾ ಒತ್ತಿ - ಬಂದಿದ್ದರೆ -- ನನ್ನ ಹಕ್ಕನ್ನು ಯಾರೋ ಕಿತ್ತುಕೊಂಡಂತೆ ಆಗುವುದಲ್ಲದೇ, ನನ್ನ ಅಭಿಪ್ರಾಯ ನೋಂದಾಯಿತವಾಗದೆಯೇ ನನ್ನನ್ನು ಪ್ರತಿನಿಧಿಸುತ್ತೇನೆನ್ನುವ ವ್ಯಕ್ತಿ ಚುನಾಯಿತನಾಗುಬಿಡುತ್ತಾನೆ. ಹೀಗಾಗಿ ಪ್ರಜಾತಂತ್ರದಲ್ಲಿ ನನ್ನ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ. ಗುರುತಿನ ಚೀಟಿ ನಾನು ನಾನೇ ಎಂದು ನಿರೂಪಿಸಲು ಎಷ್ಟು ಮುಖ್ಯವೋ, ಬೇರಾರೂ ನಾನಲ್ಲ ಎಂದು ನಿರೂಪಿಸಲೂ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿಯೇ ಶೇಷನ್ ಅವರು ಹಾಕಿದ್ದ ಯೋಜನೆಯಲ್ಲಿ ಪ್ರಜಾತಂತ್ರವನ್ನು ಶಕ್ತಿಶಾಲಿಯನ್ನಾಗಿ ಮಾಡುವ ದೊಡ್ಡ ಅಜೆಂಡಾ ಇತ್ತು. ಬಹುಶಃ ಈ ಅಜೆಂಡಾ ಅಷ್ಟು ಮಹತ್ವಾಕಾಂಕ್ಷೆಯಿಂದ ಕೂಡಿದ್ದರಿಂದಲೇ ವಿಫಲವಾಯಿತೋ ಏನೋ... ಆದರೂ ದೇಶಾದ್ಯಂತ ಕಾಗದ ಗುದ್ದುವುದರಿಂದ, ಗುಂಡಿ ಒತ್ತುವ ತಂತ್ರಜ್ಞಾನದತ್ತ ದೊಡ್ಡ ಹೆಜ್ಜೆಗಳನ್ನಿಡುವತ್ತ ಮಾತ್ರ ಶೇಷನ್ ಸಫಲರಾದರು.

ಶೇಷನ್ ಕಾಲಕ್ಕೂ ಈದಿನಕ್ಕೂ ಕಾಲ ಮತ್ತು ತಂತ್ರಜ್ಞಾನ ಎರಡೂ ಬದಲಾಗಿದೆ. ಈ ಬದಲಾವಣೆಯನ್ನು ಪ್ರತಿನಿಧಿಸುತ್ತಾ ಗುರುತಿನ ಚೀಟಿಗಳ ಅಜೆಂಡಾ ಹೊತ್ತು ನಂದನ್ ನಿಲೇಕಣಿ ಹೊರಟಿದ್ದಾರೆ. ಇದು ಈ ಬಾರಿ ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ. ಆದರೆ ನಂದನ್ ಸಫಲರಾಗುವರೇ.. ಅವರಿಗೆ ಸಾಫಲ್ಯ ಸುಲಭವಾಗಿ ದಕ್ಕುವುದಿಲ್ಲವಾದರೂ ಅವರು ಎದುರಿಸುವ ಸವಾಲುಗಳೇ ಬೇರೆ. ಹೀಗಾಗಿ ನಂದನ್ ವಿಫಲರಾಗುವುದಕ್ಕೆ ಇರುವ ಕಾರಣಗಳು ಅವರು ಸಫಲರಾಗುವುದಕ್ಕೆ ಇರುವ ಕಾರಣಗಳಿಗಿಂತ ಹೆಚ್ಚಾಗಿದೆ.!!!! ಆ ಬಗ್ಗೆ ಮುಂದಿನ ಬಾರಿ.






Monday, January 4, 2010

ಬಂಡವಾಳಶಾಹಿ ತತ್ವದ ನಿರಂತರತೆ?

ಈಚೆಗೆ ನಡೆದ ಒಂದು ಸೆಮಿನಾರಿನಲ್ಲಿ ಬಂಡವಾಳಶಾಹಿ ಸೂತ್ರಗಳು ನಿರಂತರವೇ, ಅಥವಾ ಆ ತತ್ವದ ಭವಿಷ್ಯ ಸೀಮಿತವಾಗಿದೆಯೇ ಎಂಬ ಪ್ರಶ್ನೆಯನ್ನು ಚರ್ಚೆಗೊಳಪಡಿಸಿದ್ದರು. ಮ್ಯಾನೇಜ್ ಮಂಟ್ ಪಠಿಸುವ ಐಐಎಂನಂತಹ ಸಂಸ್ಥೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಈ ಪ್ರಶ್ನೆಯನ್ನು ಕೇಳಹತ್ತಿದ್ದದ್ದೇ ಕುತೂಹಲದ, ಸೋಜಿಗದ ವಿಷಯ. ಅನೇಕ ಬಾರಿ ಮಾತಿನಲ್ಲಿ ಅನಂತಮೂರ್ತಿಯವರು ಐಐಎಂಅನ್ನು ವ್ಯಾಪಾರಿಗಳ ಕಾಶಿ ಎಂದು ಲಘುವಾಗಿ ಗೇಲಿಮಾಡಿರುವದುಂಟು. ಈ ಇಂಥ ಕಾಶಿಯಲ್ಲಿ "ವಿಶ್ವನಾಥನು ದೇವರೇ?" ಎಂದು ಪ್ರಶ್ನಿಸುವ ಪರಿ ನನಗೆ ತುಸು ಸೋಜಿಗವನ್ನುಂಟುಮಾಡಿತ್ತು. ಆದರೆ ಮಾರುಕಟ್ಟೆಯ ಮಹಾತ್ಮನ ನಂಬಿಕೆ ಆಧಾರವಾಗಿಯೇ ತಮ್ಮ ಭವಿಷ್ಯದ ಕನಸುಗಳನ್ನು ಕಟ್ಟಿದ್ದ ವಿದ್ಯಾರ್ಥಿಗಳಿಗೆ ಅಮೇರಿಕದ ದೊಡ್ಡ - ನೂರೈವತ್ತು ವರ್ಷಗಳಿಗೂ ಹೆಚ್ಚುಕಾಲ ಆ ಸೂತ್ರಗಳ ಆಧಾರದ ಮೇಲೆಯೇ ನಡೆದ ದೊಡ್ಡ ವಿತ್ತೀಯ ಸಂಸ್ಥೆಗಳು ಇದ್ದಕ್ಕಿದ್ದ ಹಾಗೆ ರಾತ್ರೋರಾತ್ರಿ ಕುಸಿದದ್ದು ಕಂಡು ತಮ್ಮ ನಂಬಿಕೆಗಳನ್ನು ಪ್ರಶ್ನಿಸಿಕೊಳ್ಳುವ ಅಂತರಾವಲೋಕನಕ್ಕೆ ಎಡೆಮಾಡಿದ್ದಿರಬಹುದು.

ಅಂದು ವೇದಿಕೆಯ ಮೇಲೆ ಕೂತಿದ್ದವರನ್ನು ನಾನು ಅವಲೋಕಿಸಿದೆ. ಇದ್ದ ಐದು ಜನರಲ್ಲಿ ಇಬ್ಬರು ವ್ಯಾಪಾರ ಜಗತ್ತಿನಿಂದ ಬಂದವರು. ಇಬ್ಬರು ಸಮಾಜಸೇವೆ - ಜನರನ್ನೊಳಗೊಳ್ಳುನ ವಿಕಾಸವಾದವನ್ನು ಪ್ರತಿಪಾದಿಸುವವರು. ಐದನೆಯವನು - ಯಾವ ಕಡೆ ವಾಲಿದ್ದೇನೆಂದು ತಿಳಿಯದ ನಾನು.
ಈ ಗಹನ ಪ್ರಶ್ನೆಗೆ ಉತ್ತರ ಬಹಳ ಸರಳವಾದದ್ದು. ಈ ಲೋಕದಿಂದ ಅನಾಮಾನ್ಯತೆಯನ್ನು ಅಟ್ಟುವುದು ಎಷ್ಟು ಅಸಾಧ್ಯವೋ, ಬಂಡವಾಳಶಾಹಿ ವ್ಯಾಪಾರ ಸೂತ್ರಗಳನ್ನು ಕಿತ್ತೊಗೆಯುವುದು ಅಷ್ಟೇ ಕಷ್ಟದ, ಸಾಧಿಸಲಾಗದ ಮಾತು. ಇದು ಕೇಂದ್ರದ ಎಡಗಡೆಗೆ ವಾಲಿದ ಆ ಇಬ್ಬರಿಗೂ ಗೊತ್ತು. ಹಾಗೇ ಬಲಗಡೆಗೆ ವಾಲಿದ, ಜೀವನ ಸೂತ್ರವೇ ವ್ಯಾಪಾರಶಾಹೀತನವನ್ನು ನಂಬಿ ಬದುಕುತ್ತಿರುವ ಇನ್ನಿಬ್ಬರಿಗೂ ಗೂತ್ತು. ಅದೇ ಅವರ ಜೀವನ ಧರ್ಮವೂ ಆಗಿತ್ತು. ಹೀಗೆ ಸೆಮಿನಾರನ್ನು ರೂಪಿಸಿ, ಎಡಪಂಥದತ್ತ ವಾಲಿದವರಿಂದ, ಮಾರುಕಟ್ಟೆಯ ಸೂತ್ರಗಳನ್ನು ಒಂದಿಲ್ಲೊಂದು ರೀತಿಯಿಂದ ಟೀಕಿಸುತ್ತಿರುವ ನಮ್ಮಿಂದ - ಬಂಡವಾಳಶಾಹಿ ವ್ಯಾಪಾರವಿಲ್ಲದೇ ಬದುಕು ನಡೆಯದೆಂದು ಹೇಳಿಸಬೇಕೆನ್ನುವ ದುಷ್ಟ ಹುನ್ನಾರ ನಮ್ಮ ವಿದ್ಯಾರ್ಥಿಗಳದ್ದಿರಬಹುದೇ ಅನ್ನುವ ಅನುಮಾನವೂ ನನ್ನನ್ನು ಕಾಡದಿರಲಿಲ್ಲ.

ವೇದಿಕೆಯನ್ನೇರಲು ಒಪ್ಪಿದ್ದರಿಂದ ಈ ಬಗ್ಗೆ ಗಹನವಾಗಿ ಆಲೋಚಿಸುವ ಅನಿವಾರ್ಯತೆ ನಮ್ಮನ್ನೆಲ್ಲ ಸುತ್ತಿಕೊಂಡಿತ್ತು. ಸಮಾಜವಾದ, ಕಮ್ಯುನಿಸಂಗಳ ಪ್ರಯೋಗದ ವಿಫಲತೆ-ಸಾಫಲ್ಯವನ್ನು ವಿಶ್ವದ ಅನುಭವದ ಆಧಾರದ ಮೇಲೆ ಗಮನಿಸಿದಾಗ - ಮುಖ್ಯವಾಗಿ ಎಡಪಂಥೀಯ ವಿಚಾರಧಾರೆಯನ್ನು ಅಳವಡಿಸಿ ನಡೆದ ಸೋವಿಯತ್ ರಷ್ಯಾ, ಪೂರ್ವ ಯೂರೋಪ್, ಹಾಗೂ ಆ ವಿಚಾರಧಾರೆಯನ್ನು ಪ್ರತಿಪಾದಿಸುತ್ತಿದ್ದೇವೆಂದು ಘೋಷಿಸುತ್ತಾ ಮುಂದುವರೆವ ಚೀನಾ, ಹಾಗೂ ಭಾರತದ ರಾಜ್ಯಗಳಾದ ಪಶ್ಚಿಮ ಬಂಗಾಳ, ಕೇರಳ ಸರಕಾರಗಳ ಸೂತ್ರಗಳನ್ನು ಗಮನಿಸಿದಾಗ ಎಡಪಂಥೀಯ ವಿಚಾರಧಾರೆಯ ಬಗ್ಗೆ ಅನುಮಾನ ಬರುವುದು ಅದರ ಮಿತಿಗಳ ಬಗ್ಗೆ ಮನವರಿಕೆಯಾಗುವುದು ಸಹಜವೇ ಆಗಿತ್ತು.




ಆದರೆ ಇತ್ತ ವ್ಯಾಪಾರವಾದವನ್ನೂ ಆರಾಧಿಸದೇ, ಕಮ್ಯುನಿಸಂನ ಪ್ರತಿಪಾದಿಸದೇ ನೆಹರೂ ಪ್ರೇರಿತ ಸಮಾಜವಾದದ ಮಧ್ಯದಾರಿಯನ್ನು ಹಿಡಿದು ಹೊರಟರೆ, ಅರ್ಧ ಮಾರುಕಟ್ಟೆ, ಅರ್ಧ ಸರಕಾರಿ ಪ್ರೇರಿತ ವಿಕಾಸದ ದಾರಿಯಲ್ಲಿ ಹೋಗುವುದೂ ಕಷ್ಟದ ಮಾತೇ. ಅಮೆರಿಕದ ನಾಯಕತ್ವದಲ್ಲಿ ಅಳವಡಿಸಿಕೊಂಡ ವ್ಯಾಪಾರಶಾಹಿ ಸೂತ್ರಗಳ ಆಧಾರದ ಮೇಲೆ ನಡೆಸುತ್ತಿದ್ದ ವಿತ್ತೀಯ ಕ್ಷೇತ್ರ ವ್ಯಾಪಾರಿಗಳ ಅತಿಯಾಸೆ ಮತ್ತು ಲೋಲುಪತೆಗಳ ಫಲವಾಗಿ ತತ್ತರಿಸುತ್ತಿದ್ದಾಗ - ರಾಷ್ಟ್ರೀಕೃತ ಬ್ಯಾಂಕುಗಳ ನೇತೃತ್ವದಲ್ಲಿ ಸರಕಾರಿ ಭಾಗಸ್ವಮ್ಯದಲ್ಲಿ ನಡೆಯುತ್ತಿದ್ದ ಭಾರತೀಯ ವಿತ್ತೀಯ ಕ್ಷೇತ್ರ - ಯಾವ ವಿಕ್ಷೊಭಕ್ಕೂ ಒಳಗಾಗದೇ ವಿಶ್ವದಲ್ಲಿಯೇ ಒಂದು ಮಾದರಿಯಾಗಿ ನಿಂತುಬಿಟ್ಟಿತ್ತು. ಇದಕ್ಕೆ ಸಲ್ಲಬೇಕಾದ ಕೀರ್ತಿ ತಮ್ಮದೆಂದು ನಮ್ಮ ದೇಶದ ಎಡಪಂಥೀಯ ಪಕ್ಷಗಳು ಹೇಳಿಕೆಗಳನ್ನು ಕೊಟ್ಟದ್ದೂ ಉಂಟು. ಆದರೆ ಇದೊಂದು ಯಶಸ್ವೀ ಮಾರ್ಗವೆಂದು ಇದನ್ನು ನಂಬುವ ಮೊದಲೇ, ಸರಕಾರೀ ಮಾಲೀಕತ್ವದಲ್ಲಿ ನಡೆಯುತ್ತಿದ್ದ ಏರ್ ಇಂಡಿಯಾ ಮಾರುಕಟ್ಟೆಯ ಪೈಪೋಟಿಯನ್ನು ತಡೆಯಲಾಗದೇ ಸರಕಾರೀ ಕವಚವಿದ್ದೂ ತೇಲಲಾಗದೇ ಅಧೋಗತಿಗಿಳಿದಿದ್ದನ್ನೂ ನಾವು ನೋಡಿದ್ದವು. ಹೀಗಾಗಿ ಈ ವಾದದಲ್ಲಿ ಎರಡರಲ್ಲೊಂದು ಪಕ್ಷ ಹಿಡಿದು ವಾದಿಸುವುದರಲ್ಲಿ ಅಪಾಯವೇ ಇತ್ತು.

ಹಾಗೆ ನೋಡಿದರೆ ಉತ್ತಮ ಪರಿಸರಕ್ಕಾಗಿ ಹೋರಾಡುವ ಪರಿಸರವಾದಿ ಕಾರ್ತಿಕೇಯ ಸಾರಾಭಾಯಿಗೂ, ಬಂಡವಾಳ ಹೂಡಿ ವಿಷಪೂರಿತ ರಾಸಾಯನಿಕ ವಸ್ತುಗಳನ್ನು ನದಿಯಲ್ಲಿ ಹರಿಯಬಿಡಬಹುದಾದ ಉದ್ಯೋಗಪತಿಗೂ, ಮೂಲಭೂತ ವ್ಯತ್ಯಾಸ ಎಲ್ಲಿದೆ? ಯಾವ ವ್ಯಾಪರಿಯೂ ತನ್ನ ಗ್ರಾಹಕರ ಅನಾರೋಗ್ಯ ಮತ್ತು ಸಾವಿನ ಆಧಾರದ ಮೇಲೆ ಲಾಭ ಗಳಿಸಬೇಕೆಂದು ಆಶಿಸುವುದಿಲ್ಲ. ಹಾಗೆ ಆಶಿಸುವ ವ್ಯಾಪಾರಿಗಳ ಬಗ್ಗೆ ಈ ಚರ್ಚೆ ಅಲ್ಲ. ಆದರೆ ವ್ಯಾಪರವನ್ನು ನಡೆಸುವ, ಪರಿಸರ - ಜನಸಮುದಾಯವನ್ನು ಯಾವ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆನ್ನುವ ಮಿತಿಗಳು, ಭಿನ್ನ ವ್ಯಾಪಾರಗಳಿಗೆ- ವ್ಯಾಪಾರಿಗಳಿಗೆ, ಭಿನ್ನವಾಗಿರುತ್ತವೆ. ಪೆಪ್ಸಿ ಸಂಸ್ಥೆಯ ಮುಖ್ಯಸ್ತೆ ಇಂದಿರಾ ನೂಯಿಗೂ, ಆ ಬಗ್ಗೆ ಹುಯಿಲಬ್ಬಿಸಿದ ಪರಿಸರವಾದಿ ಸುನೀತಾ ನಾರಾಯಣ್ ಗೂ ಆಲೋಚನೆ ವಿಚಾರವಾದದ ಮಟ್ಟಿನಲ್ಲಿ ಮೂಲಭೂತ ಭಿನ್ನತೆ ಎಲ್ಲಿದೆ? ಎನ್ನುವ ಪ್ರಶ್ನೆ ಕುತೂಹಲದ್ದು. ಈ ಪ್ರಶ್ನೆಗೆ ನಾವು ಉತ್ತರಗಳನ್ನು ಹುಡುಕಹೊರಟರೆ ಈ ವಿಚಾರಧಾರೆಯ ಭಿನ್ನತೆ ಸ್ವಲ್ಪ ಮಟ್ಟಿಗೆ ನಮಗೆ ಅರ್ಥವಾಗುತ್ತದೆ ಅನ್ನಿಸುತ್ತದೆ. ಆದರೆ ನಾನು ಹೇಳಹೊರಟಿರುವ ಭಿನ್ನತೆ ಜಟಿಲವಾದ ಸಮಸ್ಯೆಯ ಒಂದು ಆಯಾಮ ಮಾತ್ರವೆನ್ನುವುದನ್ನು ನಾವು ಮನಗಾಣಬೇಕು.

ಎಡಪಂಥೀಯರು ಸಮಾನತೆಯ ಮೂಲಸೂತ್ರವನ್ನು ಹಿಡಿದು ಹೊರಟವರು. ಮಾರುಕಟ್ಟೆಯನ್ನೇ ದೈವ ಮಾಡಿಕೊಂಡವರಿಗೆ ಈ ಸಮಾನತೆಯೇ ಅ-ಸಮಾನತೆಯ ಪ್ರತೀಕವಾಗಿ ಕಾಣುತ್ತದೆ. ಮಾರುಕಟ್ಟೆ ದೈವವಾದರೆ, ಹೆಚ್ಚಿನ ಕೆಲಸ ಮಾಡಿದವರಿಗೆ - ಹೆಚ್ಚಿನ ದಕ್ಷತೆ ತೋರಿದವರಿಗೆ ಹೆಚ್ಚಿನ ಫಾಯಿದೆಯಾಗಬೇಕು ಎನ್ನುವುದು ಸಹಜ ನಂಬಿಕೆ. ಸಮಾನತೆಯಿರುವುದು ದಕ್ಷತೆಯನ್ನ ಅಳೆಯುವ ಸೂತ್ರದಲ್ಲಿ ಅನ್ನುವ ವಾದವನ್ನು ಇವರು ಮಂಡಿಸುತ್ತಾರೆ. ಆದರೆ ಎಡಪಂಥೀಯರು ಈ ದಕ್ಷತೆ ಪ್ರಾಪ್ತವಾಗುವ ಪರಿಗಿರುವ ಚಾರಿತ್ರಿಕ ಕಾರಣಗಳ ಮೂಲಕ್ಕೆ ಹೋಗುತ್ತಾರೆ. ಹೀಗಾಗಿ ಅವರ ವಾದದ ಅನುಸಾರ ದಕ್ಷತೆಯನ್ನು ಆರ್ಜಿಸಲೇ ಒಂದೆರಡು ತಲೆಮಾರುಗಳು ಬೇಕಾಗಬಹದಾದ್ದರಿಂದ ಆ ನಡುವಿನ ಕಾಲದಲ್ಲಿ ಮಾಪನದ ದಂಡಗಳು ಭಿನ್ನವಾಗಿರಬೇಕು ಅನ್ನುವುದನ್ನು ನಾವು ಪರಿಗಣಿಸಬೇಕಾಗುತ್ತದೆ.

ಪರಿಸರವಾದಿಗಳು ಯೋಚಿಸುವಾಗ ಅವರ ದೃಕ್ಪಥ ಸಾಮಾನ್ಯವಾಗಿ ಮುಂದಿನ ತಲೆಮಾರುಗಳಿಗೆ ನಾವು ಎಂಥಹ ಪರಿಸರವನ್ನು ಬಳುವಳಿಯಾಗಿ ನೀಡುತ್ತಿದ್ದೇವೆ ಅನ್ನುವ ಭವಿಷ್ಯವಾದೀ ದೃಕ್ಪಥವನ್ನು ಪ್ರತಿಪಾದಿಸುತ್ತಾರೆ. ಹೀಗಾಗಿ ಇವರುಗಳ ಕಾಲಮಾಪನವೂ ತಲೆಮಾರುಗಳಲ್ಲಿಯೇ ಇರುತ್ತದೆ. ವ್ಯತ್ಯಾಸವೆಂದರೆ - ಎಡಪಂಥೀಯರು ಅ-ಸಮಾನತೆಯ ಮೂಲವನ್ನು ಭೂತದಲ್ಲಿ ಹುಡುಕಿ ಅದಕ್ಕೊಂದು ಕಾವ್ಯನ್ಯಾಯವನ್ನೊದಗಿಸುವ ಮಾತನ್ನಾಡಿದರೆ, ಪರಿಸರವಾದಿಗಳ ಕಾಲದಿಗಂತ ಭವಿಷ್ಯದಲ್ಲಿರುತ್ತದೆ.

ಆದರೆ ಮಾರುಕಟ್ಟೆಯನ್ನು ನಂಬಿದವರ ಆಲೋಚನಾಲಹರಿ ಈಗಿಲ್ಲಿ - ಹಿಯರ್ ಆಂಡ್ ನೌ - ಎನ್ನುವ, ಬಹತೇಕ ತಮ್ಮ ಜೀವನಕಾಲದಲ್ಲಿ ಲಾಭಾರ್ಜನೆಯನ್ನು ಹೆಚ್ಚಿಸುವತ್ತ ಕೇಂದ್ರೀಕೃತವಾಗಿರುತ್ತದೆ. ಜೀವನಕಾಲವೂ ದೊಡ್ಡಕಾಲಮಾಪನವೇ. ಲಾಭಾರ್ಜನೆಯ ಮಾಪನವನ್ನು ಅನೇಕ ವರ್ಷಗಳ ಮಾತಿರಲಿ, ವಾರ್ಷಿಕ ಮತ್ತು ಮೂರು ತಿಂಗಳಲ್ಲಿ ಎಷ್ಟು ಲಾಭವನ್ನಾರ್ಜಿಸಿದ್ದೇವೆನ್ನುವ, ಅವಧಿಗೆ ಆ ಕಾಲಮಾಪನವನ್ನು ಮಾರುಕಟ್ಟೆಗಳು ಇಳಿಸಿಬಿಟ್ಟಿವೆ. ಪೈಪೋಟಿಯ ಕಬಳಿಕೆಯ ಈ ವಾತಾವರಣದಲ್ಲಿ ಬಂಡವಾಳಶಾಹಿಗಳಿಗೂ, ಎಡಪಂಥೀಯರಿಗೂ, ಪರಿಸರವಾದಿಗಳಿಗೂ ಇರುವ ಮೂಲಭೂತ ವ್ಯತ್ಯಾಸ ಕಾಲ ದಿಗಂತದ್ದು ಅನ್ನಿಸುತ್ತದೆ. ನಾವು ಬಂಡವಾಳಶಾಹಿ ಸಂಸ್ಥೆಗಳನ್ನೇ ನೋಡಿದಾಗ - ಒಟ್ಟಾರೆ ಜನಮನದಲ್ಲಿ ಗೌರವವನ್ನು ಪಡೆದಿರುವ ಎಡಿಸನ್ ನಿರ್ಮಿಸಿದ ಜೆನರಲ್ ಎಲೆಕ್ಟ್ರಿಕ್, ಭಾರತದ ಟಾಟಾ ಸಂಸ್ಥೆಗಳಿಗೂ - ಇಂದಿದ್ದು ನಾಳೆ ಮಾಯವಾಗುವ ಕಂಪನಿಗಳಿಗೂ ಇರುವ ಮೂಲಭೂತ ವ್ಯತ್ಯಾಸವೂ ದಿಗಂತದ ದೃಕ್ಪಥಕ್ಕೆ ಸಂಬಂಧಿಸಿದ್ದೇ ಇರಬಹುದು.

ಹೀಗಾಗಿಯೇ ಬಂಡವಾಳಶಾಹಿ ತತ್ವದ ನಿರಂತರತೆಯನ್ನು ಎಡಪಂಥೀಯರೂ, ಪರಿಸರವಾದಿಗಳೂ, ಇಷ್ಟವಿಲ್ಲದಿದ್ದರೂ, ಒಪ್ಪುತ್ತಲೇ ತಮ್ಮ ತಮ್ಮ ಹೋರಾಟವನ್ನು ವ್ಯಾಪಾರವಾದಿಗಳ ಕಾಲದಿಗಂತವನ್ನು ವಿಸ್ತರಿಸುವ ಕೆಲಸ ಮಾಡಬೇಕಾಗುತ್ತದೆ. ಆದರೆ 150 ವರ್ಷಗಳ ಚರಿತ್ರೆ - ಅನೇಕ ತಲೆಮಾರುಗಳನ್ನು ಕಂಡ - ಲೀಮನ್ ಬ್ರದರ್ಸ್ ನಂತಹ ಸಂಸ್ಥೆ ರಾತ್ರೋರಾತ್ರಿ ಮುಳುಗಿದ್ದರ ಹಿನ್ನೆಲೆಯೇನು? ಅಲ್ಲಿಯೂ ಸಂಸ್ಥೆಗಳು ಮತ್ತು ಅದನ್ನು ನಡೆಸುವವರು ತಾವು ನಡೆಸುತ್ತಿರುವ ವ್ಯಪಾರಕ್ಕೆ ಸಲ್ಲುತ್ತಿರುವ ಲಾಭ ಸಮಂಜಸವಾದದ್ದೇ ಅನ್ನುವುದನ್ನ ಆಗಾಗ ಅವಲೋಕಿಸಿಕೊಳ್ಳಬೇಕಾಗುತ್ತದೆ. ಉಜ್ವಲ ಚರಿತ್ರೆಯಿರುವುದು ಭವ್ಯ ಭವಿಷ್ಯಕ್ಕೆ ನೀಡುವ ಗ್ಯಾರೆಂಟಿಯಂತೂ ಅಲ್ಲವೇ ಅಲ್ಲ. ಕೆಲವೇ ಸಾರ್ಥಪರ ಲೋಲುಪಿ ಮ್ಯಾನೇಜರುಗಳ ಅತಿಯಾಸೆ 150 ವರ್ಷಗಳ ಚರಿತ್ರೆಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಮಣ್ಣು ಮುಕ್ಕಿಸಬಹುದೆಂದು ಅನೇಕ ಬಾರಿ ನಿರೂಪಿಸಿದ್ದಾರೆ. ಹೀಗಾಗಿ ನಾವು ಕೇಳುತ್ತಿರುವ ಈ ಪ್ರಶ್ನೆ ವಿಚಾರಧಾರೆಯ ಪ್ರಶ್ನೆಯಲ್ಲವೇ ಅಲ್ಲ - ಬದಲಿಗೆ ಆ ವಿಚಾರಧಾರೆಯನ್ನು ಯಾವ ಚೌಕಟ್ಟಿನೊಳಗೆ, ಯಾವ ಮಿತಿಗಳೊಳಗೆ ಅರ್ಥೈಸುತ್ತೇವೆ, ಆ ಮಿತಿಗಳನ್ನು ನಾವು ಎಲ್ಲಿ ಕಂಡುಕೊಳ್ಳುತ್ತೇವೆ ಅನ್ನುವ ಯೋಚನೆ ಮುಖ್ಯವಾದದ್ದು ಅನ್ನಿಸುತ್ತದೆ. ಹೀಗಾಗಿಯೇ ನನ್ನಂತಹ ಕುತೂಹಲಿ ಮೇಷ್ಟರುಗಳು ಎರಡೂ ವಾದಗಳನ್ನು ನೋಡುತ್ತಾ ಎಡಕ್ಕೂ ವಾಲದೇ, ಬಲಕ್ಕೂ ಬೀಳದೇ ಮುಂದುವರೆಯುವ ಕುಶಲಕೆಲಸವನ್ನು ಮಾಡಿ ಜೀವನ ನಡೆಸಬೇಕಾಗಿದೆ.



Sunday, December 20, 2009

ಬಡವರು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು.

ಬಡಕುಟುಂಬಗಳ ಜೀವನದಲ್ಲಿ ಬೇಕಾದ ವಿತ್ತೀಯ ಸೇವೆಗಳ ಬಗೆಗಿನ ಮಾಹಿತಿಯನ್ನು ಪರಿಶಿಲಿಸೋಣ. 1971ರಲ್ಲಿ ನಡೆಸಿದ್ದ ರಾಷ್ಟ್ರೀಯ ದಶಮಾನ ಸರ್ವೆಯ ಪ್ರಕಾರ ಗ್ರಾಮೀಣ ಕುಟುಂಬಗಳ ಸುಮಾರು 30 ಪ್ರತಿಶತ ಸಾಲದ ಮೊತ್ತ ಮಾತ್ರ ಸಂಸ್ಥಾಗತ ಮೂಲಗಳಿಂದ [ಬ್ಯಾಂಕು, ಸಹಕಾರ ಸಂಘ - ಹೀಗೆ] ಬಂದಿದ್ದರೆ ಮಿಕ್ಕ 70 ಪ್ರತಿಶತ ಸಾಲದ ಮೊತ್ತವನ್ನು ಇತರ ಮೂಲಗಳಿಂದ ಈ ಕುಟುಂಬಗಳು ಪಡೆದಿದ್ದವು. ಬ್ಯಾಂಕುಗಳ ರಾಷ್ಟ್ರೀಕರಣ ಆಗಷ್ಟೇ ಆಗಿತ್ತು. 1981ಕ್ಕೆ ಬರುವ ವೇಳೆಗೆ ಸುಮಾರು 60 ಪ್ರತಿಶತ ಸಾಲದ ಮೊತ್ತ ಸಂಸ್ಥಾಗತ ಮೂಲಗಳಿಂದ ಬರಲು ಪ್ರಾರಂಭವಾಗಿತ್ತು. ನಗರ ಪ್ರದೇಶಗಳ ಮಾಹಿತಿಯೂ ಇದಕ್ಕಿಂತ ತೀವ್ರ ಭಿನ್ನತೆಯನ್ನೇನೂ ತೋರಿರಲಿಲ್ಲ. 1991ರ ವೇಳೆಗೆ ಸಂಸ್ಥಾಗತ ಮೂಲಗಳ ಪಾಲು 56 ಪ್ರತಿಶತಕ್ಕೆ ಇಳಿದಿತ್ತು. 2003ರಲ್ಲಿ ಪ್ರಪಂಚ ಬ್ಯಾಂಕು ನಡೆಸಿದ ಒಂದು ದೊಡ್ಡ ಅಧ್ಯಯನದಲ್ಲಿ ಸಂಸ್ಥೆಗಳ ಪಾಲು ತುಸುವೇ ಬೆಳಿದಿದ್ದು 1971-1981 ನಡುವೆ ಕಂಡಂಥಹ ಯಾವ ದೊಡ್ಡ ಬದಲಾವಣೆಯೂ ಕಂಡುಬರಲಿಲ್ಲ.

ಈ ಮಾಹಿತಿಯನ್ನು ನಾವು ಹೇಗೆ ಅರ್ಥೈಸಬಹುದು? ಒಟ್ಟಾರೆ ಮಾಹಿತಿಯನ್ನು ನಾವು ರಾಷ್ರ್ಟೀಯ ಮಟ್ಟದಲ್ಲಿ ನೋಡಿದಾಗ ಬ್ಯಾಂಕುಗಳ ರಾಷ್ಟ್ರೀಕರಣದಿಂದ ಬಡವರಿಗೆ ವಿತ್ತೀಯ ಸೇವೆಗಳು - ಮುಖ್ಯವಾಗಿ ಸಾಲ - ಸಿಗುವಂತಾಯಿತು - ಹಾಗೂ ಒಂದು ದಶಕದಲ್ಲಿ ಆ ನೀತಿಯ ದೊಡ್ಡ ಪ್ರಭಾವ ನಮಗೆ ಕಾಣಿಸಿತು ಎನ್ನಬಹುದು. ಆ ನಂತರದ ನೀತಿಗಳು ಬಡ್ಡಿವ್ಯಾಪಾರಿಗಳ ವ್ಯಾಪಾರದ ಮೇಲೆ ದೊಡ್ಡ ಪ್ರಭಾವವನ್ನ ಬೀರಿಲ್ಲ. ನಿಧಾನವಾಗಿ ಒಂದಡೆ ಬೆಳೆಯುತ್ತಾ ಒಂದೆಡೆ ಕುಂಟುತ್ತಾ ಈ ಸೇವೆಗಳು ಮುಂದುವರೆದಿವೆ.

ರೋಹಿಣಿ ಪಾಂಡೆ ಮತ್ತು ರಾಬಿನ್ ಬರ್ಗೆಸ್ ಅವರುಗಳ ಈಚಿನ ಅಧ್ಯಯನದ ಪ್ರಕಾರ ಬ್ಯಾಂಕುಗಳ ರಾಷ್ಟ್ರೀಕರಣದಿಂದ - 1991ರ ಉದಾರೀಕರಣದವರೆಗಿನ ಕಾಲದ ಮಾಹಿತಿಯನ್ನು ಪರಿಶೀಲಿಸಿದಾಗ ಆ ಘಟ್ಟದಲ್ಲಿ ಒಟ್ಟಾರೆ ಬಡತನವೂ ಕಡಿಮೆಯಾಯಿತಲ್ಲದೇ, ಕೃಷಿಯ ಉತ್ಪತ್ತಿಯೂ ಹೆಚ್ಚಿತು - ಆದರೆ ತದನಂತರದ ಉದಾರೀಕರಣದ ನಂತರ ಇದಕ್ಕೆ ವಿರುದ್ಧವಾದ ಪ್ರಕ್ರಿಯೆ ಕಾಣಿಸುತ್ತಿದೆ ಎಂದು ಅವರುಗಳು ವಾದಿಸುತ್ತಾರೆ. ಇದು ಯಾಕೆ ಹೀಗಾಗಿರಬಹುದು ಅನ್ನುವುದು ಕುತೂಹಲದ ವಿಷಯ.

ಇದನ್ನು ಒಂದು ರಾಷ್ಟ್ರೀಕೃತ ಬ್ಯಾಂಕಿನ ದೃಷ್ಟಿಯಿಂದ ನೋಡೋಣ. ಬಡ್ಡಿವ್ಯಾಪಾರಿ ತಿಂಗಳಿಗೆ 3 ರರಿಂದ 5 ಪ್ರತಿಶತ ಬಡ್ಡಿ ಪಡೆಯುತ್ತಿರುವ ವಾತಾವರಣದಲ್ಲಿ ಬ್ಯಾಂಕುಗಳು ವ್ಯಾಪಾರ ಮಾಡಬೇಕು. ಆ ವಾತಾವರಣದಲ್ಲಿ ಸರಕಾರದ ಆದೇಶದ ಮೇರೆಗೆ ಕಡಿಮೆ ಬಡ್ಡಿ ದರದಲ್ಲಿ - ಕೃಷಿಗೆ ವರ್ಷಕ್ಕೆ 7 ಪ್ರತಿಶತ ಬಡ್ಡಿ, ಹಾಗೂ ಮಿಕ್ಕ ಸಾಲಗಳಿಗೂ ಪಿ.ಎಲ್.ಆರ್ - ಅತ್ಯುತ್ತಮ ಗ್ರಾಹಕರಿಗೆ ನೀಡುವ - ದರದಲ್ಲಿ ನೀಡಬೇಕು. ಸಾಲದ ಮೊತ್ತ ಸಣ್ಣದು. ಇದಕ್ಕಾಗುವ ಕೆಲಸ ಹೆಚ್ಚಿನದು. ಈ ಕೆಲಸವನ್ನು ಮಾಡಲು ಯಾರಿಗೆ ಆಸಕ್ತಿಯಿರಬಹುದು....

ಬ್ಯಾಂಕಿನ ಉನ್ನತಾಧಿಕಾರಿಗಳಾದ ಚೇರ್ಮನ್ನರ ದೃಷ್ಟಿಯಿಂದ ನೋಡಿದರೆ ಅವರ ಕೆಲಸವೂ ಕಷ್ಟದ್ದೇ. ಉದಾರೀಕರಣದ ನಂತರ ಅವರುಗಳು ತಮ್ಮ ಬ್ಯಾಂಕುಗಳ ಲಾಭಾಂಶವನ್ನೂ ಗಮನದಲ್ಲಿಡುತ್ತಾ - ಷೇರ್ ಬಜಾರಿನಲ್ಲಿ ತಮ್ಮ ಬ್ಯಾಂಕಿನ ಕಿಮ್ಮತ್ತು ಆರಕ್ಕೇಳುತ್ತಿದೆಯೋ, ಮೂರಕ್ಕಿಳಿಯುತ್ತಿದೆಯೋ - ಗಮನಿಸುತ್ತಲೇ, ಸರಕಾರಕ್ಕೆ ವಾರ್ಷಿಕ ಲಾಭಾಂಶವನ್ನು ನೀಡುತ್ತಲೇ ಬಡವರ ಸೇವೆಯನ್ನು ಲಾಭರಹಿತವಾಗಿ ಮಾಡಬೇಕಿದೆ. ಈ ಎಲ್ಲದರ ಬ್ಯಾಂಕಿಗೂ ಅದರ ಗ್ರಾಹಕರಿಗೂ ಇರುವ ಪತಿ-ಪತ್ನಿಯ ಸಂಬಂಧದ ನಡುವೆ ಸರಕಾರ ಮೂಗು ತೂರಿಸಿ ಸಾಲಮನ್ನಾದಂತಹ ಕಾರ್ಯಕ್ರಮಗಳಿಂದ ಉಂಟುಮಾಡುವ ವಿರಸವನ್ನೂ ಮೀರಿ ಕೆಲಸ ಮಾಡಬೇಕಿದೆ. ಈ ಸರ್ಕಸ್ಸು ಸರಳವಾದದ್ದೇನೂ ಅಲ್ಲ. ಒಮ್ಮೆ ಖಾಸಗಿಯಾಗಿ ರಾಷ್ಟ್ರೀಕೃತ ಬ್ಯಾಂಕಿನ ಅಧ್ಯಕ್ಷರೊಬ್ಬರು ರಿಜರ್ವ್ ಬ್ಯಾಂಕಿನ ಉಪ-ಗವರ್ನರ್ ಗೆ "ನಮಗೆ ಗ್ರಾಮೀಣ ಗ್ರಾಹಕರಿಂದ 16 ಪ್ರತಿಶತ ಬಡ್ಡಿ ಪಡೆಯಲು ಬಿಟ್ಟರೆ ನಾವುಗಳು ನೀವು ಹೇಳಿದಷ್ಟು ಸಾಲ ಕೊಡುವುದೇ ಅಲ್ಲದೇ ಬಂದ ಪ್ರತೀ ಗ್ರಾಹಕರಿಗೂ ಚಹಾ ಕುಡಿಸುತ್ತೇವೆ." ಎಂದು ಹೇಳಿದ್ದನ್ನು ನಾನು ಕಂಡಿದ್ದೆ. ಇದರ ಅರ್ಥವಿಷ್ಟೇ - ಮುಕ್ತ ಮಾರುಕಟ್ಟೆಯಲ್ಲಿ ನಮ್ಮನ್ನು ಬಿಟ್ಟರೆ, ನಮ್ಮನ್ನು ಮುಕ್ತವಾಗಿ ಮಾರುಕಟ್ಟೆಯ ಸೂತ್ರಗಳ ಆಧಾರದ ಮೇಲೆ ವ್ಯಾಪಾರ ಮಾಡಲು ಬಿಡಿ. ಹೀಗೆ ಲಾಭವೇ ಮಾಡದಂತಹ ವ್ಯಾಪಾರವನ್ನು ನಾವು ಬ್ಯಾಂಕುಗಳ ಮೇಲೆ ಹೇರಿ ತಮಾಷೆ ನೋಡುತ್ತಿದ್ದೇವೆ.

ಚೇರ್ಮನ್ನರ ವಿಷಯ ಒತ್ತಟ್ಟಿಗಿಟ್ಟು ಗ್ರಾಮೀಣ ಪ್ರದೇಶದಲ್ಲಿರುವ ಬ್ಯಾಂಕ್ ಅಧಿಕಾರಿಯ ದೃಷ್ಟಿಯಿಂದ ನೋಡಿದರೂ ನಮಗೆ ಕಾಣುವ ಚಿತ್ರ ಅದ್ಭುತವಾದದ್ದೇನೂ ಅಲ್ಲ. ಗ್ರಾಮೀಣ ಪ್ರಾಂತದ ಶಾಖೆಗಳಲ್ಲಿ ಕೆಲಸಮಾಡುವ ಅಧಿಕಾರಿಗಳು ವರ್ಗಾವಣೆಯ ನೀತಿಯಿಂದಾಗಿ, ಬಹುತೇಕ ಹೊರಗಿನಿಂದ ಬಂದವರಾಗಿರುತ್ತಾರೆ. ಗ್ರಾಮೀಣ ಶಾಖೆಗಳಲ್ಲಿ ಇಬ್ಬರು ಅಥವಾ ಮೂವ್ವರು ಉದ್ಯೋಗಿಗಳಿರುತ್ತಾರೆ. ಅಲ್ಲಿ ಸಣ್ಣ ಮೊಬಲಗಿನ ಸಾವಿರಾರು ವ್ಯವಹಾರಗಳಿರುತ್ತವೆ. ಜೊತೆಗೆ ಬಹುತೇಕ ಪ್ರದೇಶಗಳಲ್ಲಿ ಸುತ್ತಮುತ್ತಲ ಪ್ರಾಂತದಲ್ಲಿ ಅದು ಯಾವುದೇ ಬ್ಯಾಂಕಿನ ಏಕೈಕ ಶಾಖೆಯಾಗಿರುತ್ತಾದ್ದರಿಂದ - ಆ ಪ್ರಾಂತದ ಎಲ್ಲ ಹಣವೂ - ಅಂಚೆ ಕಛೇರಿ, ಪಂಚಾಯ್ತಿಯಿಂದ ಹಿಡಿದು ನರೇಗಾದವರೆಗೂ - ಆ ಶಾಖೆಯ ಮೂಲಕವೇ ಹರಿಯುತ್ತದೆ. ಇಷ್ಟೇ ಆ ಅಧಿಕಾರಿಯ ತೊಂದರೆಯೆಂದರೂ ತಪ್ಪಾದೀತು. ಆತನ ಅನೇಕ ಗ್ರಾಹಕರು ಅನಕ್ಷರಸ್ಥರು. ಅವರಿಗೆ ವ್ಯವಹಾರವನ್ನು ವಿವರಿಸುವುದಲ್ಲದೇ, ಅವರುಗಳ ಪತ್ರಗಳನ್ನೂ ತಾನೇ ತುಂಬಿಸಬೇಕು. ಒಂದು ರೀತಿಯಲ್ಲಿ - ರೋಗಿಗೆ ಟ್ರೀಟ್ಮೆಂಟ್ ಕೊಡುತ್ತಿರುವ ವೈದ್ಯರಂತೆ, ತನ್ನ ಗ್ರಾಹಕನೊಂದಿಗೆ ವರ್ತಿಸಬೇಕು.

ಈ ಎಲ್ಲ ಮಾಡುವ ಆ ಅಧಿಕಾರಿಗೆ ದಸರಾ-ದೀಪಾವಳಿಗೂ ರೀಪ್ಲೇಸ್ಮೆಂಟ್ ಇಲ್ಲವೆನ್ನುವ ಕಾರಣವಾಗಿ ರಜೆ ಸಿಗುವುದಿಲ್ಲ. ಆ ಬಡಪಾಯಿ ಅಧಿಕಾರಿ ಮಕ್ಕಳ ವಿದ್ಯಾಭ್ಯಾಸವೆಂದು ಹೆಂಡತಿ ಮಕ್ಕಳನ್ನು ನಗರದಲ್ಲಿಯೇ ಬಿಟ್ಟು, ಡಬಲ್ ಖರ್ಚು ಮಾಡುತ್ತಾ ಅಥವಾ ಅಪ್-ಡೌನ್ ಮಾಡುತ್ತಾ ಬಡವರಿಗೆ ವಿತ್ತೀಯ ಸೇವೆಗಳನ್ನು ಒದಗಿಸಬೇಕು. ಈ ಎಲ್ಲವನ್ನೂ ಯೋಚಿಸಿದಾಗ - ರಾಷ್ಟ್ರೀಕೃತ ಬ್ಯಾಂಕುಗಳು ಮಾಡಿರುವ ಸಾಧನೆ ಯಾವ ಜಾದೂವಿಗಿಂತಲೂ ಕಡಿಮೆಯಿಲ್ಲ. ಹಾಗೆ ನೋಡಿದರೆ - ಮೈಕ್ರೋಫೈನಾನ್ಸ್ ಮತ್ತು ಸ್ವ-ಸಹಾಯ ಗುಂಪುಗಳ ಹಣವನ್ನೂ ದಿನದಂತ್ಯದಲ್ಲಿ ಎಣಿಸಿ ಜೋಪಾನವಾಗಿಡುವವರು ಬ್ಯಾಂಕಿನವರೇ ಅಲ್ಲವೇ?

ಹಾಗಾದರೆ ಸಂಸ್ಥಾಗತ ವಿತ್ತೀಯ ಸೇವೆಗಳು - ಮುಖ್ಯವಾಗಿ ಸಾಲದ ಸೌಲಭ್ಯ - ಈಗಿರುವ ಸುಮಾರು 60 ಪ್ರತಿಶತದಷ್ಟೇ ಪಾಲಿನಲ್ಲಿ ಸ್ಥಗಿತಗೊಂಡಿರುತ್ತವೆಯೋ - ಅಥವಾ ಅದು ಬೆಳೆಯಬಹುದೋ.. ಸಾಕಷ್ಟು ಸುದ್ದಿ ಮಾಡುತ್ತಿರುವ ಮೈಕ್ರೋಫೈನಾನ್ಸ್ ಸಂಸ್ಥೆಗಳು ಗ್ರಾಮೀಣ ಬಡ್ಡಿವ್ಯಾಪಾರಿಯನ್ನು ಹೊರಗಟ್ಟುತ್ತವೆಯೋ ಅಥವಾ ಬ್ಯಾಂಕುಗಳ ಧಂಧೆಯನ್ನು ಕಬಳಿಸುತ್ತವೆಯೋ ಅನ್ನುವುದು ಕುತೂಹಲದ ಮಾತು. ಬ್ಯಾಂಕುಗಳಿಂದಲೇ ದೊಡ್ಡ ಸಾಲವನ್ನ ಪಡೆದು - ಪುಟ್ಟಸಾಲಗಳನ್ನಾಗಿ ಹಂಚುತ್ತಿರುವ ಮೈಕ್ರೊಫೈನಾನ್ಸ್ ಸಂಸ್ಥೆಗಳು 18 ರಿಂದ 28 ಪ್ರತಿಶತ ಬಡ್ಡಿಯನ್ನು ಬಡವರಿಂದ ಪಡೆಯುತ್ತ ಬ್ಯಾಂಕುಗಳು ಮಾಡಲಾಗದ, ಆದರೆ ಮಾಡಲು ಸಾಧ್ಯವಿರಬಹುದಾದ ಕೆಲಸವನ್ನು ಮಾಡಿ ತೋರಿಸುತ್ತಿವೆ. ಆದರೂ ಎಲ್ಲ ಮೈಕ್ರೋಫೈನಾನ್ಸ್ ಕಂಪನಿಗಳು ಸೇರಿ ಒಟ್ಟಾರೆ ರೂ.20,000 ಕೋಟಿಗಿಂತ ಕಡಿಮೆ ವ್ಯಾಪಾರ ಮಾಡುತ್ತಿರುವ ಸಂದರ್ಭದಲ್ಲಿ ಅವರುಗಳು ಬ್ಯಾಂಕುಗಳಿಗೆ ಜೋರಾದ ಪೈಪೋಟಿ ನೀಡುವುದು ಕಷ್ಟದ ಮಾತೇ. ಅದೂ ಅಲ್ಲದೆ ಈ ಸಂಸ್ಥೆಗಳ ಬಡ್ಡಿದರ ಮತ್ತು ವಸೂಲಿ ವಿಧಾನಗಳನ್ನು ಕಂಡವರು ಇಂಥ ಸಂಸ್ಥೆಗಳನ್ನು ಸಂಸ್ಥಾಗತ ಬಡ್ಡಿವ್ಯಾಪಾರಿಗಳೆಂದೂ ಕರೆಯುತ್ತಾರೆ.

ಸಣ್ಣ ಮೊತ್ತದ ಸಾಲದಲ್ಲಿ ಬಡ್ಡಿಯ ಪಾತ್ರ ಹಿರಿದಾದದ್ದೇನೂ ಅಲ್ಲವೆನ್ನುವ ವಾದವನ್ನು ನನ್ನನ್ನೊಳಗೊಂಡು ಅನೇಕರು ಮಂಡಿಸಿದ್ದಾರೆ. ಅದರೂ ಸರಕಾರ ಬ್ಯಾಂಕುಗಳ ಎರಡೂ ಕೈಗಳನ್ನು ಕಟ್ಟಿಹಾಕಿ ಮುಕ್ತಮಾರುಕಟ್ಟೆಯ ಅಖಾಡಕ್ಕೆ ಈ ಸಂಸ್ಥೆಗಳನ್ನು ಇಳಿಸಿದೆ. ಇತ್ತ ಸಮಾಜವಾದವೂ ಅಲ್ಲದ - ಅತ್ತ ಮುಕ್ತಮಾರುಕಟ್ಟೆಯೂ ಅಲ್ಲದ ಎಡಬಿಡಂಗಿ ನೀತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಒದ್ದಾಡುತ್ತಿವೆ. ಈ ಸಂಸ್ಥೆಗಳನ್ನು ಮಾರುಕಟ್ಟೆಯ ನಿಯಮಾನುಸಾರ ಕೆಲಸ ಮಾಡಲು ಬಿಟ್ಟರೆ, ಪ್ರತೀ ಗ್ರಾಮೀಣ ಶಾಖೆಯಲ್ಲೂ ಐದಾರು ಉದ್ಯೋಗಿಗಳು ಹಾಗೂ ಪ್ರತೀ ಗ್ರಾಹಕನಿಗೂ ಒಂದು ಕಪ್ ಚಹಾ ಸಿಗುವ ದಿನಗಳು ದೂರವಿರಲಾರವು. ಆದರೆ ಬಡ್ಡಿ ದರವನ್ನೇ ಉಸಿರಾಡುವ - ಎರಡು ದಶಕಗಳಿಗೊಮ್ಮೆ ಸಾಲಮನ್ನಾ ಮಾಡುವ ಸರಕಾರಕ್ಕೆ ತಿಳಿಹೇಳುವವರು ಯಾರು?

ಹೀಗೆ ಬ್ಯಾಂಕುಗಳಿಗಾಗುವ ಖರ್ಚನ್ನು ಸಂಪಾದಿಸುವ ಸ್ಥರಕ್ಕೆ ಬಡ್ಡಿದರ ಹೆಚ್ಚಿದರೂ ಬಡಗ್ರಾಹಕರು ಸಾಲಪಡೆಯುವುದನ್ನು ಮುಂದುವರೆಸುತ್ತಾರೆಂಬ ವಾದ ಪ್ರಶ್ನಾತೀತವೇನದ ಅಲ್ಲ. ಬಾಂಗ್ಲಾದೇಶದಲ್ಲಿ ನಡೆಸಿರುವ ಅಧ್ಯಯನದ ಆಧಾರದ ಮೇಲೆ ದಹೇಜಿಯಾ, ಮಾಂಟಗಮರಿ ಮತ್ತು ಮುರ್ಡೋಕ್ ಈ ವಾದವನ್ನು ಪ್ರಶ್ನಿಸುತ್ತಾರೆ. ಅವರ ಪ್ರಕಾರ - ಹೆಚ್ಚಿದ ಬಡ್ಡಿದರದಲ್ಲೂ ಜನ ಸಾಲ ಪಡೆಯಲು ತಯಾರಿರಬಹುದಾದರೂ ಸಂಸ್ಥೆಯ ಗ್ರಾಹಕ ಸಮೂಹ ಕಡುಬಡವರಿಂದ ತುಸು ದೂರ ಹೋಗುತ್ತಿರುವುದನ್ನು ಅವರುಗಳು ದಾಖಲಿಸಿದ್ದಾರೆ. ಸಂಸ್ಥಾಗತ ಮೂಲಗಳಿಂದ ಕೊಡುವ ಸಾಲದ ಪಾಲು ಒಟ್ಟಾರೆ 80-85 ಪ್ರತಿಶತ ತಲುಪುವವರೆಗೂ ರಾಜಕಾರಣಿಗಳು - ಸರಕಾರೀ ಯಂತ್ರಾಂಗದವರೂ ಈ ಪೇಪರನ್ನು ಓದದಿರುವುದೇ ಒಳಿತು.



Friday, December 4, 2009

ಬಡ್ಡಿವ್ಯಾಪಾರಿಗಳ ಕಥೆಗಳು

ಗ್ರಾಮೀಣ ಪ್ರದೇಶಗಳಲ್ಲಿನ ಬಡ್ಡಿವ್ಯಾಪಾರಿಗಳೆಂದರೆ ನಮ್ಮ ಮನಸ್ಸಿಗೆ ಯಾವ ಚಿತ್ರ ಬರುತ್ತದೆ? ಬಡ್ಡಿವ್ಯಾಪಾರಿಗಳೆಂದರೆ ದುಷ್ಟರು, ಶೋಷಕರು, ಬಡವರ ಜಮೀನನ್ನು ಒತ್ತುವರಿಮಾಡಿಕೊಳ್ಳುವವರು, ಹಾಗೂ ನಾನಾ ರೀತಿಯಲ್ಲಿ ಹಿಂಸಿಸುವ ಹೃದಯಹೀನರು ಅನ್ನುವ ಚಿತ್ರ ನಮ್ಮ ಮನಸ್ಸಿನಲ್ಲಿ ಬಂದರೆ ಅದು ಆಶ್ಚರ್ಯವನ್ನು ಉಂಟುಮಾಡಬಾರದು. ನಾನು ಪುಟ್ಟವನಾಗಿದ್ದಾಗಿನಿಂದಲೂ ಓದಿದ ಸಾಹಿತ್ಯ, ಕಂಡ ಸಿನೇಮಾ ಹಾಗೂ ಬೆಳೆದು ನಿಂತಾಗ ಓದಿದ ಬೌದ್ಧಿಕ ಬರಹಗಳೆಲ್ಲ ಈ ಚಿತ್ರವನ್ನು ನಮ್ಮ ಮುಂದಿಡುವುದರಲ್ಲಿ ಸಫಲವಾಗಿದ್ದುವು. ಇದೂ ಸಾಲದೆಂಬಂತೆ, ಸರಕಾರ ಯಾವುದೇ ಯೋಜನೆಯನ್ನು ರೂಪಿಸುವಾಗ ನಮಗೆ "ಬಡವರನ್ನು ಸಾಲಮುಕ್ತರನ್ನಾಗಿ ಮಾಡುವುದೂ", "ಬಡ್ಡಿವ್ಯಾಪಾರಿಗಳ ಹಿಡಿತದಿಂದ ಬಿಡಿಸುವುದೂ" ಮುಖ್ಯ ಕಾರ್ಯಕ್ರಮಗಳಾಗಿ ಕಾಣುತ್ತಿದ್ದುವು.

ಗ್ರಾಮೀಣ ಪ್ರಾಂತದಲ್ಲಿ ಅನೇಕ ವರ್ಷಗಳಿಂದ ಓಡಾಡುತ್ತಿರುವ ನನಗೆ ಒಬ್ಬ ಬಡ್ಡಿವ್ಯಾಪಾರಿಯೂ ಕಂಡಿಲ್ಲ. ಕಿರಾಣೆಯಂಗಡಿಯವರನ್ನು, ಸರಪಂಚರನ್ನೂ, ಗ್ರಾಮ ಲೆಕ್ಕಿಗನನ್ನು, ದೇವಸ್ಥಾನದ ಅರ್ಚಕರನ್ನೂ, ಸ್ಕೂಲು ಮಾಸ್ತರುಗಳನ್ನೂ ಭೇಟಿಯಾಗಿರುವ ನನಗೆ ಯಾರೂ, ’ನಾನು ಈ ಗ್ರಾಮದ ಬಡ್ಡಿವ್ಯಾಪಾರಿ’ ಎಂದು ಪರಿಚಯಿಸಿಕೊಂಡ ಕಾರ್ಡು ಕೊಟ್ಟ ಅನುಭವವಿಲ್ಲ. ಹಾಗೆಂದು ಬಡ್ಡಿವ್ಯಾಪಾರಿಗಳು ನಮ್ಮ ಊಹೆಯಲ್ಲಿ ಮಾತ್ರವಿರುವ ರಾಕ್ಷಸರು ಎಂದು ನಾನೇನೂ ವಾದಿಸ ಹೊರಟಿಲ್ಲ. ಆದರೆ ಬಡ್ಡಿವ್ಯಾಪಾರಿಗಳು ತಮ್ಮ ಸಮಾಜದಲ್ಲಿ ಯಾವ ಭೂಮಿಕೆಯನ್ನು ನಿರ್ವಹಿಸುತ್ತಿರಬಹುದು ಅನ್ನುವ ಕುತೂಹಲವನ್ನು ನಾವು ಪರಿಹರಿಸಿಕೊಳ್ಳಲು ಸಾಧ್ಯವಾಗಬಹುದೇ? ಈಗಲೂ ಸ್ವ-ಸಹಾಯ ಗುಂಪುಗಳಲ್ಲಿ ಶಾಮೀಲಾಗಿರುವ ಮಹಿಳೆಯರನ್ನು ಮಾತನಾಡಿಸಿದರೆ ಅವರುಗಳು ಬಡ್ಡಿವ್ಯಾಪಾರಿಗಳಿಂದ ಸಾಲ ಪಡೆಯುತ್ತಿದ್ದ, ಅದಕ್ಕೆ ಅವರುಗಳು ಕಟ್ಟುತ್ತಿದ್ದ ಬಡ್ಡಿಯ ಕಥೆಗಳನ್ನು ನಮಗೆ ಕಣ್ಣೀರು ಬರುವಂತೆ ವಿವರಿಸುತ್ತಾರೆ.

ಬಡ್ಡಿವ್ಯಾಪಾರಿಗಳು ಇಷ್ಟು ದುಷ್ಟರಾದರೆ ಅವರು ಹೇಗೆ ಇನ್ನೂ ವ್ಯಾಪಾರವನ್ನು ನಡೆಸುತ್ತಿದ್ದಾರೆ? ಅವರು ಬಡ್ಡಿವ್ಯಾಪಾರದಿಂದ ಅಷ್ಟೊಂದು ಹಣವನ್ನು ಸಂಪಾದಿಸುವುದೇ ಆಗಿದ್ದರೆ ನಮಗೆ ಗ್ರಾಮೀಣ ಪ್ರಾಂತದಲ್ಲಿ ಈ ವ್ಯಾಪಾರ ಮಾಡಿ ದೊಡ್ಡ ವ್ಯಾಪಾರಿಯಾಗಿ ಒಂದು ಬ್ಯಾಂಕಿನ/ಕಂಪನಿಯ ಸ್ಥರಕ್ಕೆ ಬೆಳೆದ ಬಡ್ಡಿವ್ಯಾಪಾರಿಗಳು ಯಾಕೆ ಕಾಣಸಿಗುವುದಿಲ್ಲ? ಈ ರೀತಿಯ ಪ್ರಶ್ನೆಗಳನ್ನು ನಾವು ಪರೀಕ್ಷಿಸಿದಾಗ ನಮಗೆ ಸಮಾಜದಲ್ಲಿ ಬಡ್ಡಿವ್ಯಾಪಾರಿಗಳ ಪಾತ್ರದ ಬಗೆಗಿನ ವಿವಿಧ ಪದರಗಳು ಕಾಣಸಿಗಬಹುದೇನೋ. ಇದನ್ನು ಅರ್ಥಮಾಡಿಕೊಳ್ಳಲು ನಾನು ಸಂಶೋಧನೆಯನ್ನಲ್ಲದೇ ಸಾಹಿತ್ಯದ ಪರಿಕರಗಳನ್ನೂ ಬಳಸಿಕೊಳ್ಳುತ್ತೇನೆ.

ಬೆಂಗಳೂರಿನ ಐಐಎಂನಲ್ಲಿ ಸಂಶೋಧನಾ ಫೆಲೊ ಆಗಿ ಕೆಲಸ ಮಾಡುತ್ತಿದ್ದ ಸೋಮಶೇಖರ ರೆಡ್ಡಿ ಅನಂತಪುರದ ಒಬ್ಬ ಬಡ್ಡಿವ್ಯಾಪಾರಿಯ ಲೆಕ್ಕದ ಪುಸ್ತಕಗಳನ್ನು ತಂದು ಅದನ್ನು ವಿಶ್ಲೇಷಿಸಿದ್ದರು. ದುರಾದೃಷ್ಟವಶಾತ್ ಆ ಸಂಶೋಧನೆ ಪೂರ್ಣಗೊಳ್ಳುವುದಕ್ಕೆ ಮೊದಲೇ ಸೋಮ್ ಹೃದಯಾಘಾತಕ್ಕೀಡಾದರು. ಆದರೂ ಸೋಮ್ ಬರೆದಿದ್ದ ಪೇಪರಿನ ಮೊದಲ ಆವೃತ್ತಿಯಿಂದ ಕೆಲವಾರು ಕುತೂಹಲಕಾರಿ ವಿಷಯಗಳು ನಮಗೆ ವೇದ್ಯವಾಗುತ್ತವೆ. ಅವರ ವರದಿಯಿಂದ [ಇದು ಅನಂತಪುರ ಜಿಲ್ಲೆಗೆ ಸಂಬಂಧಿಸಿದ ಒಂದು ಗ್ರಾಮದ ಕಥೆ, ಹೀಗಾಗಿ ಇದು ಎಲ್ಲೆಡೆ ವರ್ತಿಸುತ್ತದೆ ಎಂದು ನಾವು ನಂಬುವುದು ಅಸಮರ್ಪಕವಾಗುತ್ತದೆ] ನಮಗೆ ತಿಳಿಯುವುದೆಂದರೆ ಅಲ್ಲಿನ ಬಡ್ಡಿವ್ಯಾಪಾರಿಗಳು ಬರೇ ಬಡ್ಡಿವ್ಯಾಪಾರಿಗಳಾಗಿರದೇ ಮಿಕ್ಕ ವ್ಯಾಪಾರಗಳನ್ನೂ ಮಾಡುತ್ತಿದ್ದರು. ಹೀಗಾಗಿ ಅವರುಗಳು ಸಾಲ ನೀಡುತ್ತಿದ್ದುದ್ದು ತಮಗೆ ತಿಳಿದ ತಮ್ಮೊಂದಿಗೆ ಯಾವುದಾದರೂ ಆರ್ಥಿಕ ಸಂಬಂಧವಿದ್ದ ಸಂಸಾರಗಳಿಗೆ ಮಾತ್ರ. ಮಿಕ್ಕವರು ಇನ್ನೆಲ್ಲಾದರೂ ಸಾಲವನ್ನು ಪಡೆಯುತ್ತಿದ್ದರು. ಈ ಕಥೆಯೂ ನಮಗೆ ತಿಳಿದದ್ದೇ. ಆದರೆ ಬಡ್ಡಿ ವ್ಯಾಪಾರಿಗಳು ತಮ್ಮ ಸಾಲಗಾರರನ್ನು ಯಾವ ಯಾವ ರೀತಿಯಲ್ಲಿ ಹೀರಲು ಸಾಧ್ಯವೋ ಆ ಎಲ್ಲರೀತಿಯಲ್ಲೂ ಹೀರಲು ತಯಾರಿರುತ್ತಾರೆ ಅನ್ನುವ ಕಥೆಗಳನ್ನು ನಾವು ಕೇಳಿಯೇ ಇದ್ದೇವೆ.

ಆದರೆ ಸೋಮ್ ಅಧ್ಯಯನದಲ್ಲಿ ನಮಗೆ ಕಾಣಿಸುವ ಅತ್ಯಂತ ಮಹತ್ವದ ವಿಷಯವೆಂದರೆ ಈ ಬಡ್ಡಿವ್ಯಾಪಾರಿಗಳು ತಮ್ಮ ಸಾಲಗಾರರಿಗೆ ಎಷ್ಟು ಸಾಲ ನೀಡುತ್ತಿದ್ದರು ಅನ್ನುವ ಅಂಕಿ. ಅವರು ಅಧ್ಯಯನ ಮಾಡಿರುವ ೧೫೦೦ ಸಾಲಗಳಲ್ಲಿ ರೂ.೧೦,೦೦೦ ದಾಟಿದ ಸಾಲಗಳು ಕೇವಲ ಎರಡು. ರೂ. ೫೦ಕ್ಕೂ ಕಡಿಮೆ ಸಾಲ ಕೊಟ್ಟಿರುವುದು ೪೪೨ ಬಾರಿ. ಅರ್ಥಾತ್: ಈ ಸಾಲಗಳನ್ನು
ಬಡ್ಡಿವ್ಯಾಪಾರಿಯಲ್ಲದೇ ಬೇರೆ ಯಾರಾದರೂ ನೀಡಲು ಸಾಧ್ಯವಿತ್ತೇ? ಒಂದು ರೀತಿಯಲ್ಲಿ ಗ್ರಾಮೀಣ ಬಡ್ಡಿವ್ಯಾಪಾರಿ ಬಡವರ ಕ್ರೆಡಿಟ್ ಕಾರ್ಡಿನಂತೆ ವರ್ತಿಸುತ್ತಿದ್ದಾನೆ ಅನ್ನಿಸುವುದಿಲ್ಲವೇ? ಅಂದ ಹಾಗೆ ಕ್ರೆಡಿಟ್ ಕಾರ್ಡಿನ ಸಾಲಕ್ಕೆ ನಾವು ಬ್ಯಾಂಕುಗಳಿಗೆ ಕಟ್ಟಬೇಕಾದ ಬಡ್ಡಿಯನ್ನು ಲೆಕ್ಕ ಹಾಕಿದರೆ ತಿಂಗಳಿಗೆ ಎರಡು/ಮೂರು ಪ್ರತಿಶತ ಬಡ್ಡಿ ಪಡೆವ ಗ್ರಾಮೀಣ ಬಡ್ಡಿವ್ಯಾಪಾರಿ ಅಷ್ಟೇನೂ ದುಷ್ಟನಾಗಿ ಕಾಣುವುದಿಲ್ಲ.


ಸತ್ಯಂ ಶಂಕರ ಮಂಚಿ ಅನ್ನುವ ಲೇಖಕರ ಅದ್ಭುತ ಪುಸ್ತಕ ’ಅಮರಾವತಿ ಕಥಲು’ವಿನಲ್ಲಿ ಒಂದು ’ಬಾಕೀ ಸಂತಾನ’ ಅನ್ನುವ ಕಥೆಯಿದೆ. ರಂಗಯ್ಯ ಅನ್ನುವ ಬಡರೈತನ ಮೇಲೆ ತನ್ನ ತಂದೆ ಮಾಡಿದ ಸಾಲದ ಭಾರವಿದೆ. ಅದನ್ನು ವಸೂಲು ಮಾಡಲು ಅವನಿಗೆ ಸಾಲ ನೀಡಿದ ಮಾಸ್ತರು ಅವನ ದನವನ್ನು ತಂದು ತಮ್ಮ ಮನೆಯಲ್ಲಿ ಕಟ್ಟಿಹಾಕುತ್ತಾರೆ. ರಂಗಯ್ಯ ಸಿಟ್ಟಿನಿಂದ ಮಾಸ್ತರನ್ನು ಕೊಂದೇ ಬಿಡುತ್ತೇನೆ ಅನ್ನುವ ಹಾಗೆ ಬರುತ್ತಾನೆ. ಆದರೆ ಮಾಸ್ತರು ಅವನನ್ನು ಕರೆದು ಹೇಳುವ ಮಾತು "ಈ ಸಾಲ ತೀರಿದರೆ ನಿಮ್ಮಪ್ಪನ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಅಂತಷ್ಟೇ ನಾನು ನಿನ್ನ ದನವನ್ನು ತಂದೆ, ತೆಗೋ ನಿನ್ನ ಪತ್ರ, ನಿನ್ನ ಸಾಲ ಮಾಫಾಯಿತು. ಹೋಗು" ಅನ್ನುತ್ತಾನೆ. ಆಗ್ಗೆ ರಂಗಯ್ಯ ಅವನ ಕಾಲಿಗೆ ಬಿದ್ದು ತಾನಲ್ಲದಿದ್ದರೆ ತನ್ನ ಮಗನಾದರೂ ಆ ಸಾಲವನ್ನು ತೀರಿಸುವ ಶಪಥವನ್ನು ಮಾಡುತ್ತಾನೆ--- ಇದನ್ನು ನಾವು ಪರಿಶೀಲಿಸಿದಾಗ ಇಲ್ಲಿ ಶೋಷಣೆಯ ಅಂಶವಂತೂ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಅದಕ್ಕಿರುವ ಮಿತಿಯೂ ಕಾಣುವುದಿಲ್ಲವೇ? ಬಡ್ಡಿವ್ಯಾಪಾರಿ ಅದೇ ಸಮಾಜದಲ್ಲಿ ಬದುಕಬೇಕು- ಅದೇ ಜನರನ್ನು ದಿನವೂ ನೋಡಬೇಕು ಹೀಗಾಗಿ ಆತ ಒಂದು ಮಿತಿಯಲ್ಲಿ ಇರದಿದ್ದರೆ ಆತನ ಮೇಲಿನ ಸಿಟ್ಟು ಹದ್ದು ಮೀರುತ್ತದೆ ಅನ್ನುವುದನ್ನು ಮಂಚಿ ತಮ್ಮ ಕಥೆಯಲ್ಲಿ ಅದ್ಭುತವಾಗಿ ತೋರಿಸುತ್ತಾರೆ.

ಬಡ್ಡಿವ್ಯಾಪಾರಿಗಳ ಕಥೆಗಳನ್ನು ನಾವು ಕಂಡಾಗ, ಕೇಳಿದಾಗ ನಮಗೆ ಮನಸ್ಸಿಗೆ ತಟ್ಟುವುದು ಅವರುಗಳು ಎಷ್ಟು ಬಡ್ಡಿ ವಸೂಲು ಮಾಡುತ್ತಾರೆ ಅನ್ನುವ ಅಂಶ ಮಾತ್ರ. ಆದರೆ ನಮಗೆ ಅವರುಗಳ ಒಟ್ಟಾರೆ ವ್ಯಾಪಾರದ ಅಂಕಿ ಅಂಶಗಳು ಸಿಗುವುದೇ ಇಲ್ಲ. ಅವರು ಕೊಟ್ಟ ಸಾಲದಲ್ಲಿ ಬಾಕಿ ಉಳಿದು ವಸೂಲಾಗದ ಮೊತ್ತಗಳು ಎಷ್ಟಿರಬಹುದು? ಈ ಪ್ರಶ್ನೆಯನ್ನು ನಾವು ಕೇಳುವುದೇ ಇಲ್ಲ. ಕಾರಣ ಅವರು ಕೊಟ್ಟ ದುಡ್ಡೆಲ್ಲಾ ವಾಪಸ್ಸಾಗುತ್ತದೆಂದು ನಾವು ಭಾವಿಸುತ್ತೇವೆ. ಈ ಬಗ್ಗೆ ಸೋಮ್ ಅವರ ಪೇಪರು ಹೆಚ್ಚಿನ ಮಾಹಿತಿಯನ್ನು ನೀಡುವುದಿಲ್ಲ. ಆದರೆ ಎಷ್ಟೋ ಬಾರಿ ಮಂಚಿಯ ಕಥೆಯಲ್ಲಿನ ಮಾಸ್ತರರಂತೆ - ಆಯಿತು, ನಿನ್ನ ಸಾಲ ತೀರಿದಂತೆಯೇ, ಎಂದೋ, ಅಥವಾ ಕಟ್ಟಲು ಸಾಧ್ಯವಾಗದಿದ್ದರೆ ’ಪರವಾಗಿಲ್ಲ’ ಎಂದು ಸಾಲದ ಸಮಯವನ್ನು ಬೆಳೆಸುವುದನ್ನೂ ಇವರುಗಳು ಮಾಡಬಹುದು. ಆ ಬಗ್ಗೆ ನಮಗೆ ಮಾಹಿತಿ ಸಿಗುವುದು ಕಷ್ಟದ ಮಾತೇ ಆದ್ದರಿಂದ ಬಡ್ಡಿವ್ಯಾಪಾರಿಗಳ ಧಂಧೆಯನ್ನು ಮಿಕ್ಕ ಹಣಕಾಸಿನ ವ್ಯಾಪರಕ್ಕೆ ಹೋಲಿಸಿ ನೋಡುವುದೂ ಕಷ್ಟವಾಗುತ್ತದೆ.

ನಾನು ಸ್ವ ಸಹಾಯ ಗುಂಪುಗಳ ಬಗ್ಗೆ ಇತ್ತೀಚೆಗೆ ಮಾಡಿದ ಒಂದು ಅಧ್ಯಯನದಲ್ಲಿ ಈ ಗುಂಪುಗಳು ಬಡ್ಡಿವ್ಯಾಪಾರಿಗಳ ಮೇಲೆ ಏನಾದರೂ ಪರಿಣಾಮ ಬೀರಿರಬಹುದೇ ಅನ್ನುವ ಪ್ರಶ್ನೆಯನ್ನು ಪರಿಶೀಲಿಸುವುದು ಒಂದು ಭಾಗವಾಗಿತ್ತು. ಮಾಹಿತಿಯಿಂದ ನಮಗೆ ತಿಳಿದದ್ದೇನೆಂದರೆ - ಬಡ್ಡಿವ್ಯಾಪರಿಗಳ ವ್ಯಾಪಾರವೂ ಸ್ವ-ಸಾಹಯ ಗುಂಪುಗಳ ವ್ಯಾಪಾರದ ಜೊತೆಜೊತೆಗೇ ಬೆಳೆದಿದ್ದು ಒಟ್ಟಾರೆ ಆ ಮಹಿಳೆಯರು ಪಡೆದ ಸಾಲದ ಮೊತ್ತವೂ ಹೆಚ್ಚಾಗಿತ್ತು. ಇದರಿಂದ ನಾವು ಚಿಂತಿತರಾಗಬೇಕೇ? ಇಲ್ಲವೆನ್ನಿಸುತ್ತದೆ. ಒಟ್ಟಾರೆ ಈ ವರ್ಷಗಳಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿ ತುಸು ಹೆಚ್ಚಿನ ಆದಾಯ ಪಡೆದಿದ್ದ ಈ ಸಂಸಾರಗಳು ಹೆಚ್ಚಿನ ಸಾಲವನ್ನು ಪಡೆವ ಶಕ್ತಿಯನ್ನೂ ಹೊಂದಿದ್ದವು. ಸ್ವಸಹಾಯ ಗುಂಪುಗಳನ್ನು ಸೇರುತ್ತಿದ್ದಂತೆ ಮುಫತ್ತಾಗಿ ದೊರೆಯುತ್ತಿದ್ದ ಕೈಗಡ ಕೊಡುತ್ತಿದ್ದ ನೆರೆಕೆರೆಯವರು ’ನಿಮಗೆ ಈಗ ಗುಂಪಿದೆಯಲ್ಲಾ?’ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದದರಿಂದ ಆ ಕೈಗಡ ನಿಂತಿತ್ತು. ಹಾಗೂ ಸ್ವಸಹಾಯ ಗುಂಪುಗಳು ಕೆಲವೊಂದು ಉಪಯೋಗಕ್ಕೆ ಮಾತ್ರ ಸಾಲವನ್ನು ನೀಡುತ್ತಿದ್ದುವು. ಹೀಗೆ ಬಡ್ಡಿವ್ಯಾಪಾರಿ ಇವರುಗಳ ಜೀವನದಲ್ಲಿ ಅವಿನಾಭಾವ ಭಾಗವಾಗಿ ನಿಂತುಬಿಟ್ಟಿದ್ದ. ಹಾಗಾದರೆ ಗುಂಪುಗಳು ಸ್ಥಾಪಿತವಾದ್ದರಿಂದ ಪ್ರಯೋಜನವೇ ಇಲ್ಲವೇನು? ಈ ಪ್ರಶ್ನೆಗೆ ಉತ್ತರ ನಮಗೆ ಬಡ್ಡಿ ದರದಲ್ಲಿ ಕಾಣಿಸಿತು. ಮುಂಚೆ ತಿಂಗಳಿಗೆ ಸರಾಸರಿ ಮೂರು ಪ್ರತಿಶತ ಬಡ್ಡಿಕೊಡುತ್ತಿದ್ದ ಈ ಮಹಿಳೆಯರು, ಅದೇ ಬಡ್ಡಿವ್ಯಾಪಾರಿಗಳಿಗೆ ತಿಂಗಳಿಗೆ ಎರಡು ಪ್ರತಿಶತ ಬಡ್ಡಿಕೊಡುತ್ತಿದ್ದರು!

ಆ ಮಹಿಳೆಯರ ಜೊತೆ ನಾನು ಮಾತನಾಡುತ್ತಾ, ಇನ್ನೂ ಬಡ್ಡಿವ್ಯಾಪಾರಿಗಳ ಬಳಿ ಯಾಕೆ ಸಾಲ ಪಡೆಯುತ್ತಿದ್ದೀರಿ ಎಂದು ಕೆಲ ಮಹಿಳೆಯರನ್ನು ಕೇಳಿದ್ದೆ. ಅದಕ್ಕೆ ಅವರು "ಸಾರ್, ಮನೆಯಲ್ಲಿ ಮದುವೆ ಕಾರ್ಯಕ್ಕೆ ಸಾಲ ಬೇಕಾದರೆ ನಾವು ಬಡ್ಡಿವ್ಯಾಪಾರಿಗಳ ಬಳಿಗೇ ಹೋಗುತ್ತೇವೆ, ಯಾಕೆಂದರೆ ನಾವು ಗುಂಪಿನ ಬಳಿ ಇದಕ್ಕಾಗಿ ಸಾಲ ಕೇಳಲು ಹೋದರೆ ನಮಗೆ ದೊರೆಯುವುದು ಮದುವೆಯ ದುಂದಿನ ಬಗ್ಗೆ ಒಂದು ಭಾಷಣವೇ ಹೊರತು, ಹಣವಲ್ಲ" ಅಂದರು. ಈ ಬಗ್ಗೆ ನಾನು ಹೆಚ್ಚು ವಾದಿಸಲು ಹೋಗಲಿಲ್ಲ. ಕಾರಣ ಆಕೆ "ಸರ್ ನೀವು ನಿಮ್ಮ ಮದುವೆ ಎಲ್ಲಿ ಮಾಡಿಕೊಂಡಿರಿ, ಎಷ್ಟು ಖರ್ಚಾಯಿತು?" ಅನ್ನುವ ಅಣ್ವಸ್ತ್ರಗಳನ್ನು ನನ್ನಮೇಲೆ ಪ್ರಯೋಗಿಸಿದ್ದರಿಂದ, ನಮ್ಮ ಸಂಭಾಷಣೆ ಪಡೆವ ದಿಕ್ಕಿನ ಬಗ್ಗೆ ನನಗೆ ಅನುಮಾನವೇ ಇರಲಿಲ್ಲ. ಆಕೆಯ ಮಾತಿನ ಅರ್ಥವಿಷ್ಟೇ - ಬಡವರಾದ ಮಾತ್ರಕ್ಕೇ ಮದುವೆಯ ಸಂದರ್ಭದಲ್ಲಿ ಒಂದಿಷ್ಟು ಜನರಿಗೆ ಊಟ ಹಾಕಿ, ಒಂದು ಔತಣವನ್ನು ನೀಡುವುದು ’ದುಂದು’ ವೆಚ್ಚ ಎಂದು ಉಪದೇಶ ಮಾಡುವ ಹಕ್ಕು ನಮಗಾಗಲೀ, ಗುಂಪುಗಳನ್ನು ನಡೆಸುವವರಿಗಾಗಲೀ ಎಲ್ಲಿಂದ ಬಂತು ಅನ್ನುವುದನ್ನು ಆಕೆ ಕೇಳುತ್ತಿದ್ದರು. ಬಡ್ಡಿವ್ಯಾಪಾರಿಯಾದರೆ ಇಂಥ ಪ್ರಶ್ನೆಗಳನ್ನು ಕೇಳುವುದಿಲ್ಲ. ಆತನಿಗೆ ಈ ಅವಶ್ಯಕತೆಯ ಮಹತ್ವ ಗೊತ್ತು. ಹೀಗಾಗಿಯೇ:

ಹೀಗೆ ಬಡ್ಡಿವ್ಯಾಪಾರಿಗಳನ್ನು ಸುಲಭವಾಗಿ ನಾವು ತಳ್ಳಿಹಾಕುವಂತಿಲ್ಲ. ಬದಲಿಗೆ ಅವರ ಪಾತ್ರವೇನೆಂದು ಅರ್ಥಮಾಡಿಕೊಂಡು ಆ ರಾಕ್ಷಸೀ ವೃತ್ತಿಯಲ್ಲಿರಬಹುದಾದ ದೈವತ್ವವನ್ನು ನಾವು ಕಾಣಬೇಕಾಗಿದೆಯೇನೋ!!