Saturday, March 30, 2013

ಚಿಕ್ಕಸಾಲ, ಬಡತನ, ಮತ್ತು ಮಹಿಳೆಯರು: ಒಂದು ಕಥನ


ಬಡನದ ನಿರ್ಮೂಲನೆಯ ವಿಷಯಕ್ಕೆ ಬಂದಾಗ ಯಾವರೀತಿಯ ಯೋಜನೆಗಳು ಯಶಸ್ವಿಯಾಗಿರುತ್ತವೆ ಎಂದು ಹೇಳುವುದು ಕಷ್ಟದ ಮಾತು. ನಮ್ಮ ಯೋಚನೆ ಮೂಲಭೂತವಾಗಿ ಬಡವರ ಆದಾಯವನ್ನು ಹೆಚ್ಚಿಸುವದರತ್ತ ಇರಬೇಕೇ ಅಥವಾ ಅವರ ಜೀವನದಲ್ಲಿನ ಆರ್ಥಿಕ ಏರುಪೇರುಗಳನ್ನು ಕಡಿಮೆ ಮಾಡುವತ್ತ ವ್ಯೂಹವನ್ನು ರಚಿಸಬೇಕೇ ಅನ್ನುವುದು ಒಂದು ರೀತಿಯ ದ್ವಂದ್ವದ ಮಾತೇ. [ಮೈಕ್ರೊಫೈನಾನ್ಸ್] ಚಿಕ್ಕಸಾಲದ ಕಾರ್ಯಕ್ರಮಗಳು ಬಡತನವನ್ನು ಕಡಿಮೆ ಮಾಡುವತ್ತ ಕೆಲಸ ಮಾಡುತ್ತವೆ ಎನ್ನುವ ಮಾತನ್ನ ಸಾಲ ಕೊಡುವ ಪ್ರತೀ ಸಂಸ್ಥೆಯೂ ಪ್ರತಿಪಾದಿಸುತ್ತಾ ಬಂದಿದ್ದರೂ ಈ ಕಾರ್ಯಕ್ರಮದಿಂದಾಗಿ ಬಡತನದ ಮೇಲೆ ಮೂಲಭೂತವಾದ ಪರಿಣಾಮವಾಗಿದೆಯೆಂದೂ, ಎಲ್ಲಕ್ಕಿಂತ ಇದೇ ಸಶಕ್ತ ಕಾರ್ಯಕ್ರಮವೆಂದೂ ಪ್ರಶ್ನಾತೀತವಾಗಿ ನಿರೂಪಿಸಲು ಯಾವುದೇ ಅಧ್ಯಯನಕ್ಕೆ ಸಾಧ್ಯವಾಗಿಲ್ಲ.


ಹಾಗಾದರೆ ಈ ಕಾರ್ಯಕ್ರಮಗಳು ವ್ಯರ್ಥವೇ? ಏನೂ ಪ್ರಯೋಜನವಿಲ್ಲವೆಂದರೆ, ಇತರರ ಜೀವನವನ್ನು ಉದ್ಧಾರ ಮಾಡುತ್ತಿದ್ದೇವೆಂದೇ ಜೀವಿಸುತ್ತಿರುವ ಈ ವೃತ್ತಿಪರರ ಜೀವನೋಪಾಯಕ್ಕೇನಾಗಬೇಕು? ಡೆವಲಪ್‍ಮೆಂಟ್ ಫೈನಾನ್ಸ್ ನೆಟ್‍ವರ್ಕ್ ಅನ್ನುವ ಒಂದು ಚರ್ಚಾಕೂಟದಲ್ಲಿ ಈ ಚರ್ಚೆ ಈಮೈಲಿನ ಮೂಲಕ ನಡೆಯುತ್ತಿದೆ. ಕಾರ್ಯಕ್ರಮಗಳನ್ನು ನಡೆಸುವವರು ತಮಗೆ ಅನುಕೂಲವಾಗುವಂತೆ ಯಾವುದಾದರೂ ಒಂದು ಮಹಿಳೆಯ ಕಥೆಯನ್ನು ಹೇಳಿ ಯಶೋಗಾಥೆಯ ಪುರಾವೆಯನ್ನೊದಗಿಸಿಬಿಡುತ್ತಾರೆ. ಆದರೆ ಪ್ರತೀ ಯಶೋಗಾಥೆಯ ಹಿಂದೆ ನಮಗೆ ಕಾಣಿಸದ ಎಷ್ಟೋ ವೈಫಲ್ಯಗಳೂ ಇರುತ್ತವೆ, ಹಾಗೂ ಆ ಕಥೆಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲವೆನ್ನುವುದನ್ನೂ ನಾವು ಮನಗಾಣಬೇಕಾಗಿದೆ.

ಬಡತನದ ಮೇಲೆ ಯಾವುದೇ ಪ್ರಭಾವವಿಲ್ಲವೆಂದರೂ ಪ್ರಪಂಚದಾದ್ಯಂತ ಬಡವರು ಚಿಕ್ಕಸಾಲದ ಕಾರ್ಯಕ್ರಮಗಳನ್ನು ತಮ್ಮದಾಗಿಸಿಕೊಂಡು ಸಾಲವನ್ನು ಪಡೆದು ಮರುಪಾವತಿ ಮಾಡುತ್ತಿದ್ದಾರೆದರೆ ಅದರಲ್ಲೂ ಅರ್ಥವಿರಬೇಕು. ವಿಶ್ವದಾದ್ಯಂತ ಇರುವ ಚಿಕ್ಕಸಾಲದ ಕಾರ್ಯಕ್ರಮಗಳಲ್ಲಿ ತುಂಬಾ ಭಿನ್ನತೆಯಿದೆ. ಮೂಲಭೂತವಾಗಿ ಬಾಂಗ್ಲಾದೇಶ, ಭಾರತ್, ಪಾಕಿಸ್ತಾನದ ಕಾರ್ಯಕ್ರಮಗಳು ಮಹಿಳಾಪರ ಕಾರ್ಯಕ್ರಮಗಳು. ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ಹಾಗೂ ಲ್ಯಾಟಿನ್ ಅಮೆರಿಕಾ ಪ್ರಾಂತದ ಕಾರ್ಯಕ್ರಮಗಳು ಪುರುಷ ಪ್ರಧಾನವಾದುವು. ಈ ಭಿನ್ನತೆಯಲ್ಲಿ ಮತ್ತೂ ಒಂದು ಅಂಶವನ್ನು ನಾವು ಕಾಣಬಹುದು. ಕೃಷಿಪ್ರಧಾನವಾದ ಕ್ಷೇತ್ರಗಳಲ್ಲಿ ಮಹಿಳೆಯರ ಚಿಕ್ಕಸಾಲದ ಕಾರ್ಯಕ್ರಮಗಳು ಹೆಚ್ಚಾಗಿ ಇವೆ. ಮಹಿಳಾಕೇಂದ್ರಿತವಾದ ಈ ಕಾರ್ಯಕ್ರಮಗಳಲ್ಲಿ ಗುಂಪುಗಳ ಪಾತ್ರವೂ ಪ್ರಮುಖವಾದದ್ದು. ಪುರುಷಕೇಂದ್ರಿತ ಚಿಕ್ಕಸಾಲದ ಕಾರ್ಯಕ್ರಮಗಳಲ್ಲಿ ನಮಗೆ ಗುಂಪುಗಳ ಪಾತ್ರ ಅಷ್ಟು ಮುಖ್ಯವಾಗಿ ಕಾಣಿಸುವುದಿಲ್ಲ. ಈ ಭಿನ್ನತೆಯಿಂದ ನಾವೇನಾದರೂ ಒಳನೋಟಗಳನ್ನು ಪಡೆಯಬಹುದೇ?

ಈ ಎಲ್ಲ ಅಂಶಗಳನ್ನೂ ಮನಸ್ಸಿನಲ್ಲಿಟ್ಟುಕೊಂಡು ಯೋಚನೆ ಮಾಡಿದಾಗ ನಮ್ಮ ಪ್ರಾಂತದ ಚಿಕ್ಕಸಾಲದ ಕಾರ್ಯಕ್ರಮ ಈ ರೀತಿ ಬೆಳವಣಿಗೆಯಾದದ್ದಕ್ಕೆ ಒಂದು ಗಮ್ಮತ್ತಿನ ಕಥೆಯನ್ನ ಕಟ್ಟಬಹುದೇನೋ.. [ಇದು ವಾಸ್ತವವೆಂದು ನಿರೂಪಿಸಲು ಗಟ್ಟಿಯಾದ ಮಾಹಿತಿಯಿಲ್ಲವಾದ್ದರಿಂದ, ಇದನ್ನು ಕಥೆಯೆಂದೇ ಪರಿಗಣಿಸಬೇಕಾಗುತ್ತದೆ]. ಕಥೆ ಹೀಗಿರಬಹುದು:

ಪುರುಷರಿಗೆ ’ಚಿಕ್ಕ’ ಸಾಲದಲ್ಲಿ ಆಸಕ್ತಿಯಿಲ್ಲ. ಕಾರಣವೇನಿರಬಹುದು?

೧. ಕೃಷಿಯೇ ಪ್ರಧಾನವಾದ ಕೆಲಸವಾದರೆ - ಅದಕ್ಕೂ ಚಿಕ್ಕಸಾಲಕ್ಕೂ ಒಳ್ಳೆಯ ನಂಟನ್ನು ಹಚ್ಚುವುದು ಕಷ್ಟ. ಕೃಷಿಯಲ್ಲಿ ಉತ್ತುವುದರಿಂದಾದಿಯಾಗಿ  ಫಲಸನ್ನು ಮಾರಾಟಮಾಡುವವರೆಗೂ ನಮಗೆ ಖರ್ಚೇ ಕಾಣಿಸುತ್ತದೆ. ಆ ಕಾಲದಲ್ಲಿ ಕೃಷಿಯಿಂದ ಯಾವುದೇ ಆದಾಯ ಬರುವುದಿಲ್ಲ. ಚಿಕ್ಕ ಸಾಲದ ನಿಯಮಾವಳಿಯ ಪ್ರಕಾರ, ಒಂದು ಸಾಲ ಕೊಟ್ಟರೆ ಅದನ್ನು ಮುಂದಿನ ವಾರ/ತಿಂಗಳಿನಿಂದ ಮರುಪಾವತಿ ಮಾಡುವುದು ಅನಿವಾರ್ಯ. ಹೀಗಾಗಿ ಕೃಷಿಯ ವಿತ್ತೀಯ ಹರಿವಿಗೂ ಚಿಕ್ಕಸಾಲದ ನಿರೀಕ್ಷೆಗೂ ತಾಳೆಯಿಲ್ಲ. ಪುರುಷ ಪ್ರಧಾನವಾದ ಕೃಷಿಗೆ ಇದು ತಕ್ಕ ಸಾಲವಲ್ಲ.

೨. ಚಿಕ್ಕ ಸಾಲದ ಮೊತ್ತಗಳ ಮೂರು ಸಾವಿರದಿಂದ ಆರಂಭವಾಗಿ ಕ್ರಮಕ್ರಮೇಣ ಬೆಳೆದು ಹತ್ತುಸಾವಿರದ ವರೆಗೂ ಹೋಗಬಹುದು. ಈ ಮೊತ್ತ ಪುರುಷರ ’ಕನಸು’ಗಳಿಗೆ ’ಆಶಯ’ಕ್ಕೆ ತೀರಾ ಕಡಿಮೆಯಿರಬಹುದು. ಮಾಡಿದರೆ ದೊಡ್ಡ ಧಂಧೆ ಮಾಡಬೇಕು - ಈ ಪುಟ್ಟಪುಟ್ಟ ವ್ಯಾಪಾರದಿಂದ ಕೊಳ್ಳೆ ಹಾಕುವುದು ಏನು ಅನ್ನುವ ಪ್ರಶ್ನೆ ಅವರುಗಳ ಮನಸ್ಸಿನಲ್ಲಿ ಇರಬಹುದು. ಜೊತೆಗೆ ಇಷ್ಟು ಪುಟ್ಟ ಮೊತ್ತಕ್ಕೆ ಪ್ರತೀ ವಾರ ಸಭೆಗೆ ಹಾಜರಾಗುವುದು, ಪ್ರಾರ್ಥನೆ ಮಾಡುವುದು, ಲೆಕ್ಕ ಇಡುವುದು - ಇತ್ಯಾದಿ ತಲೆ ಶೂಲೆಯ ಕೆಲಸವನ್ನು ಯಾಕೆ ಮಾಡಬೇಕು ಎನ್ನುತ್ತಲೇ ಪುರುಷರು ಬೀಡಿ ಬೆಳಗಿಸಬಹುದು.

ಮಹಿಳೆಯರಿಗೆ ಚಿಕ್ಕಸಾಲದಲ್ಲಿ ಸಾಕಷ್ಟು ಆಸಕ್ತಿಯಿರುವಂತೆ ಕಾಣುತ್ತದೆ. ಕಾರಣವೇನಿರಬಹುದು?

೧. ಸಂಸಾರದಲ್ಲಿ ಮಹಿಳೆಯರ ಮೂಲಭೂತವಾಗಿ ’ಹೆಂಡತಿ’ ಮತು ’ತಾಯಿ’ಯ ಪಾತ್ರಗಳ ಸುತ್ತಲೂ ಭ್ರಮಣ ಮಾಡುತ್ತದೆ. [ನಾನು ಈ ಮಾತನ್ನು ಸ್ಟೀರಿಯೋಟೈಪ್ ಮಾಡಿ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದ್ದೇನೆಂದು ಸ್ತ್ರೀವಾದಿಗಳು ಅನ್ನಬಹುದು, ಆದರೆ ನಾನು ಚಿಕ್ಕಸಾಲದ ಮಹಿಳಾಪರತೆಗೆ ಒಂದು ಕಾರಣವನ್ನು ಹುಡುಕುತ್ತಿದ್ದೇನೆಯೇ ಹೊರತು ಮಹಿಳೆಯರು ಈ ಎರಡೂ ಪಾತ್ರಕ್ಕೆ ಸೀಮಿತರಾಗಬೇಕೆದು ಪ್ರತಿಪಾದಿಸುತ್ತಿಲ್ಲ.] ಗ್ರಾಮೀಣ ಮಹಿಳೆಯರ ಪಾತ್ರ ಚಾರಿತ್ರಿಕವಾಗಿ ಅವರನ್ನು ಮನೆಯೊಳಕ್ಕೇ ಕೂಡಿಹಾಕಿರುತ್ವುತದೆ. ಮನೆಯಿಂದ ಹೊರಬಂದು ಗುಂಪಿನ ಸಭೆಯಲ್ಲಿ ಪಾಲ್ಗೊಳ್ಳುವುದನ್ನು ಒಂದು ವಿತ್ತೀಯ ಅವಶ್ಯಕತೆಯೆಂದೇ ಸೀಮಿತವಾಗಿ ನೋಡುವುದು ಸಮರ್ಪಕವಾದ ದೃಷ್ಟಿಯಲ್ಲ. ಇದು ಮಿಕ್ಕ ಮಹಿಳೆಯರನ್ನು ಭೇಟಿಮಾಡುವ ಸಾಮಾಜಿಕ ಅವಶ್ಯಕತೆಯೂ ಆಗುವುದು. ಹೀಗಾಗಿ ಮಹಿಳೆಯರು ಬಹುಶಃ ಖುಷಿಯಿಂದಲೇ ತಮ್ಮ ಗುಂಪಿನ ಸಭೆಗೆ ಬರುತ್ತಾರೇನೋ. [ಪುರುಷರು ದಿನವೂ ಗಡುಂಗಿನಲ್ಲಿ ಸಭೆ ಸೇರುವುದರಿಂದ ಅವರಿಗೆ ಹೀಗೆ ಸಭೆ ಸೇರುವ ಅವಶ್ಯಕತೆಯಿಲ್ಲದಿರಬಹುದು!!]

೨. ಪುಟ್ಟ ಮೊತ್ತದ ವಿತ್ತೀಯ ಒತ್ತಡಗಳು ಯಾವಾಗಲೂ ಮಹಿಳೆಯ ಮೇಲೆಯೇ ಬೀಳುತ್ತವೆ - ಸಂಜೆಗೆ ತರಕಾರಿ, ಮಗುವಿನ ಶಾಲೆಗೆ ಬೇಕಾದ ಪೆನ್ನು, ತಕ್ಷ್ಣಣಕ್ಕೆ ಬೇಕಾದ ಒಂದಿಷ್ಟು ಎಣ್ಣೆ - ಹೀಗೆ ಚಿಲ್ಲರೆ ಕಾಸನ್ನು ಹೀರುವ ಚಟುವಟಿಕೆಗಳು ಅನೇಕ.

೩. ಮನೆಯಲ್ಲಿ ಇರುವ, ಆಗಾಗ ಕೂಲಿಗೆ ಹೋಗುವ ಮಹಿಳೆಯರಿಗೆ ತಮ್ಮ ಸಮಯದ ನಡುವೆ ಆದಾಯ ಆರ್ಜಿಸುವ ಪುಟ್ಟ ವ್ಯಾಪಾರವನ್ನು ಮಾಡುವುದು ಸಾಧ್ಯವಾಗಬಹುದು. ಅದು ಒಂದು ಎಮ್ಮೆಯನ್ನು ಹಿತ್ತಲಲ್ಲಿ ಕಟ್ಟುವುದಿರಬಹುದು, ಮನೆಯ ಮುಂಭಾಗದಲ್ಲಿ ಒಂದು ಪುಟ್ಟ ಕಿರಾಣೆಯಂಗಡಿಯನ್ನು ಹಾಕುವುದಿರಬಹುದು ಅಥವಾ ಒಂದು ಟೀ ಅಂಗಡಿಯನ್ನು ನಡೆಸುವುದಿರಬಹುದು, ಒಂದು ಯಂತ್ರವನ್ನು ಕೊಂಡು ಹೊಲಿಗೆ ಕೆಲಸ ಮಾಡುವುದಿರಬಹುದು. ಈ ರೀತಿಯಾದ ಪುಟ್ಟ ಪಾರ್ಟ್ ಟೈಂ ಕೆಲಸಕ್ಕೆ ಚಿಕ್ಕಸಾಲದ ಮೊತ್ತಗಳು ಪುಟ್ಟ ಹೂಡಿಕೆಯಾಗಿ ಮಹಿಳೆಯರಿಗೆ ಸಹಾಯಕವಾಗಿ ಬರಬಹುದು.

ನಾವು ಮೇಲಿನ ಅಂಶವನ್ನು ಪರಿಶೀಲಿಸಿದಾಗ ಒಂದು ಅಂಶ ನಮಗೆ ವೇದ್ಯವಾಗುತ್ತದೆ. ಅದೆಂದರೆ: ಚಿಕ್ಕಸಾಲದಿಂದಾಗಿ ಬಡತನ ನಿರ್ಮೂಲನವಾಗುವುದು ದೂರದ ಕನಸೇ ಇರಬಹುದು. ಹತ್ತು ಸಾವಿರ ರೂಪಾಯಿಗಳ ಸಾಲದಿಂದ, ಅದಕ್ಕೆ ಸರಾಸರಿ ತಿಂಗಳಿಗೆರಡು ಪ್ರತಿಶತ ಬಡ್ಡಿ ಕಟ್ಟುತ್ತಾ, ಕಿಸ್ತನ್ನೂ ತೀರಿಸುತ್ತಾ ನಡೆಸುವ ವ್ಯಾಪಾರಿದಿಂದ - ಆ ವ್ಯಾಪಾರ ಯಾವುದೇ ಆಗಿರಲಿ - ಎಷ್ಟು ಮಹಾ ಆದಾಯ ಬರಬಹುದು, ಆ ಆದಾಯವನ್ನು ದೈನಿಕ ಆದಾಯಕ್ಕೆ ಪರಿವರ್ತಿಸಿದರೆ ಪ್ರಸ್ತುತ ಪರಿಸ್ಥಿತಿಗಿಂತ ಎಷ್ಟು ಭಿನ್ನ ಹಾಗೂ ಅಧಿಕವಾಗಿರಬಹುದು. ಆ ಆದಾಯದಿಂದ ಎಷ್ಟು ಮಾತ್ರ ಬಡತನ ದೂರವಾಗಬಹುದು?

ಹಾಗಾದರೆ ಇದರಿಂದ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲವಾದರೆ, ವಿಶ್ವದಾದ್ಯಂತ ಚಿಕ್ಕಸಾಲದ ಯಶೋಗಾಥೆಗಳು ಬಳೆಯಲು ಕಾರಣವೇನಿರಬಹುದು? ಸ್ವಲ್ಪ ಆಲೋಚಿಸಿದರೆ ನಾವು ಈ ರೀತಿಯಾದ ಕಥೆಯನ್ನು ಕಟ್ಟಬಹುದು:

ಮೂಲತಃ ಚಿಕ್ಕಸಾಲವೆನ್ನುವುದು ಅರ್ಥಶಾಸ್ತ್ರದಲ್ಲಿ ಹಾಗಂತ ಕರೆಯುವ ಒಂದುಸಪ್ಲೈ ಸೈಡ್ ಪರಿಹಾರ. ಅಂದರೆ, ಅಲ್ಲಿ ಸಮಸ್ಯೆ ಏನು ಅನ್ನುವುದು ಮುಖ್ಯವಾಗದೇ ಪರಿಹಾರವೇ ಸಮಸ್ಯೆಯನ್ನು ಹುಡುಕಿ ಹೊರಡುವ ಒಂದು ವಿಚಿತ್ರ ಪರಿ! ಇನ್ನಷ್ಟು ವಿವರಿಸಬೇಕೆಂದರೆ ಹೀಗೆ ಯೋಚಿಸೋಣ. ಒಂದು ಬಡ ಸಂಸಾರದಲ್ಲಿರುವ ಗ್ರಾಮೀಣ ಮಹಿಳೆ ತನ್ನ ಜೀವನವನ್ನು ತಾನು ಯಥಾರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಳು. ಒಂದು ಮುಂಜಾನೆ ಯಾರೋ ಬಂದು "ಸಾಲ ಬೇಕೇ ಸಾಲ?" ಎಂದು ಕೇಳಿದರು. ಅಲ್ಲಿಯವರೆಗೆ ತಾನು ಸಾಲವನ್ನು ಪಡೆಯಬಹುದೆಂದಾಗಲೀ ಯಾರಾದರೂ ತನಗೆ ಸಾಲ ಕೊಡಬಹುದೆಂದಾಗಲೀ ಆಕೆ ಊಹಿಸಿಯೇ ಇರಲಿಲ್ಲ. ಹೀಗಾಗಿ ಆಕೆಯ ಮನಸ್ಸಿನಲ್ಲಿ ಸಾಲ - ಚಿಕ್ಕಸಾಲವಾದರೂ ಸರಿಯೇ - ಪಡೆಯುವುದು ಒಂದು ಪರಿಹಾರವಾಗಿ ಕಾಣಲಿಲ್ಲ. ಆದರೆ ಈಗ ಇದ್ದಕ್ಕಿದ್ದ ಹಾಗೆ ಈ ಕಿಟಕಿ ತೆರೆದುಕೊಳ್ಳುತ್ತಿದೆ. ಸಾಲದ ಮೊತ್ತ ದೊಡ್ಡದಾಗಿ ಕಾಣುತ್ತಿಲ್ಲ. ವಾರಕ್ಕೆ ಕಟ್ಟಬೇಕಾದ ಕಿಸ್ತನ್ನು ಯಾವರೀತಿಯಲ್ಲಿ ಕಟ್ಟಬಹುದು ಅನ್ನುವುದನ್ನ ಯೋಚಿಸಿದರೆ ಈ ಸಾಲವನ್ನು ಆಕೆ ಪಡೆಯಬಹುದು!

ಕೃಷಿಯೇ ಪ್ರಧಾನವಾಗಿರುವ ಗ್ರಾಮೀಣ ಪ್ರಾಂತದಲ್ಲಿ ಕುಯಿಲಿನ ಕಾಲಕ್ಕೆ ಹಣದ ಚಾಲನೆ ಹೆಚ್ಚಾಗುತ್ತದೆ. ಎಲ್ಲರೂ ಹೊಸ ಬಟ್ಟೆಗಳನ್ನೂ ದೊಡ್ಡ ಖರ್ಚುಗಳನ್ನೂ ಆಗ ಮಾಡುತ್ತಾರೆ. ಮಿಕ್ಕಂತೆ ಅಲ್ಲಿ ಹಣದ ಚಾಲನೆ [ಕೃಷಿಯನ್ನಧಾರಿಸದ] ನಗರ ಪ್ರಾಂತಕ್ಕಿಂತ ಕಡಿಮೆ ಎಂದೇ ಹೇಳಬೇಕು. ಆ ಅಂಥ ಪ್ರಾಂತದಲ್ಲಿ, ವರುಷಕ್ಕೆರಡು ಬಾರಿ ಮಾತ್ರ ಧನದರ್ಶನವಾಗಬಹುದಾದ ಮಹಿಳೆಯ ಕೈಯಿಗೆ - ಮೊಬಲಗು ಚಿಕ್ಕದಾದರೂ - ಪ್ರತೀ ವಾರ ಹಣವನ್ನು ಹಾಕುವ, ಅದನ್ನು ಎಣಿಸುವ, ವಾಪಸ್ಸು ಮಾಡುವ ಪ್ರಕ್ರಿಯೆಯನ್ನು ಚಿಕ್ಕ ಸಾಲ ಅನುಮಾಡಿದೆ. ಇದರಿಂದ ಬಡತನ ನಿರ್ಮೂಲನವಗಿದೆಯೇ - ಇಲ್ಲ. ಕಡಿಮೆಯಾಗಿದೆಯೇ - ಇಲ್ಲ.

ಆದರೆ ಪ್ರತಿವಾರವೂ ತನ್ನ ಕೈಯಿಂದ ತನ್ನದೇ ಆದಾಯದಿಂದ ಹಣ ಓಡಾಡುತ್ತಿರುವುದನ್ನು ಕಂಡ ಮಹಿಳೆಯ ಆತ್ಮಬಲ ಇದರಿಂದಾಗಿ ಹೆಚ್ಚಾಗಿದೆಯೇ? ಹೌದಲ್ಲವೇ. ದಿನನಿತ್ಯ ಧನದರ್ಶನವಾಗುವುದರಿಂದ ಜೀವನದಲ್ಲಿನ ಸಣ್ಣಪುಟ್ಟ ಏರುಪೇರುಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆಯೇ? ಸಂಜೆಗೆ ತರಕಾರಿ, ಮಗುವಿನ ಶಾಲೆಗೆ ಬೇಕಾದ ಪೆನ್ನು, ತಕ್ಷ್ಣಣಕ್ಕೆ ಬೇಕಾದ ಒಂದಿಷ್ಟು ಎಣ್ಣೆ - ಹೀಗೆ ಚಿಲ್ಲರೆ ಕಾಸನ್ನು ಹೀರುವ ಚಟುವಟಿಕೆಗಳಿಗೆ ತನ್ನ ಬಳಿ ಕಾಸಿದೆಯೇ... ಈ ಪ್ರಶ್ನೆಗೆ ಉತ್ತರ ಹೌದೆಂದಾದರೆ, ಬಹುಶಃ ಚಿಕ್ಕಸಾಲ ಬಡವರ ಬದುಕಿನಲ್ಲಿ ತಂದಿರಬಹುದಾದ ಚಿಕ್ಕ ಬದಲಾವಣೆಯ ಮಹತ್ವ ನಮಗೆ ಅರ್ಥವಾಗಬಹುದು.

ಹಾಗಾದರೆ ಪುರುಷರೇ ಪ್ರಧಾನವಾಗಿರುವ ಕೃಷಿಯೇತರ ಪ್ರಾಂತಗಳಲ್ಲಿನ ಚಿಕ್ಕಸಾಲದ ಯಶೋಗಾಥೆಯ ಹಿಂದಿನ ಕಥೆಯೇನಿರಬಹುದು. ಅದೃಷ್ಟವಶಾತ್ ಆ ಪ್ರಶ್ನೆ ಕೇಳುವ ವೇಳೆಗೆ ನನ್ನ ಬರವಣಿಗೆಯ ಪದಮಿತಿ ಮುಗಿಯುತ್ತದೆ. ಆ ಪರಿಸ್ಥಿತಿಯನ್ನು ಭಿನ್ನವಾಗಿಯೇ ಅರ್ಥೈಸಬೇಕಾಗುತ್ತದೆ. ಅದು ಮತ್ತೊಂದು ಬಾರಿ!

ನವಂಬರ್ ೨೦೦೯




ಬಡ್ಡಿವ್ಯಾಪಾರಿಗಳ ಕಥೆಗಳು

ಗ್ರಾಮೀಣ ಪ್ರದೇಶಗಳಲ್ಲಿನ ಬಡ್ಡಿವ್ಯಾಪಾರಿಗಳೆಂದರೆ ನಮ್ಮ ಮನಸ್ಸಿಗೆ ಯಾವ ಚಿತ್ರ ಬರುತ್ತದೆ? ಬಡ್ಡಿವ್ಯಾಪಾರಿಗಳೆಂದರೆ ದುಷ್ಟರು, ಶೋಷಕರು, ಬಡವರ ಜಮೀನನ್ನು ಒತ್ತುವರಿಮಾಡಿಕೊಳ್ಳುವವರು, ಹಾಗೂ ನಾನಾ ರೀತಿಯಲ್ಲಿ ಹಿಂಸಿಸುವ ಹೃದಯಹೀನರು ಅನ್ನುವ ಚಿತ್ರ ನಮ್ಮ ಮನಸ್ಸಿನಲ್ಲಿ ಬಂದರೆ ಅದು ಆಶ್ಚರ್ಯವನ್ನು ಉಂಟುಮಾಡಬಾರದು. ನಾನು ಪುಟ್ಟವನಾಗಿದ್ದಾಗಿನಿಂದಲೂ ಓದಿದ ಸಾಹಿತ್ಯ, ಕಂಡ ಸಿನೇಮಾ ಹಾಗೂ ಬೆಳೆದು ನಿಂತಾಗ ಓದಿದ ಬೌದ್ಧಿಕ ಬರಹಗಳೆಲ್ಲ ಈ ಚಿತ್ರವನ್ನು ನಮ್ಮ ಮುಂದಿಡುವುದರಲ್ಲಿ ಸಫಲವಾಗಿದ್ದುವು. ಇದೂ ಸಾಲದೆಂಬಂತೆ, ಸರಕಾರ ಯಾವುದೇ ಯೋಜನೆಯನ್ನು ರೂಪಿಸುವಾಗ ನಮಗೆ "ಬಡವರನ್ನು ಸಾಲಮುಕ್ತರನ್ನಾಗಿ ಮಾಡುವುದೂ", "ಬಡ್ಡಿವ್ಯಾಪಾರಿಗಳ ಹಿಡಿತದಿಂದ ಬಿಡಿಸುವುದೂ" ಮುಖ್ಯ ಕಾರ್ಯಕ್ರಮಗಳಾಗಿ ಕಾಣುತ್ತಿದ್ದುವು.


ಗ್ರಾಮೀಣ ಪ್ರಾಂತದಲ್ಲಿ ಅನೇಕ ವರ್ಷಗಳಿಂದ ಓಡಾಡುತ್ತಿರುವ ನನಗೆ ಒಬ್ಬ ಬಡ್ಡಿವ್ಯಾಪಾರಿಯೂ ಕಂಡಿಲ್ಲ. ಕಿರಾಣೆಯಂಗಡಿಯವರನ್ನು, ಸರಪಂಚರನ್ನೂ, ಗ್ರಾಮ ಲೆಕ್ಕಿಗನನ್ನು, ದೇವಸ್ಥಾನದ ಅರ್ಚಕರನ್ನೂ, ಸ್ಕೂಲು ಮಾಸ್ತರುಗಳನ್ನೂ ಭೇಟಿಯಾಗಿರುವ ನನಗೆ ಯಾರೂ, ’ನಾನು ಈ ಗ್ರಾಮದ ಬಡ್ಡಿವ್ಯಾಪಾರಿ’ ಎಂದು ಪರಿಚಯಿಸಿಕೊಂಡ ಕಾರ್ಡು ಕೊಟ್ಟ ಅನುಭವವಿಲ್ಲ. ಹಾಗೆಂದು ಬಡ್ಡಿವ್ಯಾಪಾರಿಗಳು ನಮ್ಮ ಊಹೆಯಲ್ಲಿ ಮಾತ್ರವಿರುವ ರಾಕ್ಷಸರು ಎಂದು ನಾನೇನೂ ವಾದಿಸ ಹೊರಟಿಲ್ಲ. ಆದರೆ ಬಡ್ಡಿವ್ಯಾಪಾರಿಗಳು ತಮ್ಮ ಸಮಾಜದಲ್ಲಿ ಯಾವ ಭೂಮಿಕೆಯನ್ನು ನಿರ್ವಹಿಸುತ್ತಿರಬಹುದು ಅನ್ನುವ ಕುತೂಹಲವನ್ನು ನಾವು ಪರಿಹರಿಸಿಕೊಳ್ಳಲು ಸಾಧ್ಯವಾಗಬಹುದೇ? ಈಗಲೂ ಸ್ವ-ಸಹಾಯ ಗುಂಪುಗಳಲ್ಲಿ ಶಾಮೀಲಾಗಿರುವ ಮಹಿಳೆಯರನ್ನು ಮಾತನಾಡಿಸಿದರೆ ಅವರುಗಳು ಬಡ್ಡಿವ್ಯಾಪಾರಿಗಳಿಂದ ಸಾಲ ಪಡೆಯುತ್ತಿದ್ದ, ಅದಕ್ಕೆ ಅವರುಗಳು ಕಟ್ಟುತ್ತಿದ್ದ ಬಡ್ಡಿಯ ಕಥೆಗಳನ್ನು ನಮಗೆ ಕಣ್ಣೀರು ಬರುವಂತೆ ವಿವರಿಸುತ್ತಾರೆ.

ಬಡ್ಡಿವ್ಯಾಪಾರಿಗಳು ಇಷ್ಟು ದುಷ್ಟರಾದರೆ ಅವರು ಹೇಗೆ ಇನ್ನೂ ವ್ಯಾಪಾರವನ್ನು ನಡೆಸುತ್ತಿದ್ದಾರೆ? ಅವರು ಬಡ್ಡಿವ್ಯಾಪಾರದಿಂದ ಅಷ್ಟೊಂದು ಹಣವನ್ನು ಸಂಪಾದಿಸುವುದೇ ಆಗಿದ್ದರೆ ನಮಗೆ ಗ್ರಾಮೀಣ ಪ್ರಾಂತದಲ್ಲಿ ಈ ವ್ಯಾಪಾರ ಮಾಡಿ ದೊಡ್ಡ ವ್ಯಾಪಾರಿಯಾಗಿ ಒಂದು ಬ್ಯಾಂಕಿನ/ಕಂಪನಿಯ ಸ್ಥರಕ್ಕೆ ಬೆಳೆದ ಬಡ್ಡಿವ್ಯಾಪಾರಿಗಳು ಯಾಕೆ ಕಾಣಸಿಗುವುದಿಲ್ಲ? ಈ ರೀತಿಯ ಪ್ರಶ್ನೆಗಳನ್ನು ನಾವು ಪರೀಕ್ಷಿಸಿದಾಗ ನಮಗೆ ಸಮಾಜದಲ್ಲಿ ಬಡ್ಡಿವ್ಯಾಪಾರಿಗಳ ಪಾತ್ರದ ಬಗೆಗಿನ ವಿವಿಧ ಪದರಗಳು ಕಾಣಸಿಗಬಹುದೇನೋ. ಇದನ್ನು ಅರ್ಥಮಾಡಿಕೊಳ್ಳಲು ನಾನು ಸಂಶೋಧನೆಯನ್ನಲ್ಲದೇ ಸಾಹಿತ್ಯದ ಪರಿಕರಗಳನ್ನೂ ಬಳಸಿಕೊಳ್ಳುತ್ತೇನೆ.

ಬೆಂಗಳೂರಿನ ಐಐಎಂನಲ್ಲಿ ಸಂಶೋಧನಾ ಫೆಲೊ ಆಗಿ ಕೆಲಸ ಮಾಡುತ್ತಿದ್ದ ಸೋಮಶೇಖರ ರೆಡ್ಡಿ ಅನಂತಪುರದ ಒಬ್ಬ ಬಡ್ಡಿವ್ಯಾಪಾರಿಯ ಲೆಕ್ಕದ ಪುಸ್ತಕಗಳನ್ನು ತಂದು ಅದನ್ನು ವಿಶ್ಲೇಷಿಸಿದ್ದರು. ದುರಾದೃಷ್ಟವಶಾತ್ ಆ ಸಂಶೋಧನೆ ಪೂರ್ಣಗೊಳ್ಳುವುದಕ್ಕೆ ಮೊದಲೇ ಸೋಮ್ ಹೃದಯಾಘಾತಕ್ಕೀಡಾದರು. ಆದರೂ ಸೋಮ್ ಬರೆದಿದ್ದ ಪೇಪರಿನ ಮೊದಲ ಆವೃತ್ತಿಯಿಂದ ಕೆಲವಾರು ಕುತೂಹಲಕಾರಿ ವಿಷಯಗಳು ನಮಗೆ ವೇದ್ಯವಾಗುತ್ತವೆ. ಅವರ ವರದಿಯಿಂದ [ಇದು ಅನಂತಪುರ ಜಿಲ್ಲೆಗೆ ಸಂಬಂಧಿಸಿದ ಒಂದು ಗ್ರಾಮದ ಕಥೆ, ಹೀಗಾಗಿ ಇದು ಎಲ್ಲೆಡೆ ವರ್ತಿಸುತ್ತದೆ ಎಂದು ನಾವು ನಂಬುವುದು ಅಸಮರ್ಪಕವಾಗುತ್ತದೆ] ನಮಗೆ ತಿಳಿಯುವುದೆಂದರೆ ಅಲ್ಲಿನ ಬಡ್ಡಿವ್ಯಾಪಾರಿಗಳು ಬರೇ ಬಡ್ಡಿವ್ಯಾಪಾರಿಗಳಾಗಿರದೇ ಮಿಕ್ಕ ವ್ಯಾಪಾರಗಳನ್ನೂ ಮಾಡುತ್ತಿದ್ದರು. ಹೀಗಾಗಿ ಅವರುಗಳು ಸಾಲ ನೀಡುತ್ತಿದ್ದುದ್ದು ತಮಗೆ ತಿಳಿದ ತಮ್ಮೊಂದಿಗೆ ಯಾವುದಾದರೂ ಆರ್ಥಿಕ ಸಂಬಂಧವಿದ್ದ ಸಂಸಾರಗಳಿಗೆ ಮಾತ್ರ. ಮಿಕ್ಕವರು ಇನ್ನೆಲ್ಲಾದರೂ ಸಾಲವನ್ನು ಪಡೆಯುತ್ತಿದ್ದರು. ಈ ಕಥೆಯೂ ನಮಗೆ ತಿಳಿದದ್ದೇ. ಆದರೆ ಬಡ್ಡಿ ವ್ಯಾಪಾರಿಗಳು ತಮ್ಮ ಸಾಲಗಾರರನ್ನು ಯಾವ ಯಾವ ರೀತಿಯಲ್ಲಿ ಹೀರಲು ಸಾಧ್ಯವೋ ಆ ಎಲ್ಲರೀತಿಯಲ್ಲೂ ಹೀರಲು ತಯಾರಿರುತ್ತಾರೆ ಅನ್ನುವ ಕಥೆಗಳನ್ನು ನಾವು ಕೇಳಿಯೇ ಇದ್ದೇವೆ.

ಆದರೆ ಸೋಮ್ ಅಧ್ಯಯನದಲ್ಲಿ ನಮಗೆ ಕಾಣಿಸುವ ಅತ್ಯಂತ ಮಹತ್ವದ ವಿಷಯವೆಂದರೆ ಈ ಬಡ್ಡಿವ್ಯಾಪಾರಿಗಳು ತಮ್ಮ ಸಾಲಗಾರರಿಗೆ ಎಷ್ಟು ಸಾಲ ನೀಡುತ್ತಿದ್ದರು ಅನ್ನುವ ಅಂಕಿ. ಅವರು ಅಧ್ಯಯನ ಮಾಡಿರುವ ೧೫೦೦ ಸಾಲಗಳಲ್ಲಿ ರೂ.೧೦,೦೦೦ ದಾಟಿದ ಸಾಲಗಳು ಕೇವಲ ಎರಡು. ರೂ. ೫೦ಕ್ಕೂ ಕಡಿಮೆ ಸಾಲ ಕೊಟ್ಟಿರುವುದು ೪೪೨ ಬಾರಿ. ಅರ್ಥಾತ್: ಈ ಸಾಲಗಳನ್ನು
ಬಡ್ಡಿವ್ಯಾಪಾರಿಯಲ್ಲದೇ ಬೇರೆ ಯಾರಾದರೂ ನೀಡಲು ಸಾಧ್ಯವಿತ್ತೇ? ಒಂದು ರೀತಿಯಲ್ಲಿ ಗ್ರಾಮೀಣ ಬಡ್ಡಿವ್ಯಾಪಾರಿ ಬಡವರ ಕ್ರೆಡಿಟ್ ಕಾರ್ಡಿನಂತೆ ವರ್ತಿಸುತ್ತಿದ್ದಾನೆ ಅನ್ನಿಸುವುದಿಲ್ಲವೇ? ಅಂದ ಹಾಗೆ ಕ್ರೆಡಿಟ್ ಕಾರ್ಡಿನ ಸಾಲಕ್ಕೆ ನಾವು ಬ್ಯಾಂಕುಗಳಿಗೆ ಕಟ್ಟಬೇಕಾದ ಬಡ್ಡಿಯನ್ನು ಲೆಕ್ಕ ಹಾಕಿದರೆ ತಿಂಗಳಿಗೆ ಎರಡು/ಮೂರು ಪ್ರತಿಶತ ಬಡ್ಡಿ ಪಡೆವ ಗ್ರಾಮೀಣ ಬಡ್ಡಿವ್ಯಾಪಾರಿ ಅಷ್ಟೇನೂ ದುಷ್ಟನಾಗಿ ಕಾಣುವುದಿಲ್ಲ.


ಸತ್ಯಂ ಶಂಕರ ಮಂಚಿ ಅನ್ನುವ ಲೇಖಕರ ಅದ್ಭುತ ಪುಸ್ತಕ ’ಅಮರಾವತಿ ಕಥಲು’ವಿನಲ್ಲಿ ಒಂದು ’ಬಾಕೀ ಸಂತಾನ’ ಅನ್ನುವ ಕಥೆಯಿದೆ. ರಂಗಯ್ಯ ಅನ್ನುವ ಬಡರೈತನ ಮೇಲೆ ತನ್ನ ತಂದೆ ಮಾಡಿದ ಸಾಲದ ಭಾರವಿದೆ. ಅದನ್ನು ವಸೂಲು ಮಾಡಲು ಅವನಿಗೆ ಸಾಲ ನೀಡಿದ ಮಾಸ್ತರು ಅವನ ದನವನ್ನು ತಂದು ತಮ್ಮ ಮನೆಯಲ್ಲಿ ಕಟ್ಟಿಹಾಕುತ್ತಾರೆ. ರಂಗಯ್ಯ ಸಿಟ್ಟಿನಿಂದ ಮಾಸ್ತರನ್ನು ಕೊಂದೇ ಬಿಡುತ್ತೇನೆ ಅನ್ನುವ ಹಾಗೆ ಬರುತ್ತಾನೆ. ಆದರೆ ಮಾಸ್ತರು ಅವನನ್ನು ಕರೆದು ಹೇಳುವ ಮಾತು "ಈ ಸಾಲ ತೀರಿದರೆ ನಿಮ್ಮಪ್ಪನ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಅಂತಷ್ಟೇ ನಾನು ನಿನ್ನ ದನವನ್ನು ತಂದೆ, ತೆಗೋ ನಿನ್ನ ಪತ್ರ, ನಿನ್ನ ಸಾಲ ಮಾಫಾಯಿತು. ಹೋಗು" ಅನ್ನುತ್ತಾನೆ. ಆಗ್ಗೆ ರಂಗಯ್ಯ ಅವನ ಕಾಲಿಗೆ ಬಿದ್ದು ತಾನಲ್ಲದಿದ್ದರೆ ತನ್ನ ಮಗನಾದರೂ ಆ ಸಾಲವನ್ನು ತೀರಿಸುವ ಶಪಥವನ್ನು ಮಾಡುತ್ತಾನೆ--- ಇದನ್ನು ನಾವು ಪರಿಶೀಲಿಸಿದಾಗ ಇಲ್ಲಿ ಶೋಷಣೆಯ ಅಂಶವಂತೂ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಅದಕ್ಕಿರುವ ಮಿತಿಯೂ ಕಾಣುವುದಿಲ್ಲವೇ? ಬಡ್ಡಿವ್ಯಾಪಾರಿ ಅದೇ ಸಮಾಜದಲ್ಲಿ ಬದುಕಬೇಕು- ಅದೇ ಜನರನ್ನು ದಿನವೂ ನೋಡಬೇಕು ಹೀಗಾಗಿ ಆತ ಒಂದು ಮಿತಿಯಲ್ಲಿ ಇರದಿದ್ದರೆ ಆತನ ಮೇಲಿನ ಸಿಟ್ಟು ಹದ್ದು ಮೀರುತ್ತದೆ ಅನ್ನುವುದನ್ನು ಮಂಚಿ ತಮ್ಮ ಕಥೆಯಲ್ಲಿ ಅದ್ಭುತವಾಗಿ ತೋರಿಸುತ್ತಾರೆ.

ಬಡ್ಡಿವ್ಯಾಪಾರಿಗಳ ಕಥೆಗಳನ್ನು ನಾವು ಕಂಡಾಗ, ಕೇಳಿದಾಗ ನಮಗೆ ಮನಸ್ಸಿಗೆ ತಟ್ಟುವುದು ಅವರುಗಳು ಎಷ್ಟು ಬಡ್ಡಿ ವಸೂಲು ಮಾಡುತ್ತಾರೆ ಅನ್ನುವ ಅಂಶ ಮಾತ್ರ. ಆದರೆ ನಮಗೆ ಅವರುಗಳ ಒಟ್ಟಾರೆ ವ್ಯಾಪಾರದ ಅಂಕಿ ಅಂಶಗಳು ಸಿಗುವುದೇ ಇಲ್ಲ. ಅವರು ಕೊಟ್ಟ ಸಾಲದಲ್ಲಿ ಬಾಕಿ ಉಳಿದು ವಸೂಲಾಗದ ಮೊತ್ತಗಳು ಎಷ್ಟಿರಬಹುದು? ಈ ಪ್ರಶ್ನೆಯನ್ನು ನಾವು ಕೇಳುವುದೇ ಇಲ್ಲ. ಕಾರಣ ಅವರು ಕೊಟ್ಟ ದುಡ್ಡೆಲ್ಲಾ ವಾಪಸ್ಸಾಗುತ್ತದೆಂದು ನಾವು ಭಾವಿಸುತ್ತೇವೆ. ಈ ಬಗ್ಗೆ ಸೋಮ್ ಅವರ ಪೇಪರು ಹೆಚ್ಚಿನ ಮಾಹಿತಿಯನ್ನು ನೀಡುವುದಿಲ್ಲ. ಆದರೆ ಎಷ್ಟೋ ಬಾರಿ ಮಂಚಿಯ ಕಥೆಯಲ್ಲಿನ ಮಾಸ್ತರರಂತೆ - ಆಯಿತು, ನಿನ್ನ ಸಾಲ ತೀರಿದಂತೆಯೇ, ಎಂದೋ, ಅಥವಾ ಕಟ್ಟಲು ಸಾಧ್ಯವಾಗದಿದ್ದರೆ ’ಪರವಾಗಿಲ್ಲ’ ಎಂದು ಸಾಲದ ಸಮಯವನ್ನು ಬೆಳೆಸುವುದನ್ನೂ ಇವರುಗಳು ಮಾಡಬಹುದು. ಆ ಬಗ್ಗೆ ನಮಗೆ ಮಾಹಿತಿ ಸಿಗುವುದು ಕಷ್ಟದ ಮಾತೇ ಆದ್ದರಿಂದ ಬಡ್ಡಿವ್ಯಾಪಾರಿಗಳ ಧಂಧೆಯನ್ನು ಮಿಕ್ಕ ಹಣಕಾಸಿನ ವ್ಯಾಪರಕ್ಕೆ ಹೋಲಿಸಿ ನೋಡುವುದೂ ಕಷ್ಟವಾಗುತ್ತದೆ.

ನಾನು ಸ್ವ ಸಹಾಯ ಗುಂಪುಗಳ ಬಗ್ಗೆ ಇತ್ತೀಚೆಗೆ ಮಾಡಿದ ಒಂದು ಅಧ್ಯಯನದಲ್ಲಿ ಈ ಗುಂಪುಗಳು ಬಡ್ಡಿವ್ಯಾಪಾರಿಗಳ ಮೇಲೆ ಏನಾದರೂ ಪರಿಣಾಮ ಬೀರಿರಬಹುದೇ ಅನ್ನುವ ಪ್ರಶ್ನೆಯನ್ನು ಪರಿಶೀಲಿಸುವುದು ಒಂದು ಭಾಗವಾಗಿತ್ತು. ಮಾಹಿತಿಯಿಂದ ನಮಗೆ ತಿಳಿದದ್ದೇನೆಂದರೆ - ಬಡ್ಡಿವ್ಯಾಪರಿಗಳ ವ್ಯಾಪಾರವೂ ಸ್ವ-ಸಾಹಯ ಗುಂಪುಗಳ ವ್ಯಾಪಾರದ ಜೊತೆಜೊತೆಗೇ ಬೆಳೆದಿದ್ದು ಒಟ್ಟಾರೆ ಆ ಮಹಿಳೆಯರು ಪಡೆದ ಸಾಲದ ಮೊತ್ತವೂ ಹೆಚ್ಚಾಗಿತ್ತು. ಇದರಿಂದ ನಾವು ಚಿಂತಿತರಾಗಬೇಕೇ? ಇಲ್ಲವೆನ್ನಿಸುತ್ತದೆ. ಒಟ್ಟಾರೆ ಈ ವರ್ಷಗಳಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿ ತುಸು ಹೆಚ್ಚಿನ ಆದಾಯ ಪಡೆದಿದ್ದ ಈ ಸಂಸಾರಗಳು ಹೆಚ್ಚಿನ ಸಾಲವನ್ನು ಪಡೆವ ಶಕ್ತಿಯನ್ನೂ ಹೊಂದಿದ್ದವು. ಸ್ವಸಹಾಯ ಗುಂಪುಗಳನ್ನು ಸೇರುತ್ತಿದ್ದಂತೆ ಮುಫತ್ತಾಗಿ ದೊರೆಯುತ್ತಿದ್ದ ಕೈಗಡ ಕೊಡುತ್ತಿದ್ದ ನೆರೆಕೆರೆಯವರು ’ನಿಮಗೆ ಈಗ ಗುಂಪಿದೆಯಲ್ಲಾ?’ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದದರಿಂದ ಆ ಕೈಗಡ ನಿಂತಿತ್ತು. ಹಾಗೂ ಸ್ವಸಹಾಯ ಗುಂಪುಗಳು ಕೆಲವೊಂದು ಉಪಯೋಗಕ್ಕೆ ಮಾತ್ರ ಸಾಲವನ್ನು ನೀಡುತ್ತಿದ್ದುವು. ಹೀಗೆ ಬಡ್ಡಿವ್ಯಾಪಾರಿ ಇವರುಗಳ ಜೀವನದಲ್ಲಿ ಅವಿನಾಭಾವ ಭಾಗವಾಗಿ ನಿಂತುಬಿಟ್ಟಿದ್ದ. ಹಾಗಾದರೆ ಗುಂಪುಗಳು ಸ್ಥಾಪಿತವಾದ್ದರಿಂದ ಪ್ರಯೋಜನವೇ ಇಲ್ಲವೇನು? ಈ ಪ್ರಶ್ನೆಗೆ ಉತ್ತರ ನಮಗೆ ಬಡ್ಡಿ ದರದಲ್ಲಿ ಕಾಣಿಸಿತು. ಮುಂಚೆ ತಿಂಗಳಿಗೆ ಸರಾಸರಿ ಮೂರು ಪ್ರತಿಶತ ಬಡ್ಡಿಕೊಡುತ್ತಿದ್ದ ಈ ಮಹಿಳೆಯರು, ಅದೇ ಬಡ್ಡಿವ್ಯಾಪಾರಿಗಳಿಗೆ ತಿಂಗಳಿಗೆ ಎರಡು ಪ್ರತಿಶತ ಬಡ್ಡಿಕೊಡುತ್ತಿದ್ದರು!

ಆ ಮಹಿಳೆಯರ ಜೊತೆ ನಾನು ಮಾತನಾಡುತ್ತಾ, ಇನ್ನೂ ಬಡ್ಡಿವ್ಯಾಪಾರಿಗಳ ಬಳಿ ಯಾಕೆ ಸಾಲ ಪಡೆಯುತ್ತಿದ್ದೀರಿ ಎಂದು ಕೆಲ ಮಹಿಳೆಯರನ್ನು ಕೇಳಿದ್ದೆ. ಅದಕ್ಕೆ ಅವರು "ಸಾರ್, ಮನೆಯಲ್ಲಿ ಮದುವೆ ಕಾರ್ಯಕ್ಕೆ ಸಾಲ ಬೇಕಾದರೆ ನಾವು ಬಡ್ಡಿವ್ಯಾಪಾರಿಗಳ ಬಳಿಗೇ ಹೋಗುತ್ತೇವೆ, ಯಾಕೆಂದರೆ ನಾವು ಗುಂಪಿನ ಬಳಿ ಇದಕ್ಕಾಗಿ ಸಾಲ ಕೇಳಲು ಹೋದರೆ ನಮಗೆ ದೊರೆಯುವುದು ಮದುವೆಯ ದುಂದಿನ ಬಗ್ಗೆ ಒಂದು ಭಾಷಣವೇ ಹೊರತು, ಹಣವಲ್ಲ" ಅಂದರು. ಈ ಬಗ್ಗೆ ನಾನು ಹೆಚ್ಚು ವಾದಿಸಲು ಹೋಗಲಿಲ್ಲ. ಕಾರಣ ಆಕೆ "ಸರ್ ನೀವು ನಿಮ್ಮ ಮದುವೆ ಎಲ್ಲಿ ಮಾಡಿಕೊಂಡಿರಿ, ಎಷ್ಟು ಖರ್ಚಾಯಿತು?" ಅನ್ನುವ ಅಣ್ವಸ್ತ್ರಗಳನ್ನು ನನ್ನಮೇಲೆ ಪ್ರಯೋಗಿಸಿದ್ದರಿಂದ, ನಮ್ಮ ಸಂಭಾಷಣೆ ಪಡೆವ ದಿಕ್ಕಿನ ಬಗ್ಗೆ ನನಗೆ ಅನುಮಾನವೇ ಇರಲಿಲ್ಲ. ಆಕೆಯ ಮಾತಿನ ಅರ್ಥವಿಷ್ಟೇ - ಬಡವರಾದ ಮಾತ್ರಕ್ಕೇ ಮದುವೆಯ ಸಂದರ್ಭದಲ್ಲಿ ಒಂದಿಷ್ಟು ಜನರಿಗೆ ಊಟ ಹಾಕಿ, ಒಂದು ಔತಣವನ್ನು ನೀಡುವುದು ’ದುಂದು’ ವೆಚ್ಚ ಎಂದು ಉಪದೇಶ ಮಾಡುವ ಹಕ್ಕು ನಮಗಾಗಲೀ, ಗುಂಪುಗಳನ್ನು ನಡೆಸುವವರಿಗಾಗಲೀ ಎಲ್ಲಿಂದ ಬಂತು ಅನ್ನುವುದನ್ನು ಆಕೆ ಕೇಳುತ್ತಿದ್ದರು. ಬಡ್ಡಿವ್ಯಾಪಾರಿಯಾದರೆ ಇಂಥ ಪ್ರಶ್ನೆಗಳನ್ನು ಕೇಳುವುದಿಲ್ಲ. ಆತನಿಗೆ ಈ ಅವಶ್ಯಕತೆಯ ಮಹತ್ವ ಗೊತ್ತು. ಹೀಗಾಗಿಯೇ:

ಹೀಗೆ ಬಡ್ಡಿವ್ಯಾಪಾರಿಗಳನ್ನು ಸುಲಭವಾಗಿ ನಾವು ತಳ್ಳಿಹಾಕುವಂತಿಲ್ಲ. ಬದಲಿಗೆ ಅವರ ಪಾತ್ರವೇನೆಂದು ಅರ್ಥಮಾಡಿಕೊಂಡು ಆ ರಾಕ್ಷಸೀ ವೃತ್ತಿಯಲ್ಲಿರಬಹುದಾದ ದೈವತ್ವವನ್ನು ನಾವು ಕಾಣಬೇಕಾಗಿದೆಯೇನೋ!!


Wednesday, March 27, 2013

ಸಾಲಮನ್ನಾ ರಾಜಕಾರಣ


ಕರ್ನಾಟಕದಲ್ಲಿ ಚುನಾವಣೆಯ ಬಿಸಿಯೇರುತ್ತಿದ್ದಂತೆ, ಅನೇಕ ಹೊಸ ಆಶ್ವಾಸನೆಗಳು, ಹೊಸ ಭರವಸೆಗಳನ್ನು ವಿವಿಧ ಪಕ್ಷಗಳು ನೀಡುತ್ತಿವೆ. ಸಾಮಾನ್ಯವಾಗಿ ಗ್ರಾಮೀಣ ಮತದಾರರನ್ನು ಓಲೈಸಲು ಪಕ್ಷಗಳು ಕೃಷಿ, ಗ್ರಾಮೀಣ ಪ್ರದೇಶಗಳಿಗೆ ಸಂಬಂಧಿಸಿದ ಅನೇಕ ಯೋಜನೆಗಳನ್ನು ಕೈಗೊಳ್ಳುವ ಮಾತನ್ನಾಡುವುದನ್ನು ನಾವು ಕಂಡೇ ಇದ್ದೇವೆ. ಎಲ್ಲ ಪಕ್ಷಗಳಿಗೂ ಪ್ರಿಯವಾದ ಯೋಜನೆಗಳೆಂದರೆ ಕೃಷಿ ಸಂಬಂಧಿತವಾದ ಸಾಲವನ್ನು ಮನ್ನಾ ಮಾಡುವುದು, ಅಥವಾ ಕೃಷಿ ಸಾಲದ ಮೇಲಿನ ಬಡ್ಡಿದರದಲ್ಲಿ ಕಡಿತವನ್ನು ಘೋಷಿಸುವುದು, ಉಚಿತ ವಿದ್ಯುತ್ ಸರಬರಾಜಿನ ಭರವಸೆ ನೀಡುವುದು ಹಾಗೂ ಕರುಣಾನಿಧಿಯವರ ಕರುಣೆಯ ನಂತರ ಹೊಸತಾಗಿ ಚುನಾವಣಾ ಭರವಸೆಗೆ ಸೇರಿರುವ ಉಚಿತ ಬಣ್ಣದ ಟೀವಿಗಳನ್ನು ಹಂಚುವುದು. ಮೊದಲಿಗೆ ಯಾವುದಾದರೂ ಯೋಜನೆಯಿದ್ದಲ್ಲಿ ಅದರ ಕರ್ತೃವಿನ ಛಾಪು ಇರುತ್ತಿತ್ತು. ಉದಾಹರಣೆಗೆ ೨ ರೂಪಾಯಿಗಳಿಗೊಂದು ಕಿಲೋ ಅಕ್ಕಿಯನ್ನು ಕೊಡಲು ಪ್ರಾರಂಭಿಸಿದವರು ತೆಲುಗುದೇಶಂ ಪಕ್ಷದ ನಾಯಕರಾಗಿದ್ದ ಎನ್.ಟಿ.ರಾಮಾರಾವು ಅವರು. ಆದರೆ ಅದನ್ನು ಕಾಂಗ್ರೆಸ್ ಪಕ್ಷ ಈಗ ತನ್ನದಾಗಿಸಿಕೊಂಡಿದೆ. ಕರ್ನಾಟಕದಲ್ಲಿ ಬಿಜೆಪಿ ಪಕ್ಷದವರು ಉಚಿತ ವಿದ್ಯುತ್ತಿನ ಬಗ್ಗೆ ಮಾತಾಡುತ್ತಿರುವಾಗಲೇ ಅವರದೇ ಪಕ್ಷದ ಸರಕಾರ ಗುಜರಾತಿನಲ್ಲಿ ವಿದ್ಯುತ್ತಿಗೆ ಪೂರ್ಣ ಶುಲ್ಕವನ್ನು ವಿಧಿಸಿಯೂ ಚುನಾವಣೆ ಗೆದ್ದಿದೆ. ಡಿಎಂಕೆ ನೀಡಿದ ಬಣ್ಣದ ಟೀವಿಯ ಭರವಸೆಯನ್ನು ಕಾಂಗ್ರೆಸ್ ತನ್ನದೇ ಎಂಬಂತೆ ಸ್ವೀಕರಿಸಿದೆ. ಹೀಗಾಗಿ ರಾಷ್ಟ್ರೀಯ ಪಕ್ಷಗಳಿಗೂ ಪ್ರಾಂತೀಯ ಪಕ್ಷಗಳಿಗೂ ವ್ಯತ್ಯಾಸವೇ ಕಾಣದಂತಾಗಿದೆ. 

ನಮ್ಮ ಅನೇಕ ಸಾಂಸದರು ಗ್ರಾಮೀಣ ಪ್ರದೇಶಗಳಿಂದ ಚುನಾಯಿತರಾಗಿ ಬರುತ್ತಾರೆ. ಅವರುಗಳಿಗೆ ಗ್ರಾಮೀಣ ಪ್ರದೇಶಗಳ ಸಮಸ್ಯೆಗಳು ನಮ್ಮೆಲ್ಲರಿಗಿಂತ ಚೆನ್ನಾಗಿಯೇ ಗೊತ್ತಿರುತ್ತದೆ. ಸಮಸ್ಯೆಗಳು ತಿಳಿದಿರುವಾಗ ಅದಕ್ಕೆ ತಕ್ಕ ಸಮಾಧಾನದ ಬಗ್ಗೆಯೂ ಅವರಿಗೆ ಉತ್ತಮ ಅವಗಾಹನೆಯಿರುತ್ತದೆ. ಬಹಳಷ್ಟು ವ್ಯಂಗ್ಯಚಿತ್ರಗಳಲ್ಲಿ ಚಿತ್ರಿಸುವಂತೆ ನಮ್ಮ ರಾಜಕಾರಣಿಗಳು ಮೂರ್ಖರಲ್ಲ. ಸಿನೇಮಾಗಳಲ್ಲಿ ಚಿತ್ರಿಸುವಂತೆ ಖಳರೂ ಅಲ್ಲ. ಪಾರ್ಲಮೆಂಟರಿ ಸ್ಟಾಂಡಿಂಗ್ ಕಮಿಟಿಗಳ ಚರ್ಚೆಯ ವಿವರಗಳನ್ನು ನೋಡಿದರೆ, ಅವರುಗಳು ಪಕ್ಷಗಳ ಭಿನ್ನತೆಗಳನ್ನು ಬಿಟ್ಟು ಮೂಲ ವಿಷಯಗಳ ಬಗ್ಗೆ ಗಹನವಾಗಿ ಚರ್ಚಿಸಬಲ್ಲರು ಅನ್ನುವುದು ವೇದ್ಯವಾಗುತ್ತದೆ. ಕ್ಯಾಮರಾ ಎದುರಿಗಿಲ್ಲದಾಗ, "ಪಕ್ಷದ ಹಿತ" ಅನ್ನುವ ವಿಚಿತ್ರ ನಾಟಕೀಯ ಪರಿಸ್ಥಿತಿ ಇಲ್ಲದಾಗ ಇತರ ಪಕ್ಷದ ಕಾರ್ಯಕರ್ತರೊಂದಿಗೆ ಸ್ನೇಹದಿಂದ, ಎಷ್ಟೋ ಭಿನ್ನ ವಿಷಯಗಳನ್ನು ಚರ್ಚಿಸುವುದನ್ನು ಕಾಣಬಹುದು. ಉದಾಹರಣೆಗೆ ಈಚೆಗೆ ತಮ್ಮ ಪುಸ್ತಕ ಬಿಡುಗಡೆಯಾದಾಗ ಅದ್ವಾನಿಯವರು ತಮಗೂ ರಾಹುಲ್ ಗಾಂಧಿಗೂ ದೆಹಲಿಯ ವಿಮಾನ ನಿಲ್ದಾಣದ ಲೌಂಜಿನಲ್ಲಿ ನಡೆದ ಸಂಭಾಷಣೆಯ ಬಗ್ಗೆ ಮಾತನಾಡಿದ್ದರು. ಇಂತಹ ಮಾತುಕತೆಗಳು ಬಹಳವೇ ಸಾಮಾನ್ಯ. ಆದರೂ ಚುನಾವಣೆ, ಸಂಸತ್ತಿನ ಕೆಲಸಕ್ಕೆ ಬಂದಾಗ ತಮ್ಮ ಸ್ವಂತ ಅಭಿಪ್ರಾಯವನ್ನೂ ಮೀರಿ, ತಾವು ಖುದ್ದಾಗಿ ಬಹುಶಃ ನಂಬದ ವಿಚಾರದ ಬಗ್ಗೆ ಮೇಜುಗುದ್ದಿ ಮಾತನಾಡುವ ಶಕ್ತಿಯೂ ಅವರುಗಳಿಗಿದೆ. ಈ ಬಾರಿಯ ಬಜೆಟ್‌ನಲ್ಲಿ ಮಂಡಿಸಿದ ೬೦,೦೦೦ ಕೋಟಿರೂಪಾಯಿಯ ಸಾಲ ಮನ್ನಾ ಯೋಜನೆಯನ್ನು ಒಳ್ಳೆಯ ಯೋಜನೆಯೆಂದು ಚಿದಂಬರಂ ಅವರು ನಿಜಕ್ಕೂ ನಂಬಿದ್ದಾರೆಯೇ? ಅದೇ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಕೃಷಿಗೇ ಬಳಸಬಹುದಿತ್ತೇ? 
ಈ ಪ್ರಶ್ನೆಗಳನ್ನು ಕೇಳಿದಾಗ ಚಿದಂಬರಂ ಅವರ ವೈಯಕ್ತಿಕ ಅಭಿಪ್ರಾಯಕ್ಕೂ ಬರಲಿರುವ ಚುನಾವಣೆಗಾಗಿ ತಯಾರಿ ನಡೆಸಬೇಕೆಂದಿರುವ ಕಾಂಗ್ರೆಸ್ ಪಕ್ಷಕ್ಕೆ ಬೇಕಿರುವ, ಜನರನ್ನು ಆಕರ್ಷಿಸಬಹುದಾದ "ಒಂದು ಸಾಲಿನ ಕಥೆ"ಯ ಒತ್ತಡಕ್ಕೂ ಇರಬಹುದಾದ ಜಟಾಪಟಿ ನಮಗೆ ಕಾಣಿಸುತ್ತದೆ.

ಸಿನೇಮಾ ರಂಗದಲ್ಲಿ "single line story" ಅನ್ನುವ ಮಾತು ಪ್ರಚಲಿತವಿದೆ. ಸಿಂಗಲ್ ಲೈನ್ ಕಥೆಯೆಂದರೆ, ಚಿತ್ರಕಥೆಯ ಮುಖ್ಯಾಂಶಗಳು ಏನೆಂದು ಸರಳವಾಗಿ ವಿವರಿಸುವ ವ್ಯೂಹ. ಇದರಿಂದಾಗಿ ಆ ಚಿತ್ರದಲ್ಲಿ ಏನು ನಿರೀಕ್ಷಿಸಬಹುದು ಎಂದು ಅದರ ತಯಾರಿಯಲ್ಲಿ ತೊಡಗಿರುವವರಿಗೆ ಅರ್ಥವಾಗುತ್ತದೆ. ಹಾಗೂ ಅದು ಬಾಕ್ಸ್ ಆಫೀಸಿನಲ್ಲಿ ಗೆಲ್ಲಬಹುದೋ ಅನ್ನುವ ಒಂದು ಅಂದಾಜೂ ಸಿಗುತ್ತದೆ. ಆದರೆ ಎಷ್ಟೋ ಇಂಥಹ ಪ್ರಯೋಗಗಳು ಮಣ್ಣುಮುಕ್ಕುವುದನ್ನು ನಾವು ಕಂಡಿದ್ದರೂ "ಲವ್ ಸ್ಟೋರಿ, ಸೆಂಟಿಮೆಂಟು ಇದೆ, ಪಕ್ಕದ ಕಾಮೆಡಿಯ ಟ್ರಾಕಿನಲ್ಲಿ ಹೀಗೆ ನಡೆಯುತ್ತದೆ.. ೮ ಹಾಡುಗಳು, ೬ ಫೈಟುಗಳು, ಯೂತ್‍ಗೆ ಅಪೀಲ್ ಆಗುತ್ತದೆ" ಅನ್ನುವಂಥಹ ಮಾತುಗಳನ್ನು ಕೇಳುತ್ತಲೇ ಬಂದಿದ್ದೇವೇ. ಚುನಾವಣೆಗೆ ಮುನ್ನ ಬರುವ ಘೋಷಣಾ ಪತ್ರಗಳೂ ರಾಜಕೀಯ showmanshipನ ಸಿಂಗಲ್ ಲೈನ್ ಕಥೆಗಳೇ ಆಗಿವೆ. ಈ ಸಿಂಗಲ್ ಲೈನ್ ಕಥೆಗಳ ಬಂಧನವನ್ನು ಮೀರಿ ನಿಂತಾಗ ಅನಿರೀಕ್ಷಿತ ಗೆಲುವುಗಳು ಸಿಗುತ್ತವೆ ಅನ್ನುವುದನ್ನು ರಾಜಕೀಯ ಪಕ್ಷಗಳು ಗಮನಿಸಿದಂತಿಲ್ಲ. ಗೆಲ್ಲುತ್ತಾರೆಂದು ನಂಬಿದ್ದ ಚಂದ್ರಬಾಬುವಿನ ಸೋಲು, ಸೋಲುತ್ತಾರೆಂದು ನಂಬಿದ್ದ ಮಾಯಾವತಿಯ ಗೆಲುವು, ಯಾವುದೇ ಭರವಸೆಗಳನ್ನು ನೀಡದೇ - ಕೆಲಸದ ಆಧಾರದ ಮೇಲೆ ಓಟು ಕೇಳಿ ಗೆದ್ದ ನರೇಂದ್ರ ಮೋದಿಯ ಮಾಯ, ಅದೇ ಇಂಡಿಯಾ ಶೈನಿಂಗ್ ಉಪಯೋಗಿಸಿ ನೆಲಕಚ್ಚಿದ ಬಿಜೆಪಿ, ಈ ಎಲ್ಲವನ್ನೂ ನೋಡಿದಾಗ ಯಾವುದೇ ಗೆಲುವಿಗೆ ನಿರ್ದಿಷ್ಟ ಫಾರ್ಮುಲಾ ಇಲ್ಲವೆಂಬುದು ವೇದ್ಯವಾಗುತ್ತದೆ. ಆದರೂ, ಪ್ರತಿ ಸಿನೇಮಾದಲ್ಲೂ ಇರುವ ೮ ಹಾಡು ೨ ಮಾನಭಂಗ ಪ್ರಸಂಗಗಳಂತೆ ಘೋಷಣಾಪತ್ರಗಳು ಇಂಥದೇ ಒಂದು ಫಾರ್ಮುಲಾ ಹುಡುಕಿ ಮುಂದೆ ನಡೆದಿವೆ. ಗೆದ್ದ ಸಿನೇಮಾದ ಕಥೆಯನ್ನು ರೀಮೇಕ್ ಮಾಡಿದಂತೆಯೇ ರಾಜಕೀಯ ಯೋಜನೆಗಳೂ ಎರವಲು ನೀತಿಯ ಮೇಲೆಯೇ ನಿಂತಂತಿದೆ! 

ನೀತಿಗಳನ್ನು ಯೋಜನೆಗಳನ್ನೂ ರೂಪಿಸುವಾಗ ನಾವುಗಳು ಕೆಲವು ಮಿಥ್ಯೆಗಳಿಗೆ ಬಲಿಯಾಗುತ್ತೇವೆ. ಅದರಲ್ಲಿ ಒಂದು ದೊಡ್ಡ ಮಿಥ್ಯೆಯೆಂದರೆ ಗ್ರಾಮೀಣ ಪ್ರದೇಶದ ನೀತಿಗಳನ್ನು ರೂಪಿಸುವಾಗ ಅದು ಪೂರ್ಣವಾಗಿ ಕೃಷಿಯಲ್ಲಿ ಅಡಕವಾಗಿರಬೇಕೆಂಬ ಮಿಥ್ಯೆ. ಈಚಿನ ಸೆನ್ಸಸ್ ಮಾಹಿತಿಯನುಸಾರ ದೇಶದ ಗ್ರಾಮೀಣ ಪ್ರಾಂತದಲ್ಲಿ ಕೃಷಿಕರು [ಕಲ್ಟಿವೇಟರ್ಸ್] ಕೇವಲ ೪೦% ಜನ ಮಾತ್ರ ೩೩% ಜನ ವ್ಯವಸಾಯ ಕೂಲಿಗಳು. ಹೀಗಾಗಿ ಕೃಷಿಯಾಧಾರಿತ ನೀತಿಗಳನ್ನು ಯೋಜಿಸಿದಾಗ ಹೆಚ್ಚಿನಂಶ ಪ್ರಯೋಜನವಾಗುವುದು ಈ ೪೦% ಜನರಿಗೆ ಮಾತ್ರ. ಆದರೂ ಬಡತನದ ಮಾತಾಡುವಾಗ ಅದನ್ನು ಗ್ರಾಮೀಣ ಪ್ರದೇಶಕ್ಕೆ ಸೀಮಿತಗೊಳಿಸುವ ಮಿಥ್ಯೆ. ಹೀಗಾಗಿ ಬಡತನ=ಗ್ರಾಮೀಣ ಪ್ರದೇಶ = ಕೃಷಿ ಅನ್ನುವ ಸರಳೀಕರಣದ ಆಧಾರದ ಮೇಲೆ ಅನೇಕ ನೀತಿಗಳು ರೂಪಿತವಾಗುತ್ತವೆ. ಕಳೆದ ಹಲವು ದಶಕಗಳಲ್ಲಿ ಭಿನ್ನ ಸರಕಾರಗಳು ರೂಪಿಸಿರುವ ಗ್ರಾಮೀಣ ವಿತ್ತ ನೀತಿಯನ್ನು ಗಮನಿಸಿದಾಗ ನಮಗೆ ಈ ನೀತಿಗಳು ಎಷ್ಟು ದೂರದೃಷ್ಟಿರಹಿತವಾಗಿದ್ದವು ಅನ್ನುವ ಮಾತು ಮನವರಿಕೆಯಾಗುತ್ತದೆ.
 

ಗ್ರಾಮೀಣ ವಿತ್ತದ ದುರಂತದ ದೊಡ್ಡ ಘಟ್ಟ ಆರಂಭವಾದದ್ದು ಬಹುಶಃ ೧೯೮೯ರಲ್ಲಿ. ಆದರೆ ಅದಕ್ಕೂ ಮುಂಚೆ ಆ ದುರಂತದ ಮುನ್ಸೂಚನೆಗಳನ್ನು ಭಿನ್ನ ಸರಕಾರಗಳು ನೀಡುತ್ತಲೇ ಬಂದಿದ್ದವು. ಆದರೆ ೫೦ರಿಂದ ೭೦ರ ದಶಕದವರೆಗೂ ಸರಕಾರದ ನೀತಿಗಳು ಮೇಲ್ಮುಖವಾಗಿದ್ದವೆಂದೇ ಹೇಳಬೇಕು. ೧೯೫೦ರ ಅಖಿಲ ಭಾರತ ಗ್ರಾಮೀಣ ಋಣ ಸರ್ವೆ, ಮತ್ತು ದಶಕಕ್ಕೊಮ್ಮೆ ಬರುವ ಅಖಿಲ ಭಾರತ ಋಣ ಮತ್ತು ಹೂಡಿಕೆಯ ಸರ್ವೆ [ಆಲ್ ಇಂಡಿಯಾ ರೂರಲ್ ಕ್ರೆಡಿಟ್ ಸರ್ವೆ/ಗೋರ್ವಾಲಾ ಸಮಿತಿ, ಆಲ್ ಇಂಡಿಯಾ ಡೆಟ್ ಅಂಡ್ ಇನ್ವೆಸ್ಟ್ಮೆಂಟ್ ಸರ್ವೆ] ಮಾಹಿತಿಯ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ವಿತ್ತೀಯ ಸದುಪಾಯ ಹೆಚ್ಚಿನಂಶ ಬಡ್ಡೀ ವ್ಯಾಪಾರಿಗಳು ಪೂರೈಸುತ್ತಿದ್ದು ಸಂಸ್ಥಾಗತ ಮೂಲದಿಂದ ಬರುತ್ತಿದ್ದ ಭಾಗ ಅಲ್ಪವಾಗಿತ್ತು. ಹೀಗಾಗಿಯೇ ಸಹಕಾರೀ ಸಂಸ್ಥೆಗಳಲ್ಲಿ ಸರಕಾರದ ಭಾಗಸ್ವಾಮ್ಯವಿರಬೇಕೆಂದು ಗೊರ್‍ವಾಲಾ ಸಮಿತಿ ಸೂಚಿಸಿತ್ತು. ಹೆಚ್ಚಿನಂಶ ನಮ್ಮ ಸಹಕಾರೀ ನೀತಿಗಳು ಈ ಸಮಿತಿಯ ಸೂಚನೆಗಳ ಆಧಾರದ ಮೇಲೆ ಆ ದಶಕಗಳಲ್ಲಿ ರೂಪಿತವಾದವು.
೧೯೭೦ರ ವೇಳೆಗೆ ಗ್ರಾಮೀಣ ವಿತ್ತ ರಂಗದಲ್ಲಿ ಸಂಸ್ಥಾಗತ ಮೂಲಗಳ ಪಾತ್ರವನ್ನು ಹಿಗ್ಗಿಸಲು ಬ್ಯಾಂಕುಗಳ ರಾಷ್ಟ್ರೀಕರಣವನ್ನೂ ಮಾಡಲಾಯಿತು. ಅದರಿಂದಾಗಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಲಾಭವಾಯಿತೆಂದು ರೋಹಿಣಿ ಪಾಂಡೇ ಮತ್ತು ಬರ್ಗಸ್ ತಮ್ಮ ಪ್ರಬಂಧದಲ್ಲಿ ಮಂಡಿಸಿದ್ದಾರೆ. ಇದಕ್ಕೆ ಪೂರಕವಾದ ವಿತ್ತೀಯ ನೀತಿಯಲ್ಲಿ ಎರಡು ಅಂಶಗಳಿದ್ದವು.
  • ೧. ಈಗಾಗಲೇ ಬೇರೆ ಯಾವುದಾದರೂ ಬ್ಯಾಂಕಿನ ಶಾಖೆಯಿರುವ ನಗರ ಪ್ರದೇಶದಲ್ಲಿ ಹೊಸ ಶಾಖೆಯನ್ನು ತೆರೆಯಬೇಕಾದರೆ, ಬ್ಯಾಂಕಿಲ್ಲದ ನಾಲ್ಕು ಹಳ್ಳಿಗಳಲ್ಲಿ ಶಾಖೆ ತೆಗೆದಾಗ ಮಾತ್ರ ಅದಕ್ಕೆ ಲೈಸೆನ್ಸ್ ಸಿಗುತ್ತಿತ್ತು.
  • ೨. ಒಟ್ಟಾರೆ ಸಾಲದ ೧೮ ಪ್ರತಿಶತ ಕೃಷಿಗಾಗಿಯೇ ನೀಡುವುದು ಅನಿವಾರ್ಯವಾಗಿತ್ತು. ಅದರಲ್ಲೂ ೧೩.೫% ಕೃಷಿಗೆ ನೇರವಾಗಿ ನೀಡಬೇಕಾದ ಸಾಲವಾಗಿತ್ತು.
ಮೊದಲ ನೀತಿಯನ್ನು ೧೯೯೦ರ ದಶಕದಲ್ಲಿ ಕೈಬಿಡಲಾಯಿತಾದರೂ, ಎರಡನೆಯ ನೀತಿಯನ್ನು ಇಂದಿಗೂ ಪಾಲಿಸುತ್ತಿದ್ದೇವೆ. ಈ ನೀತಿ ಒಳ್ಳೆಯದೇ, ಆದರೆ ಒಟ್ಟಾರೆ ಸಂಸ್ಥೆಗಳು ಗ್ರಾಮೀಣ ಪ್ರದೇಶಗಳಲ್ಲಿ ಇರಬೇಕು ಅನ್ನುವ ನೀತಿಯಿಂದ ಮುಂದೆ ಹೋಗಿ ಆ ಸಂಸ್ಥೆಗಳು ಯಾವರೀತಿಯಾದಂತಹ ಪಾತ್ರವನ್ನು ವಹಿಸಬೇಕು - ಯಾವ ರೀತಿಯ ಋಣ ಸದುಪಾಯವನ್ನು ಯಾವ ಯೋಜನೆಗಳ ಮೂಲಕ, ನೀಡಬೇಕೆನ್ನುವುದನ್ನು ಸರಕಾರ ರೂಪಿಸತೊಡಗಿದಾಗ ಸರಕಾರದ ನೀತಿಯ ಪತನ ಕಾಣಿಸಿತು ಅನ್ನಿಸುತ್ತದೆ. ಈ ಪತನದ ಮುಖ್ಯ ಮೈಲಿಗಲ್ಲುಗಳೆಂದರೆ -
  • ೧. ಕೇಂದ್ರದಲ್ಲಿ ರೂಪಿತವಾಗಿ ಬ್ಯಾಂಕು, ಸಹಕಾರಿ ಸಂಘಗಳ ಗಂಟಲುಗಳಿಗೆ ತುರುಕಿದ, ಬಹುಷಃ ಅನೇಕ ಪ್ರದೇಶಗಳಿಗೆ ಸಮರ್ಪಕವಾಗಿಲ್ಲದ ಸಮಗ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಸಾಲಗಳು.
  • ೨. ಊರೂರಲ್ಲಿ ಗ್ರಾಮಗ್ರಾಮಗಳಲ್ಲಿ ಮಂತ್ರಿಗಳ ಮೂಲಕ ನಡೆದ ಬ್ಯಾಂಕುಗಳ ಸಾಲ ಮೇಳ ಕಾರ್ಯಕ್ರಮಗಳು.
ಈ ಎರಡೂ ಕಾರ್ಯಕ್ರಮಗಳಿಂದಾಗಿ, ಸಾಲ ಕೇಳದ ಜನರಿಗೆ, ಅವರ ಮನೆಯ ಬಾಗಿಲಿಗೇ ಹೋಗಿ ಅವರಿಗೆ ಸಮರ್ಪಕವಾಗಿಲ್ಲದ ಉದ್ದೇಶಕ್ಕಾಗಿ ಸಾಲ ನೀಡುವುದು. ಅಥವಾ ನೀಡಿದಂತೆ ಬರಕೊಳ್ಳುವ ಪ್ರಕ್ರಿಯ ಪ್ರಾರಂಭವಾಯಿತು. ಯಾವುದೇ ಆಗಿರಲಿ ಇದು ಒಂದು ಟೈಂ ಬಾಂಬಿನಂತೆ, ಸಿಡಿಯಲು ತಯಾರಾದ ವಿಷಯವಾಗಿತ್ತು. ಇದು ಎಷ್ಟರ ಮಟ್ಟಿಗೆ ದುರಂತಮಯ ವಿಷಯವಾಗಿತ್ತೆಂದರೆ, "ಲೋನಿ"ಗೂ "ಸಾಲ"ಕ್ಕೂ ಇರುವ ವ್ಯತ್ಯಾಸ ಭಾಷಾಂತರದ ವಿಷಯವಾಗದೆ, ಲೋನೆಂದರೆ, ಬ್ಯಾಂಕಿನಿಂದ ಬರುವ ಮೊಬಲಗು, ಅದನ್ನು ವಾಪಸ್ಸು ಕಟ್ಟುವ ಅವಶ್ಯಕತೆಯಿಲ್ಲ, ಸಾಲವೆಂದರೆ ಬಡ್ಡಿವ್ಯಾಪಾರಿಗಳಿಂದ ಬರುವುದು, ಅದನ್ನು ಕಟ್ಟುವ ಅವಶ್ಯಕತೆ ಇದ್ದೇ ಇದೆ ಅನ್ನುವ ಮಾತನ್ನು ಜನ ಗ್ರಹಿಸಿಬಿಟ್ಟಿದ್ದರು ಎಂದು ಅಲೋಷಿಯಸ್ ಫರ್ನಾಂಡಿಸ್ ತಮ್ಮ ಪುಸ್ತಕದಲ್ಲಿ ವಿವರಿಸುತ್ತಾರೆ. ಆಡುಭಾಷೆಯನ್ನೇ ಬದಲಾವಣೆ ಮಾಡಿದ ಕೀರ್ತಿ ಕರ್ನಾಟಕದ ಜನಾರ್ಧನ ಪೂಜಾರಿಯವರಿಗೆ ಸಲ್ಲುತ್ತದೆ!!
ಈ ಎರಡೂ ಕಾರ್ಯಕ್ರಮಗಳಿಂದ ಆಗಿದ್ದೇನೆಂದರೆ ಸಹಕಾರಿ ಸಂಘಗಳು ಸಹಕಾರಿ ಸಂಘಗಳಾಗಿ ಉಳಿಯದೇ ಸರಕಾರೀ ವಿಭಾಗಗಳಾಗಿ ತಯಾರಾದದ್ದು. ಬ್ಯಾಂಕುಗಳು ಸಾಲ ಮೇಳಗಳ ಒತ್ತಡಕ್ಕೆ ಬಲಿಯಾಗಿ ಹಣವನ್ನು ಹಂಚಿದ್ದು. ಕೆಟ್ಟ ತಿರುಗಿಬರಲಾರದ ಸಾಲದ ದೊಡ್ಡ ಬೆಟ್ಟವೇ ಭಾರತದ ಆರ್ಥಿಕ ಸ್ಥಿತಿಯ ಮೇಲೆ ಒಂದು ಒತ್ತಡವಾಗಿ ನಿಂತಿತ್ತು. ೧೯೮೯ರಲ್ಲಿ ಚೌಧರೀ ದೇವೀಲಾಲರ ಪ್ರಿಯಯೋಜನೆಯಾದ ಸಾಲಮನ್ನಾ ಕಾರ್ಯಕ್ರಮವನ್ನು ಮೊದಲಬಾರಿಗೆ ದೇಶಾದ್ಯಂತ ಘೋಷಿಸಲಾಯಿತು. ಆ ಯೋಜನೆಯನ್ನು ಮಂಡಿಸಿದವರು ಅಂದಿನ ವಿತ್ತ ಮಂತ್ರಿಯಾಗಿದ ಮಧು ದಂಡವತೆಯವರಾಗಿದ್ದರೂ, ದೇವೀಲಾಲರ ಯೋಜನೆಯೆಂದೇ ಅದು ತನ್ನ ಖ್ಯಾತಿಯನ್ನು ಪಡೆಯಿತು. ಈ ಕಾರ್ಯಕ್ರಮ ಗ್ರಾಮೀಣ ವಿತ್ತೀಯ ಯೋಜನೆಯ ಮೇಲೆ ಸರಕಾರ ನೀಡಿದ ಒಂದು ಬಲವಾದ ಪ್ರಹಾರವಾಗಿತ್ತು. ಇದರಿಂದೇನಾಯಿತು? ಲೋನ್ ಅನ್ನುವುದು ಸರಕಾರದ ದೇಣಿಗೆ ಎನ್ನುವ ಮಾತು ಸತ್ಯವಾಗುತ್ತಾ ಹೋಯಿತು. ಹೌದು, ಸಾಲ ತಿರುಗಿ ಕಟ್ಟಿದವರು ಕೋಡಂಗಿಗಳಾದರು. ತೀರಿಸದೇ ಓಡಾಡಿದವರು ಈರಭದ್ರರಾದರು! ಇದರ ಪ್ರಭಾವವನ್ನು ಆ ಕ್ಷಣಕ್ಕೆ ಲೆಕ್ಕ ಕಟ್ಟಲು ಸಾಧ್ಯವಾಗಿರಲಿಲ್ಲ. ಯಾಕೆಂದರೆ, ಸರಕಾರ "ಹೇಗೂ ವಾಪಸ್ಸು ಬರುವುದಿಲ್ಲ" ಎಂದು ನಂಬಿದ್ದ ಹಣವನ್ನು ಸಹಕಾರ ಸಂಘಗಳಿಗೆ, ಗ್ರಾಮೀಣ ಬ್ಯಾಂಕುಗಳಿಗೆ ಮತ್ತು ಬ್ಯಾಂಕುಗಳಿಗೆ ನೀಡಿದ್ದರಿಂದ ಈ ಸಂಸ್ಥೆಗಳ ಬ್ಯಾಲೆನ್ಸ್ ಷೀಟ್ ಚೆನ್ನಾಗಿ ಕಾಣತೊಡಗಿತು. ಆದರೆ ಆ ನಂತರದ ದಶಕದಲ್ಲಿ ನಮಗೆ ಸ್ಪಷ್ಟವಾಗಿ ಕಂಡದ್ದು ಸಹಕಾರಿ ಸಂಘಗಳ ಅವಸಾನ, ಮತ್ತು ಗ್ರಾಮೀಣ ಬ್ಯಾಂಕುಗಳು ನಷ್ಟದ ಪ್ರಪಾತದಲ್ಲಿ ತೂರಿಹೋದ ದುರಂತ ಗಾಥೆ. 

೫೦ರ ದಶಕದಲ್ಲಿ ಗ್ರಾಮೀಣ ಕುಟುಂಬಗಳು ಪಡೆದ ಒಟ್ಟಾರೆ ಸಾಲದಲ್ಲಿ ಸಂಸ್ಥಾಗತ ಮೂಲಗಳಿಂದ ಪಡೆದದ್ದು ಕೇವಲ ೭.೩ ಪ್ರತಿಶತವಾಗಿತ್ತು. ಆ ಸಂದರ್ಭದಲ್ಲಿಯೇ ಗೋರ್‌ವಾಲಾ ಸಮಿತಿ ಸಹಕಾರಿ ಸಂಘಗಳು ಸರಕಾರದ ಭಾಗಸ್ವಾಮ್ಯದಲ್ಲಿ ಕೆಲಸ ಮಾಡಬೇಕೆಂದು ಕರೆಯಿತ್ತದ್ದು. ೧೯೬೧ರ ವೇಳೆಗ ಸಂಸ್ಥಾಗತ ಮೂಲಗಳ ಪಾಲು ೧೮.೭% ಸೇರಿತ್ತು. ೧೯೭೧ರ ವೇಳೆಗೆ ಇದು ಇನ್ನೂ ಹೆಚ್ಚಾಗಿ ೩೨%ವಾಗಿತ್ತು. ಆಗಷ್ಟೇ ಬ್ಯಾಂಕುಗಳ ರಾಷ್ಟ್ರೀಕರಣ, ಮತ್ತು ೭೦ ದಶಕದಲ್ಲಿ ಪ್ರಾರಂಭವಾದ ಗ್ರಾಮೀಣ ಬ್ಯಾಂಕುಗಳ ಸ್ಥಾಪನೆಯಿಂದಾಗಿ ಒಂದೇ ದಶಕದಲ್ಲಿ ಸಂಸ್ಥಾಗತ ಮೂಲದಿಂದ ಬಂದ ಸಾಲದ ದುಪ್ಪಟ್ಟಾಗಿ ೬೩ ಪ್ರತಿಶತವಾಯಿತು. ೧೯೯೧ರವರೆಗೂ ಇದು ಬೆಳವಣಿಗೆಯದಿಕ್ಕನ್ನೇ ಹೊಂದಿತ್ತು. ೧೯೯೧ರ ಸರ್ವೇ ಪ್ರಕಾರ ಸಂಸ್ಥಾಗತ ಮೂಲದ ಪಾಲು ೬೬ ಪ್ರತಿಶತವಾಯಿತು. ಆದರೆ ೧೯೮೯ರ ಮನ್ನಾದ ನಂತರ ಈ ಪಾಲು ೬೧%ಗೆ ಇಳಿದದ್ದನ್ನು ನಾವು ಕಾಣಬಹುದಾಗಿದೆ. ಆದರೆ ಇದರಲ್ಲಿನ ಇನ್ನೂ ಗಹನವಾದ ವಿಚಾರವೆಂದರೆ ಸಂಸ್ಥಾಗತ ಋಣದ ಭಾಗದಲ್ಲಿ ಸಹಕಾರ ಸಂಘಗಳ ಪಾಲು ೧೯೮೦ರ ದಶಕದಿಂದಲೇ ಕಿರಿದಾಗುತ್ತಾ ಹೋಗಿದ್ದು.
ಹೀಗಿರುವಾಗ ಋಣ ನೀಡುವ ಈ ಸಂಸ್ಥೆಗಳನ್ನು ಮುಗಿಸಿಬಿಡಬಹುದಾದ ಈ ಆಶ್ವಾಸನೆಗಳನ್ನು ಪೈಪೋಟಿಯ ಮೇಲೆ ಪಕ್ಷಗಳು ಯಾಕೆ ನೀಡುತ್ತವೆ ಎನ್ನುವುದು ಅರ್ಥವಾಗದಿರುವ ಮಾತಾಗಿದೆ. ೧೯೯೧ರ ನಂತರ ಬ್ಯಾಂಕುಗಳಿಗೆ ಸಾಕಷ್ಟು ಸ್ವಾಯತ್ತತೆಯನ್ನು ಸರಕಾರ ನೀಡಿತ್ತು. ಒಟ್ಟಾರೆ ಋಣದಲ್ಲಿ ೪೦ ಪ್ರತಿಶತ ಕಾಯ್ದಿಟ್ಟ ಕೆಲವು ವಲಯಗಳಿಗೆ ನೀಡಬೇಕೆಂದೂ, ೧೮ ಪ್ರತಿಶತ ಋಣ ಕೃಷಿಗಾಗಿಯೇ ನೀಡಬೇಕೆಂಬ ನೀತಿಯನ್ನು ಪಾಲಿಸುವುದರಿಂದಾಗಿ, ಆರ್ಥಿಕವಾಗಿ ಮಿಕ್ಕ ಕ್ಷೇತ್ರಗಳು ಬೆಳೆದ ಗತಿಯಲ್ಲಿ ಕೃಷಿಗೂ ಋಣ ಲಭ್ಯವಾಗುವ ನೀತಿಯಂತೂ ಇದ್ದೇ ಇತ್ತು. ಆದರೆ ಕೃಷಿ ಕ್ಷೇತ್ರದಲ್ಲಿರುವ ಎಲ್ಲ ಸಮಸ್ಯೆಗಳಿಗೂ ಆರ್ಥಿಕ ಪರಿಹಾರವನ್ನು ಹುಡುಕುವವರೆಗೂ ಸಾಲ, ಬಡ್ಡಿಗೆ ಸಂಬಂಧಿಸಿದ ನೀತಿಗಳು ಮರುಕಳಿಸುತ್ತಲೇ ಇರುತ್ತವೆ. ೧೯೯೧ರ ನಂತರ ಆರ್ಥಿಕ ನೀತಿಯಲ್ಲಿ ಒಂದೆರಡು ಹೆಜ್ಜೆ ಮುಂದೆ ಹೋಗಿದ್ದ ಸರಕಾರ ೨೧ನೇ ಶತಮಾನ ಪ್ರವೇಶಿಸುವ ವೇಳೆಗೆ ಹಿಂದಕ್ಕೆ ನಾಲ್ಕಾರು ಹೆಜ್ಜೆಗಳನ್ನು ಹಾಕಬೇಕೆಂದು ನಿರ್ಧರಿಸಿದಂತಿದೆ!

ಈಬಾರಿ ಕೇಂದ್ರ ಸರಕಾರ ಘೋಷಿಸಿರುವ ಸಾಲ ಮನ್ನಾದ ಮೂಲ ಸರಕಾರದ ಕಳೆದ ನಾಲ್ಕಾರು ವರ್ಷಗಳ ನೀತಿಯಲ್ಲಿ ನಾವು ಕಾಣಬಹುದಾಗಿದೆ. ಮೊದಲನೆಯದಾಗಿ ಕೃಷಿಯಲ್ಲಿ ಬಿಕ್ಕಟ್ಟು ಕಂಡಾಗಲೆಲ್ಲಾ ಸರಕಾರ ಮತ್ತು ರಾಜಕೀಯ ಪಕ್ಷಗಳ ಉತ್ತರ ಋಣವನ್ನು ಸುಲಭವಾಗಿ ರೈತರಿಗೆ ಒದಗಿಸುವತ್ತಲೇ ವಾಲುತ್ತದೆ. ಇದಕ್ಕೆ ಕಾರಣ ಬಹುಶಃ "ಸಿಂಗಲ್ ಲೈನ್ ಕಥೆ"ಗೆ ಇದು ಪೂರಕವಾಗಿರಬಹುದಾದ್ದೇ ಇರಬಹುದು. ಹೀಗಾಗಿ "ಮೂರು ವರ್ಷಗಳಲ್ಲಿ ಕೃಷಿ ಸಾಲ ದ್ವಿಗುಣ" ಕಾರ್ಯಕ್ರಮವನ್ನು ಹಮ್ಮಿಕೊಂಡರೆ ಅದನ್ನು ಸಾಧಿಸಿದ್ದೇವೆಂದು ಘೋಷಿಸುವುದೂ ಸುಲಭ, ಅದರಬಗ್ಗೆ ಸಂಸ್ಥೆಗಳ ಕೈ ತಿರುಚುವುದೂ ಸುಲಭ. ಅದೇ ಕೃಷಿಗೆ ಸಂಬಧಿತ ವಿಸ್ತರಣೆಯ ಕಾರ್ಯಕ್ರಮಗಳನ್ನು ಅದರ ಮೇಲಾದ ಖರ್ಚಿನಿಂದ ಮಾತ್ರ ಅಳೆಯಬಹುದಾಗಿ, ಸಿಂಗಲ್ ಲೈನ್ ಕಥೆಗೆ ಇದು ಪೂರಕವಾಗುವುದಿಲ್ಲವಾದ್ದರಿಂದ ಇದು ಆಕರ್ಷಕ ನೀತಿಯಾಗುವುದಿಲ್ಲ.
ಅರ್ಥಾತ್ ಆಕರ್ಷಕ ಘೋಷಣೆಯಾಗಬಲ್ಲಂಥದ್ದೇ ಆಕರ್ಷಕ ನೀತಿಯಾಗಬಹುದು. ಅಷ್ಟೇ. 

ಕೃಷಿ ಸಾಲ ದ್ವಿಗುಣ ಕಾರ್ಯಕ್ರಮ, ಕೃಷಿ ಸಾಲದ ಮೇಲೆ ಬಡ್ಡಿದರದಲ್ಲಿ ರಿಯಾಯಿತಿ, ಈ ಎರಡರಿಂದ ಕೃಷಿ ಉತ್ಪಾದನೆಯಲ್ಲಿ ತುಸುವಾದರೂ ಬೆಳವಣಿಗೆ ಕಾಣಬೇಕಿತ್ತು. ಆದರೆ ಒಟ್ಟಾರೆ ಉತ್ಪಾದಕತೆ ಮತ್ತು ಉತ್ಪಾದನೆ ಸ್ಥಗಿತವಾಗಿಯೇ ಉಳಿದಿದೆ. ಅರ್ಥಾತ್: ಹಣದ ಹೊಳೆಯಿಂದ ಬೆಳೆ ಬೆಳೆಯುವುದಿಲ್ಲ. ಅದಕ್ಕೆ ಬೇಕಾದ್ದು ಬೀಜ, ಗೊಬ್ಬರ, ನೀರು ಮತ್ತು ಉತ್ತಮ ಮಾರುಕಟ್ಟೆ. ಈ ನಾಲ್ಕನ್ನು ಒದಗಿಸದೇ ಬರೇ ಹಣವನ್ನು ಸಾಲದ ರೂಪದಲ್ಲಿ ಒದಗಿಸಿದರೆ ಏನು ಸಾಧಿಸಿದಂತಾಯಿತು? ಸಾಧಿಸಿದ್ದು ಇಷ್ಟೇ: ಸಾಲಕ್ಕೂಳಗಾದ, ಆತ್ಮಹತ್ಯೆಗೆ ತಯಾರಾದ ಕೃಷಿಕರು. ಈ ಕೃಷಿಕರೂ ಯಾವ ಸ್ಥರದವರು? ರಿಜರ್ವ್ ಬ್ಯಾಂಕಿನ ಅಂಕಿ ಅಂಶದ ಪ್ರಕಾರ ಕೃಷಿಸಾಲದ ಮೊತ್ತ ಬೆಳೆಯಿತಾದರೂ, ಅದನ್ನು ತೆಗೆದುಕೊಂಡ ಕೃಷಿಕರ ಸಂಖ್ಯೆ ಕಡಿಮೆಯಾಯಿತು. ಪ್ರತಿ ಸಾಲದ ಎಕೌಂಟಿನ ಸರಾಸರಿ ಮೊತ್ತ ಬೆಳೆಯಿತು. ಒಟ್ಟಾರೆ ಭೂ ಹಿಡುವಳಿಯ ಸರಾಸರಿ ವಿಸ್ತಾರ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ ಕೃಷಿಕರಿಗೆ ಕೊಡುತ್ತಿರುವ ಸರಾಸರಿ ಸಾಲ ಹೆಚ್ಚಾಗಿ, ಸಾಲ ಪಡೆವ ಕೃಷಿಕರು ಕಡಿಮೆಯಾಗುತ್ತಿದ್ದಾರೆಂದರೆ ಈ ಸಾಲ ದೊಡ್ಡ ಹಿಡುವಳಿಯಿದ್ದವರ ಕಡೆಗೆ ವಾಲಿದೆ ಅನ್ನುವುದನ್ನು ಹೇಳಲು ಯಾವ ಸಂಖ್ಯಾಶಾಸ್ತ್ರದ ಗಹನ ಫಾರ್ಮುಲಾವನ್ನೂ ಬಳಸುವ ಅವಶ್ಯಕತೆಯಿಲ್ಲ. ಒಟ್ಟಾರೆ ಉತ್ಪಾದಕತೆ, ಉತ್ಪಾದನೆ ಬೆಳೆಯದೆಯೇ ಸಾಲ ಬೆಳೆಯುತ್ತಿದೆ ಅಂದರೆ ಅದನ್ನು ತಿರುಗಿಕಟ್ಟಬಲ್ಲ ಕ್ಷಮತೆ ಕಡೆಮೆಯಾದದ್ದೇ ಸರಿಯಿರಬಹುದಲ್ಲ. ಇಲ್ಲ ಆ ಸಾಲ ಕೃಷಿಗಲ್ಲದೇ ಬೇರೆ ಯಾವುದೋ ಕಾರ್ಯಕ್ಕಾಗಿ ಉಪಯೋಗವಾಗುತ್ತಿರಬೇಕು. ಹೀಗಾಗಿ ದ್ವಿಗುಣಗೊಂಡ ಸಾಲದಲ್ಲಿ ಒಂದು ದೊಡ್ಡ ಗೊಂದಲದ ಟೈಂ ಬಾಂಬು ಇರುವುದು ವೇದ್ಯವೇ ಆಗಿತ್ತು.


ಹೀಗೆ ಕೃಷಿ ಸಾಲದಬಗೆಗಿನ ನೀತಿಗಳನ್ನು ಸರಕಾರ ಮತ್ತು ರಾಜಕೀಯ ಪಕ್ಷಗಳು ರೂಪಿಸುತ್ತಿದ್ದ ಕಾಲದಲ್ಲಿ ಕೃಷಿಗೇನಾಗುತ್ತಿತ್ತು? ಇದು ಆಸಕ್ತಿಯ ವಿಚಾರವೇ ಸರಿ. ಹರಿತ ಕ್ರಾಂತಿ ಬಂದಾಗಿನಿಂದಲೂ ಕೃಷಿಗಿದ್ದ ಜ್ಞಾನ ಮತ್ತು ಸಂಪನ್ಮೂಲಗಳು ರೈತನ ಕೈಯಿಂದ ಜಾರಿ ಹೊರಗಿನವರ ಕೈಗೆ ಹೋಗುವುದನ್ನು ನಾವು ಕಂಡಿದ್ದೇವೆ - ಮೊದಲಿಗೆ ರೈತ ತನ್ನ ಬೆಳೆಯಲ್ಲಿನ ಭಾಗವನ್ನೇ ಮುಂದಿನ ಬಿತ್ತನೆಗೆ ಬೀಜವಾಗಿ ಬಳಸುತ್ತಿದ್ದ. ಆದರೆ ಎಚ್.ವೈ.ವಿ ಬಂದಾಗಿನಿಂದ ಬೀಜವನ್ನು ಆತ ಕೊಳ್ಳಬೇಕಾಯಿತು. ಆ ಬೀಜವನ್ನು ಕೊಂಡ ಕೂಡಲೇ ಅದನ್ನು ಉಪಯೋಗಿಸಬೇಕಾದ ರೀತಿಯನ್ನು ಬೀಜ ಒದಗಿಸುವವರು ಸೂಚಿಸಿದ ಕ್ರಮವನ್ನು ಪಾಲಿಸಬೇಕಾಯಿತು. ಅರ್ಥಾತ್ ಕೃಷಿ ಮಾಡಬೇಕಾದ ತಂತ್ರವೂ ರೈತನ ಕೈಯಿಂದ ಆಚೆಗೆ ಹೋಯಿತು. ಇದೇ ಕಥೆ ಇತರ ಸಂಪನ್ಮೂಲಗಳಿಗೂ ವರ್ತಿಸುತ್ತದೆ. ಗೊಬ್ಬರವೂ, ಕೀಟನಾಶಕವೂ ರೈತನ ಕೈಯಿಂದ ತಪ್ಪಿ ಕಂಪನಿಗಳ ಕೈಗೆ ಸೇರಿದವು. ಸರಕಾರ ಒದಗಿಸುತ್ತಿದ್ದ "ಕೃಷಿ ವಿಸ್ತಾರ ಸೇವೆ" ಇಲ್ಲದಾದಾಗ ಮೊರೆ ಹೋಗಬೇಕಾದದ್ದು ಬೀಜ/ಕೀಟನಾಶಕ ತಯಾರಿಸುವ ಕಂಪನಿಗಳು ಒದಗಿಸುವ "ವಿಸ್ತಾರ ಸೇವೆ"ಗಳತ್ತ. ಯಾವ ಕೀಟನಾಶಕ ಕಂಪನಿ "ಕೀಟನಾಶಕಗಳನ್ನು ಉಪಯೋಗಿಸಬೇಡ" ಅನ್ನುವ ಉಪದೇಶವನ್ನು ನೀಡಬಹುದು? ಯೋಚಿಸಿ ನೋಡಿ! ಹೀಗಾಗಿ ಸಾಲ ಹೆಚ್ಚಾದರೂ ಮಿಕ್ಕ ಸೇವಗಳ ಬಗ್ಗೆ ಸರಕಾರ ಹೆಚ್ಚಿನ ಗಮನವನ್ನು ಹರಿಸಲಿಲ್ಲ. ಸಿಂಗಲ್ ಲೈನ್ ಕಥೆಯಲ್ಲಿ ಈ ಉಪಕಥೆಗಳಿಗೆ ತಾವಿಲ್ಲ. ಸಿನೆಮಾದಲ್ಲಿರುವ ಕಾಮೆಡಿ ಟ್ರಾಕಿನಂತೆ, ಇಲ್ಲಿ ಯಾರಿಗೂ ತಿಳಿಯದೆಯೇ ಒಂದು ಟ್ರಾಜೆಡಿ ಟ್ರಾಕಾಗಿ ವಿಸ್ತಾರ ಸೇವೆಗಳು ನಿಂತುಬಿಟ್ಟವು. 

ಇದರ ಜೊತೆಗೆ ಕ್ಯಾಪಿಟಲ್ ಫಾರ್ಮೇಶನ್ [ದೀರ್ಘಕಾಲ ಪ್ರಯೋಜನವಾಗುವಂತಹ ಹೂಡಿಕೆಗಳು] ಸರಕಾರೀ ವಲಯದಲ್ಲಲ್ಲದೇ ಹೆಚ್ಚಾಗಿ ಖಾಸಗೀ ವಲಯದಲ್ಲಿ ಆಗತೊಡಗಿದೆ. ಸರಳವಾಗಿ ಇದರ ಕಥೆಯನ್ನು ಇಂತು ನಿರೂಪಿಸಬಹುದು: ಸರಕಾರದ ಯೋಜನೆಯಡಿ ನೀರಾವರಿ ಒದಗಿಸಿದರೆ, ಅದರ ಎಲ್ಲ ಖರ್ಚೂ ಸರಕಾರದ್ದು. ಕಾಲುವೆಗಳಮೂಲಕ ಬಂದ ನೀರಾವರಿಯ ಲಾಭ ಕೃಷಿಕನಿಗೆ. ಅದೇ ಕೃಷಿಕ ಕೊಳವೆಬಾವಿ ತೋಡಿ, ಅದಕ್ಕೆ ಪಂಪು ಜೋಡಿಸಿದರೆ, ಅದರ ಖರ್ಚು ಅವನದೇ, ಅದರ ಸಾಲಕ್ಕಾಗುವ ಬಡ್ಡಿಯನ್ನೂ ಅವನೇ ತುಂಬಬೇಕು. ಮೊದಲ ಹಂತದಲ್ಲಿ ನೀರಾವರಿಯಿರುವುದರಿಂದ ಹೆಚ್ಚಾಗುವ ಪೈರಿನಿಂದಾಗಿ ಅದರಿಂದ ಬರುವ ಆದಾಯದಿಂದಾಗಿ ಈ ಖರ್ಚು ಅವನನ್ನು ಹೆಚ್ಚಾಗಿ ತಟ್ಟಲಾರದು. ಆದರೆ ಆ ಕೊಳವೆ ಬಾವಿ ಒಣಗಿ ಅದರ ಆಳವನ್ನು ಗಹನಗೊಳಿಸಬೇಕಿದ್ದರೆ, ಅದಕ್ಕೆ ಹೆಚ್ಚಿನ ಶಕ್ತಿಯ ಪಂಪನ್ನು ಹಾಕಬೇಕಿದ್ದರೆ, ಆಗ, ಇರುವ ಸಂಪನ್ಮೂಲಗಳಿಂದ ಬರುವ ಆದಾಯದ ಸ್ಥರವನ್ನು ಉಳಿಸಿಕೊಳ್ಳಲು, ಅಷ್ಟೇ ಪೈರನ್ನು ಉತ್ಪಾದಿಸಲು ಹೆಚ್ಚಿನ ಸಾಲ, ಹೆಚ್ಚಿನ ಬಡ್ಡಿ, ಹೆಚ್ಚಿನ ವಿದ್ಯುತ್ ಖರ್ಚುಗಳನ್ನು ಮಾಡಬೇಕಾಗುತ್ತದೆ. ಹೀಗಾಗಿ ಇರುವ ಸ್ಥಳದಲ್ಲೇ ಇರಲು ಓಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ. ಕಳೆದ ಹಲವು ವರ್ಷಗಳಲ್ಲಿ ಕ್ಯಾಪಿಟಲ್ ಫಾರ್ಮೇಷನ್ ಹೆಚ್ಚು ಖಾಸಗೀ ವಲಯದಲ್ಲೇ ಆಗಿದೆ.
 

ಕೃಷಿಯಾಧಾರಿತ ಸೇವೆಗಳನ್ನೊದಗಿಸುವ ರೀಟೈಲ್ ಕ್ರಾಂತಿಯಾಗುತ್ತಿರುವ ಕಾಲದಲ್ಲೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದುರಂತಗಾಥೆಯ ವಿಪರ್ಯಾಸ ರಾಜಕೀಯ ಪಕ್ಷಗಳಿಗೆ ತಟ್ಟುತ್ತಿಲ್ಲವೇ? ಟಾಟಾ
ಪ್ರಾರಂಭಿಸಿದ ಸ್ಟಾರ್ ಇಂಡಿಯಾ ಬಜಾರ್, ಬಿರ್ಲಾ ಪ್ರಾರಂಭಿಸಿದ ಮೋರ್ ಫರ್ ಯೂ, ಅಂಬಾನಿಯ ರಿಲಯನ್ಸ್ ಫ್ರೆಶ್, ಐ.ಟಿ.ಸಿ ಯ ಚೌಪಾಲ್ ಸಾಗರ್, ಬಿಯಾನಿಯ ಬಿಗ್ ಬಜಾರ್, ಆರ್.ಪಿ.ಜಿಯ ಸ್ಪೆನ್ಸರ್ಸ್, ಹಾಂಗ್‍ಕಾಂಗ್‌ನಿಂದ ಬಂದು ನೆಲೆಸಿರುವ ಡೈರೀಫಾರ್ಮ್ ನ ಫುಡ್ ವರ್ಲ್ಡ್, ಬೆಂಗಳೂರಿನಲ್ಲಿ ಕೂತು ಬಿಜಿನೆಸ್ ಮಾಡುತ್ತಿರುವ ಜರ್ಮನಿಯ ಮೆಟ್ರೋ, ನಮ್ಮ ದೇಶದ ಮೂಲೆಮೂಲೆಗೆ ಅಂಗಡಿತೆರೆಯಬೇಕೆಂದಿರುವ ಅಮೆರಿಕದ ವಾಲ್‌ಮಾರ್ಟ್-ಭಾರತಿ.. ಎಲ್ಲ ಸಂಸ್ಥೆಗಳೂ ಕೃಷಿಯಾಧಾರಿತ ಈ ಧಂಧೆಯಲ್ಲಿ ಹಣವನ್ನು ಹೂಡುತ್ತಿರುವ ಸಮಯದಲ್ಲಿಯೇ ಕೃಷಿಯಲ್ಲಿ ಈ ಬಿಕ್ಕಟ್ಟು ಬಂದಿರುವುದರ ಮರ್ಮವೇನು? ಹಾಗೂ ಹೆಚ್ಚು ಹೆಚ್ಚು ಸಾಲ, ಕಡಿಮೆ ಬಡ್ಡಿದರ, ಈ ಎರಡೂ ಸಮಸ್ಯಗೆ ಪರಿಹಾರವೇ? ಎಂಬ ಪ್ರಶ್ನೆಗಳೂ ನಮ್ಮ ಮುಂದೆ ಎದ್ದು ನಿಲ್ಲುತ್ತವೆ. ಬಹಳಹಿಂದೆ ದಲಿತ ಕವಿ ಸಿದ್ಧಲಿಂಗಯ್ಯ ಕೇಳಿದ್ದ ಯಾರಿಗೆ ಬಂತು ಯಾರಿಗೆ ಬಂತು ೪೭ರ ಸ್ವಾತಂತ್ರ ಅನ್ನುವ ಪ್ರಶ್ನೆಯನ್ನು ೬೦ ವರ್ಷಗಳನಂತರವೂ ಅನುರಣಿಸುವ ಅವಶ್ಯಕತೆ ಕಾಣಿಸುತ್ತದೆ.
ರಿಜರ್ವ್ ಬ್ಯಾಂಕಿನ ಡೆಪ್ಯುಟಿ ಗವರ್‍ನರ್ ಆದ ರಾಕೇಶ್ ಮೋಹನ್ ಈಚೆಗೆ ಬರೆದ ಪ್ರಬಂಧದಲ್ಲಿ ಕೊಟ್ಟಿರುವ ಕೆಲವು ಅಂಕಿ ಸಂಖ್ಯೆಗಳ ಪ್ರಕಾರ, ಕೃಷಿಯ ಉತ್ಪತ್ತಿಯಲ್ಲಿ ಹೂಡಿಕೆಗೊಳ್ಳುವ ನೂರು ರೂಪಾಯಿಯಲ್ಲಿ ಋಣದ ಭಾಗ ಕೇವಲ ೨೦ರಿಂದ ೨೫ ಪ್ರತಿಶತ. ಉತ್ಪಾದನೆಯಾಗಿ ಮಾರುಕಟ್ಟೆಯಲ್ಲಿ ದೊರೆವ ಮೊಬಲಗಿನಲ್ಲಿ ಇದು ಕೇವಲ ೫ ಪ್ರತಿಶತ. ಹೀಗಾಗಿ "ಸಾಲ"ದ ಮೇಲೆ ಕೇಂದ್ರೀಕೃತವಾಗಿರುವ ರಾಜಕೀಯ ಪಕ್ಷಗಳ ದೃಷ್ಟಿ ಬಹುಶಃ ಅವಶ್ಯಕತೆಗಿಂತ ಹೆಚ್ಚಿನ ಗಮನವನ್ನು ಸೆಳೆಯುತ್ತಿರಬಹುದೇ? ಒಟ್ಟಾರೆ ಖರ್ಚಿನಲ್ಲಿ ಕೇವಲ ೨೦ ಪ್ರತಿಶತ ಸಂಸ್ಥಾಗತ ಸಾಲದ ಮೂಲಕ ಪೂರೈಸುವುದಾದರೆ ಅದರೆ ಮೇಲಿನ ಬಡ್ಡಿ ಧರದಲ್ಲಿ ಏರುಪೇರುಮಾಡುವುದರಿಂದ ಒಟ್ಟಾರೆ ಆಗುವ ಖರ್ಚಿನ ಏರುಪೇರು ಎಷ್ಟು? ಸಂಸ್ಥಾಗತ ಸಾಲದ ಬಡ್ಡಿಧರದಲ್ಲಿ ಏರುಪೇರು ಮಾಡಿದ್ದರಿಂದ ಏನಾದರೂ ಸಾಧಿಸಿದಂತಾಗುವುದೇ? ಕೇವಲ ೨೦ ಪ್ರತಿಶತ ಸಂಸ್ಥಾಗತ ಮೂಲಗಳಿಂದ ಬರುತ್ತಿರುವ ಋಣವಾದರೆ ಈ ಪಾಲನ್ನು ಹೆಚ್ಚಿಸಬಹುದೇ? ಹೌದು. ಆದರೆ ಹೆಚ್ಚಿಸುವುದರಿಂದ ಎಷ್ಟು ರೈತರಿಗೆ ಎಷ್ಟು ಲಾಭವಾಗಬಹುದು? ೬೦ರ ದಶಕದಿಂದ ಈ ಪಾಲನ್ನು ಹೆಚ್ಚಿಸುತ್ತಾ ಬಂದ ಬಂಗಾರದ ಮೊಟ್ಟೆಗಳನ್ನು ನೀಡುತ್ತಿದ್ದ ಸಂಸ್ಥೆಗಳ ಮೇಲೆ ಹೀಗೆ ಹಲ್ಲೆ ನಡೆಸುವುದರ ಪ್ರತಿಫಲವನ್ನು ನಾವು ನೋಡಿದ್ದೇವೆ.
೭೦ ದಶದದ ನೀತಿಗಳ ಬೆಲೆಯನ್ನು ೯೦ರ ದಶಕದಲ್ಲಿ ದೇಶ ತೆತ್ತಿತು. ಮೊದಲಿಗೆ ವಾಣಿಜ್ಯಬ್ಯಾಂಕುಗಳ ಪುನರ್ನಿರ್ಮಾಣ, ಅನೇಕ ಬ್ಯಾಂಕುಗಳಿಗೆ ಹೆಚ್ಚಿನ ಇಡುವಳಿ ಕೊಟ್ಟು ಅವುಗಳನ್ನು ರಕ್ಷಿಸಲಾಯಿತು. ಇದರಿಂದಾಗಿ ಈಗ ಆ ಬ್ಯಾಂಕುಗಳು ತಮ್ಮ ಕಾಲ ಮೇಲೆ ನಿಂತು, ತಮ್ಮ ಜವಾಬ್ದಾರಿಯನ್ನು ಪೂರೈಸುತ್ತಿವೆ. ೯೧ರ ನಂತರ ಆದ ಬದಲಾವಣೆಯೆಂದರೆ, ಬ್ಯಾಂಕುಗಳ ನಷ್ಟಕ್ಕೆ ಅವರೇ ಬಾಧ್ಯರಾದದ್ದು. ಇಂದಿನ ಯಾವುದೇ ಬ್ಯಾಂಕನ್ನು ನೋಡಿದರೆ ಅವು ತಮ್ಮ ಲಾಭಾಂಶದ ಬಗೆಗಿನ ಕಳಕಳಿಯಿಂದ ವರ್ತಿಸುತ್ತಿರುವುದು ವೇದ್ಯವಾಗುತ್ತದೆ. ವಾಣಿಜ್ಯಲೋಕದಲ್ಲಿರುವ ಸಂಸ್ಥೆಗಳ ನೀತಿ ಹಾಗೆಯೇ ಇರಬೇಕು. ವಾಣಿಜ್ಯ ಬ್ಯಾಂಕುಗಳನಂತರ ಗ್ರಾಮೀಣ ಬ್ಯಾಂಕುಗಳ ಕಾಯಕಲ್ಪವನ್ನೂ ಸರಕಾರ ಮಾಡಿತು. ಈ ಎರಡು ಕಾಯಕಲ್ಪಗಳನ್ನು ಮಾಡಿದಾಗ ನಾವು ನಿರೀಕ್ಷಿಸಿದ್ದು ಸರಕಾರಗಳು ಇನ್ನು ಈ ಸಂಸ್ಥೆಗಳ ದಿನನಿತ್ಯದ ಕಾರ್ಯದಲ್ಲಿ ಮೂಗು ತೂರಿಸುವುದಿಲ್ಲವೆಂದೇ. 

ಹೀಗಾಗಿ ಸಹಕಾರ ಸಂಘಗಳ ಕಾಯಕಲ್ಪಕ್ಕೆ ೨೦೦೩-೦೪ರಲ್ಲಿ 
ವೈದ್ಯನಾಥನ್ ಸಮಿತಿಯನ್ನು ನಿಯಮಿಸಿದಾಗ, ಆರ್ಥಿಕ ರಂಗದ ಎಲ್ಲ ಅಂಗಗಳಿಗೂ ಕಾಯಕಲ್ಪ ನಡೆಸಿ ಸರಕಾರ ತನ್ನ ಕೈತೊಳೆದುಕೊಳ್ಳಬಹುದು ಎಂದು ಆಶಿಸಿದ್ದು ಸಹಜವೇ ಆಗಿತ್ತು. ವೈದ್ಯನಾಥನ್ ಸಮಿತಿಯ ಶಿಫಾರಸ್ಸುಗಳನ್ನು ಮಾಡುವಾಗ ಸರಕಾರ ಸಹಕಾರ ಸಂಘಗಳ ಕಾಯಕಲ್ಪ ಯಾಕೆ ಮಾಡಬೇಕು ಅನ್ನುವುದನ್ನು ಸಮರ್ಥಿಸುತ್ತಾ ಹೇಳಿದ್ದು - ಸಹಕಾರ ಸಂಘಗಳ ಈಗಿನ ದುಸ್ಥಿತಿಗೆ ಸರಕಾರವೇ ಕಾರಣವಾದ್ದರಿಂದ ಈ ಪಾಪವನ್ನು ತೊಳೆಯಲು ಸುಮಾರು ೧೫,೦೦೦ ಕೋಟಿಯ ಮೊಬಲಗನ್ನು, ಕೇವಲ ಒಮ್ಮೆ ತೆತ್ತಬೇಕು. ಆನಂತರ ಸಹಕಾರ ಸಂಘಗಳಿಗೆ ಸ್ವಾಯತ್ತತೆ ಕೊಟ್ಟು ಅವುಗಳ ಪಾಡಿಗೆ ಅವುಗಳನ್ನು ಬಿಟ್ಟುಬಿಡಬೇಕು ಅನ್ನುವುದು ಆಶಯವಾಗಿತ್ತು. ಮುಖ್ಯವಾಗಿ ಸಾಲಮನ್ನಾದ ಬಗ್ಗೆ - ಅಂಥ ಕ್ರಿಯಯಿಂದ ಆಗುವ ಆಘಾತದ ಬಗ್ಗೆ ವೈದ್ಯನಾಥನ್ ಸಮಿತಿ ಟಿಪ್ಪಣಿಗಳನ್ನು ಮಾಡಿತ್ತು. ಆದರೆ ಯಾವುದೇ ಸಮಿತಿಯ ಶಿಫಾರಸ್ಸುಗಳನ್ನು ಸರಕಾರ ಸಮಗ್ರವಾಗಿ ಎಂದೂ ನೋಡುವುದಿಲ್ಲ. 

ಹೀಗಿದ್ದಾಗ ಪಕ್ಷದ ನಂತರ ಪಕ್ಷ ಓಟು ಕೇಳಲು ಮತ್ತೆ ಮತ್ತೆ ಯಾಕೆ ಈ ಇಂಥ ಯೋಜನೆಗಳನ್ನು ಘೋಷಿಸುತ್ತವೆ ಅನ್ನುವುದು ಅರ್ಥವಾಗದ ಮಾತೇ ಆಗಿದೆ. ಇದರಿಂದ ಓಟು ಗಿಟ್ಟುತ್ತದೆಂಬ ಭಾವನೆ ಎಲ್ಲಿಂದ ಬಂತು? ಒಂದು ಘೋಷಣೆ "ಪಾಪ್ಯುಲಿಸ್ಟ್" ಆಗಬೇಕಾದರೂ ಅದು ಅತ್ಯಂತ ಹೆಚ್ಚು ಜನರಿಗೆ ಲಾಭವುಂಟುಮಾಡುವಂಥಹದ್ದಾಗಿರಬೇಕು. ಸರಕಾರದ ಅಂಕಿಅಂಶಗಳ ಪ್ರಕಾರ ಕೇವಲ ೪೦% ಗ್ರಾಮೀಣ ಜನತೆ ಕೃಷಿಕರು. ಅವರಲ್ಲಿ ಕೇವಲ ೬೦% ರೈತ ಕುಟುಂಬಗಳು ಸಂಸ್ಥಾಗತ ಮೂಲದಿಂದ ಸಾಲ ಪಡೆದಿದ್ದಾರೆ. ಈಚಿನ ಅಂಕಿಗಳನ್ನು ನೋಡಿದರೆ ಹೆಚ್ಚಿನ ಸಾಲ ಪಡೆಯುತ್ತಿರುವುದು ದೊಡ್ಡ ಹಿಡುವಳಿಯ ರೈತರು. ಅನೇಕರು ಸಂಸ್ಥಾಗತ ಮೂಲದ ಸಾಲಗಳಿಂದ ವಂಚಿತರಾಗಿದ್ದಾರೆ. ಸರಕಾರ- ಪಕ್ಷಗಳು ಏನೇ ಮಾಡಿದರೂ, ತನ್ನ ಹದ್ದುಬಸ್ತಿನಲ್ಲಿರುವ ಬ್ಯಾಂಕು, ಸಹಕಾರ ಸಂಘಗಳ ಮೂಲಕವೇ ತನ್ನ ಕಾರ್ಯಕ್ರಮವನ್ನು ಜಾರಿಮಾಡಲು ಸಾಧ್ಯ. ಹೀಗಾಗಿ, ಈ ಇಂಥ ಘೋಷಣೆಗಳು ಉಪಯೋಗವಾಗುವುದು, ೪೦%ದ ೬೦% ರೈತ ಕುಟುಂಬಗಳ ಒಂದು ಪುಟ್ಟಭಾಗಕ್ಕೆ. ಕೃಷಿಕರಲ್ಲಿ ೪೦% ಕುಟುಂಬಗಳು ಸಂಸ್ಥಾಗತ ಮೂಲದಿಂದ ವಂಚಿತರಾಗಿದ್ದಾರೆ, ಮತ್ತು ಒಟ್ಟಾರೆ ಜನಸಂಖ್ಯೆಯಲ್ಲಿ ೬೦% ಕುಟುಂಬಗಳಿಗೆ ಇದರಿಂದ ಯಾವುದೇ ಪ್ರಯೋಜನವಿಲ್ಲ. ಇವರುಗಳೆಲ್ಲಾ ಈ ರಾಜಕೀಯ ಪಕ್ಷಗಳ ಬೂಟಾಟಿಕೆಯನ್ನು ಅರ್ಥ ಮಾಡಿಕೊಳ್ಳಬಲ್ಲವರು. ಬಡ್ಡಿಧರದ ಬದಲಾವಣೆಯಿಂದ ತಾವು ಯಾವಲಾಭವನ್ನೂ ಪಡೆಯುವುದಿಲ್ಲವಾದ್ದರಿಂದ ರಾಜಕೀಯ ಪಕ್ಷಗಳ ಯೋಜನೆಯಿಂದ ವಂಚಿತರಾಗಿದ್ದಾರೆನ್ನಿಸಿ ಸಹಜವಾಗಿಯೇ ಸಿಟ್ಟಾಗಿ, ವಂಚಿಸುವ ಪಕ್ಷದ ವಿರುದ್ಧ ನಿಲ್ಲಲಿದ್ದಾರೆ. 


ಎಲ್ಲಕ್ಕಿಂತ ವಿಚಿತ್ರ ಘೋಷಣೆ ಎಂದರೆ ಬಡ್ಡಿದರದಲ್ಲಿ ಕಡಿತ ಮಾಡುತ್ತೇವೆಂಬ ಘೋಷಣೆ. ಅದರಿಂದ ಯಾರಿಗೆ ಲಾಭ? ಒಟ್ಟಾರೆ ಕೃಷಿಗಾಗುವ ಖರ್ಚಿನಲ್ಲಿ ೨೦% ಸಂಸ್ಥಾಗತ ಸಾಲದ ಮೂಲಕ ಬಂದರೆ, ಆ ಸಾಲದ ಮೇಲೆ ಬಡ್ಡಿ ಕಡಿಮೆ ಮಾಡಿದರೆ ಆಗುವ ಲಾಭವಾದರೂ ಏನು? ಸರಿಯಾದ ಬೆಲೆ ಸಿಗದಿದ್ದಾಗ, ಪೈರೇ ನಾಶವಾಗಿ ಹೋಗುತ್ತಿರುವಾಗ, ನೀರಿನ ಸರುಪಾಯವಿಲ್ಲದಾಗ, ಬಡ್ಡಿಯ ಕಡಿತದಿಂದಾಗಿ ಯಾವ ಪ್ರಯೋಜನವೂ ಆಗುವುದಿಲ್ಲ ಎಂದು ಈ ಪಕ್ಷಗಳಿಗೆ ವಿವರಿಸುವವರು ಯಾರು? ಅತೀ ಬಡವರಿಗೆ ಸಾಲಕೊಟ್ಟು ವಸೂಲಾತಿ ಮಾಡಿ ಭೇಷ್ ಅನ್ನಿಸಿಕೊಳ್ಳುತ್ತಿರುವ ಮೈಕ್ರೋಫೈನಾನ್ಸ್ ನಿಂದ ನಾವು ಕಲಿತಿರುವುದಾದರೂ ಏನು? ಹಣದ ಅವಶ್ಯಕತೆಯಿರುವಲ್ಲಿ ಅದನ್ನು ಒದಗಿಸುವುದು ಮೊದಲ ಪ್ರಾಮುಖ್ಯತೆ ಆಗುತ್ತದೆ. ಅದನ್ನು ಪೂರೈಕೆಗೆ ಜನ ತೆತ್ತಬೇಕಾದ ಬೆಲೆಯ ಪ್ರಾಮುಖ್ಯತೆ ಬರುವುದು ನಂತರ. ಬಡ್ಡಿ ದರದಲ್ಲಿ ಕಡಿತ ಘೋಷಿಸಿ ಸಾಲವೇ ಕೊಡದಿದ್ದಲ್ಲಿ, ಆ ಘೋಷಣೆಯ ಅರ್ಥವಾದರೂ ಏನು. ನಮಗಿಷ್ಟವಿಲ್ಲದಿದ್ದರೂ ನಾವು ಗುಜರಾತಿನ ಸರಕಾರ ವಿದ್ಯುತ್ ಪೂರೈಕೆಯಲ್ಲಿ ಮಾಡಿರುವ ಪ್ರಯೋಗವನ್ನು ಗಮನಿಸಬೇಕು. ಅಲ್ಲಿ ದಿನಕ್ಕೆ ೨೪ ತಾಸು ಅವಿರತ ವಿದ್ಯುತ್ ಸರಬರಾಜು ಹಳ್ಳಿಹಳ್ಳಿಯಲ್ಲೂ ಇದೆ. ಅದಕ್ಕೆ ತಕ್ಕ ಶುಲ್ಕವನ್ನು ಸರಕಾರ ತೆಗೆದುಕೊಳ್ಳುತ್ತಿದೆ. ಹಾಗೂ ಅದೇ ಪಕ್ಷ ಮತ್ತೆ ಚುನಾಯಿತವಾಗಿ ಬಂದಿದೆ.
 

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಗ್ಯಾರೆಂಟಿ ಕಾನೂನಿನನ್ವಯ ಕೊಡಬೇಕಿದ್ದ ಕೂಲಿ ಹಣವನ್ನು ಬ್ಯಾಂಕಿನ ಮೂಲಕ ಕೊಡುವುದಕ್ಕೆ ಸರಕಾರ ಸನ್ನದ್ಧವಾಗಿತ್ತು. ಸರ್ವರಿಗೂ ಒಂದು ಬ್ಯಾಂಕ್ ಅಕೌಂಟ್ ಇರಬೇಕೆಂಬ ಫೈನಾನ್ಶಿಯಲ್ ಇನ್ಕ್ಲೂಷನ್ ಪಥಕವನ್ನು ಹಾಕಿತ್ತು. ಈಗ ಈ ಸಾಲ ಮನ್ನಾದ ಮೂಲಕ ಬ್ಯಾಂಕಿಗೆ ಬರುತ್ತಿದ್ದ ಗಿರಾಕಿಗಳನ್ನು ಬರಬೇಡಿರೆಂದು ಸರಕಾರವೇ ಹೊರಗಟ್ಟುತ್ತಿದೆ. ಬಜೆಟ್ಟಿಗೆ ಮುನ್ನ ನಾಬಾರ್ಡ್ ವತಿಯಿಂದ ನಿಯಮಿಸಿದ ಒಂದು ಸಮಿತಿ ಬೇರೆಯೇ ಸಲಹೆಯನ್ನು ನೀಡಿತ್ತು. ರೈತರ ಸಾಲ ಮನ್ನಾ ಮಾಡಲೇ ಬೇಕೆಂದರೆ ಅದನ್ನು "ಸೆಟಲ್‍ಮೆಂಟ್" ಮೂಲಕ, ಅವರನ್ನು ಬ್ಯಾಂಕಿಗೆ ಆಹ್ವಾನಿಸಿ, ಅವರ ಪರಿಸ್ಥಿತಿಯನ್ನು ನೋಡಿ ಆ ಪ್ರಕಾರವಾಗಿ ಸಾಲದ ಇತ್ಯರ್ಥ ಮಾಡಬೇಕೆಂದೂ, ಹಾಗೂ ಸಾಲದ ಇತ್ಯರ್ಥವಾದಮೇಲೆ ಮರುಸಾಲ ಕೊಟ್ಟ ನಂತರವೇ ಬ್ಯಾಂಕಿಗೆ ಸರಕಾರ ನಷ್ಟಪರಿಹಾರ ಒದಗಿಸಬೇಕೆಂದೂ ಆ ಸಮಿತಿ ಸೂಚಿಸಿತ್ತು. ಹಾಗೆ ಮಾಡಿದ್ದಲ್ಲಿ ಬ್ಯಾಂಕು/ಸಹಕಾರ ಸಂಘಗಳು ತಮ್ಮ ಗಿರಾಕಿಗಳ ಪರಿಸ್ಥಿತಿಗನುಗುಣವಾಗಿ, ಅವರನ್ನು ಬ್ಯಾಂಕಿನ ಗಿರಾಕಿಗಳಾಗಿ ಉಳಿಸಿಕೂಳ್ಳುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಈಗಿನ ಈ ಮನ್ನಾ, ಹಾಗೂ ಘೋಷಣಾ ಪತ್ರದಲ್ಲಿರುವ ಸಾಲದ ಬಡ್ಡಿದರ ಕಡಿಮೆ ಮಾಡುವುದರಿಂದ, ಬಡವರು ಬ್ಯಾಂಕಿನಿಂದ ದೂರವಾಗುವುದರಲ್ಲಿ ಅನುಮಾನವೇ ಇಲ್ಲ. ನಾಲ್ಕಾರು ವರ್ಷಗಳ ಮೇಲೆ ಬ್ಯಾಂಕುಗಳಿಗೆ ಮತ್ತೊಂದು ಸ್ಪೆಷಲ್ ಪ್ಯಾಕೇಜನ್ನು ಸರಕಾರ ಘೋಷಿಸಬೇಕಾಗುವುದು ಅನಿವಾರ್ಯವಾಗಬಹುದು.
 

ಋಣ ಒದಗಿಸಬೇಕು. ಅದನ್ನು ಮಾಡುವುದು ವಿತ್ತೀಯ ಸಂಸ್ಥೆಗಳು. ಆ ಕೆಲಸವನ್ನು ಅವರಿಗೇ ಬಿಟ್ಟು ಪಕ್ಷಗಳು ಸರಿಯಾದ ರಸ್ತೆ, ಸ್ಕೂಲು, ಆಸ್ಪತ್ರೆ, ಕೃಷಿ ವಿಸ್ತಾರ ಕಾರ್ಯಕ್ರಮಗಳತ್ತ ಗಮನ ಹರಿಸಿದರೆ, ರೈತರಲ್ಲದೇ ಇತರರೂ ಸುಖವಾಗಿರಬಹುದು.

ಎಂ.ಎಸ್.ಶ್ರೀರಾಮ್
೨೭ ಏಪ್ರಿಲ್ ೨೦೦೮

ಬಡವರು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು


ಬಡಕುಟುಂಬಗಳ ಜೀವನದಲ್ಲಿ ಬೇಕಾದ ವಿತ್ತೀಯ ಸೇವೆಗಳ ಬಗೆಗಿನ ಮಾಹಿತಿಯನ್ನು ಪರಿಶಿಲಿಸೋಣ. 1971ರಲ್ಲಿ ನಡೆಸಿದ್ದ ರಾಷ್ಟ್ರೀಯ ದಶಮಾನ ಸರ್ವೆಯ ಪ್ರಕಾರ ಗ್ರಾಮೀಣ ಕುಟುಂಬಗಳ ಸುಮಾರು 30 ಪ್ರತಿಶತ ಸಾಲದ ಮೊತ್ತ ಮಾತ್ರ ಸಂಸ್ಥಾಗತ ಮೂಲಗಳಿಂದ [ಬ್ಯಾಂಕು, ಸಹಕಾರ ಸಂಘ - ಹೀಗೆ] ಬಂದಿದ್ದರೆ ಮಿಕ್ಕ 70 ಪ್ರತಿಶತ ಸಾಲದ ಮೊತ್ತವನ್ನು ಇತರ ಮೂಲಗಳಿಂದ ಈ ಕುಟುಂಬಗಳು ಪಡೆದಿದ್ದವು. ಬ್ಯಾಂಕುಗಳ ರಾಷ್ಟ್ರೀಕರಣ ಆಗಷ್ಟೇ ಆಗಿತ್ತು. 1981ಕ್ಕೆ ಬರುವ ವೇಳೆಗೆ ಸುಮಾರು 60 ಪ್ರತಿಶತ ಸಾಲದ ಮೊತ್ತ ಸಂಸ್ಥಾಗತ ಮೂಲಗಳಿಂದ ಬರಲು ಪ್ರಾರಂಭವಾಗಿತ್ತು. ನಗರ ಪ್ರದೇಶಗಳ ಮಾಹಿತಿಯೂ ಇದಕ್ಕಿಂತ ತೀವ್ರ ಭಿನ್ನತೆಯನ್ನೇನೂ ತೋರಿರಲಿಲ್ಲ. 1991ರ ವೇಳೆಗೆ ಸಂಸ್ಥಾಗತ ಮೂಲಗಳ ಪಾಲು 56 ಪ್ರತಿಶತಕ್ಕೆ ಇಳಿದಿತ್ತು. 2003ರಲ್ಲಿ ಪ್ರಪಂಚ ಬ್ಯಾಂಕು ನಡೆಸಿದ ಒಂದು ದೊಡ್ಡ ಅಧ್ಯಯನದಲ್ಲಿ ಸಂಸ್ಥೆಗಳ ಪಾಲು ತುಸುವೇ ಬೆಳಿದಿದ್ದು 1971-1981 ನಡುವೆ ಕಂಡಂಥಹ ಯಾವ ದೊಡ್ಡ ಬದಲಾವಣೆಯೂ ಕಂಡುಬರಲಿಲ್ಲ.

ಈ ಮಾಹಿತಿಯನ್ನು ನಾವು ಹೇಗೆ ಅರ್ಥೈಸಬಹುದು? ಒಟ್ಟಾರೆ ಮಾಹಿತಿಯನ್ನು ನಾವು ರಾಷ್ರ್ಟೀಯ ಮಟ್ಟದಲ್ಲಿ ನೋಡಿದಾಗ ಬ್ಯಾಂಕುಗಳ ರಾಷ್ಟ್ರೀಕರಣದಿಂದ ಬಡವರಿಗೆ ವಿತ್ತೀಯ ಸೇವೆಗಳು - ಮುಖ್ಯವಾಗಿ ಸಾಲ - ಸಿಗುವಂತಾಯಿತು - ಹಾಗೂ ಒಂದು ದಶಕದಲ್ಲಿ ಆ ನೀತಿಯ ದೊಡ್ಡ ಪ್ರಭಾವ ನಮಗೆ ಕಾಣಿಸಿತು ಎನ್ನಬಹುದು. ಆ ನಂತರದ ನೀತಿಗಳು ಬಡ್ಡಿವ್ಯಾಪಾರಿಗಳ ವ್ಯಾಪಾರದ ಮೇಲೆ ದೊಡ್ಡ ಪ್ರಭಾವವನ್ನ ಬೀರಿಲ್ಲ. ನಿಧಾನವಾಗಿ ಒಂದಡೆ ಬೆಳೆಯುತ್ತಾ ಒಂದೆಡೆ ಕುಂಟುತ್ತಾ ಈ ಸೇವೆಗಳು ಮುಂದುವರೆದಿವೆ.

ರೋಹಿಣಿ ಪಾಂಡೆ ಮತ್ತು ರಾಬಿನ್ ಬರ್ಗೆಸ್ ಅವರುಗಳ ಈಚಿನ ಅಧ್ಯಯನದ ಪ್ರಕಾರ ಬ್ಯಾಂಕುಗಳ ರಾಷ್ಟ್ರೀಕರಣದಿಂದ - 1991ರ ಉದಾರೀಕರಣದವರೆಗಿನ ಕಾಲದ ಮಾಹಿತಿಯನ್ನು ಪರಿಶೀಲಿಸಿದಾಗ ಆ ಘಟ್ಟದಲ್ಲಿ ಒಟ್ಟಾರೆ ಬಡತನವೂ ಕಡಿಮೆಯಾಯಿತಲ್ಲದೇ, ಕೃಷಿಯ ಉತ್ಪತ್ತಿಯೂ ಹೆಚ್ಚಿತು - ಆದರೆ ತದನಂತರದ ಉದಾರೀಕರಣದ ನಂತರ ಇದಕ್ಕೆ ವಿರುದ್ಧವಾದ ಪ್ರಕ್ರಿಯೆ ಕಾಣಿಸುತ್ತಿದೆ ಎಂದು ಅವರುಗಳು ವಾದಿಸುತ್ತಾರೆ. ಇದು ಯಾಕೆ ಹೀಗಾಗಿರಬಹುದು ಅನ್ನುವುದು ಕುತೂಹಲದ ವಿಷಯ.

ಇದನ್ನು ಒಂದು ರಾಷ್ಟ್ರೀಕೃತ ಬ್ಯಾಂಕಿನ ದೃಷ್ಟಿಯಿಂದ ನೋಡೋಣ. ಬಡ್ಡಿವ್ಯಾಪಾರಿ ತಿಂಗಳಿಗೆ 3 ರರಿಂದ 5 ಪ್ರತಿಶತ ಬಡ್ಡಿ ಪಡೆಯುತ್ತಿರುವ ವಾತಾವರಣದಲ್ಲಿ ಬ್ಯಾಂಕುಗಳು ವ್ಯಾಪಾರ ಮಾಡಬೇಕು. ಆ ವಾತಾವರಣದಲ್ಲಿ ಸರಕಾರದ ಆದೇಶದ ಮೇರೆಗೆ ಕಡಿಮೆ ಬಡ್ಡಿ ದರದಲ್ಲಿ - ಕೃಷಿಗೆ ವರ್ಷಕ್ಕೆ 7 ಪ್ರತಿಶತ ಬಡ್ಡಿ, ಹಾಗೂ ಮಿಕ್ಕ ಸಾಲಗಳಿಗೂ ಪಿ.ಎಲ್.ಆರ್ - ಅತ್ಯುತ್ತಮ ಗ್ರಾಹಕರಿಗೆ ನೀಡುವ - ದರದಲ್ಲಿ ನೀಡಬೇಕು. ಸಾಲದ ಮೊತ್ತ ಸಣ್ಣದು. ಇದಕ್ಕಾಗುವ ಕೆಲಸ ಹೆಚ್ಚಿನದು. ಈ ಕೆಲಸವನ್ನು ಮಾಡಲು ಯಾರಿಗೆ ಆಸಕ್ತಿಯಿರಬಹುದು....


ಬ್ಯಾಂಕಿನ ಉನ್ನತಾಧಿಕಾರಿಗಳಾದ ಚೇರ್ಮನ್ನರ ದೃಷ್ಟಿಯಿಂದ ನೋಡಿದರೆ ಅವರ ಕೆಲಸವೂ ಕಷ್ಟದ್ದೇ. ಉದಾರೀಕರಣದ ನಂತರ ಅವರುಗಳು ತಮ್ಮ ಬ್ಯಾಂಕುಗಳ ಲಾಭಾಂಶವನ್ನೂ ಗಮನದಲ್ಲಿಡುತ್ತಾ - ಷೇರ್ ಬಜಾರಿನಲ್ಲಿ ತಮ್ಮ ಬ್ಯಾಂಕಿನ ಕಿಮ್ಮತ್ತು ಆರಕ್ಕೇಳುತ್ತಿದೆಯೋ, ಮೂರಕ್ಕಿಳಿಯುತ್ತಿದೆಯೋ - ಗಮನಿಸುತ್ತಲೇ, ಸರಕಾರಕ್ಕೆ ವಾರ್ಷಿಕ ಲಾಭಾಂಶವನ್ನು ನೀಡುತ್ತಲೇ ಬಡವರ ಸೇವೆಯನ್ನು ಲಾಭರಹಿತವಾಗಿ ಮಾಡಬೇಕಿದೆ. ಈ ಎಲ್ಲದರ ಬ್ಯಾಂಕಿಗೂ ಅದರ ಗ್ರಾಹಕರಿಗೂ ಇರುವ ಪತಿ-ಪತ್ನಿಯ ಸಂಬಂಧದ ನಡುವೆ ಸರಕಾರ ಮೂಗು ತೂರಿಸಿ ಸಾಲಮನ್ನಾದಂತಹ ಕಾರ್ಯಕ್ರಮಗಳಿಂದ ಉಂಟುಮಾಡುವ ವಿರಸವನ್ನೂ ಮೀರಿ ಕೆಲಸ ಮಾಡಬೇಕಿದೆ. ಈ ಸರ್ಕಸ್ಸು ಸರಳವಾದದ್ದೇನೂ ಅಲ್ಲ. ಒಮ್ಮೆ ಖಾಸಗಿಯಾಗಿ ರಾಷ್ಟ್ರೀಕೃತ ಬ್ಯಾಂಕಿನ ಅಧ್ಯಕ್ಷರೊಬ್ಬರು ರಿಜರ್ವ್ ಬ್ಯಾಂಕಿನ ಉಪ-ಗವರ್ನರ್ ಗೆ "ನಮಗೆ ಗ್ರಾಮೀಣ ಗ್ರಾಹಕರಿಂದ 16 ಪ್ರತಿಶತ ಬಡ್ಡಿ ಪಡೆಯಲು ಬಿಟ್ಟರೆ ನಾವುಗಳು ನೀವು ಹೇಳಿದಷ್ಟು ಸಾಲ ಕೊಡುವುದೇ ಅಲ್ಲದೇ ಬಂದ ಪ್ರತೀ ಗ್ರಾಹಕರಿಗೂ ಚಹಾ ಕುಡಿಸುತ್ತೇವೆ." ಎಂದು ಹೇಳಿದ್ದನ್ನು ನಾನು ಕಂಡಿದ್ದೆ. ಇದರ ಅರ್ಥವಿಷ್ಟೇ - ಮುಕ್ತ ಮಾರುಕಟ್ಟೆಯಲ್ಲಿ ನಮ್ಮನ್ನು ಬಿಟ್ಟರೆ, ನಮ್ಮನ್ನು ಮುಕ್ತವಾಗಿ ಮಾರುಕಟ್ಟೆಯ ಸೂತ್ರಗಳ ಆಧಾರದ ಮೇಲೆ ವ್ಯಾಪಾರ ಮಾಡಲು ಬಿಡಿ. ಹೀಗೆ ಲಾಭವೇ ಮಾಡದಂತಹ ವ್ಯಾಪಾರವನ್ನು ನಾವು ಬ್ಯಾಂಕುಗಳ ಮೇಲೆ ಹೇರಿ ತಮಾಷೆ ನೋಡುತ್ತಿದ್ದೇವೆ.
ಚೇರ್ಮನ್ನರ ವಿಷಯ ಒತ್ತಟ್ಟಿಗಿಟ್ಟು ಗ್ರಾಮೀಣ ಪ್ರದೇಶದಲ್ಲಿರುವ ಬ್ಯಾಂಕ್ ಅಧಿಕಾರಿಯ ದೃಷ್ಟಿಯಿಂದ ನೋಡಿದರೂ ನಮಗೆ ಕಾಣುವ ಚಿತ್ರ ಅದ್ಭುತವಾದದ್ದೇನೂ ಅಲ್ಲ. ಗ್ರಾಮೀಣ ಪ್ರಾಂತದ ಶಾಖೆಗಳಲ್ಲಿ ಕೆಲಸಮಾಡುವ ಅಧಿಕಾರಿಗಳು ವರ್ಗಾವಣೆಯ ನೀತಿಯಿಂದಾಗಿ, ಬಹುತೇಕ ಹೊರಗಿನಿಂದ ಬಂದವರಾಗಿರುತ್ತಾರೆ. ಗ್ರಾಮೀಣ ಶಾಖೆಗಳಲ್ಲಿ ಇಬ್ಬರು ಅಥವಾ ಮೂವ್ವರು ಉದ್ಯೋಗಿಗಳಿರುತ್ತಾರೆ. ಅಲ್ಲಿ ಸಣ್ಣ ಮೊಬಲಗಿನ ಸಾವಿರಾರು ವ್ಯವಹಾರಗಳಿರುತ್ತವೆ. ಜೊತೆಗೆ ಬಹುತೇಕ ಪ್ರದೇಶಗಳಲ್ಲಿ ಸುತ್ತಮುತ್ತಲ ಪ್ರಾಂತದಲ್ಲಿ ಅದು ಯಾವುದೇ ಬ್ಯಾಂಕಿನ ಏಕೈಕ ಶಾಖೆಯಾಗಿರುತ್ತಾದ್ದರಿಂದ - ಆ ಪ್ರಾಂತದ ಎಲ್ಲ ಹಣವೂ - ಅಂಚೆ ಕಛೇರಿ, ಪಂಚಾಯ್ತಿಯಿಂದ ಹಿಡಿದು ನರೇಗಾದವರೆಗೂ - ಆ ಶಾಖೆಯ ಮೂಲಕವೇ ಹರಿಯುತ್ತದೆ. ಇಷ್ಟೇ ಆ ಅಧಿಕಾರಿಯ ತೊಂದರೆಯೆಂದರೂ ತಪ್ಪಾದೀತು. ಆತನ ಅನೇಕ ಗ್ರಾಹಕರು ಅನಕ್ಷರಸ್ಥರು. ಅವರಿಗೆ ವ್ಯವಹಾರವನ್ನು ವಿವರಿಸುವುದಲ್ಲದೇ, ಅವರುಗಳ ಪತ್ರಗಳನ್ನೂ ತಾನೇ ತುಂಬಿಸಬೇಕು. ಒಂದು ರೀತಿಯಲ್ಲಿ - ರೋಗಿಗೆ ಟ್ರೀಟ್ಮೆಂಟ್ ಕೊಡುತ್ತಿರುವ ವೈದ್ಯರಂತೆ, ತನ್ನ ಗ್ರಾಹಕನೊಂದಿಗೆ ವರ್ತಿಸಬೇಕು.

ಈ ಎಲ್ಲ ಮಾಡುವ ಆ ಅಧಿಕಾರಿಗೆ ದಸರಾ-ದೀಪಾವಳಿಗೂ ರೀಪ್ಲೇಸ್ಮೆಂಟ್ ಇಲ್ಲವೆನ್ನುವ ಕಾರಣವಾಗಿ ರಜೆ ಸಿಗುವುದಿಲ್ಲ. ಆ ಬಡಪಾಯಿ ಅಧಿಕಾರಿ ಮಕ್ಕಳ ವಿದ್ಯಾಭ್ಯಾಸವೆಂದು ಹೆಂಡತಿ ಮಕ್ಕಳನ್ನು ನಗರದಲ್ಲಿಯೇ ಬಿಟ್ಟು, ಡಬಲ್ ಖರ್ಚು ಮಾಡುತ್ತಾ ಅಥವಾ ಅಪ್-ಡೌನ್ ಮಾಡುತ್ತಾ ಬಡವರಿಗೆ ವಿತ್ತೀಯ ಸೇವೆಗಳನ್ನು ಒದಗಿಸಬೇಕು. ಈ ಎಲ್ಲವನ್ನೂ ಯೋಚಿಸಿದಾಗ - ರಾಷ್ಟ್ರೀಕೃತ ಬ್ಯಾಂಕುಗಳು ಮಾಡಿರುವ ಸಾಧನೆ ಯಾವ ಜಾದೂವಿಗಿಂತಲೂ ಕಡಿಮೆಯಿಲ್ಲ. ಹಾಗೆ ನೋಡಿದರೆ - ಮೈಕ್ರೋಫೈನಾನ್ಸ್ ಮತ್ತು ಸ್ವ-ಸಹಾಯ ಗುಂಪುಗಳ ಹಣವನ್ನೂ ದಿನದಂತ್ಯದಲ್ಲಿ ಎಣಿಸಿ ಜೋಪಾನವಾಗಿಡುವವರು ಬ್ಯಾಂಕಿನವರೇ ಅಲ್ಲವೇ?
ಹಾಗಾದರೆ ಸಂಸ್ಥಾಗತ ವಿತ್ತೀಯ ಸೇವೆಗಳು - ಮುಖ್ಯವಾಗಿ ಸಾಲದ ಸೌಲಭ್ಯ - ಈಗಿರುವ ಸುಮಾರು 60 ಪ್ರತಿಶತದಷ್ಟೇ ಪಾಲಿನಲ್ಲಿ ಸ್ಥಗಿತಗೊಂಡಿರುತ್ತವೆಯೋ - ಅಥವಾ ಅದು ಬೆಳೆಯಬಹುದೋ.. ಸಾಕಷ್ಟು ಸುದ್ದಿ ಮಾಡುತ್ತಿರುವ ಮೈಕ್ರೋಫೈನಾನ್ಸ್ ಸಂಸ್ಥೆಗಳು ಗ್ರಾಮೀಣ ಬಡ್ಡಿವ್ಯಾಪಾರಿಯನ್ನು ಹೊರಗಟ್ಟುತ್ತವೆಯೋ ಅಥವಾ ಬ್ಯಾಂಕುಗಳ ಧಂಧೆಯನ್ನು ಕಬಳಿಸುತ್ತವೆಯೋ ಅನ್ನುವುದು ಕುತೂಹಲದ ಮಾತು. ಬ್ಯಾಂಕುಗಳಿಂದಲೇ ದೊಡ್ಡ ಸಾಲವನ್ನ ಪಡೆದು - ಪುಟ್ಟಸಾಲಗಳನ್ನಾಗಿ ಹಂಚುತ್ತಿರುವ ಮೈಕ್ರೊಫೈನಾನ್ಸ್ ಸಂಸ್ಥೆಗಳು 18 ರಿಂದ 28 ಪ್ರತಿಶತ ಬಡ್ಡಿಯನ್ನು ಬಡವರಿಂದ ಪಡೆಯುತ್ತ ಬ್ಯಾಂಕುಗಳು ಮಾಡಲಾಗದ, ಆದರೆ ಮಾಡಲು ಸಾಧ್ಯವಿರಬಹುದಾದ ಕೆಲಸವನ್ನು ಮಾಡಿ ತೋರಿಸುತ್ತಿವೆ. ಆದರೂ ಎಲ್ಲ ಮೈಕ್ರೋಫೈನಾನ್ಸ್ ಕಂಪನಿಗಳು ಸೇರಿ ಒಟ್ಟಾರೆ ರೂ.20,000 ಕೋಟಿಗಿಂತ ಕಡಿಮೆ ವ್ಯಾಪಾರ ಮಾಡುತ್ತಿರುವ ಸಂದರ್ಭದಲ್ಲಿ ಅವರುಗಳು ಬ್ಯಾಂಕುಗಳಿಗೆ ಜೋರಾದ ಪೈಪೋಟಿ ನೀಡುವುದು ಕಷ್ಟದ ಮಾತೇ. ಅದೂ ಅಲ್ಲದೆ ಈ ಸಂಸ್ಥೆಗಳ ಬಡ್ಡಿದರ ಮತ್ತು ವಸೂಲಿ ವಿಧಾನಗಳನ್ನು ಕಂಡವರು ಇಂಥ ಸಂಸ್ಥೆಗಳನ್ನು ಸಂಸ್ಥಾಗತ ಬಡ್ಡಿವ್ಯಾಪಾರಿಗಳೆಂದೂ ಕರೆಯುತ್ತಾರೆ.
ಸಣ್ಣ ಮೊತ್ತದ ಸಾಲದಲ್ಲಿ ಬಡ್ಡಿಯ ಪಾತ್ರ ಹಿರಿದಾದದ್ದೇನೂ ಅಲ್ಲವೆನ್ನುವ ವಾದವನ್ನು ನನ್ನನ್ನೊಳಗೊಂಡು ಅನೇಕರು ಮಂಡಿಸಿದ್ದಾರೆ. ಅದರೂ ಸರಕಾರ ಬ್ಯಾಂಕುಗಳ ಎರಡೂ ಕೈಗಳನ್ನು ಕಟ್ಟಿಹಾಕಿ ಮುಕ್ತಮಾರುಕಟ್ಟೆಯ ಅಖಾಡಕ್ಕೆ ಈ ಸಂಸ್ಥೆಗಳನ್ನು ಇಳಿಸಿದೆ. ಇತ್ತ ಸಮಾಜವಾದವೂ ಅಲ್ಲದ - ಅತ್ತ ಮುಕ್ತಮಾರುಕಟ್ಟೆಯೂ ಅಲ್ಲದ ಎಡಬಿಡಂಗಿ ನೀತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಒದ್ದಾಡುತ್ತಿವೆ. ಈ ಸಂಸ್ಥೆಗಳನ್ನು ಮಾರುಕಟ್ಟೆಯ ನಿಯಮಾನುಸಾರ ಕೆಲಸ ಮಾಡಲು ಬಿಟ್ಟರೆ, ಪ್ರತೀ ಗ್ರಾಮೀಣ ಶಾಖೆಯಲ್ಲೂ ಐದಾರು ಉದ್ಯೋಗಿಗಳು ಹಾಗೂ ಪ್ರತೀ ಗ್ರಾಹಕನಿಗೂ ಒಂದು ಕಪ್ ಚಹಾ ಸಿಗುವ ದಿನಗಳು ದೂರವಿರಲಾರವು. ಆದರೆ ಬಡ್ಡಿ ದರವನ್ನೇ ಉಸಿರಾಡುವ - ಎರಡು ದಶಕಗಳಿಗೊಮ್ಮೆ ಸಾಲಮನ್ನಾ ಮಾಡುವ ಸರಕಾರಕ್ಕೆ ತಿಳಿಹೇಳುವವರು ಯಾರು?
ಹೀಗೆ ಬ್ಯಾಂಕುಗಳಿಗಾಗುವ ಖರ್ಚನ್ನು ಸಂಪಾದಿಸುವ ಸ್ಥರಕ್ಕೆ ಬಡ್ಡಿದರ ಹೆಚ್ಚಿದರೂ ಬಡಗ್ರಾಹಕರು ಸಾಲಪಡೆಯುವುದನ್ನು ಮುಂದುವರೆಸುತ್ತಾರೆಂಬ ವಾದ ಪ್ರಶ್ನಾತೀತವೇನದ ಅಲ್ಲ. ಬಾಂಗ್ಲಾದೇಶದಲ್ಲಿ ನಡೆಸಿರುವ ಅಧ್ಯಯನದ ಆಧಾರದ ಮೇಲೆ ದಹೇಜಿಯಾ, ಮಾಂಟಗಮರಿ ಮತ್ತು ಮುರ್ಡೋಕ್ ಈ ವಾದವನ್ನು ಪ್ರಶ್ನಿಸುತ್ತಾರೆ. ಅವರ ಪ್ರಕಾರ - ಹೆಚ್ಚಿದ ಬಡ್ಡಿದರದಲ್ಲೂ ಜನ ಸಾಲ ಪಡೆಯಲು ತಯಾರಿರಬಹುದಾದರೂ ಸಂಸ್ಥೆಯ ಗ್ರಾಹಕ ಸಮೂಹ ಕಡುಬಡವರಿಂದ ತುಸು ದೂರ ಹೋಗುತ್ತಿರುವುದನ್ನು ಅವರುಗಳು ದಾಖಲಿಸಿದ್ದಾರೆ. ಸಂಸ್ಥಾಗತ ಮೂಲಗಳಿಂದ ಕೊಡುವ ಸಾಲದ ಪಾಲು ಒಟ್ಟಾರೆ 80-85 ಪ್ರತಿಶತ ತಲುಪುವವರೆಗೂ ರಾಜಕಾರಣಿಗಳು - ಸರಕಾರೀ ಯಂತ್ರಾಂಗದವರೂ ಈ ಪೇಪರನ್ನು ಓದದಿರುವುದೇ ಒಳಿತು.


ಖರ್ಚಿನಿಂದ ಉಳಿತಾಯ: ಕೆಲವು ಮಾದರಿಗಳು


ಹಲವು ವರ್ಷಗಳ ನನ್ನ ಸ್ನೇಹಿತನೊಬ್ಬ ಹೀಗೆ ಹೇಳುತ್ತಿದ್ದುದುಂಟು: "ಈ ನಡುವೆ ನನಗೆ ದುಡ್ಡಿಗೆ ಬಹಳ ಕಷ್ಟವಾಗಿಬಿಟ್ಟಿದೆ. ಯಾಕೆಂದರೆ ನನ್ನ ಆದಾಯವೆಲ್ಲಾ ಸೇವಿಂಗ್ಸ್ ನಲ್ಲಿಯೇ ಖರ್ಚಾಗಿಬಿಡುತ್ತದೆ!" ಇದು ಒಂದು ರೀತಿಯಿಂದ ಯೋಚಿಸಬೇಕಾದ, ಗಹನವಾದ ವಿಚಾರ. ಉಳಿತಾಯ ಮಾಡಿದಷ್ಟೂ ಹಣವನ್ನು ನಾವು ಪುನಃ ಸಂಪಾದಿಸಿದ ಹಾಗೆಯೇ. ಇಷ್ಟಾದರೂ, ಬಡವರಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವವರಿಗೆ ಸಾಲ ಪಡೆವ ಮಾರ್ಗಗಳನ್ನು ಸರಕಾರಗಳೂ, ಖಾಸಗೀ ಸಂಸ್ಥೆಗಳೂ ಒದಗಿಸಿಕೊಡುತ್ತವೆಯೇ ಹೊರತು, ಉಳಿತಾಯ ಮಾಡುವ ಹೆಚ್ಚಿನ ಮಾರ್ಗಗಳನ್ನು ನಾವು ಕಂಡಿಲ್ಲ. ಮೈಕ್ರೋಫೈನಾನ್ಸ್ ವಿಷಯಕ್ಕೆ ಬಂದಾಗಲೂ ಸಾಲ ಕೊಡುವ ಅನೇಕ ಮಾದರಿಗಳು ನಮಗೆ ಸಿಗುತ್ತವಾದರೂ ’ಚಿಕ್ಕ ಉಳಿತಾಯದ’ ಮಾದರಿಗಳು ಕಡಿಮೆಯೇ. ಬಡವರಿಗೆ ಉಳಿತಾಯ ಮಾಡುವ ಕ್ಷಮತೆಯಿಲ್ಲವೆನ್ನುವ ಪ್ರತಿಪಾದನೆಯನ್ನು ನಾವು ಅಲ್ಲಲ್ಲಿ ಕಾಣುತ್ತೇವಾದರೂ, ಆ ವಾದದಲ್ಲಿ ಪೂರ್ಣ ಸತ್ಯವಿಲ್ಲ. ಬ್ಯಾಂಕುಗಳ ಮಾಹಿತಿಯನ್ನು ನಾವು ಗಮನಿಸಿದಾಗ ಅನೇಕ ಹಿಂದುಳಿದ ಪ್ರಾಂತಗಳಲ್ಲಿ ಬ್ಯಾಂಕುಗಳಲ್ಲಿ ಇರುವ ಠೇವಣಿಯ ಮೊತ್ತ ಆ ಶಾಖೆಗಳು ಕೊಡುವ ಸಾಲದ ಮೊತ್ತಕ್ಕಿಂತ ಐದಾರು ಪಟ್ಟು ಹೆಚ್ಚಿರುವುದನ್ನು ನಾವು ನೋಡಬಹುದು. ಹೀಗಾಗಿ ಬಿಹಾರ, ಉತ್ತರಪ್ರದೇಶ, ರಾಜಾಸ್ಥಾನದಂತಹ ರಾಜ್ಯಗಳ ಉಳಿತಾಯದ ಹಣ ಮುಂಬಯಿನ ದೊಡ್ಡ ವ್ಯಾಪಾರಗಳ ಮೂಲಧನವಾಗುತ್ತಿರುವುದನ್ನು ನಾವು ಕಾಣಬಹುದು.

ಚಿಕ್ಕಸಾಲಕ್ಕಿಂತ ಚಿಕ್ಕ ಉಳಿತಾಯದ ಕಾರ್ಯಕ್ರಮಗಳು ಹೆಚ್ಚು ಸಂಕೀರ್ಣವಾದವು. ಇದಕ್ಕೆ ಕಾರಣ ಉಳಿತಾಯವನ್ನು ಸ್ವೀಕರಿಸಬಹುದಾದ ಬಗ್ಗೆ ಇರುವ ಕಾನೂನು ವ್ಯವಸ್ಥೆ. ವಿತ್ತೀಯ ವ್ಯವಹಾರಗಳ ಮೇಲ್ವಿಚಾರಣೆ ನಡೆಸುವ ಭಾರತೀಯ ರಿಜರ್ವ್ ಬ್ಯಾಂಕು ಯಾವುದಾದರೂ ಕಂಪನಿ ಸಾಲವನ್ನು ಕೊಟ್ಟಾಗ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲವಾದರೂ, ಉಳಿತಾಯವನ್ನು ಸ್ವೀಕರಿಸುವುದಕ್ಕೆ ಅನೇಕ ಅಡಚಣೆಗಳನ್ನು ಮುಂದಾಗಿಸಿದೆ. ಇದಕ್ಕೆ ಕಾರಣವಿಷ್ಟೇ: ಸಂಸ್ಥೆಗಳು ಸಾಲ ನೀಡುವಾಗ ಅಲ್ಲಿ ಒಳಗೊಂಡಿರುವುದು ಬಂಡವಾಳ ಹೂಡಿದವರ ಹಣ. ಆದರೆ ಉಳಿತಾಯವನ್ನು ಸ್ವೀಕರಿಸಿದಾಗ - ಅದು ಬಡವರನ್ನೊಳಗೊಂಡ ’ಪಬ್ಲಿಕ್’ ಹಣ. ಹೀಗೆ ಒಂದು ಸಂಸ್ಥೆ ಜನಸಾಮಾನ್ಯರಿಂದ ಹಣವನ್ನು ಸ್ವೀಕರಿಸಿದ ನಂತರ ಮಾಯವಾದರೆ, ಅಥವಾ ವಿಫಲಗೊಂಡರೆ, ನಷ್ಟವಾಗುವುದು ಅಂಥ ಸಂಸ್ಥೆಗಳಲ್ಲಿ ಹಣ ಹೂಡಿದವಿರಿಗೇ ಆದ್ದರಿಂದ, ಜನಸಾಮಾನ್ಯರ ಹಿತದೃಷ್ಟಿಯನ್ನು ಕಾಪಾಡಲು ರಿಜರ್ವ್ ಬ್ಯಾಂಕು ಈ ಕ್ಷೇತ್ರದಲ್ಲಿ ಕೆಲವು ಅಡಚಣೆಗಳನ್ನು ಒಡ್ಡಿದೆ. ಹೀಗಾಗಿ ಬಡವರಿಗೆ ಸುಲಭವಾಗಿ ಮೈಕ್ರೋಫೈನಾನ್ಸ್ ನಿಂದ ಸಾಲ ಸಿಗಬಹುದಾದರೂ, ಅದೇ ಸಂಸ್ಥೆಗಳಲ್ಲಿ ಉಳಿತಾಯ ಮಾಡುವುದು ಸಾಧ್ಯವಾಗದ ಮಾತಾಗುತ್ತದೆ.

ಈ ಹಿನ್ನೆಲೆಯಲ್ಲಿ ಬಡವರೊಂದಿಗೆ ಕೆಲಸ ಮಾಡುವ ಸಂಸ್ಥೆಗಳು ಅವರು ಹೆಚ್ಚು ಉಳಿತಾಯ ಮಾಡುವಂತೆ ಪ್ರೋತ್ಸಾಹಿಸುವುದೂ, ಅದಕ್ಕೆ ಒಂದು ಮಾರ್ಗವನ್ನು ತೋರಿಸಿಕೊಡುವುದು ಹೇಗೆ ಅನ್ನುವ ಪ್ರಶ್ನೆ ದೊಡ್ಡ ಸವಾಲಾಗಿ ನಿಲ್ಲುತ್ತದೆ. ಆದರೆ ನಿಜಕ್ಕೂ ಬಡವರಿಗೆ ಉಳಿತಾಯಕ್ಕೆ ಬ್ಯಾಂಕುಗಳನ್ನು ಬಿಟ್ಟರೆ ಬೇರೆ ಮಾರ್ಗಗಳೇ ಇಲ್ಲ ಅನ್ನುವುದೂ ನಿಜವಲ್ಲ. ಅಂಚೆ ಕಛೇರಿಯಲ್ಲಿ, ಹಾಗೂ ಸಹಕಾರೀ ಸಂಸ್ಥೆಗಳಲ್ಲಿ ಜನ ಉಳಿತಾಯವನ್ನು ಹೂಡಬಹುದು. ಹಾಗೆಯೇ ಸ್ವ-ಸಹಾಯ ಗುಂಪುಗಳೂ ಉಳಿತಾಯವನ್ನು ಸ್ವೀಕರಿಸಬಹುದು. ಸಹಕಾರೀ ಸಂಸ್ಥೆಗಳೂ, ಸ್ವ-ಸಹಾಯ ಗುಂಪುಗಳೂ ಜನರೇ ನಿರ್ವಹಿಸುವ ಸ್ಥಳೀಯ ಕಾರ್ಯಕ್ರಮಗಳಾದ್ದರಿಂದ ಇಂಥ ಸಂಸ್ಥೆಗಳಿಗೆ ಉಳಿತಾಯವನ್ನು ಸ್ವೀಕರಿಸುವ ಹಕ್ಕನ್ನು ಕಾನೂನು ನೀಡಿದೆ. ಆದ್ದರಿಂದಲೇ ಸಮುದಾಯ ಕೇಂದ್ರಿತ ಸ್ವ-ಸಹಾಯ ಗುಂಪುಗಳ ಮಾದರಿಯ ಮೈಕ್ರೊಫೈನಾನ್ಸ್ ಗ್ರಾಮೀಣ್ ಮಾದರಿಯ ಮೈಕ್ರೊಫೈನಾನ್ಸ್ ಗಿಂತ ಉತ್ತಮವೆಂದು ಹಲವರು ವಾದಿಸುತ್ತಾರೆ.

ಆ ವಾದವಿವಾದಳು ಏನೇ ಇದ್ದರೂ, ಉಳಿತಾಯದ ಪರಿಭಾಷೆಯನ್ನು ನಾವು ವಿಸ್ತರಿಸಿ ನೋಡಿದಾಗ ನಮ್ಮ ದೇಶದಲ್ಲಿ ಅನೇಕ ಕುತೂಹಲಕಾರಿ ಪ್ರಯೋಗಗಳು ನಡೆದಿರುವುದನ್ನು ನಾವು ಕಾಣಬಹುದಾಗಿದೆ. ಉಳಿತಾಯವನ್ನು ಸ್ವೀಕರಿಸಲು ಕಷ್ಟವಾದರೂ, ಖರ್ಚನ್ನು ಕಡಿಮೆ ಮಾಡುವ ಪ್ರಯೋಗವನ್ನು ಮಾಡಬಹುದಲ್ಲವೇ? ಖರ್ಚು ಕಡಿಮೆಯಾಗುವುದರಿಂದ ಬಡ ಸಂಸಾರಗಳಿಗೂ ಒಂದು ರೀತಿಯ ಒಳಿತೇ ಆಗಬಹುದು. ಆದರೆ ಖರ್ಚು ಕಡಿಮೆ ಮಾಡುವುದರ ಪರಿಭಾಷೆ ಯಾವರೀತಿಯದ್ದು? ನಮ್ಮ ಸೂಪರ್ ಬಜಾರುಗಳು ನೀಡುವ ಜಾಹೀರಾತಿನಿಂತೆ, ಸ್ಪೆಂಡ್ ಮೋರ್ - ಸೇವ್ ಮೋರ್ ರೀತಿಯದ್ದೇ?

ಆಂಧ್ರಪ್ರದೇಶ ಸರಕಾರದ ಸಂಸ್ಥೆಯಾದ ಸೊಸೈಟಿ ಫರ್ ಎಲಿಮಿನೇಷನ್ ಆಫ್ ರೂರಲ್ ಪಾವರ್ಟಿ [ಸರ್ಪ್] ನಡೆಸುವ ವೆಲುಗು [ಇದು ಚಂದ್ರಬಾಬು ನಾಯ್ಡು ಕಾಲದಲ್ಲಿ ಕೊಟ್ಟ ಹೆಸರು. ಅಲ್ಲಿ ಸರಕಾರ ಬದಲಾಗಿ ರಾಜಶೇಖರ ರೆಡ್ಡಿ ಬಂದಾಗ ಈ ಕಾರ್ಯಕ್ರಮಕ್ಕೆ ಇಂದಿರಾ ಕ್ರಾಂತಿ ಪಥಂ ಅನ್ನುವ ಹೊಸ ನಾಮಕರಣವಾದರೂ, ಜನ ಇನ್ನೂ ಈ ಯೋಜನೆಯನ್ನು ವೆಲುಗು ಎಂದೇ ಕರೆಯುತ್ತಾರೆ] ಅನ್ನುವ ಬಡತನಾ ನಿರ್ಮೂಲನದ ಕಾರ್ಯಕ್ರಮದಲ್ಲಿರುವ ಅನೇಕ ಯೋಜನೆಗಳಲ್ಲಿ ರೈಸ್ ಕ್ರೆಡಿಟ್ ಲೈನ್ ಅನ್ನುವುದೂ ಒಂದು ಪುಟ್ಟ ಕಾರ್ಯಕ್ರಮ. ಈ ಕಾರ್ಯಕ್ರಮದನುಸಾರ, ಸರ್ಪ್ ಯೋಜಿಸಿದ ಮಹಿಳೆಯರ ಸ್ವಸಹಾಯ ಗುಂಪುಗಳು ತಮಗೆ ಬೇಕಾಗಬಹುದಾದ ತಿಂಗಳ ಅಕ್ಕಿಯನ್ನು ಇಡಿಯಾಗಿ ಕೊಂಡು ಮನೆಯಲ್ಲಿ ಶೇಖರಿಸಿಟ್ಟುಕೊಳ್ಳಬಹುದು. ಇದರಿಂದ ಆಗುವ ಲಾಭವೇನು?

ಒಂದು: ಗುಂಪಿನ ಎಲ್ಲರ ಮನೆಗೂ ತಿಂಗಳಿಗೆ ಬೇಕಾಗಬಹುದಾದ ಅಕ್ಕಿಯ ಪ್ರಮಾಣವನ್ನು ಕೂಡಿದಾಗ ಎಷ್ಟು ಅಕ್ಕಿ ಅವರಿಗೆ ಬೇಕಾಗಬಹುದು? ಒಂದು ಗ್ರಾಮದಲ್ಲಿನ ಎಲ್ಲ ಗುಂಪುಗಳ ಬೇಡಿಕೆಯನ್ನು ಒಟ್ಟುಗೂಡಿಸಿದರೆ ಎಷ್ಟು? ಈ ಪ್ರಮಾಣದ ಅಕ್ಕಿಯನ್ನು ಒಂದೇ ಬಾರಿಗೆ ಕೊಳ್ಳುವುದೆಂದರೆ, ಸ್ಥಳೀಯ ಕಿರಾಣಿಯಂಗಡಿಗೆ ಹೋಗದೇ ಸಗಟು ವ್ಯಾಪಾರಿಗಳ ಬಳಿಗೆ ಹೋಗಬಹುದು. ಆಗ ಕೊಳ್ಳುವ ಬೆಲೆಯಲ್ಲಿ ಉಳಿತಾಯವಾಗುವುದಿಲ್ಲವೇ? ಇದು ಸರಕಾರೀ ಕಾರ್ಯಕ್ರಮವಾದ್ದರಿಂದ ನೇರವಾಗಿ ಫುಡ್ ಕಾರ್ಪರೇಷನ್ನಿನಿಂದ ಅಕ್ಕಿಕೊಳ್ಳಲು ಸಾಧ್ಯವಾದರೆ? ಇನ್ನೂ ಹೆಚ್ಚಿನ ಫಾಯಿದೆಯೇ! ಜೊತೆಗೆ ಹಣ ಕೊಟ್ಟು ಕೊಳ್ಳುತ್ತಿರುವುದರಿಂದ ಒಳ್ಳೆಯ ಎಲ್ಲರಿಗೂ ಒಪ್ಪಿಗೆಯಾಗುವಂಥಹ ಅಕ್ಕಿಯನ್ನೇ ಕೊಳ್ಳಬಹುದು. ಈ ಖರೀದಿಗೆ ಗುಂಪಿನಿಂದ ಸಾಲವೂ ಸಿಕ್ಕಿದರೆ, ಒಟ್ಟಾರೆ ಒಂದು ತಿಂಗಳಿಗೆ ಬೇಕಾದ ಮೂಲ ಆಹಾರದ ದಾಸ್ತಾನು ಮನೆಯಲ್ಲಿದ್ದಂತೆಯೇ!

ಎರಡು: ಸಗಟು ವ್ಯಾಪಾರದಿಂದ ಹಣ ಉಳಿತಾಯವಾಗುವುದಲ್ಲದೇ, ಮನೆಯಲ್ಲಿ ತಿಂಗಳ ಅಕ್ಕಿ ದಾಸ್ತಾನಿರುವ ಕುಟುಂಬಗಳ ಆತ್ಮ ವಿಶ್ವಾಸಕ್ಕೇನಾಗಬಹುದು? ದಿನಗೂಲಿಯ ಆಧಾರದ ಮೇಲೆ ಬದುಕುವ ಈ ಜನರಿಗೆ ಕೆಲವೊಂದು ದಿನ ಕೂಲಿ ಸಿಗದಿದ್ದರೆ ಯಾರೂ ಉಪವಾಸ ಮಲಗುವುದಿಲ್ಲ, ಅಥವಾ ಸಮರ್ಪಕ ಕೂಲಿ ಸಿಗದಿದ್ದರೆ ಚೌಕಾಶಿ ಮಾಡುವ ಆತ್ಮವಿಶ್ವಾಸ ಸಹಜವಾಗಿ ಇರುವುದರಿಂದ, ಒಟ್ಟಾರೆ ಅವರಿಗೆ ಹೆಚ್ಚಿನ ಶಕ್ತಿಬಂದಂತೆ ಆಗುವುದು. ಹೀಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡನಂತರ ಆ ಪ್ರಾಂತದ ದಿನಗೂಲಿಯ ಮೊಬಲಗು ತುಸು ಹೆಚ್ಚಾಯಿತೆಂದು ಸುದ್ದಿ. ಹೀಗೆ ಖರ್ಚೂ ಕಡಿಮೆಯಾಗಿ ಆದಾಯವೂ ಹೆಚ್ಚಿದರೆ ಉಳಿತಾಯವೂ ಹೆಚ್ಚಾಗಬಹುದಲ್ಲವೇ?

ಸರ್ಪ್ ಸಂಸ್ಥೆಯವರು ಅಕ್ಕಿಯಿಂದ ಮಿಕ್ಕ ದಿನಸಿಗಳಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸಬಹುದೇ? ಇದೇ ವಾದ ಬೇಳೆ, ಎಣ್ಣೆ, ಸಕ್ಕರೆಗೂ ವರ್ತಿಸಬಹುದಾದ್ದರಿಂದ ತಿಂಗಳಿಗೊಮ್ಮೆ ಈ ರೀತಿಯ ಖರೀದಿಯ ’ರೂರಲ್ ಪ್ರಾವಿಷನ್ ಸ್ಟೋರ್’ ಅನ್ನುವ ಯೋಜನೆಯನ್ನು ಹಾಕಿದರು. ಇದನ್ನು ವಿಸ್ತರಿಸಿ ಸಾಬೂನಿಗೆ, ಬಟ್ಟೆಗೆ, ಜೀರಿಗೆ ಮೆಣಸಿಗೆ ವಿಸ್ತರಿಸಿದರೆ? ಈ ರೀತಿಯ ಕಾರ್ಯಕ್ರಮಗಳನ್ನು ಎಲ್ಲಿ ನಿಲ್ಲಿಸಬೇಕು ಅನ್ನುವ ಅರಿವು, ಪ್ರಬುದ್ಧತೆ ಇಲ್ಲದಿದ್ದರೆ ಇಲ್ಲದ ಖರ್ಚನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಆದರೆ ಸರ್ಪ್ ಈ ಕಾರ್ಯಕ್ರಮವನ್ನು ಅಕ್ಕಿ, ಬೇಳೆ, ಎಣ್ಣೆ ಮತ್ತು ಸಕ್ಕರೆಗೆ ಮಾತ್ರ ಸೀಮಿತಗೊಳಿಸಿತು.

ಇದೇ ಮಾದರಿಯ ಕಾರ್ಯಕ್ರಮವನ್ನು ಚೆನ್ನೈನಲ್ಲಿ ಚಿಕ್ಕಸಾಲದ ಕಾರ್ಯಕ್ರಮ ನಡೆಸುವ ಈಕ್ವಿಟಾಸ್ ಸಂಸ್ಥೆ ನಡೆಸುತ್ತಿದೆ. ಆದರೆ ಇದು ತುಸು ಭಿನ್ನ. ಒಂದು ಈಕ್ವಿಟಾಸ್ ಹೆಚ್ಚಾಗಿ ನಗರ ಪ್ರದೇಶದಲ್ಲಿ ತನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಗರ ಪ್ರದೇಶದಲ್ಲಿ ಒಂದು ಖಾಯಂ ಅಂಗಡಿ ನಡೆಸಬೇಕೆಂದರೆ, ಬಾಡಿಗೆ ಕಟ್ಟಬೇಕು, ಅಂಗಡಿ ನಡೆಸುವವರ ಸಂಬಳವನ್ನೂ ಸಂಭಾಳಿಸಬೇಕು. ಹೀಗಾಗಿ ಸರ್ಪ್ ಮಾದರಿ ಈಕ್ವಿಟಾಸ್‍ಗೆ ವರ್ತಿಸುವುದಿಲ್ಲ. ಸಾಲದ್ದಕ್ಕೆ ಈಕ್ವಿಟಾಸ್ ಸಂಸ್ಥೆ ಸಮುದಾಯದ ಆಧಾರದ ಮೇಲೆ ಕಟ್ಟಿದ್ದೂ ಅಲ್ಲ. ಅವರು ತಮ್ಮ ಚಿಕ್ಕಸಾಲದ ಕಾರ್ಯಕ್ರಮವನ್ನು ಲಾಭಕ್ಕಾಗಿ ನಡೆಸುತ್ತಾರೆ. ಆದರೂ ಒಂದು ಕಡೆ ಲಾಭವನ್ನು ಆರ್ಜಿಸುತ್ತಿರುವಾಗಲೇ ಒಳಿತನ್ನೂ ಮಾಡಬೇಕೆನ್ನುವ ದೃಷ್ಟಿಯಿಂದ ದಿನಸಿಯನ್ನು ಮಾರುವ ಅಂಗಡಿಗಳನ್ನು ತೆಗೆಯುತ್ತಿದ್ದಾರೆ. ಆದರೆ ಇದರಲ್ಲಿ ಮುಖ್ಯವಿಚಾರವೆಂದರೆ ಸಾಲದ ಕಾರ್ಯಕ್ರಮಕ್ಕೂ ದಿನಸಿಯ ಕಾರ್ಯಕ್ರಮಕ್ಕೂ ಕೊಂಡಿ ಹಾಕದೇ, ಎರಡನ್ನೂ ಭಿನ್ನವಾಗಿ ಇಟ್ಟಿದ್ದಾರೆ. ಆದರೆ ಆ ಅಂಗಡಿಯನ್ನು ಲಾಭಾರ್ಜನೆಯಿಲ್ಲದೆಯೇ ನಡೆಸುತ್ತಿದ್ದಾರಾದ್ದರಿಂದ, ಈಕ್ವಿಟಾಸ್ ಸಂಸ್ಥೆಯಲ್ಲಿ ಸಾಲಪಡೆದು ಹೆಚ್ಚಿನ ಬಡ್ಡಿ ಕಟ್ಟುತ್ತಿರುವ ಬಡವರಿಗೆ ಭಿನ್ನ ರೀತಿಯಿಂದ ಉಳಿತಾಯವಾಗುತ್ತಿದೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಈಕ್ವಿಟಾಸ್ ಸಂಸ್ಥೆಯ ಗ್ರಾಹಕರಲ್ಲದವರಿಗೆ ಈ ದಿನಸಿಯನ್ನು ಕೊಳ್ಳುವ ಅವಕಾಶವಿಲ್ಲ! ಇದೊಂದು ರೀತಿಯ ಕಾವ್ಯ ನ್ಯಾಯ.

ಮೂರನೆಯ ಮಾದರಿ ಆಂಧ್ರ ಪ್ರದೇಶದಲ್ಲಿ ಪ್ರಾರಂಭ ಮಾಡಿ ನಂತರ ನಿಲ್ಲಿಸಿದ ಸ್ಪಂದನಾ ಸಂಸ್ಥೆಯವರದ್ದು. ಸ್ಪಂದನಾ ಸಂಸ್ಥೆ ಗುಂಟೂರಿನಲ್ಲಿ ತನ್ನ ಮುಖ್ಯಕಾರ್ಯಾಲವನ್ನು ನಡೆಸುತ್ತಿದ್ದ ದಿನಗಳಲ್ಲಿ ಒಂದು ದಿನ ಆ ಸಂಸ್ಥೆಯ ಮುಖ್ಯಸ್ಥೆ ಪದ್ಮಜಾ ರೆಡ್ಡಿ ತಮ್ಮ ಗ್ರಾಹಕರೊಬ್ಬರ ಮನೆಗೆ ಹೋಗಿದ್ದಾಗ ಅಲ್ಲಿದ್ದ ಕುಡಿಯುವ ನೀರಿನ ಫಿಲ್ಟರ್ ನೋಡಿ ಕುತೂಹಲದಿಂದ ಆ ಫಿಲ್ಟರಿನ ಚರಿತ್ರೆಯನ್ನು ಕೇಳಿದರಂತೆ. ಆಗ ಆ ಬಡ ಗ್ರಾಹಕರಿಂದ ತಿಳಿದದ್ದಿಷ್ಟು. ಆ ಫಿಲ್ಟರನ್ನು ಆ ಕುಟುಂಬದವರು ಕಂತಿನ ಮೇಲೆ ಕೊಂಡಿದ್ದರು. ತಿಂಗಳಿಗೆ ನೂರು ರೂಪಾಯಿಯಂತೆ ಒಂದು ವರ್ಷ ಕಂತನ್ನು ಕಟ್ಟಬೇಕಿತ್ತು. ಪದ್ಮಜಾ ಅದನ್ನು ನೋಡಿ ’ಓಹೋ’ ಅಂದುಕೊಂಡು ವಾಪಸ್ಸಾದರು. ಆದರೆ ಗುಂಟೂರು ನಗರವನ್ನು ಪ್ರವೇಶಿಸುತ್ತಿದ್ದಂತೆ ಕುತೂಹಲದಿಂದ ಫಿಲ್ಟರಿನ ಬೆಲೆ ಎಷ್ಟಿರಬಹುದು ಎಂದು ಕೇಳಿದಾಗ ಅವರಿಗೆ ಆಶ್ಚರ್ಯ ಕಾದಿತ್ತು: ಆ ಫಿಲ್ಟರಿನ ಬೆಲೆ ಕೇವಲ ೭೦೦ ರೂಪಾಯಿಗಳಾಗಿದ್ದುವು! ಆಗ ಆಕೆಯ ಮನಸ್ಸಿನಲ್ಲಿ ಈ ಬಗ್ಗೆ ಒಂದು ವಿಚಿತ್ರ ಹೊಳಹು ಬಂತು. ಇಂಥ ಫಿಲ್ಟರನ್ನು ತಾವೇ ಅತೀ ಕಡಿಮೆ ಲಾಭಕ್ಕೆ ತಮ್ಮ ಗ್ರಾಹಕರಿಗೆ ಮಾರಾಟಮಾಡಿದರೆ? - ಹೀಗೆ ಬಡ ಗ್ರಾಹಕರಿಗೆ ಹಣದ ’ಉಳಿತಾಯ’ವನ್ನು ಖರ್ಚಿನ ಮೂಲಕ ಮಾಡಬಹುದೆಂದು ಆಕೆಗೆ ಅನ್ನಿಸಿತು.

ಹೀಗೆ ಪ್ರಾರಂಭವಾದ ಸ್ಪಂದನಾದ ’ಗ್ರಾಹಕ ಸಾಲ’ವನ್ನು ಮೈಕ್ರೊಫೈನಾನ್ಸ್ ಲೋಕ ಸ್ವಾಗತಿಸಿತು! ನೀರಿನ ಫಿಲ್ಟರ್ ಇದ್ದರೆ ಬಡವರು ಶುದ್ಧನೀರನ್ನು ಕುಡಿಯುತ್ತಾರೆ, ಶುದ್ಧ ನೀರನ್ನು ಕುಡಿಯುವವರಿಗೆ ರೋಗ ಅಂಟುವ ಸಾಧ್ಯತೆಗಳು ಕಡಿಮೆ, ಹೀಗಾಗಿ ಕೆಲಸದ ದಿನಗಳು ಹೆಚ್ಚುವುದಲ್ಲದೇ ಡಾಕ್ಟರ ಖರ್ಚೂ ಕಡಿಮೆಯಾಗುವುದೆಂದು ಜನ ವಾದಿಸಿದರು. ಸ್ಪಂದನಾಗೆ ಈ ಕೆಲಸಕ್ಕಾಗಿ ಒಂದು ಅವಾರ್ಡೂ ಬಂತು. ಸರಿ, ಸ್ಪಂದನಾ ಈ ಯೋಚನೆಯನ್ನು ತುಸು ಮುಂದುವರೆಸಿತು. ಗ್ರಾಹಕ ಸಾಲದಲ್ಲಿ ಪ್ರೆಶರ್ ಕುಕ್ಕರನ್ನು ಸೇರಿಸಿತು. ಅದನ್ನೂ ಜನ ಒಪ್ಪಿದರು. ಮಹಿಳೆಗೆ ಅಡುಗೆ ಮನೆಯಲ್ಲಿನ ಏಕತಾನತೆಯನ್ನು ಕಡಿಮೆ ಮಾಡಲು ಇದು ಸಹಾಯಕವಗಿರಬಹುದಾದ್ದರಿಂದ ಹೆಚ್ಚಿನ ಆದಾಯವನ್ನು ಸಂತೋಷವನ್ನೂ ಸಂಪಾದಿಸಬಹುದು! ಹಾಗಾದರೆ ಗ್ಯಾಸ್ ಸ್ಟವ್? ಅದನ್ನೂ ಸ್ವಾಗತಿಸಿದರು. ಹೀಗೆ ಒಂದೊಂದಾಗೇ ಹೊಸ ಹೊಸ ಸಾಮಾನನ್ನು ತಮ್ಮ ಅಂಗಡಿಯಲ್ಲಿಡುತ್ತಾ ಒಂದು ವರ್ಷದೊಳಗಾಗಿ ಸ್ಪಂದನಾದ ರೀಟೈಲ್ ಅಂಗಡಿ ಗುಂಟೂರಿನ ಅತೀ ದೊಡ್ಡ ಸೂಪರ್ ಬಜಾರ್ ಆಗಿಬಿಟ್ಟಿತು. ಗುಂಪಿನ ಮೀಟಿಂಗಿನಲ್ಲಿ ಸಾಲದ ಚೀಟಿ ಪಡೆಯುವುದು - ಆ ಚೀಟಿಯನ್ನು ತಂದು ಈ ಬಜಾರಿನಲ್ಲಿ ತಮಗೆ ಬೇಕಾದ ವಸ್ತುಗಳನ್ನು ಕೊಂಡು ಹೋಗಿ ಬಡ್ಡಿಯ ಮೇಲೆ ಆ ಸಾಲವನ್ನು ತೀರಿಸುವುದು. ಎಲ್ಲ ವಸ್ತುಗಳ ಬೆಲೆಗಳೂ ಮಾರುಕಟ್ಟೆಯ ಇತರ ಅಂಗಡಿಗಳಿಗಿಂತ ಕಡಿಮೆಯಿದ್ದದ್ದರಿಂದ ಸ್ಪಂದನಾದ ಅಂಗಡಿಯಲ್ಲಿ ಕೊಳ್ಳುವುದರಲ್ಲಿ ’ಉಳಿತಾಯ’ವಿತ್ತು. ಆದರೆ ಮೊದಲಿಗೆ ಮೆಚ್ಚಿಕೊಂಡವರೇ ಈಗ ಆ ಸಂಸ್ಥೆಯನ್ನು ಟೀಕಿಸಲು ಪ್ರಾರಂಭಿಸಿದರು. ಶುದ್ಧ ನೀರು, ಕುಕ್ಕರ್, ಅಡಿಗೆ ಅನಿಲ ಈ ಯಾದಿ ವಾಷಿಂಗ್ ಮಶೀನು, ಫ್ರಿಜ್ಜು, ಮಂಚ, ಅಲಮಾರಿ, ಚಿನ್ನಾಭರಣ ಹೀಗೆ ಬೆಳೆಯುತ್ತಾ ಹೋದಾಗ - ಯಾವುದು ’ಉಳಿತಾಯ’ ಮತ್ತು ’ಆದಾಯ ಹೆಚ್ಚಲು’ ಪೂರಕವೆನ್ನಲಾಗಿತ್ತೋ ಅದೇ ಈಗ ದುಂದಿನ ಖರ್ಚಾಗಿ, ಸಾಲದ ಸುರಳಿಯಲ್ಲಿ ಬಡವರನ್ನು ಇರುಕಿಸುತ್ತಿದೆ ಎನ್ನುವ ಟೀಕೆಗೆ ಒಳಗಾಯಿತು.

ಹೀಗೆ ಖರ್ಚಿನಿಂದ ಆಗಬಹುದಾದ ಉಳಿತಾಯದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಅದೂ ಬಡತನದಲ್ಲಿ ಬೇಯುತ್ತಿರುವವರಿಗೆ ಗ್ರಾಹಕವಸ್ತುಗಳ ಕನಸನ್ನು ನಾವು ತೋರುವಾಗ ಹಾಕಬೇಕಾದ ಗೆರೆ ಎಲ್ಲೆಂದು ಯೋಚಿಸದಿದ್ದರೆ ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ ಅನ್ನುವ ಪಾಠವನ್ನು ಸ್ಪಂದನಾ ಬೇಗನೇ ಕಲಿಯಿತು. ಆ ಪಾಠವನ್ನು ಎಲ್ಲರೂ ಕಲಿತರೇ? ಈಚೆಗೆ ಎಸ್.ಕೆ.ಎಸ್ ಅನ್ನುವ ದೊಡ್ಡ ಮಕ್ರೋಫೈನಾನ್ಸ್ ಸಂಸ್ಥೆ ನೋಕಿಯಾ ಜೊತೆಗೂಡಿ ಬಡವರಿಗೆ ಮೊಬೈಲುಗಳನ್ನು ಮಾರಾಟ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದೆಯಂತೆ. ಹಾಗೂ ಆ ಸಂಸ್ಥೆಯ ಮುಖ್ಯಸ್ಥ ಗುರುಮಣಿ ತಮ್ಮ ಕಾರ್ಯಕ್ರಮದ ಮೂಲಕ ತಲುಪುವ ಗ್ರಾಹಕರ ದೊಡ್ಡ ಸಂಖ್ಯೆಯ ನೆಟ್‍ವರ್ಕನ್ನು ಹೆಚ್ಚಿನ ಲಾಭಕ್ಕಾಗಿ ಹೇಗೆ ಉಪಯೋಗಿಸಬಹುದು ಅನ್ನುವುದನ್ನು ಹಾಗೂ ಅವರಿಗೆ ಕಡಿಮೆ ಬೆಲೆಯಲ್ಲಿ ಗ್ರಾಹಕ ವಸ್ತುಗಳನ್ನು ತಲುಪಿಸುವುದು ಹೇಗೆ ಎನ್ನುವ ಯೋಜನೆಯನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಎಲ್ಲೋ ಹೇಳಿದ್ದಾರೆ. ಚರಿತ್ರೆ ಮರುಕಳಿಸುತ್ತದೆ. ಬಡವರನ್ನು ಮೇಲಕ್ಕೆತ್ತುವ ಉತ್ಸಾಹದಲ್ಲಿ ನಾವು ಅವರನ್ನು ಇನ್ನೂ ಕೆಳಕ್ಕೆ ತಳ್ಳುತ್ತಿದ್ದೇವೆಯೇ? ಖರ್ಚಿನಿಂದ ಉಳಿತಾಯವಾಗುತ್ತದೆಯೇ? ಆಗುವುದೇ ಆದರೆ ಯಾವರೀತಿಯ ಖರ್ಚುಗಳನ್ನು ಪ್ರೋತ್ಸಾಹಿಸಬೇಕು ಅನ್ನುವ ಪ್ರಶ್ನೆಗಳು ಉಳಿದೇ ಇವೆ. ಅವಕ್ಕೆ ಉತ್ತರ ಸರಳವಾದದ್ದೇನೂ ಅಲ್ಲ.

ನವಂಬರ್ ೨೦೦೯

ವಲಸೆ ಕಾರ್ಮಿಕರ ಹಣಪಾವತಿಯ ತಂತ್ರಜ್ಞಾನ


ಕಳೆದ ವರ್ಷ ನಾವುಗಳು ಕ್ಯಾತದೇವರಗುಡಿಯ ಅರಣ್ಯದ ಪ್ರಾಂತಕ್ಕೆ ಪ್ರವಾಸ ಹೋದಾಗ ಜಂಗಲ್ ಲಾಡ್ಜಸ್‍ನ ಗೈಡ್ ಕಂ ಡ್ರೈವರ್ ಹರ್ ಬಹದ್ದೂರ್ ಥಾಪಾ ಜೊತೆ ಮಾತು ಬೆಳೆಸಿದ್ದೆ. ಥಾಪಾ ಹಿಮಾಚಲ ಪ್ರದೇಶದವನು, ಭಾರತೀಯ ಸೇನೆಯಲ್ಲಿದ್ದು ಯಾವುದೋ ಲಕ್-ಬೈ-ಚಾನ್ಸ್ ಆಗಿ ಇಲ್ಲಿ ಕೆಲಸ ಸಿಕ್ಕಿತ್ತಂತೆ. ದೂರದ ಹಿಮಾಚಲಕ್ಕೆ ಅವನು ಹಣ ಪಾವತಿಸುವುದು ಹೇಗೆ ಅನ್ನುವ ಕುತೂಹಲ ನನ್ನಲ್ಲಿತ್ತು. ವಲೆಸೆ ಹೋಗುವ ಕೆಲಸಗಾರರಿಗೆ ಇದು ದೊಡ್ಡ ಸವಾಲೆನ್ನುವುದನ್ನು ನಾವುಗಳು ಅನೇಕ ಅಧ್ಯಯನಗಳಲ್ಲಿ ಕಂಡುಕೊಂಡಿದ್ದೆವು. ಸಾಮಾನ್ಯವಾಗಿ ವಲೆಸೆ ಹೋಗುವ ಕೆಲಸಗಾರರು ತಮ್ಮ ಮುಕದ್ದಂ [ಮೇಸ್ತ್ರಿಗಳ] ಮೂಲಕವೇ ಎಲ್ಲ ವ್ಯವಹಾರವನ್ನೂ ಮಾಡುತ್ತಾರೆ. ಆದರೆ ಮುಕದ್ದಂ ಇಲ್ಲದ ಕೆಲಸದಲ್ಲಿರುವ ಈತ ಕರ್ನಾಟಕದಲ್ಲಿ ಸಂಪಾದಿಸುವ ಹಣವನ್ನು ಹಿಮಾಚಲಕ್ಕೆ ತಲುಪಿಸುವುದೂ ಅಥವಾ ಸೂರತ್‍ನ ವಜ್ರದ ಯೂನಿಟ್ಟುಗಳಲ್ಲಿ ಕೆಲಸ ಮಾಡುವ ಒಡಿಯಾ ಕೆಲಸಗಾರರು ಒರಿಸ್ಸಾಗೆ ಹಣ ತಲುಪಿಸುವುದೂ ಒಂದು ಸವಾಲೇ ಆಗಿತ್ತು. ಕಾರಣಗಳು ಅನೇಕ.

- ಮನಿ ಆರ್ಡರ್ ಮಾಡುವುದು ದುಬಾರಿ, ಸಾಲದ್ದಕ್ಕೆ ಪೋಸ್ಟ್ ಮನ್ ತನ್ನ ಪುಟ್ಟ ಪಾಲನ್ನು ಹಣ ತಲುಪಿಸಿದ್ದಕ್ಕೆ ಪಡೆಯುವ ಪರಿಪಾಠವೂ ಕಾಣಸಿಗುವುದು ಸಾಮಾನ್ಯ.

- ಬ್ಯಾಂಕಿನ ಡಿಡಿ ತೆಗೆದು ಕಳಿಸುವುದೂ ಪಿರಿಪಿರಿಯ ಕೆಲಸ ಅದಕ್ಕಾಗಿ ಪಾವತಿ ಮಾಡುವ ಕೇಂದ್ರದಲ್ಲಿ ಬ್ಯಾಂಕಿಗೆ ಒಂದಕ್ಕಿಂತ ಹೆಚ್ಚು ಬಾರಿ ಹೋಗಬೇಕಾದ್ದಲ್ಲದೇ [ಚೆಲಾನ್ ಕಟ್ಟಲು, ಹಾಗೂ ಡಿಡಿ ಪಡೆಯಲು] - ಹಣ ಪಡೆಯುವ ಜಾಗದಲ್ಲಿ ಡಿಡಿಯನ್ನು ಎಕೌಂಟಿಗೆ ಜಮಾ ಮಾಡಿ ಹಣ ಪಡೆಯಲು ಒಂದು ದಿನ ಕಾಯಬೇಕು.

- ಇವೆರಡೂ ಬಿಟ್ಟರೆ ವಲಸೆ ಕಾರ್ಮಿಕರು ಉಪಯೋಗಿಸಿಕೊಳ್ಳುತ್ತಿದ್ದ ಮೂರನೆಯ ದಾರಿಯೆಂದರೆ - ತಮ್ಮ ಊರಿನವರು ಯಾರಾದರೂ ಅತ್ತ ಹೋಗುತ್ತಿದ್ದರೆ ಅವರ ಕೈಯಲ್ಲಿ ಹಣ ಕಳುಹಿಸುವುದು. ಇದರಲ್ಲೂ ಸಮಯ ಹಿಡಿಯುವುದಲ್ಲದೇ ಒಂದು ವಿಚಿತ್ರ ಅಪಾಯವಿದೆಯೆಂದು ವಲಸೆ ಕಾರ್ಮಿಕರು ಅನೇಕ ಬಾರಿ ಮಾತನಾಡಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುವಾಗ [ಹೆಚ್ಚಿನಂಶ ರಿಜರ್ವೇಶನ್ ಇಲ್ಲದ ಬೋಗಿಯಲ್ಲಿ ಇವರುಗಳು ಹೋಗುವುದರಿಂದ] ಹಣ ಕಳ್ಳತನವಾಗುವ ಸಾಧ್ಯತೆಗಳಿದ್ದುವು. ಇನ್ನೂ ಕುತೂಹಲದ ಭೀತಿಯೆಂದರೆ ರೈಲ್ವೇ ಪೋಲೀಸರದ್ದು. ಹೆಚ್ಚಿನ ಹಣ ಹೊತ್ತೊಯ್ಯುವ ಬಡವರನ್ನು ಆರ್.ಪಿ.ಎಫ್.ನವರು ಅನುಮಾನದಿಂದ ನೋಡುತ್ತಾರಂತೆ. ಹೀಗಾಗಿ ಪೋಲೀಸರ ಪಿರಿಪಿರಿಯೂ, ಹಾಗೂ ಒಮ್ಮೊಮ್ಮೆ ಅವರಿಗೇ ಹಣವನ್ನು ಕಳೆದುಕೊಳ್ಳುವ ಅಪಾಯವೂ ಇರುತ್ತದೆ.

ಹೀಗೆ ವಲಸೆ ಬಂದು ನಾಲ್ಕು ಕಾಸು ಸಂಪಾದಿಸಿ ಹೋಗುವವರಿಗೆ ಉಳಿತಾಯವೇ ಇಲ್ಲದಂತೆ ಆಗುವ ಅಪಾಯವಿದೆ. ಎಲ್ಲರೀತಿಯಿಂದಲೂ ಇದು ಸವಾಲೇ. ಹೀಗಾಗಿ ವಲಸೆ ಬಂದ ಥಾಪಾ, ಈಚೆಗೆ ನಾನು ಕಟ್ಟಿಸಿದ ಮನೆಯಲ್ಲಿ ಮರದಕೆಲಸಕ್ಕೆ ಪಾಲಿಶ್ ಕೆಲಸ ಮಾಡಿದ ಗೊರಖ್‍ಪುರದ ರಾಧೇಶ್ಯಾಂ ಮತ್ತವನ ತಂಡದವರ ಸವಾಲೂ ಇದೇ ಇರಬಹುದು ಎಂದು ನಾನು ಕುತೂಹಲದಿಂದ ಅವರನ್ನು ಮನೆಗೆ ಹಣ ಕಳಿಸುವ ವಿಧಾನದ ಬಗ್ಗೆ ಕೇಳಿದೆ. ಕಳೆದ ವರ್ಷ ಥಾಪಾಜಿ, ಈಚೆಗೆ ರಾಧೇಶ್ಯಾಂ ಇಬ್ಬರೂ ಒಂದೇ ಉತ್ತರವನ್ನು ನೀಡಿದರು: ಬ್ಯಾಂಕುಗಳಲ್ಲಿ ಸಿ.ಬಿ.ಎಸ್. [ಇದರ ವಿವರ ಮುಂದೆ ನೋಡಿ!] ಆಗಿರುವುದರಿಂದ ನಮಗೆ ಅನುಕೂಲವಾಗಿದೆ. ತೊಂದರೆಯೇನೂ ಇಲ್ಲ. ಖರ್ಚಿಲ್ಲದೇ ನಾವುಗಳು ಹಣವನ್ನು ಮನೆಗೆ ತಲುಪಿಸಲು ಸಾಧ್ಯವಾಗುತ್ತಿದೆ ಎಂದರು.

ಹಲವು ದಶಕಗಳಿಂದ ಬ್ಯಾಂಕುಗಳ ಗಣಕೀಕರಣ ನಡೆಯುತ್ತಿದೆ. ಮೊದಮೊದಲಿಗೆ ಬ್ಯಾಂಕಿನ ಕಾರ್ಮಿಕ ಸಂಘಗಳು ಈ ಗಣಕೀಕರಣವನ್ನು ವಿರೋಧಿಸಿದ್ದು ಉಂಟು. ಕೆಳವರ್ಗದ ಕಾರ್ಮಿಕರ ಕೆಲಸಗಳು ಗಣಕೀಕರಣದಿಂದ ಹರಣವಾಗುತ್ತದೆ ಅನ್ನುವುದು ಅವರ ವಾದವಾಗಿತ್ತು. ಹೀಗಾಗಿ ನಮ್ಮ ಬ್ಯಾಂಕುಗಳಲ್ಲಿ ಗಣಕೀಕರಣ ನಿಧಾನಗತಿಯಲ್ಲಿಯೇ ನಡೆಯಿತು.

ಇದರ ಫಾಯಿದೆಯೂ ನಮಗಾಯಿತೆನ್ನಿ. ೨೦೦೦ ಇಸವಿಯಲ್ಲಿ ಉದ್ಭವವಾಗುತ್ತದೆಂದು ಗುಲ್ಲೆಬ್ಬಿಸಿದ್ದ ವೈ-ಟೂ-ಕೆ ಸಮಸ್ಯೆ ಹೆಚ್ಚಾಗಿ ಬ್ಯಾಂಕಿಂಗ್ ಕ್ಷೇತ್ರವನ್ನು ತಟ್ಟಲಿತ್ತು. ಆದರೆ ಆಗ್ಗೆ ಹೆಚ್ಚು ಬ್ಯಾಂಕುಗಳು ಗಣಕೀಕೃತವಾಗಿರಲಿಲ್ಲವಾದ್ದರಿಂದ ಅದು ನಮ್ಮನ್ನು ಹೆಚ್ಚಾಗಿ ತಟ್ಟಲಿಲ್ಲ ಹಾಗೂ ಅದರ ಖರ್ಚನ್ನು ಬ್ಯಾಂಕುಗಳು ಉಳಿಸಿಬಿಟ್ಟವು. ಆಗ್ಗೆ ಇಂಟರ್ನೆಟ್‌ನಲ್ಲಿ ಹರಿಯುತ್ತಿದ್ದ ಒಂದು ನಗೆ ಚಟಾಕಿ ಇಂತಿತ್ತು: "ಭಾರತೀಯ ಬ್ಯಾಂಕುಗಳಲ್ಲಿ ೭೦% ವೈ-ಟೂ-ಕೆ ರೆಡಿ - ಅಂದರೆ ೨೦೦೦ ಇಸವಿಯ ಸಮಸ್ಯೆಯನ್ನು ಪರಿಹರಿಸಿವೆ" ಎಂದು ರಿಜರ್ವ್ ಬ್ಯಾಂಕು ಇತ್ತ ಒಂದು ಅಂಕಿಗೆ ಯಾರೋ ಜೋಡಿಸಿದ್ದ ಬಾಲಂಗೋಚಿ ಅಂದರೆ "ಮಿಕ್ಕ ೩೦% ಬ್ಯಾಂಕುಗಳು ಗಣಕೀಕೃತವಾಗಿವೆ!!" ಅರ್ಥಾತ್ ಗಣಕೀಕರಣವೇ ಇಲ್ಲದ ಬ್ಯಾಂಕುಗಳಲ್ಲಿ ಈ ಸಮಸ್ಯೆ ಸಮಸ್ಯೆಯೇ ಅಲ್ಲವಾಗಿತ್ತು!

ಹೀಗಿದ್ದ, ಬಡವರ ವಿರೋಧಿ ಎಂದು ಕರೆಯಲ್ಪಡುತ್ತಿದ್ದ, ಗಣಕೀಕರಣವನ್ನೂ ಆ ಹೆಸರಿನಿಂದ ಕರೆಯದೇ ಹಿಂಬಾಗಿಲಿನಿಂದ ಆಟೋಮ್ಯಾಟಿಕ್ ಲೆಡ್ಜರ್ ಪೋಸ್ಟಿಂಗ್ ಮಶೀನ್ ಎಂದು ಕಂಪ್ಯೂಟರುಗಳಿಗೆ ಹೊಸ ಹೆಸರು ನೀಡಿ ಗುಪ್ತವಾಗಿ ತರಬೇಕಿದ್ದ ಕಾಲದಿಂದ, ಇಂದಿಗೆ ಬ್ಯಾಂಕುಗಳು ಅದ್ಭುತ ಪ್ರಗತಿಯನ್ನು ಸಾಧಿಸಿಬಿಟ್ಟಿವೆ. ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕಿನಂತಹ ಬ್ಯಾಂಕುಗಳು ತಮ್ಮ ಎಲ್ಲ ಶಾಖೆಗಳೂ ಸಿ.ಬಿ.ಎಸ್. [ಕೋರ್ ಬ್ಯಾಂಕಿಂಗ್ ಸಲ್ಯೂಷನ್] ಅಳವಡಿಸಿವೆ ಅನ್ನುವುದನ್ನು ಘೋಷಿಸಿವೆ. ಈ ಸುದ್ದಿಯ ಮಹತ್ವ ಕಡಿಮೆಯದ್ದೇನೂ ಅಲ್ಲ. ಅದರಲ್ಲೂ ಸರಕಾರೀ ಬ್ಯಾಂಕುಗಳ ಶಾಖೆಗಳು ನಗರ ಪ್ರದೇಶದಲ್ಲಲ್ಲದೇ ಹಳ್ಳಿಗಾಡಿನಲ್ಲೂ ಇರುವುದರಿಂದ [ಒಟ್ಟಾರೆ ೭೦,೦೦೦ ಶಾಖೆಗಳಿರುವ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಮಾರು ೪೫,೦೦೦ ಶಾಖೆಗಳು ನಗರೇತರ ಪ್ರದೇಶದಲ್ಲಿವೆ] ತಂತ್ರಜ್ಞಾನದ ಫಾಯಿದೆ ಅಲ್ಲಿಗೂ ಹಬ್ಬುತ್ತಿದೆ. ಎಷ್ಟೋ ಸ್ಥಳಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲು ಹೊಸ ವಿ-ಸ್ಯಾಟ್‌ಗಳನ್ನು ಹಾಕಿಸಬೇಕಾಯಿತು. ವಿದ್ಯುತ್ ಸರಬರಾಜು ಇಲ್ಲದ, ಅಥವಾ ಅದರ ಖಾತ್ರಿಯಿಲ್ಲದ ಜಾಗಗಳಲ್ಲಿ ವಿಶೇಷ ಏರ್ಪಾಟುಗಳನ್ನು ಮಾಡಬೇಕಾಯಿತು. ಇದರಿಂದಾಗಿ ರಾಧೇಶ್ಯಾಂ ಮತ್ತು ಥಾಪಾಗೆ ಖರ್ಚಿಲ್ಲದೇ ಮನೆಗೆ ಹಣ ಕಳಿಸುವುದು ಸಾಧ್ಯವಾಗುತ್ತಿದೆ.

ಆದರೆ ಇದರಿಂದ ಆಂತರಿಕವಾಗಿ ಬ್ಯಾಂಕುಗಳಿಗೆ ಕೆಲವು ಪುಟ್ಟ ಸವಾಲುಗಳು ಹುಟ್ಟಿಕೊಂಡಿವೆ. ಈಗ ಬ್ಯಾಂಕುಗಳು ಶಾಖೆಗಳ ಸುತ್ತ ಏರ್ಪಾಟಾಗಿವೆ. ಆದರೆ ಈಗಿನ ತಂತ್ರಜ್ಞಾನದಿಂದ ಅಲ್ಲಿನ ಲಾವಾದೇವಿ ಶಾಖೆಯನುಸಾರ ನಡೆಯಬೇಕೆಂಬ ನಿಯಮವೇನೂ ಇಲ್ಲ. ಥಾಪಾ ಕೆ.ಗುಡಿಯ ಬ್ಯಾಂಕಿನ ಶಾಖೆಗೆ ಹೋಗಿ ತನ್ನು ಹಿಮಾಚಲದ ಎಕೌಂಟಿನಿಂದ ಹಣ ತೆಗೆಯಬಹುದು/ಪಾವತಿ ಮಾಡಬಹುದು. ಆದರೆ ಆ ಲಾವಾದೇವಿಯ ಲಾಭನಷ್ಟ ಸಲ್ಲುವುದು ಹಿಮಾಚಲದ ಎಕೌಂಟಿರುವ ಶಾಖೆಗೆ!

ಹೀಗಾಗಿ ಉತ್ತರಪ್ರದೇಶದಿಂದ ವಲಸೆ ಬಂದು ಮುಂಬಯಿಯಲ್ಲಿ ಟ್ಯಾಕ್ಸಿ ಚಲಾಯಿಸುತ್ತಿರುವ ಅನೇಕರಿಗೆ ಪ್ರಭಾದೇವಿಯ ಶಾಖೆಯಲ್ಲಿ ಹಣ ತುಂಬಲು ಕಿರಿಕಿರಿಯಾಗುತ್ತಿದೆಯಂತೆ... ಕಾರಣ, ಪ್ರಭಾದೇವಿಯ ಶಾಖೆಯಲ್ಲಿನ ಸರಾಸರಿ ಲಾವಾದೇವಿಯ ಮೊತ್ತಕ್ಕೆ ಹೋಲಿಸಿನೋಡಿದರೆ ಈ ಮೊತ್ತ ಸಣ್ಣದು. ಹೀಗಾಗಿ ಆ ಬ್ಯಾಂಕಿನ ಉದ್ಯೋಗಿಗಳಿಗೆ, ತಮ್ಮ ಶಾಖೆಯ ಲೆಕ್ಕಕ್ಕೇ ಬರದ ಈ ಪಾವತಿಯ ಕೆಲಸವನ್ನು ಅವರು ಮಾಡಬೇಕಾಗಿದೆ! ಬ್ಯಾಂಕಿಗೆ ಮುಂಚೆ ಡಿಡಿ ಕಮಿಷನ್ ಎಂದು ಬರುತ್ತಿದ್ದ ಆದಾಯವೂ ಖೋತಾ ಆಗಿದೆ. ಆದರೆ ಈ ಎಲ್ಲಕ್ಕೂ ಅಳವಡಿಸಿರುವ ತಂತ್ರಜ್ಞಾನಕ್ಕೆ ಖರ್ಚಂತೂ ಆಗಿದೆ!! ಹೀಗೆ ಬ್ಯಾಂಕುಗಳು ಈಗ ಎದುರಿಸಬೇಕಾಗಿರುವ ಸವಾಲುಗಳೇ ಭಿನ್ನರೀತಿಯಾದವು.

ಈ ತಂತ್ರಜ್ಞಾನದ ಬೆಳವಣಿಗೆಯಿಂದ ಥಾಪಾಗೂ, ರಾಧೇಶ್ಯಾಂಗೂ ಫಾಯಿದೆಯಾಗಿದೆಯಾದರೂ ಇವರು ಪ್ರತಿನಿಧಿಸುವುದು ಎಲ್ಲ ವಲಸೆ ಕಾರ್ಮಿಕರನ್ನಲ್ಲ. ಇವರುಗಳಿಗೆ ಬ್ಯಾಂಕಿನಲ್ಲಿ ಒಂದು ಎಕೌಂಟ್ ಇತ್ತು, ಅಥವಾ ಎಕೌಂಟು ತೆರೆಯಲು ಸಾಧ್ಯವಾಯಿತು. ಆದರೆ ಮರಗೆಲಸ ಮಾಡಲು ಜೋಧ್‍ಪುರದಿಂದ ಬಂದಿರುವ ಸವಾಯಿರಾಮ್‍ನ ತಂಡದ ಯಾರೊಬ್ಬರಿಗೂ ಬ್ಯಾಂಕಿನಲ್ಲಿ ಖಾತೆ ಇಲ್ಲ. ಹೀಗಾಗಿ ಈ ತಂತ್ರಜ್ಞಾನದ ಫಲ ಇನ್ನೂ ವ್ಯಾಪಕ ರೀತಿಯಲ್ಲಿ ಆಗಲು ಸಾಧ್ಯವಾಗಿಲ್ಲ.

ದಕ್ಷಿಣ ಆಫ್ರಿಕಾದ ಟೇಬಾ ಬ್ಯಾಂಕಿನಲ್ಲಿ ತಂತ್ರಜ್ಞಾನದ ಫಾಯಿದೆಯನ್ನು ಒಂದು ಮಜಲು ಕೆಳಕ್ಕೆ ಒಯ್ದಿದ್ದಾರೆ. ಭಾರತದಲ್ಲಿ ಈ ತಂತ್ರಜ್ಞಾನದ ಪೂರ್ತಿ ಫಾಯಿದೆ ಎಲ್ಲಿ ಬ್ಯಾಂಕುಗಳ ಶಾಖೆ ಭೌತಿಕವಾಗಿ ನಿಂತಿದೆಯೋ ಆ ಕ್ಷೇತ್ರಗಳಿಗೆ ಸೀಮಿತವಾಗುತ್ತದೆ. ಅಂದರೆ ಹಣ ಪಾವತಿ ಮಾಡಲು, ಪಡೆಯಲು ಬ್ಯಾಂಕಿನ ಶಾಖೆಗೆ ಪ್ರಯಾಣ ಬೆಳೆಸಬೇಕಾದ್ದು ಅನಿವಾರ್ಯ. ಟೇಬಾ ಬ್ಯಾಂಕಿನಲ್ಲಿ ತಂತ್ರಜ್ಞಾನದ ಬಳಕೆಯ ರೀತಿಯೇ ಕುತೂಹಲದ್ದು. ಅಲ್ಲಿಯ ಗ್ರಾಹಕರಿಗೆ ಬ್ಯಾಂಕು ಒಂದು ಕಾರ್ಡನ್ನು ನೀಡುತ್ತದೆ. ಆ ಕಾರ್ಡನ್ನು ಗ್ರಾಹಕರು ಕಿರಾಣೆಯಂಗಡಿಯಲ್ಲಿ ಉಪಯೋಗಿಸಬಹುದು. ಇದರಲ್ಲಿ ಹೊಸದೇನು ಎಂದು ಹುಬ್ಬೇರಿಸುವ ಮುನ್ನ ಒಂದು ಗಮ್ಮತ್ತಿನ ವಿಷಯವನ್ನು ಹೇಳುತ್ತೇನೆ -- ನಾವೆಲ್ಲರೂ ಡೆಬಿಟ್ ಕಾರ್ಡನ್ನು ಉಪಯೋಗಿಸಿದಾಗ ಮೂಲತಃ ಹಣ ನಮ್ಮ ಖಾತೆಯಿಂದ ಖಾಲಿಯಾಗಿ ಅಂಗಡಿಯವನ ಖಾತೆಗೆ ಸೇರುತ್ತದೆ. ಆದರೆ ಇದರ ವಿರುದ್ಧವಾದ ಉಪಯೋಗದಬಗ್ಗೆ ಯೋಚಿಸಬಹುದೇ? ಕಿರಾಣಿಯಂಗಡಿಯಲ್ಲಿ ಹಣ ಪಾವತಿ ಮಾಡಿ ಅದು ನಮ್ಮ ಖಾತೆಗೆ ಹೋದರೆ? ಹೀಗೆ ಭಾರತದಲ್ಲಿ ಕಾರ್ಡಿನ ಮೂಲಕ ಒಂದು ಮೊಬಲಗಿನ ಸಮಾನವಾದ ಸರಕನ್ನು ಪಡೆಯಬಹುದಾದ ಅರ್ಧ ಫಾಯಿದೆ ಮಾತ್ರವಿದ್ದರೆ, ಟೇಬಾಬ್ಯಾಂಕಿನವರು ಪೂರ್ಣಗೊಳಿಸಿದ್ದಾರೆ. ಹೀಗಾಗಿ ಡೆಬಿಟ್ ಕಾರ್ಡನ್ನು ಸ್ವೀಕರಿಸುವ ಪ್ರತಿ ಕಿರಾಣೆಯಂಗಡಿಯೂ ಒಂದು ಪುಟ್ಟ ಲಾವಾದೇವಿಯ ಬ್ಯಾಂಕೇ ಆಗಿಬಿಡುತ್ತದೆ! ಈ ಪದ್ಧತಿಯನುಸಾರ ನಮ್ಮ ದೇಶದಲ್ಲಿ ೭೦,೦೦೦ ಶಾಖೆಗಳಿರುವ ಬ್ಯಾಂಕಿಂಗ್ ವ್ಯವಸ್ಥೆಗೆ ಎಷ್ಟು ಹೊಸ
ಕೊಂಡಿಗಳು ಸೇರಿಕೊಳ್ಳಬಹುದೋ ಊಹಿಸಿ!

ಆದರೆ ಟೇಬಾಬ್ಯಾಂಕಿನ ಉದಾಹರಣೆಗೂ ಬ್ಯಾಂಕಿನ ಎಕೌಂಟ್ ಬೇಕು. ಬ್ಯಾಂಕೇ ಇಲ್ಲದೆ ಹಣ ಪಾವತಿ ಮಾಡುವ ತಂತ್ರಜ್ಞಾನವಿರಬಹುದೇ? ಇದಕ್ಕೆ ನಮಗೆ ಉದಾಹರಣೆ ಸಿಗುವುದು ಕೀನ್ಯಾ ಮತ್ತು ಅಫಘಾನಿಸ್ಥಾನ ದೇಶಗಳಲ್ಲಿ. ಅರ್ಥಾತ್: ಉತ್ತಮವಾದ ಕೆಲವು ಪಾಠಗಳನ್ನು ಕಲಿಯಲು ನಾವು ಪಶ್ಚಿಮಾಭಿಮುಖವಾಗಿ ವಿಕಸಿತ ದೇಶಗಳನ್ನೇ ನೋಡಬೇಕಾಗಿಲ್ಲ. ಅಫಘಾನಿಸ್ಥಾನದಲ್ಲಿ ನಿಮಗೆ ರೋಷಾನೆ ಸಂಸ್ಥೆಯ ಮೊಬೈಲ್ ಫೋನಿದ್ದಲ್ಲಿ - ಬ್ಯಾಂಕಿನ ಎಕೌಂಟೂ ಬೇಕಿಲ್ಲ. ಏರ್ಟೈಮ್ ಮಾರುವ ಯಾವುದೇ ಮೂಲೆಯಂಗಡಿಗೆ ಹೋಗಿ ಹಣ ಪಾವತಿ ಮಾಡಿದರೆ ಆ ಬದಿಯಲ್ಲಿರುವ ಮೊಬೈಲ್ ಗ್ರಾಹಕನಿಗೆ ಒಂದು ಕೋಡ್ ಇರುವ ಎಸ್ಸೆಮ್ಮೆಸ್ ಹೋಗುತ್ತದೆ. ಆ ಎಸ್ಸೆಮ್ಮೆಸ್ಸನ್ನು ಹಿಡಿದು ಆತ ತನ್ನ ಸಮೀಪದ ಏರ್ಟೈಮ್ ಮಾರುವವನ ಬಳಿ ಹೋಗಿ ಹಣ ಪಡೆಯಬಹುದು. ಬ್ಯಾಂಕೂ ಬೇಡ, ಅಕೌಂಟೂ ಬೇಡ, ಖರ್ಚೂ ಕಡಿಮೆ, ಕಳುವೂ ಆಗುವುದಿಲ್ಲ, ತಕ್ಷಣ ಪಾವತಿ. ಬ್ಯಾಂಕಿನ ಶಾಖೆಗಳೇ ಇಲ್ಲದ ದಿನಗಳನ್ನು ನನ್ನ ಬದುಕಿನ ಕಾಲದಲ್ಲಿಯೇ ನೋಡಬಹುದೇ? ಟೆಲಿಪೋನ್ ಕಂಪನಿಯೇ ಬ್ಯಾಂಕಾಗುವುದನ್ನು ಕಾಣಬಹುದೇ. ಪೇಪರ್ ದುಡ್ಡೇ ಇಲ್ಲದ ದಿನವನ್ನು ನೋಡಬಹುದೇ? ಹಗಲುಗನಸುಗಳಿಗೆ ಅಂತ್ಯವಿಲ್ಲ.. ಆದರೂ ಒಂದೆಡೆಯಿಂದ ಇನ್ನೊಂದೆಡೆಗ ಬಡವರ ಹಣ ತಂತ್ರಜ್ಞಾನದ ಆಧಾರದ ಮೇಲೆ ಹೆಚ್ಚು ಖರ್ಚಿಲ್ಲದೇ ಓಡಾಡುತ್ತಿರುವುದೇ ಒಂದು ಮೌನ ಕ್ರಾಂತಿಯಲ್ಲವೇ?



Thursday, March 21, 2013

ಯಂತ್ರ-ಮಾನವ ದ್ವಂದ್ವ!



ಹಲವು ವರ್ಷಗಳ ಹಿಂದೆ ಕೆನಡಾದ ಕ್ಯುಬೆಕ್ ಪ್ರಾಂತಕ್ಕೆ ಅಲ್ಲಿನ ಸಹಕಾರ ಸಂಘಗಳನ್ನು ಅಧ್ಯಯನ ಮಾಡಲು ಹೋಗಿದ್ದೆ. ಆಗ ಫ್ರಾಂಮ್ಟನ್ ಅನ್ನುವ ಒಂದು ಪುಟ್ಟ ಹಳ್ಳಿಯಲ್ಲಿದ್ದ ಸಹಕಾರ ಸಂಘವನ್ನು ಭೇಟಿಮಾಡುವ ಅವಕಾಶ ಸಿಕ್ಕಿತ್ತು. ಆ ಹಳ್ಳಿಯ ಸಹಕಾರ ಸಂಘ [ಕೇಸ್ ಪಾಪ್ಯುಲೇರ್]ದ ಮ್ಯಾನೇಜರ್ ಒಂದು ರೀತಿಯ ದುಃಖದಲ್ಲಿದ್ದ. ನಮ್ಮ ದೇಶದ ಹಾಗೆಯೇ ಮೂರು ಮಜಲಿನ ಸಹಕಾರೀ ವ್ಯವಸ್ಥೆಯಲ್ಲಿ ಫ್ರಾಂಮ್ಟನ್ ಹಳ್ಳಿಸ್ಥರದ ಸಹಕಾರೀ ಸಂಸ್ಥೆ. ಅದರ ಮೇಲೆ ಹಲವು ಪ್ರಾಂತೀಯ ಸಂಸ್ಥೆಗಳ ಒಕ್ಕೂಟ ಹಾಗೂ ಆಮೇಲೆ ರಾಜ್ಯಸ್ಥರದ ಸಹಕಾರೀ ಬ್ಯಾಂಕು. ಎಲ್ಲವೂ ನಮ್ಮಂತೆಯೇ. ವ್ಯತ್ಯಾಸವಿಷ್ಟೇ - ಒಟ್ಟಾರೆ ಆ ಸಹಕಾರ ವ್ಯವಸ್ಥೆ ಹೆಚ್ಚಿನ ಖರ್ಚಿನದ್ದಾಗಿದ್ದು ಲಾಭವನ್ನು ಮಿಕ್ಕ ಬ್ಯಾಂಕುಗಳಷ್ಟು ಆರ್ಜಿಸುತ್ತಿರಲಿಲ್ಲ. ಅದಕ್ಕಾಗಿ ವ್ಯವಸ್ಥೆಯಲ್ಲಿ ಆಂತರಿಕ ಅಧ್ಯಯನಗಳೂ ರಣನೀತಿಗಳೂ ತಯಾರಾಗತೊಡಗಿದ್ದುವು.

ಅನೇಕ ಸೂತ್ರಗಳನ್ನು ಆ ವ್ಯವಸ್ಥೆ ಪರಿಶೀಲಿಸುತ್ತಿತ್ತಾದರೂ ಒಂದು ಅಂಶ ಎದ್ದು ಕಾಣಿಸುತ್ತಿತ್ತು. ಬೂಜ್ ಆಲೆನ್ ಸಂಸ್ಥೆ ನಡೆಸಿದ ಒಂದು ಅಧ್ಯಯನದ ಪ್ರಕಾರ ಬ್ಯಾಂಕಿನ ಕೌಂಟರಿನಲ್ಲಿ ನಡೆವ ಪ್ರತೀ ಲಾವಾದೇವಿಗೂ ಸುಮಾರು ೧.೦೭ ಡಾಲರ್‌ನಷ್ಟು ಖರ್ಚಾಗುತ್ತಿತ್ತು. ಆ ವ್ಯವಹಾರವನ್ನು ಕೌಂಟರಿನಿಂದ ತೆಗೆದು ಪಕ್ಕದ ಎ.ಟಿ.ಎಂಗೆ ಹಾಕಿದರೆ - ಅರ್ಥಾತ್ ಯಂತ್ರೀಕರಿಸಿದರೆ ಅದರ ಒಟ್ಟಾರೆ ಖರ್ಚು ಐವತ್ತೈದು ಸೆಂಟು, ದೂರವಾಣಿಯ ಮೂಲಕ ವ್ಯಾಪಾರ ನಡೆಸಿದಲ್ಲಿ ಖರ್ಚು ೨೬ ಸೆಂಟುಗಳು ಹಾಗೂ ಇಂಟರ್ನೆಟ್ ವ್ಯಾಪರಕ್ಕೆ ಆಗುವ ಖರ್ಚು ಪ್ರತಿ ವ್ಯವಹಾರಕ್ಕೆ ಒಂದು ಸೆಂಟು ಅನ್ನುವ ವಿಚಾರ ಹೊರಬಿದ್ದಿತ್ತು. ಹೀಗಾಗಿ ಬ್ಯಾಂಕಿನ ಖರ್ಚನ್ನು ಕಡಿಮೆ ಮಾಡಲು ಗ್ರಾಹಕರನ್ನು ಕೌಂಟರಿನಿಂದ ಏಟಿ‌ಎಂಗೆ, ಅಲ್ಲಿಂದ ಇಂಟರ್ನೆಟ್ಟಿಗೆ ಕಳಿಸುವ ಯೋಜನೆಯನ್ನು ಆ ಒಕ್ಕೂಟ ರೂಪಿಸಿತ್ತು.

ಒಕ್ಕೂಟದವರು ಹೇಳಿದ್ದರಂತೆ: "ಜನ ಯಂತ್ರದತ್ತ ಹೋಗಲು ತಕ್ಷಣ ಒಪ್ಪುವುದಿಲ್ಲ. ಆದರೆ ನಾವುಗಳು ಖರ್ಚು ಕಡಿಮೆ ಮಾಡಲು ಯಂತ್ರಗಳನ್ನು ಹೆಚ್ಚು ಹೆಚ್ಚು ಬಳಸುವ ಅವಶ್ಯಕತೆಯಿದೆ. ಹೀಗಾಗಿ ಅವರು ಆ ಕಡೆಗೆ ಹೋಗಲು ತಯಾರಿಲ್ಲದಿದ್ದರೆ, ಕೌಂಟರಿನಲ್ಲಿನ ಸೇವೆಯ ಗುಣಮಟ್ಟವನ್ನು ಕಡಿಮೆ ಮಾಡಿಯಾದರೂ ಅವರನ್ನು ಅತ್ತ ಅಟ್ಟಿ. ಯಾಕೆಂದರೆ ಸಂಸ್ಥೆಯ ಲಾಭಾಂಶ ಒಂದು ಮಟ್ಟದಲ್ಲಿರಲು ಈ ಬೆಳವಣಿಗೆ ಅವಶ್ಯಕ.."
ಅವನ ಕೆಲಸವನ್ನು ಆ ಹಳ್ಳಿಯ ಗ್ರಾಹಕರೇನೂ ಸುಸೂತ್ರಗೊಳಿಸಲಿಲ್ಲ. ಆ ಹಳ್ಳಿಯಲ್ಲಿ ಕೃಷಿ ಕೈಗೊಂಡು ಜೀವಿಸುತ್ತಿದ್ದ ಜನರ ಸರಾಸರಿ ವಯಸ್ಸು ಹೆಚ್ಚೇ ಇತ್ತು. ಹಳ್ಳಿಯಲ್ಲಿ ಹುಟ್ಟಿದ್ದ ಯುವಕರ ಬಹುಭಾಗ ಓದು ಕೆಲಸವೆಂದು ಮಾಂಟ್ರಿಯಲ್, ಕ್ಯುಬೆಕ್ ನಗರಗಳನ್ನು ಸೇರಿ ಊರನ್ನು ಬಿಟ್ಟಿದ್ದರು. ಅಲ್ಲಿನ ಗ್ರಾಹಕರು ಬ್ಯಾಂಕಿಗೆ ಬಂದು ಕೌಂಟರಿನ ಮುಂದೆ ಕಾಯಲು ತಯಾರಾಗಿದ್ದರೇ ಹೊರತು ಎ.ಟಿ.ಎಂನತ್ತ ತಿರುಗಿನೋಡಲೂ ತಯಾರಿರಲಿಲ್ಲ. ಕಾರಣ: ಅವರಿಗೆ ಯಂತ್ರದಿಂದ ಉಂಟಾಗುವ ತೀವ್ರತೆ ಮತ್ತು ಎಫಿಷಿಯಂಸಿಯ ಅವಶ್ಯಕತೆಯೇ ಇರಲಿಲ್ಲ!

ಆದರೆ ಮ್ಯಾನೇಜರು ಹೇಳಿದ ಕಥೆಯೂ ಕುತೂಹಲದ್ದು: "ನಮ್ಮ ಗ್ರಾಹಕರು ನನಗೇ ತಿರುಗೇಟು ಹಾಕಿದರು. ನೀನು ಯಾಕೆ ನಮ್ಮನ್ನು ಯಂತ್ರದತ್ತ ಕಳುಹಿಸುತ್ತಿದ್ದೀಯೋ ನಮಗೆ ಗೊತ್ತು. ಆದರೆ ನಾವು ಇಲ್ಲಿಗೆ ಬರುವುದು ಹಣದ ವ್ಯವಹಾರಕ್ಕಾಗಿ ನಿಜ, ಆದರೆ ನಮಗೆ ಈ ಸಮಯದಲ್ಲಿ ಇತರರನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ, ಹರಟೆಕೊಚ್ಚಲು ಸಾಧ್ಯವಾಗುತ್ತದೆ. ಮನೆಗೆ ಹೋಗಿ ನಾವು ಮಾಡುವುದಾದರೂ ಏನು? ಇಲ್ಲಿ ಸ್ವಲ್ಪ ಸಮಯವೂ ಕಳೆಯುತ್ತದೆ"

ಗ್ರಾಹಕರು ಹೇಳಿದ ಮುಂದಿನ ಮಾತೆಂದರೆ: "ನೀನು ನಮ್ಮನ್ನು ಯಂತ್ರದತ್ತ ಅಟ್ಟಿದರೆ - ನಿನ್ನ ಅವಶ್ಯಕತೆಯೇ ಇಲ್ಲವಾಗಿ ಮೊದಲಿಗೆ ನಿನ್ನ ಕೆಲಸವೇ ಹೋಗುತ್ತದೆ. ಹೀಗಾಗಿ ನೀನು ಕೌಂಟರಿನಲ್ಲಿ ನಮಗೆ ಸೇವೆ ನೀಡುವುದೇ ನಿನಗೂ ಒಳ್ಳೆಯದು"

ಈ ರಣನೀತಿಯ ಭಾಗವಾಗಿದ್ದ ಮ್ಯಾನೇಜರ್‌ಗೆ ಇದು ಪೀಕಲಾಟದ ವಿಷಯವಾಗಿತ್ತು. "ಏನೇ ಆದರೂ ನನ್ನ ಕೆಲಸ ಹೋಗಬಹುದು" ಎಂದು ಅವನು ಹೇಳಿದ್ದ. "ಯಾಕೆಂದರೆ, ಈ ರಣನೀತಿಯನ್ನು ಅಮಲು ಮಾಡಿದಲ್ಲಿ ಮನುಷ್ಯರು ಮಾಡುವ ಕೆಲಸವನ್ನು ಯಂತ್ರಗಳ ಸುಪರ್ದಿಗೆ ಸ್ವಲ್ಪವಾದರೂ ಒಪ್ಪಿಸಿದಾಗ ಉದ್ಯೋಗಿಗಳ ಅವಶ್ಯಕತೆ ಕಡಿಮೆಯಾಗಿ ನನ್ನನ್ನು ಮನೆಗಟ್ಟುತ್ತಾರೆ ಅಮಲು ಮಾಡದಿದ್ದರೆ ನನ್ನ ಸಂಘ ದುಬಾರಿ ಸಂಘವಾದ್ದರಿಂದ ಮುಚ್ಚಿ ಹಾಕುತ್ತಾರೆ!"

ಆತನ ದೃಷ್ಟಿಯಿಂದ ಹೇಗೇ ಆದರೂ ಇದು ಗೆಲ್ಲುವ ದಿಕ್ಕಿಗೆ ಹೋಗುವ ಕೆಲಸವಾಗಿರಲಿಲ್ಲ. ಈ ವ್ಯತ್ಯಾಸವನ್ನು ನಾವು ಮುಖ್ಯವಾಗಿ ನಗರ ಪ್ರದೇಶದ ನಮ್ಮ ಬ್ಯಾಂಕುಗಳಲ್ಲೂ ನೋಡುತ್ತಿದ್ದೇವೆ. ಬ್ಯಾಂಕುಗಳು ನೀಡುತ್ತಿದ್ದ ಪ್ರತೀ ಸೇವೆಗೂ ನಿಧಾನವಾಗಿ ಶುಲ್ಕವನ್ನು ಹೇರುತ್ತಿರುವುದನ್ನು ನಾವು ನೋಡಬಹುದು. ಮೊದಲಿಗೆ ಚೆಕ್ ಬುಕ್ಕುಗಳು ಮುಫತ್ತಾಗಿದ್ದುವು - ಈಗ ಒಂದು ಮಟ್ಟಕ್ಕಿಂತ ಹೆಚ್ಚು ಚೆಕ್ಕುಗಳನ್ನು ಬರೆದರೆ ಅದಕ್ಕೆ ಶುಲ್ಕ ನೀಡಬೇಕು; ಕೆಲವು ಬ್ಯಾಂಕುಗಳಲ್ಲಿ ಎ.ಟಿ.ಎಂ ಅಲ್ಲದೇ ಕೌಂಟರಿನಲ್ಲಿ ವ್ಯವಹರಿಸಿದರೆ ಅದಕ್ಕೂ ಶುಲ್ಕವುಂಟು. ಮೂಲತಃ ಯಂತ್ರದಿಂದಾಗುವ ಕೆಲಸವನ್ನು ಯಂತ್ರದ ಕಡೆಗೇ ಅಟ್ಟಿ ಜನಸಂಪರ್ಕ ಕಡಿಮೆ ಮಾಡುತ್ತಲೇ ಲಾಭವನ್ನು ಆರ್ಜಿಸಬೇಕಾದ ಪರಿಸ್ಥಿತಿ ಬ್ಯಾಂಕುಗಳಲ್ಲಿ ಉಂಟಾಗುತ್ತಿದೆ.

ಕೆನಡಾದಲ್ಲಿ ಈ ಮಾತು ನಡೆಯುವುದರಲ್ಲಿ ಒಂದು ಅರ್ಥವೂ ಇರಬಹುದು. ಕಾರಣ ಒಟ್ಟಾರೆ ಜನಸಂಖ್ಯೆಯಲ್ಲಿ ಬ್ಯಾಂಕು ಮತ್ತು ವಿತ್ತೀಯ ಸಂಸ್ಥೆಗಳ ಜೊತೆ ವ್ಯವಹಾರ ಮಾಡುವ ಜನಸಂಖ್ಯೆಯ ಪರಿಮಾಣ ನಮಗಿಂತ ಹೆಚ್ಚೇ. ಆದರೆ ಬ್ಯಾಂಕಿನ ಮುಖವನ್ನೇ ಕಾಣದ ಬಡವರ ಜನಸಂಖ್ಯೆಯಿರುವ ನಮ್ಮ ದೇಶದ ಸವಾಲೇ ಬೇರೆ. ಮೊದಲಿಗೆ ಬ್ಯಾಂಕಿಗೆ ಬರದ ಗ್ರಾಹಕರನ್ನು ಬ್ಯಾಂಕಿನತ್ತ ಕರೆತರಬೇಕು. ಆ ನಂತರ ಅವರಿಗೆ ತಂತ್ರಜ್ಞಾನವನ್ನು ತೋರಿಸಿ ಬ್ಯಾಂಕಿನಿಂದ ಅಟ್ಟಬೇಕು. ಇಲ್ಲವಾದರೆ, ವ್ಯಕ್ತಿಗಳಿರುವ ಬ್ಯಾಂಕಿಗೇ ಬರದಿರುವ ಜನ ಬರೇ ಯಂತ್ರಗಳ ಜೊತೆ ವ್ಯವಹಾರ ನಡೆಸಿಯಾರೇ? ಅಭ್ಯಾಸವಾಗುವವರೆಗೂ ಈ ತಂತ್ರಜ್ಞಾನ [ಯಂತ್ರಜ್ಞಾನ] ಪಿರಿಪಿರಿಯದ್ದೇ. ಮನಸ್ಸಿನ ತುಂಬಾ ಅನುಮಾನಗಳಿಟ್ಟುಕೊಂಡು ಯಂತ್ರಕ್ಕೆ ಹಣ ಉಣ್ಣಿಸಲು ಯಾರೂ ಅದರಲ್ಲೂ ಬಡವರು ಒಪ್ಪುವುದು ಕಷ್ಟದ ಮಾತೇ.

ಹೀಗಾಗಿ ಎಲ್ಲೆಲ್ಲೂ ಏಟಿ‌ಎಂ ಮಯವಾಗುತ್ತಿರುವ ಈ ಘಟ್ಟದಲ್ಲಿ ಹೊಸ ಗ್ರಾಹಕರನ್ನು ಆಕರ್ಷಿಸುವುದು ಹೇಗೆ? ಹಾಗೂ ಅವರೊಡನೆ ವ್ಯವಹರಿಸುವುದು ಹೇಗೆ? ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲೇ ಬೇಕಾಗಿದೆ. ಪ್ರತಿ ಗ್ರಾಹಕನೂ ಭಿನ್ನ ಕಾಳಜಿಗಳನ್ನು ಕಳಕಳಿಗಳನ್ನು ಹೊಂದಿ ಬ್ಯಾಂಕಿನತ್ತ ಬರುತ್ತಿದ್ದರೆ ಅವರನ್ನು ಒಳಗೊಂಡು ವ್ಯವಹಾರ ನಡೆಸುವುದು ಹೇಗೆ? ಇದು ಸವಾಲಿನ ವಿಷಯವೇ.

ಈ ಬಗ್ಗೆ ಯೋಚಿಸುತ್ತಿದ್ದಾಗ ಪಶ್ಚಿಮ ಗೋದಾವರಿ ಜಿಲ್ಲೆಯ ಒಂದು ಹಳ್ಳಿಯಲ್ಲಿದ್ದ ಸಹಕಾರ ಸಂಘಕ್ಕೆ ಭೇಟಿನೀಡಿದ ನೆನಪು ನನಗಾಗಿಯಿತು. ಆ ಸಹಕಾರ ಸಂಘದಲ್ಲಿ ಮೊದಲಿಗೆ ಒಂದು ವಾಚನಾಲಯ. ಜನರೆಲ್ಲಾ ಅಲ್ಲಿ ಬಂದು ಪೇಪರ್ ಓದಿ, ಸ್ಥಳೀಯ ರಾಜಕೀಯ ಚರ್ಚಿಸಿ ಹೋಗಬಹುದು. ಜನರಿಗೆ ಹೆಚ್ಚಿನ ಸಮಯವಿದ್ದರೆ ಕಳೆಯಲು ಒಂದು ಅವಕಾಶವನ್ನು ಆ ಸಂಘ ಒದಗಿಸಿಕೊಟ್ಟಿತ್ತು. ಜೊತೆಗೆ ಅಲ್ಲಿನ ಕಾರ್ಯದರ್ಶಿ ನನಗೆ ಹೇಳಿದ್ದೆಂದರೆ, ಜನ ಜಾಸ್ತಿಯಿರುವ ಜಾಗದಲ್ಲಿ ಭ್ರಷ್ಟರಿಗೆ ವ್ಯವಹರಿಸಲೂ ಕಷ್ಟವಾಗುತ್ತದೆ. ಒಂದು ರೀತಿಯಿಂದ ಒಳಗಿನ ಉದ್ಯೋಗಿಗಳಿಗೆ ಈ ಜನ ಕಾವಲಾಗಿಯೂ ಇರುತ್ತಿದ್ದರು. ವ್ಯವಹಾರದ ಮಟ್ಟಿಗೆ ಕೌಂಟರಿಗೆ ಹೋಗಿ ಕೆಲಸ ಮುಗಿಸಿ ಬರುವುದು. ಇದರಿಂದ ಕೌಂಟರೂ ಬಿಡುವಾಗಿರುತ್ತದೆ ಆದರ ಜನರನ್ನು ಇಲ್ಲಿಗೆ ಬರಬೇಡಿ ಎಂದೂ ಹೇಳಿದಂತಾಗುವುದಿಲ್ಲ.

ಬಹುಷಃ ಜನರನ್ನು ಯಂತ್ರಗಳತ್ತ ಕಳಿಸಿ ಕಾಸು ಉಳಿಸಲು ಈ ವ್ಯೂಹ ಉಪಯೋಗವಾದೀತೇನೋ. ಎಲ್ಲರನ್ನೂ ಯಾವುದಾದರೂ ಒಂದು ಆಮಿಷದೊಂದಿಗೆ ಪ್ರಾಂಗಣಕ್ಕೆ ಕರೆಸಿಕೊಳ್ಳಬೇಕು. ಆದರೆ ಅವರಾಗಿಯೇ ಯಂತ್ರಗಳನ್ನು ಉಪಯೋಗಿಸುವಂತೆ ಆಮಿಷಗಳನ್ನೊಡ್ಡಬೇಕು. ಅದು ಬೇಡಲೇ ಬೇಡವೆಂದವರಿಗೆ ಬ್ಯಾಂಕಿನ ಉದ್ಯೋಗಿಯ ಮುಖಚಹರೆಯನ್ನು ಕಾಣಿಸಬಹುದು.... ಆದರೂ ಯಾವಾಗ ಜನರನ್ನು ಮಾತನಾಡಿಸಿ ತುಟ್ಟಿ ವ್ಯವಹಾರವನ್ನು ಮಾಡಬೇಕು, ಯಾವಾಗ ಯಂತ್ರಗಳತ್ತ ಅಟ್ಟಿ ಹಣ ಉಳಿಸಬೇಕು? ಅಥವಾ ಕಾಲ್ ಸೆಂಟರಿನ ಯಂತ್ರಮಾನವರತ್ತ ಯಾವಾಗ ಗ್ರಾಹಕರನ್ನು ಕಳಿಸಬೇಕು ಅನ್ನುವ ದ್ವಂದ್ವ ಎಲ್ಲ ಸಂಸ್ಥೆಗಳನ್ನೂ ಕಾಡುತ್ತಲೇ ಇರುತ್ತದೆ. ಈ ಗಲಾಟೆಯಲ್ಲಿ ಕೌಂಟರಿಗೂ-ಯಂತ್ರದ ಬಳಿಯೂ ಬರದ ಬಡ ಗ್ರಾಹಕರನ್ನು ಬ್ಯಾಂಕುಗಳು ಮರೆತೇ ಬಿಡುವ ಅಪಾಯವೂ ಇದೆ!