Saturday, March 28, 2009

ಮಕ್ಕಳಿಸ್ಕೂಲು ಮನೇಲಲ್ಲ


ಆಂಧ್ರಪ್ರದೇಶ - ರಂಗಾರೆಡ್ಡಿ ಜೆಲ್ಲೆ - ಶಂಕರಪಲ್ಲಿ ಮಂಡಲದ ಪೊದ್ದುಟೂರು ಗ್ರಾಮ ಸರಪಂಚ್ ಕಟಿಕೇ ಶ್ರೀನಿವಾಸ್ ಸಾಮಾನ್ಯ ಗ್ರಾಮೀಣ ರಾಜಕಾರಣಿಯಂತೆ ಕಾಣುವುದಿಲ್ಲ. ಯುವಕನೂ ವಿದ್ಯಾವಂತನೂ ಆಗಿರುವ ಆತ ತನ್ನ ಗ್ರಾಮದ ಬಗ್ಗೆ ಯೋಚಿಸುತ್ತಲೇ ಆ ಗ್ರಾಮದ ನಸೀಬು ವಿಸ್ತಾರವಾದ ಆರ್ಥಿಕ-ರಾಜಕೀಯ-ಸಾಮಾಜಿಕ ಆಗುಹೋಗುಗಳ ಜೊತೆ ಹೇಗೆ ಬೆಸೆದಿದೆ ಎಂದು ನೋಡಬಲ್ಲವ. ಹೀಗಾಗಿ ಆತನ ಜೊತೆ ಮಾತನಾಡುವುದೂ ಒಂದು ಒಳ್ಳೆಯ ಅನುಭವವೇ. ಆತ ಯಾವ ಪಕ್ಷಕ್ಕೆ ಸೇರಿದವ ಅನ್ನುವುದು ಮುಖ್ಯವಲ್ಲ, ಆದರೆ ಸರಪಂಚರಲ್ಲಿ ಇಂಥ ಯೋಚನಾಧೋರಣೆ ಇರುವುದು ನಿಜಕ್ಕೂ ಒಂದು ಉತ್ತಮ ಲಕ್ಷಣ ಅನ್ನಿಸುತ್ತದೆ.

ಆತನ ಸಹಜ ಬುದ್ಧಿವಂತಿಕೆಗೆ ತುಸುವಾದರೂ ಪೂರಕವಾಗಿರಬಹುದಾದ ಕಾರಣ ಆತ ಹಿಂದೆ ಎಂ.ವಿ.ಫೌಂಡೇಶನ್ [ಎಂ.ವಿ.ಎಫ್] ಜೊತೆಗೆ ಒಡನಾಡಿ ಅಲ್ಲಿನ ಗ್ರಾಮಾಂತರ ಶಾಲೆಯಲ್ಲಿ ಸ್ವಯಂ-ಪ್ರೇರಣೆಯಿಂದ ಪಾಠಮಾಡಿದ್ದ. ಎಂ.ವಿ.ಎಫ್ ರಂಗಾರೆಡ್ಡಿ ಜಿಲ್ಲೆಯಲ್ಲಿ ಹಲವಾರು ವರುಷಗಳಿಂದ ಕಷ್ಟ ಎನ್ನಿಸಬಹುದಾದ ಕೆಲಸವನ್ನು ಮಾಡುತ್ತಿದೆ. ಆ ಸಂಸ್ಥೆಯ ಮೂಲೋದ್ದೇಶ ಮಕ್ಕಳಿಗೆ ತಮ್ಮ ಸಹಜವಾದ ಹಕ್ಕುಗಳನ್ನು ಕೊಡಿಸುವುದು. ಹೀಗಾಗಿ ಅವರು ಹೇಳುವ ಮಾತುಗಳು ರಾಜಿಗೆ ಒಗ್ಗದ ಈ ಅಂಶಗಳ ಆಧಾರದಿಂದ ಕೂಡಿದೆ:

- ಎಲ್ಲ ಮಕ್ಕಳೂ ಕಾನೂನಿನನ್ವಯ ಗುರುತಿಸಲ್ಪಟ್ಟ ಶಾಲೆಗಳಲ್ಲಿ ಪೂರ್ಣಾವಧಿ ವಿದ್ಯಾರ್ಥಿಗಳಾಗಿ ನೋಂದಾಯಿತರಾಗಿರಬೇಕು
- ಶಾಲೆಯಲ್ಲಿಲ್ಲದ ಮಗುವನ್ನು ಬಾಲಕಾರ್ಮಿಕ ಎಂದು ಪರಿಗಣಿಸಲಾಗುವುದು
- ಮಕ್ಕಳು ಮಾಡುವ ಯಾವುದೇ ಕಾಯಕ ಅಪಾಯದಿಂದ ಕೂಡಿದ್ದು - ಅವರ ಬೆಳವಣಿಗೆಗೆ ಮಾರಕವಾದದ್ದು
- ಎಲ್ಲ ರೀತಿಯ ಬಾಲಕಾರ್ಮಿಕ ಚಟುವಟಿಕೆಗಳನ್ನು ನಿಷೇಧಿಸಬೇಕು - ಬಾಲಕಾರ್ಮಿಕರನ್ನು ಒಪ್ಪಿ ನಿಯಂತ್ರಿಸುವ ಯಾವುದೇ ಕಾನೂನು ಸಹ ಇರಬಾರದು.
- ಹಾಗೂ ಬಾಲಕಾರ್ಮಿಕರನ್ನು ಸಮರ್ಥಿಸುವ ಯಾವುದೇ ವಿಚಾರವನ್ನು ಧಿಕ್ಕರಿಸಬೇಕು.

ಹೀಗೆ ಒಂದು ವಿಪರೀತವಾದ ಮಕ್ಕಳಪರವಾದ ನಿಲುವನ್ನು ಎಂ.ವಿ.ಎಫ್. ತೆಗೆದುಕೊಂಡಿರುವುದಲ್ಲದೇ ಆ ಉದ್ದೇಶವನ್ನು ಸಾಧಿಸಲು ಅನೇಕ ಜಾಗಗಳಲ್ಲಿ ಕೆಲಸ ಮಾಡುತ್ತಿದೆ. ಈ ರೀತಿಯ ಕೆಲಸ ಕಷ್ಟದ್ದು ಹಾಗೂ ತುಂಬಾ ಮುಗ್ಗಟ್ಟಿನಿಂದ ಕೂಡಿದ್ದು. ಈ ಕೆಲಸವನ್ನು ಮುಂದುವರೆಸಬೇಕಾದರೆ ಮೊದಲು ಮಕ್ಕಳ ತಂದೆ-ತಾಯಿಯರನ್ನು ಗೆಲ್ಲಬೇಕು. ಉದಾಹರಣೆಗೆ ಮಕ್ಕಳ ತಂದೆ-ತಾಯಿಗಳು ಕೊಡುವ ವಾದವೇನಿರಬಹುದು? ಅದನ್ನು ಎದುರಿಸುವುದು ಹೇಗೆ?

ಉದಾಹರಣೆಗೆ,
-  ತಂದೆ ತಾಯಿಯರು ತಾವೇ ಅನಕ್ಷರಸ್ಥರಾಗಿದ್ದು, ತಮ್ಮ ಜೀವನವನ್ನು ಒಂದು ಸಾಧಾರಣ ಸ್ಥರದಲ್ಲಿ ನಡೆಸಲು ಸಾಧ್ಯವಾಗಿದ್ದೇ ಆಗಿದ್ದರೆ, ಮಕ್ಕಳು ಶಾಲೆಗೆ ಹೋಗುವುದು ಒಂದು ಅಪರಾಧವೆಂದು ಪರಿಗಣಿಸದೇ ಇರಬಹುದು.
- ಸಾಮಾಜಿಕ ಒತ್ತಡಗಳು ಮಕ್ಕಳನ್ನು ದೀರ್ಘಕಾಲದವರೆಗೆ ಶಾಲೆಗೆ ಕಳಿಸುವುದನ್ನು ತಡೆಗಟ್ಟಬಹುದು - ಇದಕ್ಕೆ ಶಾಲೆ ತಲುಪಲು ಮಾಡಬೇಕಾದ ಪ್ರಯಾಣ, ಹಾಗೂ ಬಾಲ್ಯವಿವಾಹ ಪ್ರಚಲಿತವಿರುವ ಜಾಗಗಳಲ್ಲಿ ಆ ಒತ್ತಡ, ಮತ್ತು ಮನೆಗೆಲಸದ ಒತ್ತಡಗಳು ಪೂರ್ಣಾವಧಿ ಶಾಲೆಗೆ ಹೋಗುವುದನ್ನ ತಡೆಗಟ್ಟಬಹುದು
- ಕುಟುಂಬ ಬಡತನದಲ್ಲಿದ್ದು ಬಾಲಕಾರ್ಮಿಕ ತರುವ ಆದಾಯ ಅವರಿಗೆ ಸ್ವಾಗತಾರ್ಹವಾಗಿರಬಹುದು. ಸಾಲದ್ದಕ್ಕೆ ಮಕ್ಕಳು ವಿದ್ಯೆಪಡೆದು ಅದರಾಧಾರದ ಮೇರೆಗೆ ದಿನಗೂಲಿ, ದೈಹಿಕ ಶ್ರಮದ ಕೆಲಸಗಳನ್ನು ಮಾಡಲು ತಯಾರಿಲ್ಲದಿದ್ದು, ವಿದ್ಯೆಗೆ ತಕ್ಕ ಕೆಲಸವೂ ಸಿಗದೇ ನಿರುದ್ಯೋಗಿ ಆಗುವು ಪರಿಸ್ಥಿತಿಯೂ ಉಂಟಾಗಬಹುದು - ಈ ಆಲೋಚನೆಯೇ ದೀರ್ಘಕಾಲ ವಿದ್ಯಾರ್ಜನೆಯ ವಿರುದ್ಧ ಕೆಲಸ ಮಾಡಬಹುದು. 
- ಮಕ್ಕಳನ್ನು ಶಾಲೆಗೆ ಕಳಿಸುವುದರಿಂದ ಅವರಿಂದ ಉಂಟಾಗಬಹುದಾದ ಆದಾಯ ನಷ್ಟವಾಗುವುದಲ್ಲದೇ ಶಾಲೆಗಾಗಿ - ಯೂನಿಫಾರ್ಮ್, ಪುಸ್ತಕ ಇತ್ಯಾದಿ ಎಂದು ಖರ್ಚೂ ಆದೀತು...

ಹೀಗೆ ಎಂ.ವಿ.ಎಫ್ ತೆಗೆದುಕೊಂಡಿರುವ ನಿಲುವಿಗೆ ವಿರುದ್ಧವಾದ ವಾದಸರಣಿಯೂ ಕೇಳಿಬರಬಹುದು. ಆದರೆ, ಈ ವಾದಗಳನ್ನು ಪರಿಗಣಿಸುವುದೂ ತಪ್ಪೆಂದು ಎಂ.ವಿ.ಎಫ್ ಮುಖ್ಯಸ್ಥೆ ಶಾಂತಾ ಸಿನ್ಹಾ ಹೇಳುತ್ತಾರೆ. ರಂಗಾರೆಡ್ಡಿ ಜಿಲ್ಲೆಯಲ್ಲಿ ಈ ಸಂಸ್ಥೆಯ ಹಲವು ವರ್ಷಗಳ ಕೆಲಸದ ಫಲವನ್ನು ನಾವು ನೋಡಬಹುದು. ಅದರ ಒಂದು ಉದಾಹರಣೆ ಪೊದ್ದುಟೂರಿನ ಕಟಿಕೇ ಶ್ರೀನಿವಾಸ್.

ಶಾಲೆಯಲ್ಲಿಲ್ಲದ ಮಕ್ಕಳನ್ನು ಶಾಲೆಗೆ ಹಾಕುವುದು ಸುಲಭದ ಕೆಲಸವೇನೂ ಅಲ್ಲ. ಮಕ್ಕಳು ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರೆ ಅವರನ್ನು ಅಲ್ಲಿಂದ ಹೊರಗೆಳೆಯುವುದೂ ಕಷ್ಟದ ಮಾತೇ. ಉದಾಹರಣೆಗೆ ಮಹಬೂಬನಗರದಲ್ಲಿ ಹತ್ತಿಬೀಜ ಉತ್ಪಾದನೆಯ ಕೃಷಿಯಲ್ಲಿ ಬಾಲಕಾರ್ಮಿಕರನ್ನು [ಅದರಲ್ಲೂ ಹೆಣ್ಣುಮಕ್ಕಳನ್ನು] ಕೆಲಸಕ್ಕಿಟ್ಟುಕೊಳ್ಳುವುದು ವಾಡಿಕೆ. ಮಕ್ಕಳು ಕೆಲಸ ಮಾಡುವಾಗ ಗೊಣಗುವುದಿಲ್ಲ. ಹತ್ತಿಬೀಜ ಉತ್ಪದನೆಯಲ್ಲಿ ಬೇಕಾದ ಸೂಕ್ಷ್ಮ ಕೆಲಸಕ್ಕೆ ಮಕ್ಕಳ ಕೋಮಲ ಬೆರಳುಗಳು ಹೇಳಿ ಮಾಡಿಸಿವೆಯಂತೆ, ಹೆಣ್ಣು ಮಕ್ಕಳಿಗೆ ಆಗಾಗ ಒಂದಿಷ್ಟು ಬಳೆ, ಟೇಪು, ಒಂದು ಸಿನೇಮಾ, ಚಾಕಲೇಟುಗಳ ಆಮಿಷ ತೋರಿದರೆ, ಅವರು ಯಾವ ಬಲಪ್ರಯೋಗವೂ ಇಲ್ಲದೇ ಖುಷಿಯಿಂದ ಕೆಲಸ ಮಾಡುತ್ತಾರೆ. ಹಾಗೂ ಬೀಡಿ ಸೇದಲು ಜಗಳವಾಡಲು ಅವರಿಗೆ ತೋಚುವುದಿಲ್ಲ. ಹೀಗಾಗಿ ಅರ್ಧ ಸಂಬಳಕ್ಕೆ ದುಪ್ಪಟ್ಟು ಕೆಲಸವನ್ನು ಮಕ್ಕಳಿಂದ ತೆಗೆಯಬಹುದು ಎಂದು ದಾವುಲೂರಿ ವೆಂಕಟೇಶ್ವರುಲು ತಮ್ಮ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ. 

ಹೀಗೆ ಮಕ್ಕಳೂ ತುಸುಮಟ್ಟಿಗೆ ಸಂತೋಷವಾಗಿರುವ, ತಂದೆ-ತಾಯಿಯರೂ ಗೊಣಗದ, ಕೆಲಸ ನೀಡುವವರೂ ಖುಷಿಯಾಗಿರುವ ಈ ಅಸಮಂಜಸ ಮಾರುಕಟ್ಟೆಯನ್ನು ಪ್ರವೇಶಿಸಿ ಮಕ್ಕಳಿಗೆ ಬಾಲ್ಯವನ್ನು ಮತ್ತೆ ನೀಡುವ ಕೆಲಸ ಸುಲಭದ್ದೇನೂ ಅಲ್ಲ.

ಮೊದಲಿಗೆ ಮಕ್ಕಳನ್ನು ತಮ್ಮ ಕೆಲಸದಿಂದ ಬಿಡಿಸಬೇಕು; ಬಿಡಿಸಿದ ನಂತರ ಅವರುಗಳನ್ನು ಶಾಲೆಗೆ ಸೇರಿಸಬೇಕು. ಇಲ್ಲಿ ಮಕ್ಕಳು ತಮ್ಮ ವಯಸ್ಸಿಗನುಸಾರವಾದ ತರಗತಿಗೆ ನೇರವಾಗಿ ಹೋಗಬೇಕೆಂದರೆ [ಹತ್ತುವರ್ಷದ ಮಗು ನಾಲ್ಕನೆಯ ಕ್ಲಾಸಿಗೆ ನೇರವಾಗಿ ಹೋಗಬೇಕಾದರೆ] ಅದಕ್ಕೆ ಸಮರ್ಪಕವಾದ ಸೇತುವೆಯನ್ನು ಹಾಕಿ ಆ ಮಗುವನ್ನು ಮಾನಸಿಕವಾಗಿ, ಅಕ್ಷರಗಳ ಮೂಲಕ ತಯಾರು ಮಾಡಬೇಕು; ಹಾಗೂ ಗ್ರಾಮದಲ್ಲಿರುವ ಶಾಲೆಗಳು ಆ ಮಕ್ಕಳನ್ನು ಸ್ವೀಕರಿಸುವಂತೆ ನೋಡಿಕೊಳ್ಳಬೇಕು.

ಎಷ್ಟೋ ಪಟ್ಟಭದ್ರ ಹಿತಾಸಕ್ತಿಗಳನ್ನು ಎದುರುಹಾಕಿಕೊಳ್ಳುವಂತಹ ಈ ಕೆಲಸ ಸರಳವಾದದ್ದೇನೂ ಅಲ್ಲ. ಮಕ್ಕಳು ಶಾಲೆಗೆ ಸೇರಿದ ನಂತರ ಅವರುಗಳು ತಮಗೆ ಬೇಕಾದಷ್ಟು ಕಾಲ ವಿದ್ಯಾಭ್ಯಾಸವನ್ನು ಮುಂದುವರೆಸುವ ಹಾಗೂ ನೋಡಿಕೊಳ್ಳಬೇಕು. ಶಾಲೆಯಲ್ಲಿ ಅವರುಗಳು ಪಡೆವ ವಿದ್ಯಾಭ್ಯಾಸವೂ, ವಿದ್ಯಾರ್ಜನೆಯ ಅನುಭವವೂ ಹಿತಕರವಾಗಿರಬೇಕು. ಹೀಗೆ ಮಕ್ಕಳ ಹಕ್ಕುಗಳನ್ನು ಅವರಿಗೆ ಒದಗಿಸುವುದು ಸುಲಭವಾದ ಮಾರ್ಗವೇನೂ ಅಲ್ಲ.

ಶಂಕರಪಲ್ಲಿ ಮಂಡಲದಲ್ಲಿ ಮಕ್ಕಳ ಹಕ್ಕುಗಳನ್ನು ಒದಗಿಸುವ ಕೆಲಸವನ್ನು ಗ್ರಾಮ ಪಂಚಾಯಿತಿಗಳು ಕೈಗೊಂಡಿವೆ. ಹೀಗಾಗಿ ಕಟಿಕೇ ಶ್ರೀನಿವಾಸ್ ಅಂತಹ ಸರಪಂಚರು ಗರ್ವದಿಂದ ಆ ನಿಟ್ಟಿನ ಸಾಧನೆಯನ್ನು ತೋರಿಸಿಕೊಳ್ಳುತ್ತಾರೆ. ಗ್ರಾಮ ಪಂಚಾಯ್ತಿಯ ಕಾರ್ಯಾಲಯದಲ್ಲಿ ಒಂದು ದೊಡ್ಡ ಕಪ್ಪು ಫಲಕದ ಮೇಲೆ ಊರಲ್ಲಿರುವ ಮಕ್ಕಳ ಸಂಖ್ಯೆ - ಅದರಲ್ಲಿ ೬ ವರ್ಷಕ್ಕೂ ಪುಟ್ಟವರು, ೬-೧೫ ವರ್ಷದ ಮಕ್ಕಳು, ೧೫-೧೮ ವರ್ಷದ ಮಕ್ಕಳು, ಅವರುಗಳಲ್ಲಿ ಎಷ್ಟು ಮಕ್ಕಳು ಅಂಗನವಾಡಿಯಲ್ಲಿದ್ದಾರೆ, ಎಷ್ಟು ಮಕ್ಕಳು ಶಾಲೆಯಲ್ಲಿದ್ದಾರೆ, ಎಷ್ಟು ಮಂದಿ ಶಿಕ್ಷಕರು, ಪ್ರೈವೇಟು ಶಾಲೆಗಳಲ್ಲಿರುವ ಮಕ್ಕಳ ಸಂಖ್ಯೆ ಎಲ್ಲವೂ ಇದೆ.
  

ಪ್ರತೀ ತಿಂಗಳೂ ಶಾಲಾ ಮಾಸ್ತರರೊಂದಿಗೆ ಒಂದು ಮೀಟಿಂಗ್ ನಡೆಯುತ್ತದೆ. ಅಲ್ಲಿ ಶಾಲೆಯಲ್ಲಿ ಮಕ್ಕಳ ಹಾಜರಿಯಿಂದ ಹಿಡಿದು ಶಾಲೆಗೆ ಸಂಬಂಧಿಸಿದ ಎಲ್ಲ ವಿಷಯಗಳೂ ಚರ್ಚಿತವಾಗುತ್ತವೆ. ಶಾಲೆ ರಾಜ್ಯ ಸರಕಾರದ ವಿದ್ಯಾ ಇಲಾಖೆಯಡಿಯಲ್ಲಿ ಬರುತ್ತದಾದರೂ ಪಂಚಾಯ್ತಿ ಆಸಕ್ತಿ ವಹಿಸುವುದರಿಂದ ಅನೇಕ ತೊಂದರೆಗಳು ಸ್ಥಳೀಯವಾಗಿಯೇ ಇತ್ಯರ್ಥವಾಗುತ್ತದೆ. ಉದಾಹರಣೆಗೆ ಮಕ್ಕಳಿಗೆ ಶೌಚಾಲಯ ಕಟ್ಟಿಸಬೇಕೆಂದರೆ ಅದಕ್ಕೆ ಹೈದರಾಬಾದಿನಿಂದ ಬಜೆಟ್ಟು ಬರುವವರೆಗೂ ಕಾಯಬೇಕಾಗಿದ್ದ ಶಾಲೆ ಈಗ ಪಂಚಾಯತಿಯ ಸಹಕಾರದೊಂದಿಗೆ ಅದಕ್ಕೊಂದು ಸ್ಥಳೀಯ ಪರಿಷ್ಕಾರವನ್ನು ಪಡೆಯುವ ಸ್ಥಿತಿಯನ್ನು ಮುಟ್ಟಿದೆ. ಶಿಕ್ಷಕರು ರೆಜೆಯ ಮೇಲೆ ಹೋದರೆ, ಅಥವಾ ಹುದ್ದೆಗಳು ಖಾಲಿ ಬಿದ್ದರೆ, ಪಂಚಾಯತಿಯ ವತಿಯಿಂದ ಹಂಗಾಮಿ ಶಿಕ್ಷಕರನ್ನು ನಿಯಮಿಸುವ ಅವಕಾಶವಿದೆ. ಅದಕ್ಕೆ ಬೇಕಾದ ಹಣವನ್ನು ಪಂಚಾಯಿತಿ ಸ್ಥಳೀಯವಾಗಿ ಸ್ಥಾಪಿತವಾಗಿರುವ ಒಂದು ರೆಜಾರ್ಟ್ ಆಯೋಜಕರಿಂದ ಕಲೆಹಾಕಿದ್ದಾರೆ. ಸಾಲದ್ದಕ್ಕೆ ಅಲ್ಲಿ ರೆಜಾರ್ಟಿಗೆ ಪರವಾನಗಿ ಕೊಡುವಾಗಲೇ ಅವರಿಂದ ಕೆಲ ಆಶ್ವಾಸನೆಗಳು ಪಂಚಾಯತಿ ಪಡೆದಿತ್ತು. ಇದು ವಿದ್ಯಾ ಇಲಾಖೆಗೆ ಸಾಧ್ಯವಾಗದ ಕಾರ್ಯ. ಪ್ರತಿ ವಿದ್ಯಾರ್ಥಿಗೂ ಶಾಲಾ ಬಟ್ಟೆ ಮತ್ತು ಪುಸ್ತಕಗಳಿಗಾಗುವ ಖರ್ಚುಗಳನ್ನು ಪಂಚಾಯತಿ ಆಯೋಜಿಸುತ್ತದೆ. 

ಪಂಚಾಯ್ತಿಯ ಮೆಂಬರುಗಳು ಶಾಲೆಯನ್ನು ಆಗಾಗ ಸಂದರ್ಶಿಸುವುದರಿಂದ ಎಲ್ಲವೂ ಒಂದು ಪದ್ಧತಿಯಂತೆ ನಡೆಯುತ್ತದೆ. ಹೀಗೆ ಜವಾಬ್ದಾರಿಯನ್ನು ಸ್ಥಳೀಯಗೊಳಿಸುವುದರಿಂದ ಈ ಏರ್ಪಾಟು ಎಂ.ವಿ.ಎಫ್ ನಂತಹ ಸಂಸ್ಥೆಗಳು ಹೊರಗಿನಿಂದ ಬಂದು ಮಾಡುವ ಕೆಲಸಕ್ಕೆ ಪೂರಕವಾಗಿ ಒಂದು ಶಾಶ್ವತ ಏರ್ಪಾಡಾಗಿ ತಯಾರಾಗುತ್ತದೆ.

ಪೊದ್ದುಟೂರಿನಲ್ಲಿ ರೆಜಾರ್ಟ್ ಇದ್ದದ್ದರಿಂದ ಆರ್ಥಿಕ ಸವಲತ್ತು ಉಂಟಾಯಿತು ಎಂದರೆ - ಪಕ್ಕದ ಕೊಲ್ಕುಂಡದಲ್ಲಿ ಸರಪಂಚ ಹಂಗಾಮಿ ಶಿಕ್ಷಕರಿಗೆ ಸಂಬಳ ನೀಡಲು ಪ್ರತೀ ಮನೆಯಿಂದಲೂ ಹತ್ತು ರೂಪಾಯಿಯ ದೇಣಿಗೆಯನ್ನು ಪಡೆದಿದ್ದರು.

ಆದರೂ ಎಲ್ಲಕಡೆಯೂ ಈ ಕಾರ್ಯಕ್ರಮವನ್ನು ಇಷ್ಟು ಸರಳವಾಗಿ ಕೈಗೊಳ್ಳಬಹುದೇ? ಇದರಿಂದ ರಾಜಕೀಯವಾಗಿ ಕಟಿಕೇ ಶ್ರೀನಿವಾಸ್‍ಗೆ ಏನು ಲಾಭ? ಈ ಪ್ರಶ್ನೆಗೆ ಅವರು ಎರಡು ಸ್ಥರದಲ್ಲಿ ಉತ್ತರ ನೀಡುತ್ತಾರೆ:

"ರಾಜಕೀಯವಾಗಿ ವಿದ್ಯೆಯಬಗ್ಗೆ ಮಾತನಾಡುವುದು ವಿವಾದಾತೀತವಾಗುತ್ತದೆ. ಪ್ರತಿ ಮನೆಯಲ್ಲೂ ಮಕ್ಕಳಿರುತ್ತಾರೆ, ಆ ಮಕ್ಕಳು ಹೋಗುವ ಶಾಲೆಯ ಸುಧಾರಣೆಯಾದರೆ ಆ ಕೆಲಸ ಪ್ರತೀ ಸಂಸಾರವನ್ನೂ ತಟ್ಟುತ್ತದೆ. ಅದರಲ್ಲಿ ಒಂದು ಲೆಕ್ಕಕ್ಕೆ ಸಿಕ್ಕದಿರುವುದು ಅದು ಶಾಲೆಯ ವಿದ್ಯೆಯ ಗುಣಮಟ್ಟ, ಶಿಕ್ಷಕರ ಗುಣಮಟ್ಟದಂತಹ ಅಂಶ: ಇವುಗಳು ಹೆಚ್ಚಾಗಿ ಪಂಚಾಯತಿಯ ಕೈಯಲ್ಲಿಲ್ಲ, ಆದರೂ ತಿಂಗಳ ಮೀಟಿಂಗಿನ ಮೂಲಕ ಸ್ವಲ್ಪ ಈ ಬಗ್ಗೆ ನಿಗಾ ಇಡಬಹುದು. ಎರಡು ಭೌತಿಕ ಸದುಪಾಯಗಳಿಗೆ ಸಂಬಂಧಿಸಿದ್ದು. ಶಾಲಾ ಕಟ್ಟಡ, ಶೌಚಾಲಯ, ಗ್ರಂಥಾಲಯ, ಸಮವಸ್ತ್ರ, ಪಠ್ಯಪುಸ್ತಕ, ಮಧ್ಯಾಹ್ನದ ಊಟ... ಈ ಎಲ್ಲವೂ ಪಂಚಾಯ್ತಿಗಳ ವತಿಯಿಂದ ಆಗಬಹುದಾದ ಕಾಣುವ ಕೆಲಸ. ಹೀಗಾಗಿ ವಿದ್ಯೆಯ ಎಜೆಂಡಾ ತೆಗೆದುಕೊಂಡರೆ ರಾಜಕೀಯವಾಗಿಯೂ ಗೆಲ್ಲಬಹುದು"

ಶಂಕರಪಲ್ಲಿ ಮಂಡಲದಲ್ಲಿ ಈ ಪಂಚಾಯ್ತಿ-ಶಾಲೆಗಳ ತಾಳಮೇಳ ನಡೆಯುತ್ತಿರುವುದಕ್ಕೆ ಇತರ ಕಾರಣಗಳೂ ಇರಬಹುದು ಎಂದು ಶಾಲೆಯ ಹೆಡ್ ಮಾಸ್ಟರ್ ಚಂದ್ರಶೇಖರ್ ಹೇಳುತ್ತಾರೆ. ಹೈದರಾಬಾದಿಗೆ ಹತ್ತಿರವಾಗಿರುವುದರಿಂದ, ಹಾಗೂ ನಗರದಲ್ಲಿ ಕೆಲಸ ಸಿಗುವುದರಿಂದ ಜನ ಮಕ್ಕಳನ್ನು ಕೆಲಸಕ್ಕೆ ಹೆಚ್ಚಾಗಿ ಹಾಕುವುದಿಲ್ಲ. ಮಕ್ಕಳು ಕೆಲಸಕ್ಕೆ ಲಭ್ಯವಿಲ್ಲದ್ದರಿಂದ ಹಿರಿಯರಿಗೆ ಹೆಚ್ಚು ಕೆಲಸ ಸಿಗುತ್ತಿದೆ. ಜೊತೆಗೆ ಮಕ್ಕಳ ಹಕ್ಕಿನಬಗ್ಗೆ ಹೆಚ್ಚಿನ ಮಾಹಿತಿಯಿರುವುದರಿಂದ ಶಂಕರಪಲ್ಲಿಯಲ್ಲಿ ಬಾಲಕಾರ್ಮಿಕರನ್ನು ಉಪಯೋಗಿಸುತ್ತಿದ್ದ ಮಲ್ಲಿಗೆ ತೋಟಗಳು ಮಾಯವಾಗಿ ಬತ್ತದ ಬೆಳವಣಿಗೆಯತ್ತ ಕೃಷಿ ವಾಲಿದೆ.

ಇದರ ಜೊತೆಗೆ ಕಟಿಕೇ ಶ್ರೀನಿವಾಸ್ ಹೇಳುವ ಇನ್ನಷ್ಟು ವಿಚಾರಗಳು:
ಕೃಷಿಯಲ್ಲಿ ಯಂತ್ರಗಳನ್ನು ಬಳಸುವುದು ಹೆಚ್ಚಾದಂತೆ ಕಾರ್ಮಿಕರ ಅವಶ್ಯಕತೆ-ಹಾಗೆಯೇ ಬಾಲಕಾರ್ಮಿಕರ ಅವಶ್ಯಕತೆ ಕಡಿಮೆಯಾಗುತ್ತದೆ.
ರಾಷ್ಟ್ರೀಯ ಗ್ರಾಮೀಣ ಉಪಾಧಿ ಕಾರ್ಯಕ್ರಮ ಚೆನ್ನಾಗಿ ಕಾರ್ಯಗತವಾಗುತ್ತಿರುವ ಸ್ಥಳಗಳಲ್ಲಿ ಹಿರಿಯರಿಗೆ ಉಪಾಧಿ ಸಿಕ್ಕಿ ಮಕ್ಕಳನ್ನು ಕೆಲಸಕ್ಕೆ ಹಾಕುವ ಅವಶ್ಯಕತೆ ಕಡಿಯಾಗುತ್ತಿದೆ.
ಶಂಕರಪಲ್ಲಿ ವಿಶಾಲ ಹೈದರಾಬಾದಿನ ಭಾಗವಾಗಬಹುದು. ಹೀಗಾಗಿ ಹೊಸ ನೀರಾವರಿ ಯೋಜನೆಗಳು ಪೊದ್ದುಟೂರಿನಂತಹ ಗ್ರಾಮವನ್ನು ಬಳಸಿ ಹೋಗುತ್ತಿವೆ. ಕೃಷಿ ಕಡಿಮೆಯಾಗುತ್ತಿದೆ. ಜಮೀನು ಸೈಟುಗಳಾಗುವ ಸಾಧ್ಯತೆಯಿದೆ. ಹೀಗೆ ಕೃಷಿಯೇ ಪೊದ್ದುಟೂರಿನಿಂದ ನಾಪತ್ತೆಯಾಗುವುದಾದರೆ, ಕೃಷಿಯೇತರ ಕೆಲಸಗಳಿಗೆ ವಿದ್ಯೆಯೇ ಗತಿ ಎಂದು ಜನ ಅರಿತಿದ್ದಾರೆ.

ಹೀಗೆ ಮಕ್ಕಳಿಸ್ಕೂಲು ಮನೆಯಲ್ಲಲ್ಲದೇ ಗ್ರಾಮದಲ್ಲಿರುವುದಕ್ಕೆ ಕಾರಣಗಳು ಅನೇಕ. ಕೆಲವನ್ನು ನಾವು ಪೊದ್ದುಟೂರಿನಿಂದ ಬೇರೆ ಗ್ರಾಮಗಳಿಗೂ, ರಾಜ್ಯಗಳಿಗೂ ಒಯ್ಯಬಹುದು. ಕೆಲವು ಕಟಿಕೇ ಶ್ರೀನಿವಾಸ್ ಮಾತ್ರ ಕಂಡುಕೊಳ್ಳುವ ಸಮಾಧಾನ ಮಾತ್ರ.

ಎಲ್ಲವೂ ಚೆನ್ನಾಗಿದೆ ಅನ್ನುವ ವೇಳೆಗೆ ಹೊಸ ಸಮಸ್ಯೆ:

ಈಗ ಶಾಲಾವಯಸ್ಸಿನ ಎಲ್ಲ ಮಕ್ಕಳೂ ಶಾಲೆಯಲ್ಲಿದ್ದಾರೆ. ಆದರೆ, ಜನ ಸರಕಾರಿ ಶಾಲೆ ಬಿಟ್ಟು ಖಾಸಗೀ ಶಾಲೆಗಳಿಗೆ ಮಕ್ಕಳನ್ನು ಕಳಿಸುತ್ತಿದ್ದಾರೆ. ಅಲ್ಲಿ ಇಂಗ್ಲೀಷ್ ಕಲಿಸುತ್ತಾರೆ ಅನ್ನುವುದೇ ಕಾರಣ. ಗುಣಮಟ್ಟದಲ್ಲಿ ಸರಕಾರೀ ಶಾಲೆಗಳು ಉತ್ತಮವಾಗಿದ್ದರೂ ಜನ ಅತ್ತ ವಾಲುತ್ತಿದ್ದಾರೆ. ಪಂಚಾಯ್ತಿಯ ವತಿಯಿಂದ ಖಾಸಗೀ ಶಾಲೆಗಳ ಗುಣಮಟ್ಟವನ್ನು ಪರಿಶೀಲಿಸುವುದು, ಅಲ್ಲಿನ ಹಾಜರಿಯ ಬಗ್ಗೆ ಪ್ರಶ್ನೆ ಕೇಳುವುದೂ, ಅಲ್ಲಿನ ಶಿಕ್ಷಕರ ಗುಣಮಟ್ಟ ಪರಿಶೀಲಿಸುವುದೂ ಸಾಧ್ಯವಿಲ್ಲ. ಹೆಚ್ಚುಜನ ಆ ದಿಕ್ಕಿನಲ್ಲಿ ಹೋಗುತ್ತಿರುವಾಗ ನಾಲ್ಕಕ್ಷರ ಇಂಗ್ಲೀಷು ತಿಳಿದಿರುವುದೇ ಸಾಕಾಗಿರುವ ಶಿಕ್ಷಕರನ್ನು ನಿಯಮಿಸುವ ಖಾಸಗೀ ಶಾಲೆಗಳ ಗುಣಮಟ್ಟದ ಗತಿಯೇನು?

ಹೀಗೇ ಒಂದು ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ವೇಳೆಗೆ ಮತ್ತೊಂದು ಉದ್ಭವವಾಗುತ್ತದೆ.



  

Saturday, March 14, 2009

ಗೋಡೆ ಗಡಿಯಾರ - ಕೈಗಡಿಯಾರ


ರಾಜಾಸ್ಥಾನದ ಡುಂಗರ್‍-ಪುರದಲ್ಲಿ ನಮ್ಮ ಅಧ್ಯಯನಕ್ಕಾಗಿ ಮಾಹಿತಿ ಸಂಗ್ರಹಿಸುತ್ತಿದ್ದ ಶಾಶ್ವತೀ ಒಂದು ದಿನ ಬಂದು ಒಂದು ವಿಚಿತ್ರವಾದ ಮಾತನ್ನು ಹೇಳಿದಳು. ಈ ಮಾತು ಮಾಹಿತಿಯನ್ನಾಧರಿಸಿದ್ದಲ್ಲ, ಬದಲಿಗೆ ತಾನು ಗಮನಿಸಿದ್ದ ವಿಷಯವೆಂದೂ ಹೇಳಿದಳು. ನಾವುಗಳು ಮಾಹಿತಿ ಸಂಗ್ರಹಿಸುತ್ತಿದ್ದದ್ದು ಬಡ ಕುಟುಂಬಗಳು ತಮ್ಮ ಆರ್ಥಿಕ ನಿರ್ವಹಣೆಯನ್ನು ಹೇಗೆ ಮಾಡುತ್ತಾರೆ ಹಾಗೂ ಎಲ್ಲೆಲ್ಲಿಂದ ಸಾಲ ಪಡೆಯುತ್ತಾರೆ ಅನ್ನುವ ವಿಷಯದ್ದಾಗಿತ್ತು. ಮಾಹಿತಿ ಸಂಗ್ರಹಿಸುವುದು ಒಂದು ಕೆಲಸವಾದರೆ ಆ ಮಾಹಿತಿಯನ್ನು ಅರ್ಥೈಸಲು ಕೆಲ ಒಳನೋಟಗಳೂ ಅವಶ್ಯಕವಾಗುತ್ತವೆ. ಹೀಗಾಗಿ ಶಾಶ್ವತೀ ಹೇಳಿದ್ದ ಮಾತಿಗೆ ನಾನು ಮಹತ್ವ ನೀಡುವ ಅಗತ್ಯವಿತ್ತು.

ಶಾಶ್ವತೀ ನನಗೆ ಹೇಳಿದ ಆ ಗಮ್ಮತ್ತಿನ ವಿಷಯವೇನೆಂದರೆ: "ಸ್ಕೂಲಿಗೆ ಹೋಗುವ ಮಕ್ಕಳಿರುವ ಮನೆಗಳಲ್ಲಿ ಗೋಡೆಗಡಿಯಾರಗಳು ಖಂಡಿತವಾಗಿಯೂ ಇರುತ್ತವೆ ಅನ್ನುವುದು ನನ್ನ ಗಮನಕ್ಕೆ ಬಂದಿದೆ." ಸಾಮಾನ್ಯವಾಗಿ ಮಾಹಿತಿ ಸಂಗ್ರಹಣೆಯಲ್ಲಿ ಇಂಥಹ ಸೂಕ್ಷ್ಮ ಗ್ರಹಿಕೆಗಳು ನಮಗೆ ಮಾಹಿತಿಯನ್ನು ಅರ್ಥೈಸಲು ಹೆಚ್ಚು ಸಹಾಯ ಉಂಟುಮಾಡುತ್ತದೆ. ಹೀಗಾಗಿ ಶಾಶ್ವತೀ ಹೇಳಿದ ಈ ಮಾತಿನಿಂದಾಗಿ ನಾನು ಅದರ ಮಹತ್ವವನ್ನು ಗ್ರಹಿಸಲು ಯತ್ನಿಸಿದೆ. ಇದನ್ನು ನಾನು ಬರೆಯುತ್ತಿದ್ದ ವರದಿಯಲ್ಲಿ ಅರ್ಥೈಸಲು ಮಾನಸಿಕ ತಯಾರಿಯನ್ನೂ ನಡೆಸಿದ್ದೆ - ಬಡ ಗ್ರಾಮೀಣ ಕುಟುಂಬಗಳನ್ನು ಪರಿಗಣಿಸಿದಾಗ ಅವರ ಹೆಚ್ಚಿನ ಕೆಲಸ ಕೃಷಿಗೆ ಸಂಬಂಧಿಸಿದ್ದಾಗಿರುತ್ತದೆ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಮಯದ ನಿಖರತೆಯ ಮೇಲೆ ನಡೆಯುವ ಚಟುವಟಿಕೆಗಳು ಬಹಳ ಕಡಿಮೆ. ಒಂದರ್ಧ ಘಂಟೆ ಹಿಂದೆ-ಮುಂದೆಯಾದರೂ ಆಕಾಶ ಬೀಳುವಂತಹದ್ದು ಏನೂ ಇರುವುದಿಲ್ಲ. ಹೀಗೆ ಯೋಚಿಸಿದಾಗ ಸಮಯಾನುಸಾರ ನಿಖರವಾಗಿ ನಡೆವ ಒಂದು ಚಟುವಟಿಕೆ ವಿದ್ಯೆಗೆ ಸಂಬಂಧಿಸಿದ್ದು. ಅಲ್ಲಿ ಮಕ್ಕಳ ಸಮೂಹವನ್ನು ಒಂದೆಡೆ ಜೋಡಿಸಿ ಪಾಠಮಾಡಬೇಕಾದ್ದರಿಂದ ಸಮಯದ ಮಹತ್ವ ಮುಖ್ಯವಾಗುತ್ತದೆ. [ಹಾಗೆಯೇ ಸ್ವ-ಸಾಹಾಯ ಗುಂಪುಗಳಿರುವ ಜಾಗದಲ್ಲೂ ಇದರ ಮಹತ್ವವಿರುತ್ತದೆ ಎಂದೂ ಆಲೋಚಿಸಿದೆ, ಆದರೆ ಈ ಜಾಗದಲ್ಲಿ ಹೆಚ್ಚು ಅಂಥ ಗುಂಪುಗಳಿರಲಿಲ್ಲ]. ಈ ಕಥೆಯನ್ನು ನಾನು ಇನ್ನೂ ಹೆಚ್ಚು ಬೆಳೆಸಲು ತಯಾರಿದ್ದೆ ಆದರೆ ಒಮ್ಮೆ ಮಾಹಿತಿಯನ್ನು ಪರೀಕ್ಷಿಸುವುದು ಒಳ್ಳೆಯದೆನ್ನಿಸಿ ನೋಡಿದರೆ ಯಾವರೀತಿಯಿಂದಲೂ ಶಾಶ್ವತೀ ಹೇಳಿದ್ದನ್ನು ನಾನು ಸಮರ್ಥಿಸಿಕೊಳ್ಳುವ ಮಾಹಿತಿ ನನಗೆ ಸಿಗಲಿಲ್ಲ.

ಸಂಶೋಧನೆ ಮಾಡುವಾಗ ಈ ಥರದ ’ಒಳನೋಟ’ಗಳು ನಮಗೆ ಸಿಗುತ್ತಲೇ ಇರುತ್ತವೆ. ಆದರೆ ಅದು ಮಾಹಿತಿಯಾಧಾರವಾಗಿದೆಯೇ ಇಲ್ಲವೇ ಅನ್ನುವುದು ಗಮ್ಮತ್ತಿನ ವಿಷಯವಾಗುತ್ತದೆ. ನಮಗೆ ಸಂಶೋಧನಾ ಪದ್ಧತಿಯನ್ನು ಅರ್ಥಮಾಡಿಕೊಳ್ಳಲೆಂದು ಕೆಲವು ವಿಶೇಷ ಲೆಕ್ಚರ್‍ ಕೊಟ್ಟಿದ್ದ ಅಹಮದಾಬಾದಿನ ಪ್ರೊಫೆಸರ್ ಎಂ.ವೈ. ತ್ರಿವೇದಿ ಒಮ್ಮೆ ಹೇಳಿದ್ದರು. "Torture the data, and the data will confess" [ಮಾಹಿತಿಗೆ ಚಿತ್ರಹಿಂಸೆ ಕೊಟ್ಟರೆ ಅದು ತಪ್ಪೊಪ್ಪಿಗೆ ನೀಡುತ್ತದೆ]. ಹಲವಾರು ಬಾರಿ ನಾವು ಮನಸ್ಸಿನಲ್ಲಿ ಒಂದು ತೀರ್ಮಾನವನ್ನಿಟ್ಟುಕೊಂಡೇ ಮಾಹಿತಿಯನ್ನು ಸಂಗ್ರಹಿಸುತ್ತಿರುತ್ತೇವೆ. ಆದರೆ ಮಾಹಿತಿ ನಮ್ಮ ಅನಿಸಿಕೆಗೆ - ಗ್ರಾಂಡ್ ಥಿಯರಿಗೆ - ವಿರುದ್ಧವಾಗಿದ್ದರೆ ಏನು ಮಾಡುವುದು? ಈ ಇಂಥಹ ಒಳನೋಟವನ್ನು ಸಾಕಾರಗೊಳಿಸಲಾಗದ ಕ್ಷಣಗಳೇ  ಸಂಶೋಧಕನ ಜೀವನದಲ್ಲಿನ ಚಡಪಡಿಕೆಯ ಕ್ಷಣಗಳೆನ್ನಬಹುದು.

ಆದರೆ ನನಗೆ ಶಾಶ್ವತೀ ನೀಡಿದ ಒಳನೋಟ ಮತ್ತು ಅದರ ಅರ್ಥೈಸುವಿಕೆಯ ಕಾಯಕ ಎಷ್ಟು ಆಕರ್ಷಕವಾಗಿಬಿಟ್ಟಿತ್ತೆಂದರೆ ನಾನು ನನ್ನ ಕುತೂಹಲವನ್ನು ಇನ್ನೂ ಹೆಚ್ಚು ವಿಸ್ತರಿಸಿದೆ. ಕೈಗಡಿಯಾರಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಈ ಮಾತು ನಿಜವೇ? ಅನ್ನುವುದು ನನ್ನ ಕುತೂಹಲವಾಗಿತ್ತು. ಆ ಮಾಹಿತಿಯೂ ನಮ್ಮ ಬಳಿಯಿತ್ತು. ಒಟ್ಟಾರೆ ಸ್ಕೂಲಿಗೆ ಹೋಗುವ ಮಕ್ಕಳಿದ್ದ ಮನೆಗಳಲ್ಲೆಲ್ಲಾ ಒಂದಾದರೂ ಗಡಿಯಾರವಿದ್ದರೆ ಈ ಒಳನೋಟ ನಿಲ್ಲುತ್ತಿತ್ತು. ಆದರೆ ಅಲ್ಲಿಯೂ ಮಾಹಿತಿ ನನಗೆ ಕೈ ಕೊಟ್ಟಿತು. ಆದರೆ ಆ ಮಾಹಿತಿಯನ್ನು ಪರಿಶೀಲಿಸುತ್ತಲೇ ನನಗೆ ತಿಳಿದ ಮತ್ತೊಂದು ಆಸಕ್ತಿಯ ವಿಷಯವೆಂದರೆ - ನಾವು ಮಾಹಿತಿ ಸಂಗ್ರಹಿಸಿದ ೪೧೬ ಬಡವರ ಮನೆಗಳಲ್ಲಿ ೩೨ ಪ್ರತಿಶತ ಮನೆಗಳಲ್ಲಿ ಗಡಿಯಾರವೇ ಇಲ್ಲ, ೪೫ ಪ್ರತಿಶತ ಮನೆಗಳಲ್ಲಿ ಗೋಡೆಗಡಿಯಾರ ಮಾತ್ರವಿದೆ. ೧೭ ಪ್ರತಿಶತ ಮನೆಗಳಲ್ಲಿ ಗೋಡೆ ಮತ್ತು ಕೈಗಡಿಯಾರಗಳಿವೆ ಮತ್ತು ಕೇವಲ ೬ ಪ್ರತಿಶತ ಮನೆಗಳಲ್ಲಿ ಗೋಡೆಗಡಿಯಾರವೇ ಇಲ್ಲದೇ ಕೈಗಡಿಯಾರ ಮತ್ರವಿದೆ. 

ಮೇಲಿನ ಮಾಹಿತಿಯ ಒಳನೋಟ ಏನಿರಬಹುದು? ಸ್ವಲ್ಪ ಯೋಚಿಸಿ ನೋಡಿದಾಗ ನನಗೆ ಹೊಳೆದದ್ದೇ ಬೇರೆ. ಅದೇನೆಂದರೆ: ಅತೀ ಬಡ ಕುಟುಂಬಗಳು ತಮ್ಮ ಮನೆಗೆ ಬೇಕಾದ ವಸ್ತುಗಳನ್ನು ಕೊಳ್ಳುವ ಪರಿಯಬಗ್ಗೆ ಒಂದು ಹೊಸ ಅರ್ಥ ಹುಟ್ಟಿಕೊಳ್ಳುತ್ತಿರುವಂತೆ ಅನ್ನಿಸಿತು. ಗೋಡೆ/ಕೈ ಗಡಿಯಾರವಿದ್ದ ಕುಟುಂಬಗಳ ಆದಾಯಕ್ಕಿಂತ ಅವು ಇಲ್ಲದಿದ್ದ ಕುಟುಂಬಗಳ ಆದಾಯ ಸುಮಾರಷ್ಟು ಕಡಿಮೆಯಿತ್ತು. ಸಾಮಾನ್ಯವಾಗಿ ಕುಟುಂಬಗಳು ಸಾಮೂಹಿಕವಾಗಿ ಉಪಯೋಗಿಸಲ್ಪಡುವ ವಸ್ತುಗಳನ್ನು [ಗೋಡೆಗಡಿಯಾರ]ಮೊದಲು ಕೊಳ್ಳುತ್ತಿದ್ದವು, ಮತ್ತು ಎರಡನೆಯ ಹಂತದಲ್ಲಿ ಖಾಸಗೀ ಉಪಯೋಗದ ವಸ್ತುಗಳನ್ನು [ಕೈಗಡಿಯಾರ] ಕೊಳ್ಳುತ್ತಿದ್ದುವು. ಹಾಗೂ ಗೋಡೆ ಮತ್ತು ಕೈಗಡಿಯಾರಗಳೆರಡೂ ಇದ್ದ ಮನೆಗಳ ಆದಾಯ ಯಾವುದಾದರೂ ಒಂದೇ ಇದ್ದ ಮನೆಗಳಿಗಿಂತ ಸರಾಸರಿ ಹೆಚ್ಚಾಗಿ ಇರುತ್ತಿತ್ತು! ಈ ಒಳನೋಟವನ್ನು ನಾನು ಇತರ ಆಸ್ತಿಗಳ ಮೇಲೂ ಪ್ರಯೋಗ ಮಾಡಿ ನೋಡಿದ್ದೆ - ಸಾಮಾನ್ಯವಾಗಿ ಮೊದಲಿಗೆ ಎಲ್ಲರಿಗೂ ಉಪಯೋಗವಾಗುವಂತಹ ವಸ್ತು/ಆಸ್ತಿಗಳನ್ನು ಕೊಂಡ ಮೇಲೆಯೇ ಖಾಸಗೀ ಉಪಯೋಗದ ವಸ್ತುಗಳ ಮೇಲಿನ ಖರ್ಚು ಪ್ರಾರಂಭವಾಗುತ್ತಿತ್ತು ಅನ್ನುವುದು ನಮ್ಮ ಮಿಕ್ಕ ಅಧ್ಯಯನಗಳಿಂದಲೂ ವೇದ್ಯವಾಯಿತು.

ಡುಂಗರ್-ಪುರದಲ್ಲಿ ನಾವು ಬಡಕುಟುಂಬಗಳಿಂದ ಸಂಗ್ರಹಿಸಿದ ಮಾಹಿತಿಯಲ್ಲಿ ತಿಳಿದುಬಂದದ್ದು ಮತ್ತಷ್ಟು. ಸುಮಾರು ಎಲ್ಲ ಮನೆಗಳಲ್ಲೂ [ಅವರೆಷ್ಟೇ ಬಡವರಾಗಿದ್ದರೂ] ಚಾರ್‍-ಪಾಯಿ [ನೂಲಿನ ಮಂಚ] ಇದ್ದೇ ಇರುತ್ತಿತ್ತು. ಅಷ್ಟೇ ಮಾತ್ರವಲ್ಲ, ಮನೆಯಲ್ಲಿದ್ದ ಪ್ರತಿ ಹಿರಿಯ ವ್ಯಕ್ತಿಗೊಂದರಂತೆ ಚಾರ್-ಪಾಯಿಗಳು ಮನೆಯಲ್ಲಿರುತ್ತಿದ್ದುವು. ಇದೂ ಮಲ್ಟೀಪರ್ಪಸ್ ವಸ್ತುವೇ. ಅತಿಥಿಗಳು ಬಂದಾಗ ಕೂರಲೂ ಇದೇ, ರಾತ್ರೆ ಮಲಗಲೂ ಇದೇ. ಹೆಚ್ಚೆಚ್ಚು ಕಚ್ಚಾ ಮನೆಗಳಿದ್ದ ಜಾಗದಲ್ಲಿ, ಒಳ್ಳೆಯ ನೆಲವಿಲ್ಲದ ಜಾಗದಲ್ಲಿ ಚಾರ್-ಪಾಯಿಗಳು ಹೆಚ್ಚು. ಚಾರ್-ಪಾಯಿಗಳನ್ನು ಬಿಟ್ಟರೆ ಎಲ್ಲರ ಹೆಚ್ಚಿನ ಮನೆಗಳಲ್ಲಿ ಕಾಣಸಿಗುವುದು ದೊಡ್ಡ ದೊಡ್ಡ ಪಾತ್ರೆಗಳ ಭಂಡಾರ. ಗುಜರಾತ್ ರಾಜಾಸ್ಥಾನಗಳಲ್ಲಿ ತಮ್ಮ ಮನೆಯಲ್ಲಿರುವ ದೊಡ್ಡ ಪಾತ್ರೆಗಳನ್ನು ಮುಂದಿನ ಕೋಣೆಯಲ್ಲಿ ಎಲ್ಲರಿಗೂ ಕಾಣುವಂತೆ ಪ್ರದರ್ಶಿಸುವುದು ವಾಡಿಕೆ. ಎಷ್ಟು ದೊಡ್ಡ ಪಾತ್ರೆಗಳಿದ್ದರೆ [ಬಡತನದ ನಡುವೆಯೇ] ಅಷ್ಟು ಶ್ರೀಮಂತರೆಂದು ತೋರಿಸಿಕೊಂಡಂತೆ! ಮತ್ತು ಈ ಎರಡೂ ವಸ್ತುಗಳನ್ನು ಬಿಟ್ಟರೆ ಹೆಚ್ಚು ಮನೆಗಳಲ್ಲಿದ್ದ ವಸ್ತು ಗಡಿಯಾರ! 

ನಮ್ಮ ಮಾಹಿತಿಯ ಪ್ರಕಾರ ವರ್ಷ ೨೦೦೦ದಲ್ಲಿ ಬಹಳಷ್ಟು ವಸ್ತುಗಳ ಖರೀದಿಯನ್ನು ಈ ಬಡಕುಟುಂಬಗಳವರು ಮಾಡಿದ್ದರು - ಮನೆ ರಿಪೇರಿ ಮಾಡಿಸುವುದು, ಹೊಸ ಸೈಕಲ್ ಕೊಳ್ಳುವುದು, ಹೊಸ ಗಡಿಯಾರಗಳನ್ನು ಕೊಳ್ಳುವುದು ಹೀಗೆ ಆ ವರ್ಷ ಅದ್ಭುತ ಲಾಟರಿಯ ವರ್ಷದಂತೆ ಕಂಡಿತು. ಬಹುಶಃ ಯಾವಾಗಲೂ ಬರಪೀಡಿತವಾಗಿರುವ ಜಾಗದಲ್ಲಿ ಆ ವರ್ಷ ಒಳ್ಳೆಯ ಮಳೆಯಾಗಿದ್ದಿರಬಹುದು ಎಂಬ ನಮ್ಮ ’ಒಳನೋಟ’ವನ್ನು ಪರೀಕ್ಷಿಸಲು ಅಲ್ಲಿ ಸ್ವ-ಸಹಾಯ ಸಂಸ್ಥೆ ನಡೆಸುತ್ತಿದ್ದ ದೇವೀಲಾಲ್ ವ್ಯಾಸರ ಜೊತೆ ಮಾತನಾಡಿದರೆ ತಿಳಿದದ್ದೇ ಬೇರೆ. ಆ ವರ್ಷ್ ದಶಕದ ಅತೀ ಕೆಟ್ಟ ಬರಗಾಲವಾಗಿತ್ತಂತೆ. ಹಾಗಾಗಿ ರಾಜ್ಯ ಸರಕಾರ ಬರಪೀಡಿತ ಜಾಗಗಳಿಗೆ ಸಹಾಯ ಘೋಷಿಸಿ ಉಪಾಧಿಯ ಕೆಲಸಗಳನ್ನು ಕೈಗೊಂಡಿತ್ತಂತೆ. ಹೀಗಾಗಿ ಹೆಚ್ಚುಜನರಿಗೆ ಕೃಷಿಯೇತರ ಕೆಲಸ ದೊರೆತದ್ದರಿಂದ ಆದಾಯ ಹೆಚ್ಚಿ ಇವುಗಳನ್ನೆಲ್ಲಾ ಕೊಂಡಿದ್ದರು. ಸಾಯಿನಾಥ್ ಅವರ ಪುಸ್ತಕದ ಶೀರ್ಷಿಕೆಯೇ "Everybody loves a good drought" [ಎಲ್ಲರಿಗೂ ಒಂದು ಉತ್ತಮ ಬರಗಾಲವೆಂದರೆ ವಿಶೇಷ ಪ್ರೀತಿ] ಇದು ಎಷ್ಟು ನಿಜ ಎಂದು ಡುಂಗರ್-ಪುರದಿಂದ ಬಂದಾಗ ತಿಳಿಯಿತು.




Wednesday, March 4, 2009

ಕಂದೀಲಿನ ಮೇಲೆ ಧೂಳು!

ಗುಜರಾತ್ ಸರಕಾರ ವಿಕಾಸದ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಅದರ ಬಗ್ಗೆ ಹೆಚ್ಚಿನ ಚರ್ಚೆ ರಾಜ್ಯದ ಆಚೆ ಹೆಚ್ಚಾಗಿ ನಡೆಯುವುದಿಲ್ಲ. ಗುಜರಾತಿನ ಬಗ್ಗೆ ಹೊರಗೆ ಚರ್ಚೆ ನಡೆಯುವಾಗ ಎರಡು ಮುಖ್ಯ ವಿಚಾರಗಳು ಚರ್ಚಿತಗೊಳ್ಳುತ್ತವೆ. ಮೊದಲನೆಯ ಮತ್ತು ಅತಿ ಮುಖ್ಯ ವಿಷಯ ಗೋಧ್ರಾ ಮತ್ತು ತದನಂತರದ ಹತ್ಯಾಕಾಂಡ. ಆ ಬಗ್ಗೆ, ಅದರಲ್ಲಿ ಸರಕಾರದ ಪಾತ್ರದ ಬಗ್ಗೆ, ಪೋಲೀಸರ ಪಾತ್ರದ ಬಗ್ಗೆ ಎಷ್ಟೋ ಚರ್ಚೆ ನಡೆದಿದೆ. 
ಅದೇ ಸಮಯಕ್ಕೆ ಗುಜರಾತಿನಲ್ಲಿನ ವಿಕಾಸದ ಬಗೆಗಿನ ವಿಚಾರಗಳು ಹೊರಕ್ಕೆ ಬರುವುದೇ ಇಲ್ಲ. ಇಲ್ಲಿ ಜನ ಸುಖವಾಗಿದ್ದಾರೆಯೇ? ಒಂದು ಕೋಮಿನವರು ಭಯಭೀತಿಯಿಂದ ಜೀವಿಸುತ್ತಿದ್ದಾರೆಯೇ? ಇಲ್ಲಿ ರಾಕ್ಷಸತ್ವ ಕಾಣಿಸುತ್ತದೆಯೇ? ಈ ಎಲ್ಲಕ್ಕೂ ಸರಳವಾದ ಉತ್ತರಗಳನ್ನು ಕೊಡುವುದಕ್ಕೆ ಸಾಧ್ಯವಿಲ್ಲ. ಗುಜರಾತಿನ ವಿಷಯಕ್ಕೆ ಬಂದಾಗ ಚರ್ಚೆಗೊಳಗಾಗುವ ಮತ್ತೊಂದು ವಿಚಾರ ನರ್ಮದಾ, ಅಣೆಕಟ್ಟು, ನೀರು, ಮೇಧಾ ಮತ್ತು ಅದಕ್ಕೆ ಸಂಬಂಧಿಸಿದ ವಿವಾದದ್ದು.

ಈ ಎರಡೂ ವಿಚಾರಗಳು ಎಷ್ಟರ ಮಟ್ಟಿಗೆ ಈ ರಾಜ್ಯದಲ್ಲಿ ಮುಖ್ಯವಾಗಿದೆಯೆಂದರೆ, ಆ ವಿಚಾರಗಳನ್ನೆತ್ತಿದರೆ ಯಾವುದೋ ಗಾಯವನ್ನು ಬಗೆದಂತೆ ಬಹಳವೇ ಜೋರಾದ ಪ್ರತಿಕ್ರಿಯೆ ಬರುತ್ತದೆ. ಆಮೀರ್ ಖಾನ್ ಮೇಧಾರನ್ನು ಬೆಂಬಲಿಸಿದಾಗ ಅವರ ಚಿತ್ರ ಫನಾ ಇಲ್ಲಿ ಬಿಡುಗಡೆಯಾಗದಂತೆ ನೋಡಿಕೊಳ್ಳಲಾಯಿತು. ಇದನ್ನು ಯಾವುದೇ ಸರಕಾರೀ ಬ್ಯಾನ್ ಮೂಲಕ ಮಾಡಲಿಲ್ಲ. ಅದು ಸಫಲವಾದದ್ದು ಕೇವಲ ’ಭಯ’ದಿಂದಾಗಿ. ಹಾಗೆಯೇ ರಾಹುಲ್ ದೋಲಾಕಿಯಾ ನಿರ್ದೇಶನದ ಪರ್‌‍ಜೇನಿಯಾ ಅನ್ನುವ ಸಿನೇಮಾ ಕೂಡಾ ಬಿಡುಗಡೆಯಾಗಲಿಲ್ಲ. ಇದರ ಹಿಂದಿನ ಕೈ ಯಾವುದೆಂದು ಊಹಿಸುವುದು ಕಷ್ಟವಲ್ಲ. ಹಾಗೆಯೇ ನರ್ಮದಾದ ಬಗ್ಗೆ ಒಂದು ರೀತಿಯಾದಂತಹ ನಿಲುವು ತೆಗೆದುಕೊಂಡಿರುವ ಮೇಧಾ, ಆಗಾಗ ನನಗಿಂತಲೂ ಉದ್ದುದ್ದ ಲೇಖನ ಬರೆಯುವ ಅರುಂಧತಿ ರಾಯ್, ಬೆಸ್ಟ್ ಬೇಕರಿ ಇತ್ಯಾದಿಗಳ ಬಗ್ಗೆ ಕೋರ್ಟಿಗೆ ಹೋಗಿರುವ ತೀಸ್ಟಾ.. 
ಇವರೆಲ್ಲರೂ ಗುಜರಾತಿನಲ್ಲಿ ಸುರಕ್ಷಿತವಾಗಿದ್ದಾರೆನ್ನುವುದಕ್ಕೆ ಗ್ಯಾರೆಂಟಿ ಇಲ್ಲ. ಗೋಧ್ರಾದ ಸಮಯದಲ್ಲಿ ಸರಕಾರದ ವಿರುದ್ಧ ನಿಲುವು ತೆಗೆದುಕೊಂಡ ಮಲ್ಲಿಕಾ ಸಾರಾಭಾಯಿ, ಅಥವಾ ಭಿನ್ನ ಸಮುದಾಯಗಳೊಂದಿಗೆ ಕೆಲಸ ಮಾಡುವ ’ಸೇವಾ’ದ ಇಳಾಭಟ್ ಗುಜರಾತಿನಲ್ಲಿದ್ದರೂ ಶಾಂತಿಯಿಂದಿದ್ದಾರೆನ್ನುವುದಕ್ಕೆ ಸಾಧ್ಯವಿಲ್ಲ. [ನಾನು ಪ್ರಸ್ತಾಪಿಸಿರುವ ಎಲ್ಲರೂ ಹೆಂಗಸರೇ ಆಗಿರುವುದು ಕೇವಲ ಕಾಕತಾಳೀಯವಿರಬಹುದು] ಆದರೆ ಈ ಬಗ್ಗೆ ಚರ್ಚಿಸುವುದೂ, ಈ ಬಗ್ಗೆ ಮಾತನಾಡುವುದೂ ಸರಕಾರದ ಪರವಿರುವವರಿಗೆ ಮುಜುಗರದ ವಿಷಯ. ಕಣ್ಣು ಮುಚ್ಚಿದರೆ ಭಯಾನಕ ನಿಜ ಮಾಯವಾಗಿ, ಭವ್ಯ ಕನಸು ಬೀಳಬಹುದೆಂಬ ಭ್ರಮೆಯಲ್ಲಿ ಜೀವಿಸುತ್ತಿರುವ ಒಂದು ನರಜಾತಿ ಹೀಗಿದೆ.

ಅದೇ ಸಮಯಕ್ಕೆ, ಆ ವಿರುದ್ಧ ನಿಂತಿರುವ ಜನರಿಗೆ ’ವಿಕಾಸ’ ಕಾಣಿಸುವುದಿಲ್ಲ. ಆ ಬಗ್ಗೆ ಚರ್ಚೆ ಗೋಧ್ರಾದ ಬಗ್ಗೆ ಕ್ಷಮೆ ಯಾಚಿಸುವವರೆಗೆ ಸಾಧ್ಯವಿಲ್ಲ. ಹೀಗಾಗಿ ಅನೇಕ ಪದರಗಳಿರುವ, ರಂಗುರಂಗಿನ ಈ ರಾಜ್ಯಕ್ಕೆ ಹೊರಲೋಕದಲ್ಲಿ ಎರಡೇ ಬಣ್ಣಗಳು: ಕಡುಕಪ್ಪು, ಬೆಳ್ಳಂಬೆಳಗು ಬಿಳಿ.. ಎರಡೂ ಸತ್ಯವಲ್ಲ...

ಈಚೆಗೆ ನಾನು ಸುರೇಂದ್ರನಗರ ಜಿಲ್ಲೆಯ ಎರಡು ಗ್ರಾಮಗಳಿಗೆ ಭೇಟಿನೀಡಿದೆ. ಅಹಮದಾಬಾದ್-ರಾಜ್‌ಕೋಟ್ ಹೈವೇಯಿಂದ ಹೆಚ್ಚು ದೂರವೇನೂ ಇಲ್ಲದ ಗ್ರಾಮಗಳು. ಆದರೆ ಎರಡೂ ಭಿನ್ನ ಗ್ರಾಮಗಳು. ನಾವು ಹೋದದ್ದು ಶಿವರಾತ್ರಿಯಂದು. ರಾತ್ರೆಯ 
ಜಾಗರಣೆಗೆ ನಿಮಿತ್ತ ಆಗಲಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅರ್ಧ ಕಟ್ಟಿದ ದೇವಸ್ಥಾನದ ಬದಿಯ ಕಟ್ಟಡದಲ್ಲಿ ತಯಾರಿ ನಡೆದಿತ್ತು. ಮೇಲೆ ಫ್ಯಾನು ತಿರುಗುತ್ತಿತ್ತು. ಕೋಣೆಯಲ್ಲಿ ನೋಡಿದರೆ ಕೆಲಸ ಮಾಡದ ಎರಡು ಟಿ.ವಿ. ಸೆಟ್ಟುಗಳು ಬಿದ್ದಿದ್ದವು. ಡಿವಿಡಿ ಸೆಟ್ಟುಗಳ ಪೆಟ್ಟಿಗೆಗಳು ಅಟ್ಟದಮೇಲಿದ್ದವು. ಆ ಊರಿಗೆ ನರ್ಮದಾ ನದಿಯ ನೀರು ಬಂದಿಲ್ಲ. ಅಲ್ಲಿನ ಜನ ಮಳೆಯನ್ನ ನಂಬಿ ಕೃಷಿ ಮಾಡುತ್ತಿದ್ದಾರೆ, ಅಥವಾ ವಲಸೆ ಹೋಗಿ ಹಣ ಸಂಪಾದಿಸುತ್ತಾರೆ. ಬಾವಿ ತೋಡಿದರೆ ನೀರು ಸಿಕ್ಕಬಹುದಾದರೂ ಅದು ಉಪ್ಪು ಮಿಶ್ರಿತವಾದ್ದರಿಂದ ಕೃಷಿಗೆ ಉಪಯೋಗಿಸುವಂತಿಲ್ಲ. ಎಲ್ಲ ಎಂದಿನ ತೊಂದರೆಗಳನ್ನು ಹೇಳಿಕೊಂಡರು. ನಂತರ ನಾವು ಒಂದು ಪ್ರಶ್ನೆಯನ್ನು ಕೇಳಿದೆವು. ವಿದ್ಯುತ್ ಸರಬರಾಜು ಹೇಗಿದೆ? ಅದಕ್ಕೆ ಬಂದ ಉತ್ತರ ಬೆಂಗಳೂರಿನವನಾದ ನನಗೆ ಅವಾಕ್ಕುಂಟು ಮಾಡುವಂಥದ್ದು. ಇಲ್ಲಿ ವಿದ್ಯುತ್ತಿಗೆ ಯಾವ ಕುತ್ತೂ ಇಲ್ಲ. ಮನೆಗೆ ೨೪ ಘಂಟೆ, ಕೃಷಿಗೆ ೮ ಘಂಟೆ ಸರಬರಾಜಾಗುತ್ತದೆ. ಎಂದೂ ಕರೆಂಟು ಹೋಗುವುದಿಲ್ಲ. ಈ ಚಮತ್ಕಾರ ನಡೆದಿರುವುದು ಕಳೆದ ಒಂದೂವರೆ ವರ್ಷದಲ್ಲಿ, ಜ್ಯೋತಿಗ್ರಾಮ ಯೋಜನೆ ಬಂದಾಗಿನಿಂದ. ಈ ವಿಷಯದಲ್ಲಿ ತಕರಾರು ಎತ್ತಿದವರು ಯಾರೂ ಇಲ್ಲ.

ಹೌದೇ? ಅದರಿಂದ ಉಪಯೋಗವೇ? ತಿಳಿಯದು. ಮಕ್ಕಳಿಗೆ ಓದಿಗೆ ಅನುಕೂಲವಾಗಿದೆ, ಆದರೆ ಅದೇ ಸಮಯಕ್ಕೆ ಟೀವಿ ನೋಡುವುದೂ ಹೆಚ್ಚಾಗಿದೆ. ಊರಲ್ಲಿ ಫ್ರಿಜ್ಜುಗಳು ಹೆಚ್ಚಾಗಿವೆ. ಟಿವಿಕೊಳ್ಳಲು ಲಿಮ್ಡಿಯಲ್ಲಿ ಸುಲಭ ಕಂತಿನ ಸೌಲಭ್ಯವಿದೆ. ಮನೆಯಲ್ಲಿ ಹೆಚ್ಚಿನ ಬೆಳಕಿದೆ. ಎಲ್ಲಕ್ಕಿಂತ ಮುಖ್ಯವೆಂದರೆ ಎಲ್ಲರ ಮನೆಯಲ್ಲೂ ವಿದ್ಯುತ್ ಖರ್ಚು ಹೆಚ್ಚಾಗಿದೆ. ಮೊದಲಾದರೆ 
ವಿದ್ಯುತ್ ಇಲ್ಲವೆಂದು ತಾವೇ ಗಾಳಿ ಬೀಸಿಕೊಳ್ಳುತ್ತಿದ್ದರು, ಈಗ ಹೆಚ್ಚೂಕಮ್ಮಿ ಎಲ್ಲರ ಮನೆಯಲ್ಲೂ ಫ್ಯಾನಿದೆ.

ಸ್ವಲ್ಪ ದೂರದಲ್ಲಿ ಇದ್ದ ವಡೊದ್‌ಗೂ ಹೋದೆವು. ಅಲ್ಲಿ ನರ್ಮದಾ ನೀರಿದೆ. ಹೀಗಾಗಿ ಕೃಷಿಗೆ ೮ ಘಂಟೆ ಅವಿರತ ವಿದ್ಯತ್ತು ಸರಬರಾಜಿನಿಂದ ಬಹಳವೇ ಉಪಯೋಗವಾಗಿದೆ ಎಂದು ಕೆಲವರು ಹೇಳಿದರು. ಒಬ್ಬ ಮುದುಕಪ್ಪ ನಮ್ಮನ್ನು ವಿದ್ಯುತ್ 
ವಿಭಾಗದವರು ಎಂದು ಭಾವಿಸಿ ಕೃಷಿಗೆ ೮ ಘಂಟೆಗಳಿಗಿಂತ ಹೆಚ್ಚಿನ ನೀರು ಕೊಟ್ಟೀರಿ ಹುಷಾರ್! ಎಂದು ತಾಕೀತು ಮಾಡಿದ. ಯಾಕೆ? ನೆಲದಿಂದ ನೀರು ಹೀರಿ ಹಾಳುಮಾಡಿಬಿಡುತ್ತಾರೆ. ಎಂಟು ಘಂಟೆ ಸಾಕು. ಎಂದ. ವಡೋದ್‌ ಗ್ರಾಮದ ಪೋಸ್ಟ್ ಮಾಸ್ಟರ್ ಮನೆಗೆ ಹೋದೆವು. ಆತನ ಕೆಲಸ ಹೆಚ್ಚಾಗಿದೆಯಂತೆ. ವಿದ್ಯುತ್ತು ಬಿಲ್ಲಿನ ಹಣವನ್ನು ಪೋಸ್ಟಾಫೀಸಿನಲ್ಲಿ ಪಾವತಿ ಮಾಡುತ್ತಾರಲ್ಲ ಅದರಿಂದಾಗಿ. ಅಂದು ಶಿವರಾತ್ರಿಯಾದ್ದರಿಂದ ರಜಾ. ಮಧ್ಯಾಹ್ನದ ನಿದ್ದೆ ತೆಗೆಯುತ್ತಿದ್ದವನನ್ನು ಫ್ಯಾನಿನಡಿಯಿಂದ ಎಬ್ಬಿಸಿದ್ದೆವು. ೨೪ ಘಂಟೆಯ ಸರಬರಾಜಿನಿಂದ ಹಳ್ಳಿಗೆ ಉಪಯೋಗವಾಗಿದ್ದರೂ, ಕೃಷಿಯಲ್ಲಿಲ್ಲದ ತನಗೆ ಖರ್ಚೇ ಹೆಚ್ಚಾಗಿದೆಯಂತೆ. ಈಚೆಗೆ ಕಪ್ಪು ಬಿಳುಪು ಟೀವಿಯಿಂದ ಬಣ್ಣದ ಟೀವಿಗೆ ಮಾರ್ಪಾಡಾಗಬೇಕೆಂಬ ಹೆಂಡತಿಯ ಪಿರಿಪಿರಿಯೂ ಹೆಚ್ಚಿದೆಯಂತೆ. ಅದಕ್ಕೆ ಕಂತಿನ ಮೇಲೆ ಟಿವಿ ತರುವ ಯೋಚನೆಯಿದೆ. ಕಾಲ ಕೂಡಿದರೆ ಫ್ರಿಜ್ಜೂ ಕೊಳ್ಳಬೇಕು. ಆದರೆ ಇದರಿಂದ ಅನೇಕ ಉಪಯೋಗಗಳೂ ಇವೆ. ವಿದ್ಯುತ್ತು ಇರುವುದರಿಂದ ನೀರಿನ ಸರಬರಾಜೂ ೨೪ ತಾಸು ಆಗುತ್ತದೆ. ಇಲ್ಲವಾದಲ್ಲಿ ಹಳ್ಳಿಯ ಓವರ್‌ಹೆಡ್ ಟ್ಯಾಂಕು ತುಂಬಿದಾಗ ಮಾತ್ರ ಸರಬರಾಜಾಗುತ್ತಿತ್ತು..

ಇದ್ದಕ್ಕಿದ್ದ ಹಾಗೆ ಜ್ಯೋತಿಗ್ರಾಮ ಯೋಜನೆ ಹಾಕಿ ಪ್ರತಿ ಹಳ್ಳಿಗೂ ೨೪ ತಾಸು ವಿದ್ಯುತ್ತು ನೀಡಿದಾಗ ಎಷ್ಟೊಂದು ಆಸೆ, ಆಕಾಂಕ್ಷೆ, ಆತಂಕಗಳು! ಸೆಕೆಯಾದಾಗ ಫ್ಯಾನ್ ಚಲಾಯಿಸಬಹುದೆಂಬ ಖಾತರಿ ಜೀವನವನ್ನು ಹೇಗೆ ಬದಲಾಯಿಸುತ್ತದೆ. ಆದಾಯ ಹೆಚ್ಚಾಗುವ ಮಾರ್ಗ ಕೆಲವರಿಗಾದರೆ, ಖರ್ಚು ಹೆಚ್ಚಾಗುವ ಖಾತರಿ ಕೆಲವರಿಗೆ ಮಾತ್ರ ಸೀಮಿತವಲ್ಲ. ಆದರೆ ಯಾರೂ ಈ ಬಗ್ಗೆ ದುಃಖಿಗಳಾಗಿರುವಂತೆ ಕಾಣುವುದಿಲ್ಲ. ಅದೇ ವೇಳೆಗೆ ವಿದ್ಯುತ್ತಿನ ಕಳುವೂ ಕಡಿಮೆಯಾಗಿದೆ. ಇದಕ್ಕೆ ಕಾರಣ ವಿದ್ಯುತ್ ಕಳ್ಳರ ವಿರುದ್ಧ ಸರಕಾರ ತೆಗೆದುಕೊಳ್ಳುತ್ತಿರುವ ಕಡಕ್ ಕ್ರಮ!!

ವಿದ್ಯುತ್ ಮುಫತ್ತಾಗಿ ನೀಡದೇ, ಕಳ್ಳರನ್ನು ಒಳಕ್ಕೆ ಹಾಕಿ ಬದಿಬದಿಯಲ್ಲಿ ವಿದ್ಯುತ್ತನ್ನೂ ನಿಯಮಿತವಾಗಿ ಸರಬರಾಜು ಮಾಡಿ ಗುಜರಾತ್ ಸರಕಾರ ಚುನಾವಣೆಯಲ್ಲಿ ಮತ್ತೆ ಗೆದ್ದಿದೆ. ಜನ ಇದರಿಂದ ಸಂತುಷ್ಟರಾಗಿದ್ದಾರೆ. ಜೀವನ ಸ್ಥರ ಉತ್ತಮಗೊಂಡಿದೆ.. ಆದರೆ ಖರ್ಚೂ ಹೆಚ್ಚು, ಬಹುಶಃ ಕಲರ್ ಟೀವಿ, ಕೇಬಲ್, ಡಿಷ್ ಇತ್ಯಾದಿಯಾಗಿ ಸಾಲವೂ ಹೆಚ್ಚಾಗಿರಬಹುದು. ಹಾಗಾದರೆ ವಿಕಾಸ ಎಂದರೆ ಏನು? ಸೆಕೆಯಾದಾಗ ಫ್ಯಾನ್ ಹಾಕಿಕೊಳ್ಳುವುದೇ ಅಥವಾ ಸಾಲದಲ್ಲಿ ಮುಳುಗಿ ಗುಜರಾತಿ "ಈ ಟೀವಿ" ನೋಡುವುದೇ?

ಅಂದಹಾಗೆ ನಾವು ಹೋದ ಮನೆಯಲ್ಲಿ ಕಂದೀಲುಗಳನ್ನು ಪರೀಕ್ಷಿಸಿದೆವು. ಎಲ್ಲ ಕಂದೀಲುಗಳ ಮೇಲೂ ತಿಂಗಳುಗಟ್ಟಲೆಯ ಧೂಳು. ಕಂದೀಲು ಲಾಲೂ ಪ್ರಸಾದರ ರಾಷ್ಟೀಯ ಜನತಾ ದಳದ ಚುನಾವಣಾ ಚಿನ್ಹೆ. ಲಾಲೂ ಈ ರೀತಿಯಾದಂತಹ ಯೋಜನೆಯನ್ನು ಬಿಹಾರದಲ್ಲಿ ಹಮ್ಮಿಕೊಂಡು ಅದು ಯಶಸ್ವಿಯಾದರೆ ಆತನ ಪಕ್ಷದ ಚುನಾವಣಾ ಚಿನ್ಹೆಯ ಗತಿಯೇನು? "ಜಿಸ್‌ಕಾ ಹಾಥ್ ಮೆ ಹೈ ಲಾಲ್ಟೀನ್ ಓ ಜಾಯೇಗಾ ಪಾರ್ಲಾಮೆಂಟ್" ಎಂಬ ಘೋಷಣೆ ಧೂಳು ತಿನ್ನಬಹುದೇ?

ಬಾಲಂಗೋಚಿ: ಕಳೆದ ತ್ರೈಮಾಸಗಳಲ್ಲಿ ಗುಜರಾತಿನ ವಿದ್ಯುತ್ ಸರಬರಾಜು ಕಂಪನಿಗಳು ನಷ್ಟ ಮಾಡಿವೆ. ಚುನಾವಣೆಯ ಸಮಯದಲ್ಲಿ ಕೃಷಿಗೆ ೮ ಘಂಟೆಗೆ ಬದಲು ೧೨ ಘಂಟೆ ವಿದ್ಯುತ್ತು ಸರಬರಾಜು ಮಾಡಲಾಯಿತಂತೆ. ಹೀಗಾಗಿ ೪ ಘಂಟೆ ವಿದ್ಯುತ್ತು ದರ ಕಡಿಮೆಯಾದ ಕೃಷಿಗೆ ಹೋದದ್ದಲ್ಲದೇ, ವಿದ್ಯುತ್ ಕಳ್ಳತನ ಆಗುತ್ತಿದ್ದ ಸ್ಥಳಗಳಲ್ಲಿ, ಚೋರಿ ಮಾಡಲು ೪ ಘಂಟೆಯ ಅಧಿಕ ಅವಕಾಶವೂ ಸಿಕ್ಕಿತಂತೆ. ಹಾಗೂ ಚುನಾವಣಾ ಘೋಷಣೆಯಾದ ಮೇಲೆ ಮಾದರಿ ಆಚಾರ ಸಂಹಿತೆ ಲಾಗೂ ಆಗುತ್ತದಾದ್ದರಿಂದ ಸರಕಾರವೂ ಕಳ್ಳರ ಮೇಲೆ ಕ್ರಮ ಕೈಗೊಳ್ಳುವಂತಿಲ್ಲವೇನೋ!! ಪರವಾಗಿಲ್ಲ ಬಿಡಿ. ಮೂರು ತಿಂಗಳ ನಷ್ಟವನ್ನು ಪರಿಹಾರ ಮಾಡಿಕೊಳ್ಳಲು ಐದು ವರ್ಷಗಳ ಸಮಯವಿದೆಯಲ್ಲಾ. ಜ್ಯೋತಿಗ್ರಾಮದ ವಿಶ್ಲೇಷಣೆ ಇನ್ನೂ ನಡೆಯಬೇಕಿದೆ. ಇದು ಕೇವಲ ಒಂದು ಝಲಕ್ ಮಾತ್ರ. ಇದರಲ್ಲೂ ಹುಳುಕುಗಳು ಕಾಣಬಹುದು.


Monday, March 2, 2009

ಕೈಮಗ್ಗದ ಬಿಕ್ಕಟ್ಟು

ಕರೀಂನಗರ ಜಿಲ್ಲೆಯ ಕೊತ್ತಪಲ್ಲಿ ಕೈಮಗ್ಗ ಸಹಕಾರ ಮಂಡಲಿಯ ಅಧ್ಯಕ್ಷರಾದ ಕಮಟಂ ರಾಜೇಶಂ ಮೆಲುದನಿಯಲ್ಲಿ ತಮ್ಮ ಮಂಡಳಿಯ ಕೆಲಸಕಾರ್ಯಗಳನ್ನು ವಿವರಿಸುತ್ತಾ ಹೇಳುತ್ತಾರೆ: "ನಾಲ್ಕಾರು ವರ್ಷಗಳ ಕೆಳಗೆ ನಾವು ೯೫ ಲಕ್ಷ ರೂಪಾಯಿಯ ವ್ಯಾಪಾರ ಮಾಡಿದ್ದೆವು. ಈ ವರ್ಷ ಅದು ೭೦ ಲಕ್ಷಗಳಿಗೆ ನಿಲ್ಲಲಿದೆ. ಹಾಗೂ ಆ ಸ್ಥರದಲ್ಲೇ ನಮ್ಮ ವ್ಯಾಪಾರ ಸ್ಥಗಿತಗೊಳ್ಳುತ್ತದೆ ಅನ್ನಿಸುತ್ತದೆ."

"ಮುಂದಿನ ಐದಾರು ವರ್ಷಗಳಲ್ಲಿ ನಿಮ್ಮ ವ್ಯಾಪಾರ ಒಂದು ಕೋಟಿ ದಾಟಬಹುದು" ಅನ್ನುವ ನನ್ನ ಪ್ರಶ್ನೆಗೆ ಅಡ್ಡಡ್ಡವಾಗಿ ಆತ ಕಡಾಖಂಡಿತವಾಗಿ ತಲೆಯಾಡಿಸುತ್ತಾರೆ. ಕೃಷಿಯ ನಂತರ ಅತೀ ಹೆಚ್ಚು ಜನರಿಗೆ ಉದ್ಯೋಗಾವಕಾಶ ನೀಡಿರುವ ಕೈಮಗ್ಗ ಕ್ಷೇತ್ರದಲ್ಲಿ ೧೨೪ ಲಕ್ಷ ಜನ [ಮತ್ತು ಅವರ ಕುಟುಂಬಗಳು] ಕೆಲಸಮಾಡುತ್ತಿದ್ದಾರೆ ಎಂದು ವಸ್ತ್ರ ಮಂತ್ರಾಲಯದ ವರದಿ ಹೇಳುತ್ತದೆ. ಆದರೆ ಕೈಮಗ್ಗ ಕ್ಷೇತ್ರ ಕ್ಷೀಣಿಸುತ್ತಿದೆ ಎಂಬ ಮಾತು ಎಲ್ಲೆಡೆಯೂ ಕೇಳಿಬರುತ್ತಿದೆ. ಹೀಗೆ ಅತೀ ಹೆಚ್ಚು ಜನರಿಗೆ ಉಪಾಧಿ ಕಲ್ಪಿಸಿರುವ ಕ್ಷೇತ್ರ ಅವಸಾನದಲ್ಲಿದೆ ಎನ್ನುವ ಚರ್ಚೆ ಬಹಳ ಸಮಯದಿಂದ ನಡೆದಿದೆಯಾದರೂ ಅದಕ್ಕೆ ನಾವು ಸರಳ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. 

ಕೊತ್ತಪಲ್ಲಿ ಮಂಡಲಿ - ಇತರ ಕೈಮಗ್ಗ ಮಂಡಲಿಗಳಂತಿಲ್ಲ. ಕೈಮಗ್ಗ ಕೆಲಸ ಇರುವ ಜಾಗದಲ್ಲಿ ಮಾಸ್ಟರ್ ವೀವರ್ ಅನ್ನುವ ಮಧ್ಯವರ್ತಿ ಇರುವುದು ಸಹಜ. ಕೃಷಿಯಲ್ಲಿ ’ಅಡತಿಯ’ ಇದ್ದಹಾಗೆ ಈತ ನೇಕಾರರಿಗೆ ಹರ್ತಾ ಕರ್ತಾ. ಅವರಿಗೆ ಆರ್ಡರುಗಳನ್ನು ಜೋಡಿಸುವುದರಿಂದ ಹಿಡಿದು ಅವರು ನೇಯ್ದ ಬಟ್ಟೆಗಳನ್ನು ಮಾರಾಟ ಮಾಡುವವರೆಗೂ ಅವನದ್ದು ಮಹತ್ವದ ಪಾತ್ರವಿರುತ್ತದೆ. ಆದರೆ ಕರೀಂನಗರ ಜಿಲ್ಲೆಯಲ್ಲಿ ಮಾಸ್ಟರ್ ವೀವರ್ ಪರಿಪಾಠವೇ ಇಲ್ಲ. ಮಂಡಲಿಗೆ ಸರಕಾರದ ಯಾವುದೋ ಯೋಜನೆಯನ್ವಯ ಬಂದ ಹಣದಲ್ಲಿ ಕೆಲವು ಫ್ರೇಮ್ ಮಗ್ಗಗಳನ್ನು ತಂದು ತಂದು ಕೇಂದ್ರೀಕೃತ ಕಾರ್ಯಕ್ಷೇತ್ರದಲ್ಲಿ ನೇಯ್ಗೆಯನ್ನು ಮಾಡಿಸುತ್ತಿದ್ದಾರೆ. ಆದರೆ ಸಾಮಾನ್ಯವಾಗಿ ಈ ಕೆಲಸ ಮನೆಯಲ್ಲಿಯೇ ನಡೆಯುತ್ತದೆ - ಮಹಿಳೆಯರು ನೂಲನ್ನು ಸುತ್ತಿ ಮಗ್ಗಕ್ಕೆ ಏರಿಸುವುವ ಕೆಲಸವನ್ನೂ, ಆಗಾಗ ನೇಯ್ಗೆಯ ಕೆಲಸವನ್ನೂ ಮಾಡುತ್ತಾರೆ. 

ಕೊತ್ತಪಲ್ಲಿ ಮಂಡಲಿಯಲ್ಲಿ ನೇಯುತ್ತಿದ್ದವರಲ್ಲಿ ಮೂರುಪಾಲು ಜನ ಕನ್ನಡಕ ಧರಿಸಿದ್ದರು. 
ಒಬ್ಬನನ್ನು ಬಿಟ್ಟರೆ ಎಲ್ಲರೂ ನಲವತ್ತರ ವಯಸ್ಸು ದಾಟಿದವರು. ಕೈಮಗ್ಗ ನೇಯ್ಗೆಯ ಕಥೆಯನ್ನು ಹೇಳಲು ಮುಂದಿನ ತಲೆಮಾರಿನಲ್ಲಿ ಹೆಚ್ಚು ಜನರು ಇರುವುದಿಲ್ಲವೇ? ರಾಜೇಶಂ ತಮ್ಮ ಮಂಡಲಿಯ ವ್ಯಾಪಾರ ಒಂದು ಕೋಟಿ ದಾಟುವುದಿಲ್ಲ ಅನ್ನುವುದಕ್ಕೆ ಮೂಲ ಕಾರಣ ನೇಯುವವರು ಕಡಿಮೆಯಾಗುತ್ತಿದ್ದಾರೆ, ನೇಯ್ಗೆ ತಿಳಿದವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ ಅನ್ನುವುದು. ಹೀಗಾಗಿ ಈ ವೃತ್ತಿ ಅವಸಾನದ ದಿಕ್ಕಿನಲ್ಲಿದೆ ಅನ್ನುವ ಕಾಳಜಿ ಜನಜನಿತವಾಗಿದೆ. ಇತರೆ ಜಿಲ್ಲೆಗಳಲ್ಲಿ ಮಾಸ್ಟರ್ ವೀವರುಗಳೂ ಕೈಮಗ್ಗ ಕ್ಷೇತ್ರವನ್ನು ಬಿಟ್ಟು ಇತರೆ ವ್ಯಾಪಾರಗಳತ್ತ ವಾಲುತ್ತಿದ್ದಾರಂತೆ.

ಆದರೆ ಕೊತ್ತಪಲ್ಲಿ ಮಂಡಲಿಯ ಬಿಕ್ಕಟ್ಟೇ ಒಟ್ಟಾರೆ ಕೈಮಗ್ಗ ಕ್ಷೇತ್ರದ ಬಿಕ್ಕಟ್ಟೂ ಸಹ. ಅಲ್ಲಿ ಹೆಚ್ಚಾಗಿ ಒಂದು ಪದರದ ಪಂಚೆ, ಟವಲ್ಲು ಮತ್ತು ದುಪಟಿಗಳನ್ನು ನೇಯುತ್ತಾರೆ. ಈ ಎಲ್ಲ ರೀತಿಯ ವಸ್ತ್ರಗಳನ್ನು ಮಿಲ್ಲುಗಳು ತಯಾರಿಸುತ್ತವೆ ಹಾಗೂ ಅದರ ಬೆಲೆ ಕೈಮಗ್ಗಕ್ಕಿಂತ ಅಗ್ಗವಾಗಿರುತ್ತದೆ. ಹೀಗಾಗಿ ನೇಕಾರರ ಸಹಜ ಮಾರುಕಟ್ಟೆಯಾದ ತಮ್ಮ ಸುತ್ತಮುತ್ತಲಿನ ಪರಿಸರದಲ್ಲೂ ಮಿಲ್ಲಿನ ಬಟ್ಟೆಗಳ ಮಾರಾಟವೇ ಹೆಚ್ಚಾಗಿದೆ ಅನ್ನುವುದರಲ್ಲಿ ಆಶ್ಚರ್ಯವಿಲ್ಲ. ಕೊತ್ತಪಲ್ಲಿಯ ಬಟ್ಟೆಗಳನ್ನು ಆಪ್ಕೋದವರು ಕೊಂಡು ತಮ್ಮ ಎಂಪೋರಿಯಂಗಳ ಮೂಲಕ ಮಾರಾಟ ಮಾಡುತ್ತಾರಂತೆ. ಆಪ್ಕೋ ಅನ್ನುವ ಸರಕಾರಿ ಸಂಸ್ಥೆ ಅದನ್ನು ಕೊಳ್ಳದಿದ್ದರೆ ಅವರಿಗೆ ಮಾರುಕಟ್ಟೆಯೇ ಇಲ್ಲ! 

ಕೈಮಗ್ಗ ಕ್ಷೇತ್ರ ತನ್ನ ಪ್ರತ್ಯೇಕತೆಯನ್ನು ಸ್ಥಾಪಿಸಿಕೊಳ್ಳುವುದು ಸಾಧ್ಯವೇ? ಪ್ರತ್ಯೇಕತೆ ಸ್ಥಾಪಿಸಿಕೊಳ್ಳಬೇಕಾದರೆ ಆ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಕೌಶಲ್ಯವಿರುವ ಕುಶಲ ಕರ್ಮಿಗಳ ಅವಶ್ಯಕತೆ ಇರುತ್ತದೆ. ಪೋಚಂಪಲ್ಲಿ, ಕಂಚಿ, ಗದ್ವಾಲ್ ಮಂಗಳಗಿರಿ, ಬನಾರಸಿ ಸೀರೆಗಳನ್ನು ನೇಯುವ ಕುಶಲತೆ ಕ್ಷಣಮಾತ್ರದಲ್ಲಿ ಪ್ರಾಪ್ತವಾಗುವುದಿಲ್ಲ. ಹೀಗೆ ಹೆಚ್ಚಿನ ಕೌಶಲ್ಯವನ್ನು ಪಡೆಯಬೇಕಾದರೆ, ಆ ಮಟ್ಟಕ್ಕೆ ಏರಬೇಕಾದರೆ ಒಂದು ಕೆಳಗಿನ ಮಟ್ಟದಲ್ಲಿ ಪ್ರಾರಂಭಿಸಬೇಕು ಹಾಗೂ ಆ ಕೌಶಲ್ಯವನ್ನು ಪ್ರಾಪ್ತಿ ಮಾಡಿಕೊಳ್ಳಬಹುದಾದ ದೊಡ್ಡ ಮಟ್ಟದ ಮಧ್ಯಮಗತಿ ಕೌಶಲ್ಯದ ಮಾರುಕಟ್ಟೆ ಇರಬೇಕು. ಆ ಮಧ್ಯಮ ಮಟ್ಟ ಕೈಮಗ್ಗದಲ್ಲಿ ಅದೃಶ್ಯವಾಗುತ್ತಿದೆ.

ಕೃಷಿಯಲ್ಲಿ ಸಬ್ಸಿಡಿಗಳನ್ನು ಕೊಟ್ಟ ಹಾಗೆಯೇ ಕೈಮಗ್ಗದಲ್ಲೂ ಕೊಡಬೇಕು ಎಂದು ವಾದಿಸುವ ಮಂದಿ ಇದ್ದಾರೆ. ಆದರೆ ಅದೂ ಸರಳವಾದ ಉಪಾಯವಲ್ಲವೇನೋ. ಹಿಂದ ಸರಕಾರ ಜನತಾ ಸೀರೆ ಪಂಚೆಗಳ ಒಂದು ಯೋಜನೆಯನ್ನು ಹಮ್ಮಿತ್ತು. ಆ ಯೋಜನೆಯಡಿ ಕೈಮಗ್ಗದ ಕ್ಷೇತ್ರ ಉತ್ಪಾದಿಸಿದ ಈ ಸೀರೆ ಪಂಚೆಗಳನ್ನು ಸರಕಾರ ನಿಗದಿತ ಬೆಲೆಗೆ ಕೊಂಡು ಪಿ.ಡಿ.ಎಸ್ [ರೇಷನ್ ಅಂಗಡಿಗಳ] ಮೂಲಕ ಮಾರಾಟ ಮಾಡುವ ಯೋಜನೆಯಾಗಿತ್ತು. ಇದನ್ನು ತುಸುಮಟ್ಟಿಗೆ ಕೃಷಿಯಲ್ಲಿ ಅಕ್ಕಿಯನ್ನು ಮಿನಿಮಂ ಸಪೋರ್ಟ್ ಪ್ರೈಸ್ ಮೂಲಕ ಕೊಂಡು ರೇಷನ್ ಅಂಗಡಿಗಳ ಮೂಲಕ ಸರಬರಾಜು ಮಾಡುವ ಯೋಜನೆಯ ಹಾಗೆಯೇ ರೂಪಿಸಲಾಗಿತ್ತು. ಆಗ ಬೇರೆ ವಸ್ತ್ರಗಳನ್ನು ನೇಯಬಲ್ಲ ಕುಶಲ ಕರ್ಮಿಗಳೂ ಸಸ್ತಾ ಸೀರೆ ಪಂಚೆಗಳನ್ನು ನೇಯುವುದಕ್ಕೆ ಪ್ರಾರಂಭ ಮಾಡಿದರು - ಆದರೆ ರೇಷನ್ ಅಂಗಡಿಗಳಿಂದ ಯಾರೂ ಆ ವಸ್ತ್ರಗಳನ್ನು ಕೊಳ್ಳಲೇ ಇಲ್ಲ! ಹೀಗಾಗಿ ಆ ಯೋಜನೆ ಕುಸಿದುಬಿತ್ತು!

ಈ ಬಿಕ್ಕಟ್ಟಿನ ತಾಂಡವ ಇಲ್ಲಿಗೇ ನಿಲ್ಲುವುದಿಲ್ಲ. ಕೃಷಿ ಕ್ಷೇತ್ರದ ಹೆಚ್ಚಿನ ಆತ್ಮಹತ್ಯೆಗಳು ವರದಿಯಾಗುತ್ತಿರುವುದು ಹತ್ತಿ ಬಳೆಗಾರರ ವರ್ಗದಿಂದ. ಹೀಗಾಗಿ ಅವರ ಹಿತಕ್ಕೆ ಹತ್ತಿಯ ಧರಗಳನ್ನು ಸರಕಾರ ಯಾವಾಗಲೂ ಒಂದು ಹದ್ದುಬಸ್ತಿನಲ್ಲಿ ಇಡಲು ಪ್ರಯತ್ನಿಸುವುದು ಸಹಜವೇ. ಹತ್ತಿ ರೈತರಿಗೆ ಹೆಚ್ಚು ಬೆಲೆ ಬಂದಷ್ಟೂ ಕೈಮಗ್ಗದವರ ತೊಂದರೆ ಹೆಚ್ಚಾಗುತ್ತಾ ಹೋಗುತ್ತದೆ. ಕೈಮಗ್ಗದ ಕೆಲಸ ಪ್ರಾರಂಭವಾಗುವುದೇ ಹತ್ತಿಯ ನೂಲಿನಿಂದ!

ಕೈಮಗ್ಗಕ್ಕೂ ಮಿಲ್ಲುಗಳಿಗೂ ನಡುವಿನ ಪವರ್ ಲೂಮುಗಳದ್ದು ಮತ್ತೊಂದೇ ಕಥೆ. ಪವರ್ ಲೂಮುಗಳಿಂದ ಹೊರಬರುವ ಉತ್ಪತ್ತಿ ಕೈಮಗ್ಗ ಕ್ಷೇತ್ರಕ್ಕೆ ಒಂದು ರೀತಿಯಿಂದ ಮಾರಕವಾಗಿವೆ. ಯಾಕೆಂದರೆ ಕೈಮಗ್ಗದ ಬಹಳಷ್ಟು ಪ್ರತ್ಯೇಕತೆಯನ್ನು ದೊಡ್ಡಮಿಲ್ಲುಗಳು ನಕಲು ಮಾಡಲಾಗದಿದ್ದರೂ ಪವರ್ ಲೂಮುಗಳು ನಕಲು ಮಾಡುವುದನ್ನು ಕಲಿತಿವೆ. ಹೀಗಾಗಿ ಕೈಮಗ್ಗದಿಂದ ದೊರೆಯುತ್ತಿದ್ದ ಹಲವು ’ಪ್ರತ್ಯೇಕ’ ವಸ್ತ್ರಗಳನ್ನು ಪವರ್ ಲೂಮುಗಳು ಕಡಿಮೆ ದರಕ್ಕೆ ಮಾರಾಟಮಾಡಿ ಕೈಮಗ್ಗಕ್ಕೆ ಮಾರಕವಾಗಿವೆಯಂತೆ!

ಆದರೆ ಪವರ್ ಲೂಮುಗಳನ್ನು ನಡೆಸುವವರನ್ನು ಮಾತನಾಡಿಸಿರದೇ ಅವರದೇ ವ್ಯಥೆಯನ್ನು ಅವರು ಹೇಳುತ್ತಾರೆ - ವಿದ್ಯುತ್ ಸರಬರಾಜಿನಲ್ಲಿನ ತೊಂದರೆಗಳೂ, ವಿದ್ಯುತ್ ಕ್ಷೇತ್ರದಲ್ಲಿ ಆದ ’ಸುಧಾರಣೆ’ಯಿಂದಾಗಿ ವಿದ್ಯುತ್ ಧರದ ಏರಿಕೆ ಹಾಗೂ ಅದರಿಂದಾಗಿ ಎದುರಾಗುತ್ತಿರುವ ತೊಂದರೆ. ಆ ಕಥೆಯ ವ್ಯಥೆಯೇ ಬೇರೆ. ಕೊತ್ತಪಲ್ಲಿಯಿಂದ ಹೆಚ್ಚೇನೂ ದೂರವಿಲ್ಲದ ಸಿರಸಿಲ್ಲಾದಲ್ಲಿ ಪವರ್ ಲೂಮಿನ ನೇಕಾರರ ಆತ್ಮಹತ್ಯೆ ಸರಕಾರಕ್ಕೆ ಒಂದು ಬಿಕ್ಕಟ್ಟನ್ನೇ ಉಂಟುಮಾಡಿತ್ತು.

"ಇದಕ್ಕೆಲ್ಲಾ ಕಾರಣ ಎನ್.ಆರ್.ಈ.ಜಿ.ಎ ಬಂದಿರೋದು" ಅಂತ ವ್ಯಂಗ್ಯದಿಂದ ರಾಜೇಶಂ ಹೇಳಿದಾಗ ನಾನು ಅವಾಕ್ಕಾದೆ. ನೂರು ದಿನದ ಉಪಾಧಿಯ ಗ್ಯಾರೆಂಟಿಕೊಡುವ ಗ್ರಾಮೀಣ ನಿರುದ್ಯೋಗವನ್ನು ನಿವಾರಿಸುವ ಯೋಚನೆ ಕೈಮಗ್ಗಕ್ಕೆ ಹೇಗೆ ಮಾರಕವಾಯಿತು? "ಉಪಾಧಿ ಯೋಜನೆಯ ಕೆಳಗೆ, ನೆಲವನ್ನು ಎಂಟು ಘಂಟೆಗಳ ಕಾಲ ಅಗೆಯುವುದಕ್ಕೆ ನೂರೈದು ರೂಪಾಯಿ ಕೂಲಿ. ದಿನಕ್ಕೆ ಹದಿನಾಲ್ಕು ಘಂಟೆ ನೇಯುವ ಹಾಗೂ ಅದಕ್ಕೆ ತಯಾರಿಯಾಗಿ ಅವನ ಹೆಂಡತಿಯೂ ಕೆಲಸ ಮಾಡುವ ನೇಕಾರರು ಪಂಚೆ ಟವಲ್ಲು ಲುಂಗಿಗಳನ್ನು ನೇಯ್ದರೆ ಸಂಪಾದಿಸಬಲ್ಲ ಕೂಲಿ ೭೦ರಿಂದ ೮೦ ರೂಪಾಯಿಗಳು. ಕೌಶಲ್ಯವಿದ್ದು ಪ್ರಯೋಜನವೇನು? ನೇಕಾರರು ದಿನಕ್ಕೆ ೨೫೦ ರೂಪಾಯಿ ಸಂಪಾದಿಸ ಬಲ್ಲರಾದರೆ ನೀವು ಇಲ್ಲಿ ೩೦ ವರ್ಷಕ್ಕೂ ಕಡಿಮೆ ವಯಸ್ಸಿನ ಯುವಕರನ್ನು ಕಾಣುತ್ತೀರಿ" ಅನ್ನುತ್ತಾರೆ.

ಮನೆಯಲ್ಲೂ ಪಂಚೆ ಉಡುವುದನ್ನು ಬಿಟ್ಟು ಪೈಜಾಮಾ, ಟ್ರಾಕ್ ಸೂಟುಗಳನ್ನು ಧರಿಸುವ - ಟರ್ಕಿಶ್ ಟವಲನ್ನು ಉಪಯೋಗಿಸುವ ನಾನು ಒಂದು ಪಂಚೆ ನಾಲ್ಕು ಟವಲುಗಳನ್ನು ಕೊತ್ತಪಲ್ಲಿ ಮಂಡಲಿಯಿಂದ ೨೦ ಪ್ರತಿಶತ ರಿಯಾಯಿತಿ ಧರದಲ್ಲಿ ಕೊಳ್ಳುತ್ತೇನೆ. ಹೀಗೆ ಮಾಡಿದ್ದರಿಂದ ಅವರ ಸಮಸ್ಯೆಗಳ ಪರಿಹಾರದತ್ತ ಒಂದು ಪುಟ್ಟ ಹೆಜ್ಜೆ ನಾನಿಟ್ಟೆ ಅನ್ನುವ ಭ್ರಮೆಯೂ ನನಗಿಲ್ಲ.